
ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯನ್ನು ಟೀಂ ಇಂಡಿಯಾ 2-1 ಅಂತರದಿಂದ ಸೋತಿದೆ. ಈ ಮೂಲಕ ಭಾರತದ ನೆಲದಲ್ಲಿ 37 ವರ್ಷಗಳ ಬಳಿಕ ಏಕದಿನ ಸರಣಿಯನ್ನು ಗೆದ್ದ ಸಾಧನೆಯನ್ನು ನ್ಯೂಜಿಲೆಂಡ್ ಮಾಡಿದೆ. ಕಳೆದ ಭಾರತ ಪ್ರವಾಸದಲ್ಲಿ ಆಡಿದ್ದ ಟೆಸ್ಟ್ ಸರಣಿಯಲ್ಲಿ ಟೀಂ ಇಂಡಿಯಾವನ್ನು 3-0 ಅಂತರದಿಂದ ಸೋಲಿಸುವ ಮೂಲಕ ಇತಿಹಾಸ ಸೃಷ್ಟಿಸಿದ್ದ, ಕಿವೀಸ್ ಈಗ ಏಕದಿನ ಸರಣಿಯನ್ನು ಗೆದ್ದುಕೊಂಡಿದೆ.

ವಾಸ್ತವವಾಗಿ ಈ ಸರಣಿಯನ್ನು ಆತಿಥೇಯ ಭಾರತ ಗೆಲುವಿನೊಂದಿಗೆ ಆರಂಭಿಸಿತ್ತು. ಆದರೆ ಆ ಬಳಿಕ ನಡೆದ ಎರಡೂ ಪಂದ್ಯಗಳಲ್ಲಿ ತಂಡದ ಕೆಲವು ಪ್ರಮುಖ ಆಟಗಾರರ ಕಳಪೆ ಪ್ರದರ್ಶನ ತಂಡದ ಸೋಲಿಗೆ ಕಾರಣವಾಯಿತು. ಏಕದಿನ ತಂಡದಲ್ಲಿ ಸ್ಥಾನ ಉಳಿಸಿಕೊಳ್ಳಲು ಹೋರಾಡುತ್ತಿರುವ ಟೀಂ ಇಂಡಿಯಾದ ಈ ಮೂವರು ಆಟಗಾರರ ಏಕದಿನ ತಂಡದ ಕದ ಮುಚ್ಚಿದೆ ಎಂತಲೇ ಹೇಳಬಹುದು.

ರವೀಂದ್ರ ಜಡೇಜಾ: ಈ ಪಟ್ಟಿಯಲ್ಲಿ ಮೊದಲ ಹೆಸರು ಅನುಭವಿ ಆಲ್ರೌಂಡರ್ ರವೀಂದ್ರ ಜಡೇಜಾ ಅವರದು. ಏಕದಿನ ಪಂದ್ಯಗಳಲ್ಲಿ, ಜಡೇಜಾ ತಮ್ಮ ಬೌಲಿಂಗ್ ಅಥವಾ ಬ್ಯಾಟಿಂಗ್ನಿಂದ ತಂಡಕ್ಕೆ ಕೊಡುಗೆ ನೀಡಲು ಸಾಧ್ಯವಾಗಿಲ್ಲ. ನ್ಯೂಜಿಲೆಂಡ್ ವಿರುದ್ಧದ ಮೂರು ಪಂದ್ಯಗಳಲ್ಲಿ ಜಡೇಜಾ ಒಂದೇ ಒಂದು ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ. ಅವರ ಬ್ಯಾಟ್ ಕೂಡ ರನ್ ಗಳಿಸುವಲ್ಲಿ ವಿಫಲವಾಯಿತು. ಕಳೆದ ವರ್ಷ, ಜಡೇಜಾ ಒಟ್ಟು 10 ಏಕದಿನ ಪಂದ್ಯಗಳನ್ನು ಆಡಿದ್ದು, ಕೇವಲ 106 ರನ್ ಗಳಿಸಿದ್ದರು. ಇದರ ಜೊತೆಗೆ ಕೇವಲ 10 ವಿಕೆಟ್ಗಳನ್ನು ಪಡೆಯುವಲ್ಲಿ ಯಶಸ್ವಿಯಾಗಿದ್ದರು.

ನಿತೀಶ್ ಕುಮಾರ್ ರೆಡ್ಡಿ: ವಾಷಿಂಗ್ಟನ್ ಸುಂದರ್ ಬದಲಿಗೆ ನಿತೀಶ್ ಕುಮಾರ್ ರೆಡ್ಡಿ ಅವರನ್ನು ತಂಡದಲ್ಲಿ ಆಯ್ಕೆ ಮಾಡಲಾಗಿತ್ತು. ವೇಗದ ಬೌಲರ್ಗಳಿಗೆ ಅನುಕೂಲಕರವಾದ ಪಿಚ್ಗಳಲ್ಲಿ ನಿತೀಶ್ ಅವರಿಂದ ಹೆಚ್ಚಿನ ನಿರೀಕ್ಷೆ ಇತ್ತು. ಆದರೆ ಬೌಲಿಂಗ್ನಲ್ಲಿ ಯಶಸ್ವಿಯಾಗದ ನಿತೀಶ್ ಮೂರನೇ ಏಕದಿನ ಪಂದ್ಯದಲ್ಲಿ ಅರ್ಧಶತಕದ ಇನ್ನಿಂಗ್ಸ್ ಆಡಿದ್ದರು. ಮುಂದಿನ ಸರಣಿ ವೇಳೆಗೆ ಹಾರ್ದಿಕ್ ಪಾಂಡ್ಯ ಫಿಟ್ ಆಗಲಿದ್ದು, ನಿತೀಶ್ಗೆ ಮತ್ತೆ ಅವಕಾಶ ಸಿಗಲು ಕಾಯಬೇಕು.

ಪ್ರಸಿದ್ಧ ಕೃಷ್ಣ: ವೇಗಿ ಪ್ರಸಿದ್ಧ್ ಕೃಷ್ಣ ತಂಡದಿಂದ ಕೈಬಿಡಬಹುದಾದ ಮತ್ತೊಬ್ಬ ಆಟಗಾರ. ಅವರ ಪ್ರದರ್ಶನವೂ ಕಳಪೆಯಾಗಿದೆ. ಮೊದಲ ಎರಡು ಪಂದ್ಯಗಳಲ್ಲಿ ಅವರು ಉತ್ತಮವಾಗಿ ಪ್ರದರ್ಶನ ನೀಡದ ಕಾರಣ ಮೂರನೇ ಪಂದ್ಯದಲ್ಲಿ ಅವರಿಗೆ ಅವಕಾಶ ನೀಡಲಾಗಿಲ್ಲ. ಆ ಎರಡು ಪಂದ್ಯಗಳಲ್ಲಿ ಅವರು ಕೇವಲ ಮೂರು ವಿಕೆಟ್ಗಳನ್ನು ಮಾತ್ರ ಪಡೆದರಾದರೂ ಸಾಕಷ್ಟು ರನ್ಗಳನ್ನು ಬಿಟ್ಟುಕೊಟ್ಟರು.