ಮೊದಲ ಪಂದ್ಯದಲ್ಲೇ ಟೀಂ ಇಂಡಿಯಾ ಅಭಿಮಾನಿಗಳಿಗೆ ಶಾಕ್ ನೀಡಿದ ನ್ಯೂಜಿಲೆಂಡ್ ತಂಡ ಬೆಂಗಳೂರು ಟೆಸ್ಟ್ನಲ್ಲಿ ಭಾರತ ತಂಡವನ್ನು 8 ವಿಕೆಟ್ಗಳಿಂದ ಮಣಿಸಿದೆ. ಟೀಂ ಇಂಡಿಯಾದ ಈ ಸೋಲಿಗೆ ನಾಯಕ ರೋಹಿತ್ ಶರ್ಮಾ ತೆಗೆದುಕೊಂಡ ನಿರ್ಧಾರವೇ ಪ್ರಮುಖ ಕಾರಣ ಎಂಬುದನ್ನು ಅವರೇ ಒಪ್ಪಿಕೊಂಡಿದ್ದಾರೆ. ಆದರೆ ಅದರ ಹೊರತಾಗಿಯೂ ಸಂಕಷ್ಟದ ಸಮಯದಲ್ಲಿ ತಂಡಕ್ಕೆ ನೆರವಾಗದ ಈ ಐವರು ಆಟಗಾರರು ಕೂಡ ಮೊದಲ ಟೆಸ್ಟ್ ಸೋಲಿಗೆ ಪ್ರಮುಖ ಕಾರಣರಾದರು.
ವಾಸ್ತವವಾಗಿ ಬೆಂಗಳೂರು ಟೆಸ್ಟ್ನಲ್ಲಿ ಟಾಸ್ ಗೆದ್ದ ಟೀಂ ಇಂಡಿಯಾ ನಾಯಕ ರೋಹಿತ್ ಶರ್ಮಾ ಮೊದಲು ಬ್ಯಾಟಿಂಗ್ ಮಾಡಲು ನಿರ್ಧರಿಸಿದರು. ಆದರೆ ಅವರ ನಿರ್ಧಾರ ತಪ್ಪು ಎಂಬುದು ಕೇವಲ 46 ರನ್ಗಳಿಗೆ ಆಲೌಟ್ ಆದಾಗಲೇ ಎಲ್ಲರಿಗೂ ತಿಳಿದಿತ್ತು. ಆದಾಗ್ಯೂ ಪಂದ್ಯ ಮುಗಿದ ಬಳಿಕ ಮಾತನಾಡಿದ್ದ ರೋಹಿತ್, ಪಿಚ್ ಫ್ಲಾಟ್ ಆಗಿದ್ದರಿಂದ ಬ್ಯಾಟಿಂಗ್ ನೆರವಾಗುವುದೆಂದು ಊಹಿಸಿ ಈ ತಪ್ಪು ನಿರ್ಧಾರ ಕೈಗೊಂಡೆ ಎಂದಿದ್ದರು.
ಇನ್ನು ಈ ಟೆಸ್ಟ್ ಪಂದ್ಯದ ಸೋಲಿಗೆ ರೋಹಿತ್ ಹೊರತಾಗಿ ತಂಡದ ಐವರು ಆಟಗಾರರು ಪ್ರಮುಖ ಕಾರಣರಾಗಿದ್ದಾರೆ. ಅವರಲ್ಲಿ ಪ್ರಮುಖರು ಕನ್ನಡಿಗ ಕೆಎಲ್ ರಾಹುಲ್. ತವರಿನಲ್ಲಿ ಟೆಸ್ಟ್ ಪಂದ್ಯವನ್ನಾಡುತ್ತಿದ್ದ ರಾಹುಲ್ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ರಾಹುಲ್ ಮೊದಲ ಇನ್ನಿಂಗ್ಸ್ನಲ್ಲಿ ಸೊನ್ನೆ ಸುತ್ತಿದರೆ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 12 ರನ್ ಬಾರಿಸಿ ತಂಡವನ್ನು ಸಂಕಷ್ಟಕ್ಕೆ ದೂಡಿದರು.
ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಬ್ಯಾಟಿಂಗ್ನಲ್ಲಿ ತಂಡದ ಕೈಹಿಡಿಯುವಲ್ಲಿ ವಿಫಲರಾದರು. ತಂಡಕ್ಕೆ ತೀರಾ ಅಗತ್ಯವಿದ್ದ ಸಮಯದಲ್ಲಿ ಜಡೇಜಾ ಅವರ ಬ್ಯಾಟ್ ಮೌನವಾಗಿಯೇ ಇತ್ತು. ಮೊದಲ ಇನ್ನಿಂಗ್ಸ್ನಲ್ಲಿ ಡಕ್ಗೆ ಔಟಾಗಿದ್ದ ಜಡೇಜಾ, ಎರಡನೇ ಇನ್ನಿಂಗ್ಸ್ನಲ್ಲಿ ಕೇವಲ 5 ರನ್ ಗಳಿಸಿ ಔಟಾದರು. ಬೌಲಿಂಗ್ನಲ್ಲಿಯೂ ಜಡೇಜಾ ಎರಡೂ ಇನ್ನಿಂಗ್ಸ್ಗಳಲ್ಲಿ ಒಟ್ಟು 3 ವಿಕೆಟ್ ಮಾತ್ರ ಉರುಳಿಸಿದರು.
ಅನುಭವಿ ಆಲ್ರೌಂಡರ್ ರವಿಚಂದ್ರನ್ ಅಶ್ವಿನ್ ಈ ಟೆಸ್ಟ್ನಲ್ಲಿ ಬ್ಯಾಟ್ ಮತ್ತು ಬಾಲ್ ಎರಡರಲ್ಲೂ ವಿಫಲರಾದರು. ಮೊದಲ ಇನ್ನಿಂಗ್ಸ್ನಲ್ಲಿ ಡಕ್ ಔಟ್ ಆಗಿದ್ದ ಅಶ್ವಿನ್, ಎರಡನೇ ಇನ್ನಿಂಗ್ಸ್ನಲ್ಲಿ 15 ರನ್ಗೆ ಸುಸ್ತಾದರು. ಬೌಲಿಂಗ್ನಲ್ಲೂ ಫೇಲ್ ಆದ ಅಶ್ವಿನ್ ಇಡೀ ಪಂದ್ಯದಲ್ಲಿ 1 ವಿಕೆಟ್ ಪಡೆದರೆ, ಅಧಿಕ ರನ್ ಬಿಟ್ಟುಕೊಟ್ಟು ದುಬಾರಿಯಾದರು. ಮೊದಲ ಇನ್ನಿಂಗ್ಸ್ನಲ್ಲಿ ಬೌಲ್ ಮಾಡಿದ 16 ಓವರ್ಗಳಲ್ಲಿ 5.88 ಎಕಾನಮಿಯಲ್ಲಿ 94 ರನ್ ನೀಡಿದರು.
ಟೀಂ ಇಂಡಿಯಾದ ವೇಗದ ಬೌಲರ್ ಮೊಹಮ್ಮದ್ ಸಿರಾಜ್ ಅವರಿಗೆ ಚಿನ್ನಸ್ವಾಮಿ ಮೈದಾನ ತವರು ಮೈದಾನವಿದಂತೆ. ಹೀಗಾಗಿ ಅವರ ಮೇಲೆ ಸಾಕಷ್ಟು ನಿರೀಕ್ಷೆಗಳಿದ್ದವು. ಆದರೆ ತೀರ ದುಬಾರಿಯಾದ ಸಿರಾಜ್, ಮೊದಲ ಇನಿಂಗ್ಸ್ನಲ್ಲಿ 18 ಓವರ್ ಬೌಲ್ ಮಾಡಿ 84 ರನ್ ನೀಡಿ 2 ವಿಕೆಟ್ ಪಡೆದರೆ, ಎರಡನೇ ಇನಿಂಗ್ಸ್ನಲ್ಲಿ 7 ಓವರ್ಗೆ 16 ರನ್ ನೀಡಿ ಯಾವುದೇ ವಿಕೆಟ್ ಪಡೆಯಲಿಲ್ಲ.
ಭಾರತ ತಂಡದ ಆರಂಭಿಕ ಬ್ಯಾಟ್ಸ್ಮನ್ ಯಶಸ್ವಿ ಜೈಸ್ವಾಲ್ ಕೂಡ ಈ ಪಂದ್ಯದ ಎರಡೂ ಇನ್ನಿಂಗ್ಸ್ಗಳಲ್ಲಿ ಹೆಚ್ಚಿನ ಪ್ರಭಾವ ಬೀರಲಿಲ್ಲ. ಮೊದಲ ಇನ್ನಿಂಗ್ಸ್ನಲ್ಲಿ 13 ರನ್ ಗಳಿಸಿದ್ದ ಜೈಸ್ವಾಲ್ ಎರಡನೇ ಇನ್ನಿಂಗ್ಸ್ನಲ್ಲಿ ಉತ್ತಮ ಆರಂಭ ಪಡೆದುಕೊಂಡರಾದರೂ ಕೇವಲ 35 ರನ್ಗಳಲ್ಲಿ ದೊಡ್ಡ ಶಾಟ್ ಆಡುವ ಪ್ರಯತ್ನದಲ್ಲಿ ವಿಕೆಟ್ ಕಳೆದುಕೊಂಡರು. ಭಾರತಕ್ಕೆ ಎರಡನೇ ಇನ್ನಿಂಗ್ಸ್ನಲ್ಲಿ ಅವರಿಂದ ದೊಡ್ಡ ಇನ್ನಿಂಗ್ಸ್ನ ಅಗತ್ಯವಿತ್ತು.