
2025 ರ ಏಷ್ಯಾಕಪ್ಗೆ ಆತಿಥೇಯ ಬಿಸಿಸಿಐ ತನ್ನ ತಂಡವನ್ನು ಪ್ರಕಟಿಸಿದೆ. ಈ 20 ಜನರ ತಂಡದಲ್ಲಿ ಬಲಿಷ್ಠ ಆಟಗಾರರ ಪಡೆಯೇ ಸೇರಿದೆ. ಹೀಗಾಗಿ ಯಾವ 11 ಆಟಗಾರರು ಕಣಕ್ಕಿಳಿಯುತ್ತಾರೆ ಎಂಬುದು ಕುತೂಹಲ ಮೂಡಿಸಿದೆ. ಈ ನಡುವೆ ಭಾರತ ತಂಡದಿಂದ ಹೊರಗುಳಿದಿರುವ ಮಾಜಿ ನಾಯಕ ಅಜಿಂಕ್ಯ ರಹಾನೆ ಈ ಏಷ್ಯನ್ ಕಪ್ಗೆ ತನ್ನ ಆಡುವ ಹನ್ನೊಂದರ ಬಳಗವನ್ನು ಪ್ರಕಟಿಸಿದ್ದಾರೆ.

ರಹಾನೆ ತಮ್ಮ ಪ್ಲೇಯಿಂಗ್ 11 ನಲ್ಲಿ ಶುಭ್ಮನ್ ಗಿಲ್ ಮತ್ತು ಅಭಿಷೇಕ್ ಶರ್ಮಾ ಅವರನ್ನು ಆರಂಭಿಕ ಆಟಗಾರರನ್ನಾಗಿ ಆಯ್ಕೆ ಮಾಡಿದ್ದಾರೆ. 3 ನೇ ಕ್ರಮಾಂಕದಲ್ಲಿ ತಿಲಕ್ ವರ್ಮಾ ಅವರನ್ನು ಕಣಕ್ಕಿಳಿಸಿದ್ದಾರೆ. ಹಾಗೆಯೇ ನಾಯಕ ಸೂರ್ಯಕುಮಾರ್ ಯಾದವ್ ಅವರಿಗೆ 4 ನೇ ಕ್ರಮಾಂಕದಲ್ಲಿ ಮತ್ತು ಮಾಜಿ ಉಪನಾಯಕ ಮತ್ತು ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಅವರಿಗೆ 5 ನೇ ಕ್ರಮಾಂಕದಲ್ಲಿ ಸ್ಥಾನ ನೀಡಿದ್ದಾರೆ.

6 ನೇ ಕ್ರಮಾಂಕದಲ್ಲಿ ರಹಾನೆ, ಕಮ್ಬ್ಯಾಕ್ ಮ್ಯಾನ್ ಜಿತೇಶ್ ಶರ್ಮಾ ಅವರನ್ನು ವಿಕೆಟ್ ಕೀಪಿಂಗ್ ಆಯ್ಕೆಯಾಗಿ ಆಯ್ಕೆ ಮಾಡಿದ್ದಾರೆ. ಜಿತೇಶ್ 2025 ರ ಐಪಿಎಲ್ನಲ್ಲಿ ಫಿನಿಷರ್ ಆಗಿ ಉತ್ತಮವಾಗಿ ಆಡಿದ್ದರು. ಆದ್ದರಿಂದ ಅವರು ಸಂಜು ಬದಲು ಜಿತೇಶ್ಗೆ ಮಣೆಹಾಕಿದ್ದಾರೆ. 7 ನೇ ಕ್ರಮಾಂಕದಲ್ಲಿ ಮತ್ತೊಬ್ಬ ಆಲ್ರೌಂಡರ್ ಅಕ್ಷರ್ ಪಟೇಲ್ ಅವರಿಗೆ ಅವಕಾಶ ಸಿಕ್ಕಿದೆ.

ಸಂಜುರನ್ನು ತಂಡದಿಂದ ಹೊರಗಿಟ್ಟಿದ್ದರೂ ಅವರನ್ನು ಹೊಗಳಿರುವ ರಹಾನೆ, ‘ಈಗ ಗಿಲ್ ತಂಡಕ್ಕೆ ಮರಳಿದ್ದಾರೆ. ಅವರು ಅಭಿಷೇಕ್ ಶರ್ಮಾ ಅವರೊಂದಿಗೆ ಆರಂಭಿಕರಾಗಿ ಆಡುತ್ತಾರೆ ಎಂದು ನಾನು ಭಾವಿಸುತ್ತೇನೆ. ವೈಯಕ್ತಿಕವಾಗಿ, ಸಂಜು ಸ್ಯಾಮ್ಸನ್ ಅವರನ್ನು ತಂಡದಲ್ಲಿ ನೋಡಲು ನಾನು ಬಯಸುತ್ತೇನೆ ಏಕೆಂದರೆ ಅವರು ಉತ್ತಮ ಪ್ರದರ್ಶನ ನೀಡಿದ್ದಾರೆ. ಆದರೆ ನನ್ನ ಅಭಿಪ್ರಾಯದಲ್ಲಿ, ಬಹುಶಃ ಸಂಜು ಸ್ಯಾಮ್ಸನ್ ಹೊರಗುಳಿಯಬೇಕಾಗಬಹುದು ಎಂದಿದ್ದಾರೆ.

ಇನ್ನು ಬೌಲಿಂಗ್ನಲ್ಲಿ ರಹಾನೆ, ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಅವರನ್ನು ತಮ್ಮ ನೆಚ್ಚಿನ ವೇಗದ ಬೌಲರ್ಗಳಾಗಿ ಆಯ್ಕೆ ಮಾಡಿದ್ದಾರೆ. ‘ಈ ಏಷ್ಯಾಕಪ್ನಲ್ಲಿ ಜಸ್ಪ್ರೀತ್ ಬುಮ್ರಾ ಮತ್ತು ಅರ್ಶ್ದೀಪ್ ಸಿಂಗ್ ಒಟ್ಟಿಗೆ ಬೌಲಿಂಗ್ ಮಾಡುವುದನ್ನು ನಾನು ನೋಡಲು ಬಯಸುತ್ತೇನೆ ಎಂದು ರಹಾನೆ ಹೇಳಿದ್ದಾರೆ. ಸ್ಪಿನ್ನರ್ಗಳ ಖೋಟಾದಲ್ಲಿ ಕುಲ್ದೀಪ್ ಯಾದವ್ಗೆ ಅವಕಾಶ ನೀಡಿರುವ ರಹಾನೆ, ವರುಣ್ ಚಕ್ರವರ್ತಿ ಅಥವಾ ಹರ್ಷಿತ್ ರಾಣಾ ಈ ಇಬ್ಬರಲ್ಲಿ ಒಬ್ಬರಿಗೆ ಅವಕಾಶ ಸಿಗುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.

ರಹಾನೆ ನಾಯಕತ್ವದ ಭಾರತ ತಂಡ: ಶುಭ್ಮನ್ ಗಿಲ್, ಅಭಿಷೇಕ್ ಶರ್ಮಾ, ತಿಲಕ್ ವರ್ಮಾ, ಸೂರ್ಯಕುಮಾರ್ ಯಾದವ್, ಹಾರ್ದಿಕ್ ಪಾಂಡ್ಯ, ಜಿತೇಶ್ ಶರ್ಮಾ, ಅಕ್ಷರ್ ಪಟೇಲ್, ಜಸ್ಪ್ರೀತ್ ಬುಮ್ರಾ, ಅರ್ಶ್ದೀಪ್ ಸಿಂಗ್, ಕುಲ್ದೀಪ್ ಯಾದವ್, ವರುಣ್ ಚಕ್ರವರ್ತಿ / ಹರ್ಷಿತ್ ರಾಣಾ.
Published On - 4:43 pm, Thu, 21 August 25