
2026 ರ ಐಪಿಎಲ್ ಆರಂಭಕ್ಕೆ ಕೇವಲ ಒಂದು ದಿನ ಮಾತ್ರ ಬಾಕಿ ಉಳಿದಿದೆ. ಲೀಗ್ನ ಮೊದಲ ಪಂದ್ಯದಲ್ಲೇ ಹಾಲಿ ಚಾಂಪಿಯನ್ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡ, ಸನ್ರೈಸರ್ಸ್ ಹೈದರಾಬಾದ್ ತಂಡವನ್ನು ಎದುರಿಸುತ್ತಿದೆ. ಆದರೆ ಈ ಪಂದ್ಯಕ್ಕೂ ಮುನ್ನ ಆರ್ಸಿಬಿಗೆ ದೊಡ್ಡ ಆಘಾತ ಎದುರಾಗಿದೆ. ತಂಡದ ಸ್ಟಾರ್ ವೇಗದ ಬೌಲರ್ ನುವಾನ್ ತುಷಾರ ಲೀಗ್ನಿಂದ ಹೊರಬೀಳುವ ಸಾಧ್ಯತೆಗಳಿವೆ ಎಂದು ವರದಿಯಾಗಿದೆ.

ಗಾಯದಿಂದ ಬಳಲುತ್ತಿರುವ ನುವಾನ್ ತುಷಾರ ಪ್ರಸ್ತುತ ಚೇತರಿಕೆಯ ಹಾದಿಯಲಿದ್ದಾರೆ. ಹೀಗಾಗಿ ಅವರು ಸಂಪೂರ್ಣ ಚೇತರಿಸಿಕೊಳ್ಳುವರೆಗೂ ಅವರಿಗೆ ಐಪಿಎಲ್ನಲ್ಲಿ ಆಡಲು ಎನ್ಒಸಿ ನೀಡಲು ಶ್ರೀಲಂಕಾ ಕ್ರಿಕೆಟ್ ಮಂಡಳಿ ನಿರಾಕರಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿ ಇತ್ತೀಚೆಗೆ ಕಟ್ಟುನಿಟ್ಟಾದ ಫಿಟ್ನೆಸ್ ನೀತಿಯನ್ನು ಜಾರಿಗೆ ತಂದಿದೆ, ಅದಕ್ಕಾಗಿಯೇ ಈ ಕಠಿಣ ನಿರ್ಧಾರವನ್ನು ತೆಗೆದುಕೊಳ್ಳಲಾಗಿದೆ. ಶ್ರೀಲಂಕಾ ಮಂಡಳಿಯ ಈ ನಿರ್ಧಾರ ಆರ್ಸಿಬಿಗೆ ದೊಡ್ಡ ಹೊಡೆತವಾಗಿದೆ.

ಶ್ರೀಲಂಕಾದ ವೇಗದ ಬೌಲರ್ ನುವಾನ್ ತುಷಾರ ಐಪಿಎಲ್ನಲ್ಲಿ ಭಾಗವಹಿಸುವ ಮೊದಲು ಫಿಟ್ನೆಸ್ ಪರೀಕ್ಷೆಯನ್ನು ತೆಗೆದುಕೊಳ್ಳಬೇಕಾಯಿತು, ಆದರೆ ಅವರು ವಿಫಲರಾಗಿದ್ದಾರೆ. ಹೀಗಾಗಿ ಶ್ರೀಲಂಕಾ ಮಂಡಳಿ ಅವರಿಗೆ ಎನ್ಒಸಿ ನೀಡಲು ನಿರಾಕರಿಸಿದೆ. ಶ್ರೀಲಂಕಾ ಕ್ರಿಕೆಟ್ ಮಂಡಳಿಯ ಹೊಸ ನೀತಿಯ ಪ್ರಕಾರ, ಎಲ್ಲಾ ಆಟಗಾರರು ಯಾವುದೇ ವಿದೇಶಿ ಫ್ರಾಂಚೈಸ್ ಲೀಗ್ನಲ್ಲಿ ಭಾಗವಹಿಸಲು ಫಿಟ್ನೆಸ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿರಬೇಕು, ಒಂದು ವೇಳೆ ಅದರಲ್ಲಿ ಅವರು ವಿಫಲವಾದರೆ ಅಂತಹ ಆಟಗಾರರಿಗೆ ಎನ್ಒಸಿ ನೀಡದಂತೆ ಮಂಡಳಿ ತೀರ್ಮಾನಿಸಿದೆ.

ನುವಾನ್ ತುಷಾರ ಐಪಿಎಲ್ನಿಂದ ಹೊರಗುಳಿದರೆ ಆರ್ಸಿಬಿ ಬೌಲಿಂಗ್ ವಿಭಾಗ ದುರ್ಬಲವಾಗಿ ಕಾಣಲಿದೆ. ಏಕೆಂದರೆ ಮತ್ತೊಬ್ಬ ವೇಗಿ ಜೋಶ್ ಹೇಜಲ್ವುಡ್ ಕೂಡ ಆರಂಭಿಕ ಪಂದ್ಯಗಳಿಗೆ ಅಲಭ್ಯರಾಗಿದ್ದಾರೆ. ಇವರಿಬ್ಬರ ಅನುಪಸ್ಥಿತಿಯಲ್ಲಿ ಆರ್ಸಿಬಿ ಯಾರನ್ನು ಆಡಿಸಲಿದೆ ಎಂಬುದು ಪ್ರಶ್ನಾರ್ಥಕವಾಗಿದೆ.

ಇದೆಲ್ಲದರ ನಡುವೆ ಒಳ್ಳೆಯ ಸುದ್ದಿ ಅಂದರೆ ಜೋಶ್ ಹೇಜಲ್ವುಡ್ ಬೆಂಗಳೂರಿನಲ್ಲಿ ತಂಡವನ್ನು ಕೂಡಿಕೊಂಡಿದ್ದಾರೆ. ಆದಾಗ್ಯೂ ಅವರು ಪ್ರಸ್ತುತ ಫಿಟ್ ಆಗಿಲ್ಲ. ಇದರಿಂದ ಮೊದಲ ನಾಲ್ಕೈದು ಪಂದ್ಯಗಳಲ್ಲಿ ಅವರು ಆಡುವುದು ಅನುಮಾನವಾಗಿದೆ. ಇದರ ಜೊತೆಗೆ ಇದೀಗ ನುವಾನ್ ತುಷಾರಗೆ ಎನ್ಒಸಿ ಸಿಗದಿರುವುದು ತಂಡವನ್ನು ಸಂಕಷ್ಟಕ್ಕೆ ಸಿಲುಕಿಸಿದೆ.