- Kannada News Photo gallery Cricket photos BCCI central contracts 2024 Ishan Kishan and Shreyas Iyer set to be excluded from the list
Ishan Kishan: ಇಶಾನ್ ಕಿಶನ್-ಶ್ರೇಯಸ್ ಅಯ್ಯರ್ಗೆ ಬಿಗ್ ಶಾಕ್ ನೀಡಿದ ಬಿಸಿಸಿಐ: ಕೇಂದ್ರ ಒಪ್ಪಿಗೆಯಿಂದ ಔಟ್
BCCI Central Contracts: ಬಿಸಿಸಿಐ 2023-24ರ ಋತುವಿಗಾಗಿ ಬಿಸಿಸಿಐ ಕೇಂದ್ರ ಒಪ್ಪಂದಗಳಿಗೆ ಒಳಪಟ್ಟಿರುವ ಆಟಗಾರರ ಪಟ್ಟಿಯನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ಪದೇ ಪದೇ ಎಚ್ಚರಿಕೆ ನೀಡಿದರೂ ರಣಜಿ ಟ್ರೋಫಿ ಆಡದಿದ್ದಕ್ಕೆ ಶಿಕ್ಷೆಯಾಗಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಈ ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆಯಂತೆ.
Updated on: Feb 24, 2024 | 9:21 AM

ಟೀಮ್ ಇಂಡಿಯಾದ ಯುವ ಕ್ರಿಕೆಟಿಗರಾದ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಟೈಮ್ ಸರಿಯಿಲ್ಲ ಎಂದು ಹೇಳಬಹುದು. ಈ ವರ್ಷದ ಆರಂಭದಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಸರಣಿಯಿಂದ ಹೊರಗುಳಿದ ನಂತರ ಕಿಶನ್ ಭಾರತಕ್ಕಾಗಿ ಆಡಿಲ್ಲ. ಮತ್ತೊಂದೆಡೆ, ಇಂಗ್ಲೆಂಡ್ ವಿರುದ್ಧದ ಅಂತಿಮ ಮೂರು ಟೆಸ್ಟ್ ಪಂದ್ಯಗಳಿಗೆ ಭಾರತ ತಂಡದಿಂದ ಅಯ್ಯರ್ ಅವರನ್ನು ಕೈಬಿಡಲಾಯಿತು.

ಇಶಾನ್ ಕಿಶನ್-ಶ್ರೇಯಸ್ ಅಯ್ಯರ್ ಅವರು ದೇಶೀಯ ರೆಡ್-ಬಾಲ್ ಪಂದ್ಯಾವಳಿಯನ್ನು ಕಡ್ಡಾಯವಾಗಿ ಆಡಬೇಕೆಂದು ಬಿಸಿಸಿಐನ ಆದೇಶದ ಹೊರತಾಗಿಯೂ ಇಬ್ಬರು ಬ್ಯಾಟರ್ಗಳು ರಣಜಿ ಟ್ರೋಫಿಯಲ್ಲಿ ಕಾಣಿಸಿಕೊಂಡಿಲ್ಲ. ಇದೀಗ, ಭಾರತದ ಈ ಇಬ್ಬರು ಸ್ಟಾರ್ಗಳು ಇದಕ್ಕಾಗಿ ಭಾರೀ ಬೆಲೆ ತೆರಬೇಕಾಗಿದೆ.

ವರದಿಯ ಪ್ರಕಾರ, ಬಿಸಿಸಿಐ 2023-24ರ ಋತುವಿಗಾಗಿ ಬಿಸಿಸಿಐ ಕೇಂದ್ರ ಒಪ್ಪಂದಗಳಿಗೆ ಒಳಪಟ್ಟಿರುವ ಆಟಗಾರರ ಪಟ್ಟಿಯನ್ನು ಕೆಲವೇ ದಿನಗಳಲ್ಲಿ ಪ್ರಕಟಿಸುವ ಸಾಧ್ಯತೆಯಿದೆ. ಆದರೆ, ಪದೇ ಪದೇ ಎಚ್ಚರಿಕೆ ನೀಡಿದರೂ ರಣಜಿ ಟ್ರೋಫಿ ಆಡದಿದ್ದಕ್ಕೆ ಶಿಕ್ಷೆಯಾಗಿ ಇಶಾನ್ ಕಿಶನ್ ಮತ್ತು ಶ್ರೇಯಸ್ ಅಯ್ಯರ್ ಅವರನ್ನು ಈ ಪಟ್ಟಿಯಿಂದ ಹೊರಗಿಡಲು ನಿರ್ಧರಿಸಲಾಗಿದೆಯಂತೆ. ಅಂದರೆ ಇವರಿಬ್ಬರು ವರ್ಷದ ಸಂಬಳವಾಗಿ ಬಿಸಿಸಿಯಿಂದ 1 ರೂಪಾಯಿ ಪಡೆಯುವುದಿಲ್ಲ.

"ಅಜಿತ್ ಅಗರ್ಕರ್ ನೇತೃತ್ವದ ಆಯ್ಕೆದಾರರು 2023-24ರ ಸೀಸನ್ಗಾಗಿ ಕೇಂದ್ರೀಯ ಗುತ್ತಿಗೆ ಆಟಗಾರರ ಪಟ್ಟಿಯನ್ನು ಬಹುತೇಕ ಅಂತಿಮಗೊಳಿಸಿದ್ದಾರೆ, ಇದನ್ನು ಬಿಸಿಸಿಐ ಶೀಘ್ರದಲ್ಲೇ ಪ್ರಕಟಿಸಲಿದೆ. ಕಿಶನ್ ಮತ್ತು ಅಯ್ಯರ್ ಆ ಪಟ್ಟಿಯಿಂದ ಹೊರಗುಳಿಯುವ ಸಾಧ್ಯತೆಯಿದೆ. ಬಿಸಿಸಿಐನ ಆದೇಶದ ಹೊರತಾಗಿಯೂ ಇವರು ದೇಶೀಯ ಕ್ರಿಕೆಟ್ನಲ್ಲಿ ಆಡುತ್ತಿಲ್ಲ, ”ಎಂದು ಬಿಸಿಸಿಐ ಮೂಲವೊಂದು ತಿಳಿಸಿದೆ.

ಈ ಋತುವಿನ ರಣಜಿ ಟ್ರೋಫಿಯಲ್ಲಿ ಇಶಾನ್ ಕಿಶನ್ ಜಾರ್ಖಂಡ್ ಪರ ಒಂದೇ ಒಂದು ಪಂದ್ಯವನ್ನು ಆಡಿರಲಿಲ್ಲ. ಶ್ರೇಯಸ್ ಅಯ್ಯರ್ ಆಂಧ್ರಪ್ರದೇಶ ವಿರುದ್ಧದ ಏಕೈಕ ರಣಜಿ ಟ್ರೋಫಿ ಪಂದ್ಯಕ್ಕಾಗಿ ಮುಂಬೈ ತಂಡದಲ್ಲಿ ಕಾಣಿಸಿಕೊಂಡಿದ್ದರು. ಆದಾಗ್ಯೂ, ಅವರು ಬರೋಡಾ ವಿರುದ್ಧದ ಕ್ವಾರ್ಟರ್-ಫೈನಲ್ಗೆ ಅಲಭ್ಯರಾದರು.

ಅಲ್ಲದೆ, ಎನ್ಸಿಎಯ ಕ್ರೀಡಾ ವಿಜ್ಞಾನ ಮತ್ತು ವೈದ್ಯಕೀಯ ವಿಭಾಗದ ಮುಖ್ಯಸ್ಥ ನಿತಿನ್ ಪಟೇಲ್ ಅವರು ಅಯ್ಯರ್ ಆಡಲು ಯೋಗ್ಯರಾಗಿದ್ದಾರೆ ಎಂದು ಹೇಳಿದರೂ ಇವರು ಕಾಣಿಸಿಕೊಳ್ಳಲಿಲ್ಲ. ಬದಲಾಗಿ ಇಂಡಿಯನ್ ಪ್ರೀಮಿಯರ್ ಲೀಗ್ 2024ರ ಜಾಹೀರಾತು ಶೂಟಿಂಗ್ಗೆ ಹಾಜರಾಗಿದ್ದರು. ಇದರಿಂದ ಬಿಸಿಸಿಐ ಗರಂ ಆಗಿದೆಯಂತೆ.

ರಾಜ್ಕೋಟ್ನಲ್ಲಿ ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೂರನೇ ಟೆಸ್ಟ್ ಆರಂಭಕ್ಕೂ ಮುನ್ನ, ಬಿಸಿಸಿಐ ಕಾರ್ಯದರ್ಶಿ ಜಯ್ ಶಾ ಅವರು ಆಟಗಾರರಿಗೆ ಕಟ್ಟುನಿಟ್ಟಾದ ಎಚ್ಚರಿಕೆ ನೀಡಿದ್ದರು. ರೆಡ್ ಬಾಲ್ ಕ್ರಿಕೆಟ್ ಆಡಬೇಕು, ವಿಫಲವಾದರೆ ಅವರು ಪರಿಣಾಮಗಳನ್ನು ಎದುರಿಸಬೇಕಾಗುತ್ತದೆ ಎಂದಿದ್ದರು. ಅದರಂತೆ ಇದೀಗ ಬಿಸಿಸಿಐ ಕಠಿಣ ಕ್ರಮ ಕೈಗೊಂಡಿದೆ.









