
2025 ರ ಏಷ್ಯಾಕಪ್ ಇದೇ ಸೆಪ್ಟೆಂಬರ್ 9 ರಂದು ಆರಂಭವಾಗಲಿದೆ. ಈ ಟೂರ್ನಮೆಂಟ್ ಯುಎಇಯಲ್ಲಿ ನಡೆಯುವುದರಿಂದ ಅಭ್ಯಾಸಕ್ಕಾಗಿ ಒಂದು ವಾರ ಮುಂಚಿತವಾಗಿಯೇ ಎಲ್ಲಾ ತಂಡಗಳು ಅಲ್ಲಿಗೆ ತಲುಪಬೇಕಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ಮುಂದಿನ ವಾರ ಭಾರತ ತಂಡದ ಘೋಷಣೆಯಾಗುವ ಸಾಧ್ಯತೆಗಳಿವೆ. ವರದಿಯ ಪ್ರಕಾರ ಬಿಸಿಸಿಐ, ಆಗಸ್ಟ್ 19 ಅಥವಾ 20 ರಂದು ಏಷ್ಯಾಕಪ್ ಟೂರ್ನಮೆಂಟ್ಗಾಗಿ ಟೀಂ ಇಂಡಿಯಾವನ್ನು ಘೋಷಿಸಬಹುದು.

ಆದರೆ ತಂಡವನ್ನು ಪ್ರಕಟಿಸುವ ಮೊದಲೇ ಏಷ್ಯಾಕಪ್ನಲ್ಲಿ ತಂಡವನ್ನು ಯಾರು ಮುನ್ನಡೆಸಲಿದ್ದಾರೆ ಎಂಬ ಕುತೂಹಲ ಮೂಡಿದೆ. ಪ್ರಸ್ತುತ, ಭಾರತ ಟಿ20 ತಂಡದ ನಾಯಕತ್ವ ಸೂರ್ಯಕುಮಾರ್ ಯಾದವ್ ಅವರ ಕೈಯಲ್ಲಿದೆ. ಆದರೆ ಪ್ರಸ್ತುತ, ಸೂರ್ಯಕುಮಾರ್ ಯಾದವ್ ಶಸ್ತ್ರಚಿಕಿತ್ಸೆಗೆ ಒಳಗಾಗಿದ್ದು, ಅವರು ಇನ್ನೂ ಚೇತರಿಸಿಕೊಂಡಿಲ್ಲ. ಈ ಕಾರಣದಿಂದಾಗಿ, ಕ್ರೀಡಾ ಅಭಿಮಾನಿಗಳ ಮನಸ್ಸಿನಲ್ಲಿ ಗೊಂದಲವಿದೆ.

ಒಂದು ವೇಳೆ ಸೂರ್ಯಕುಮಾರ್ ಯಾದವ್ ಏಷ್ಯಾಕಪ್ ವೇಳೆಗೆ ಚೇತರಿಸಿಕೊಳ್ಳದಿದ್ದರೆ, ಆಗ ಆಯ್ಕೆ ಮಂಡಳಿ ಬೇರೊಬ್ಬರಿಗೆ ನಾಯಕತ್ವದ ಪಟ್ಟ ಕಟ್ಟಬೇಕಾಗುತ್ತದೆ. ಸೂರ್ಯಕುಮಾರ್ ಹೊರತುಪಡಿಸಿ ತಂಡದಲ್ಲಿ ಅನುಭವಿಯಾಗಿ ಹಾರ್ದಿಕ್ ಪಾಂಡ್ಯ ಇದ್ದಾರೆ. ಆದಾಗ್ಯೂ ನಾಯಕತ್ವ ರೇಸ್ನಲ್ಲಿ ಶುಭ್ಮನ್ ಗಿಲ್ ಹೆಸರು ಮುಂಚೂಣಿಯಲ್ಲಿ ಕೇಳಿಬರುತ್ತಿದೆ.

ಸದ್ಯದ ಮಾಹಿತಿ ಪ್ರಕಾರ, ಸೂರ್ಯ ಏಷ್ಯಾಕಪ್ ಆಡುವ ಸಾಧ್ಯತೆಗಳು ಹೆಚ್ಚಿವೆ. ಅಲ್ಲದೆ 2026 ರ ಟಿ20 ವಿಶ್ವಕಪ್ ವರೆಗೂ ಸೂರ್ಯಕುಮಾರ್ ಯಾದವ್ ಅವರನ್ನೇ ನಾಯಕರನ್ನಾಗಿ ಮುಂದುವರೆಸಲು ಆಯ್ಕೆ ಮಂಡಳಿ ಯೋಚಿಸಿದೆ. ಆದ್ದರಿಂದ ಏಷ್ಯಾಕಪ್ನಲ್ಲಿ ಸೂರ್ಯಕುಮಾರ್ ಯಾದವ್ ನಾಯಕರಾಗಿರುತ್ತಾರೆ.

ಮತ್ತೊಂದೆಡೆ, ಟೆಸ್ಟ್ ಕ್ರಿಕೆಟ್ನಲ್ಲಿ ಶುಭ್ಮನ್ ಗಿಲ್ ಯುಗ ಆರಂಭವಾಗಿದೆ. ಮೊದಲ ಟೆಸ್ಟ್ ಸರಣಿಯಲ್ಲಿಯೇ ಗಿಲ್ ನಾಯಕತ್ವದಲ್ಲಿ ಟೀಂ ಇಂಡಿಯಾ ಅದ್ಭುತ ಪ್ರದರ್ಶನ ನೀಡಿದೆ. ಆರಂಭದಲ್ಲಿ, ಅನುಭವದ ಕೊರತೆಯಿಂದಾಗಿ ಅವರ ಆಯ್ಕೆಯ ಬಗ್ಗೆ ಟೀಕೆಗಳು ಕೇಳಿಬಂದವು. ಆದರೆ ಶುಭ್ಮನ್ ಗಿಲ್ ಬ್ಯಾಟಿಂಗ್ ಮತ್ತು ನಾಯಕತ್ವದ ಜವಾಬ್ದಾರಿಯನ್ನು ಉತ್ತಮವಾಗಿ ನಿರ್ವಹಿಸಿದರು.

2024 ರಿಂದ ಶುಭ್ಮನ್ ಗಿಲ್ ಟಿ20 ಅಂತರರಾಷ್ಟ್ರೀಯ ಪಂದ್ಯಗಳನ್ನು ಆಡಿಲ್ಲ. ಚಾಂಪಿಯನ್ಸ್ ಟ್ರೋಫಿ ಮತ್ತು ಟೆಸ್ಟ್ ಸರಣಿಯ ನಂತರ ಇದೀಗ ಟಿ20 ತಂಡಕ್ಕೆ ಮರಳಲು ಗಿಲ್ ಸಿದ್ಧರಾಗಿದ್ದಾರೆ. ಅಂತಹ ಪರಿಸ್ಥಿತಿಯಲ್ಲಿ, ಭವಿಷ್ಯವನ್ನು ಪರಿಗಣಿಸಿದರೆ, ಶುಭ್ಮನ್ ಗಿಲ್ ಅವರಿಗೆ ಉಪನಾಯಕತ್ವ ನೀಡುವ ಸಾಧ್ಯತೆಯಿದೆ. 2026 ರ ಟಿ20 ವಿಶ್ವಕಪ್ ನಂತರ ಶುಭಮನ್ ಗಿಲ್ ಅವರಿಗೆ ನಾಯಕತ್ವ ನೀಡುವ ಸಾಧ್ಯತೆಯಿದೆ.