
ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೂ ಮುನ್ನವೇ ಭಾರತ ಕ್ರಿಕೆಟ್ ತಂಡಕ್ಕೆ ಭಾರಿ ಆಘಾತ ಎದುರಾಗಿದೆ. ಜಸ್ಪ್ರೀತ್ ಬುಮ್ರಾ ಸೇರಿದಂತೆ ಹಲವು ಪ್ರಮುಖ ಆಟಗಾರರು ಗಾಯದ ಸಮಸ್ಯೆಯಿಂದಾಗಿ ಸರಣಿಯಿಂದ ಹೊರಗುಳಿದಿದ್ದಾರೆ. ಅದರಲ್ಲೂ ಏಕಕಾಲದಲ್ಲಿ ಟೀಮ್ ಇಂಡಿಯಾದ ಏಳು ಆಟಗಾರರು ಗಾಯಾಳುಗಳ ಪಟ್ಟಿ ಸೇರಿರುವುದು ಬಿಸಿಸಿಐಗೆ ಹೊಸ ತಲೆನೋವಾಗಿ ಪರಿಣಮಿಸಿದೆ. ಗಾಯಗೊಂಡಿರುವ ಟೀಮ್ ಇಂಡಿಯಾ ಆಟಗಾರರ ವಿವರ ಈ ಕೆಳಗಿನಂತಿದೆ.. (PC: Getty Images)

ಜಸ್ಪ್ರೀತ್ ಬುಮ್ರಾ: ಟೀಮ್ ಇಂಡಿಯಾ ವೇಗಿ ಜಸ್ಪ್ರೀತ್ ಬುಮ್ರಾ ಎಡ ಮೊಣಕಾಲಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಬೌಲಿಂಗ್ ಮಾಡುವಾಗ ಅವರ ದೇಹದ ಸಂಪೂರ್ಣ ತೂಕ ಎಡಗಾಲಿನ ಮೇಲೆಯೇ ಬೀಳುತ್ತದೆ. ಹಾರ್ಡ್ ಗ್ರೌಂಡ್ನಿಂದಾಗಿ ಮೊಣಕಾಲಿನ ಜಾಯಿಂಟ್ ಮತ್ತು ಕಾರ್ಟಿಲೆಜ್ ಭಾಗಕ್ಕೆ ತೀವ್ರವಾದ ಗಾಯವಾಗಿದ್ದು, ಹೀಗಾಗಿ ಲಂಕಾ ವಿರುದ್ಧದ ಸರಣಿಯಿಂದ ಹೊರಗುಳಿದಿದ್ದಾರೆ. (PC: Getty Images)

ವಾಷಿಂಗ್ಟನ್ ಸುಂದರ್: ಭಾರತ ತಂಡದ ಆಲ್ರೌಂಡರ್ ವಾಷಿಂಗ್ಟನ್ ಸುಂದರ್ ಹ್ಯಾಮ್ಸ್ಟ್ರಿಂಗ್ ಸ್ಟ್ರೈನ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ತೊಡೆಯ ಹಿಂಭಾಗದ ಸ್ನಾಯುಗಳು ಅತಿಯಾಗಿ ಎಳೆಯಲ್ಪಟ್ಟಾಗ ಈ ಸಮಸ್ಯೆಯು ಎದುರಾಗುತ್ತದೆ. ಇದೇ ಕಾರಣದಿಂದಾಗಿ ಸುಂದರ್ ಕೂಡ ಶ್ರೀಲಂಕಾ ಸರಣಿಗೆ ಆಯ್ಕೆಯಾಗಿಲ್ಲ. (PC: Getty Images)

ಹರ್ಷಿತ್ ರಾಣಾ: ಟೀಮ್ ಇಂಡಿಯಾ ವೇಗಿ ಹರ್ಷಿತ್ ರಾಣಾ ಕೂಡ ವಾಷಿಂಗ್ಟನ್ ಸುಂದರ್ ಅವರಂತೆಯೇ ತೊಡೆಯ ಹಿಂಭಾಗದ ಸ್ನಾಯು ಸೆಳೆತದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಗ್ರೇಡ್ 1 ಹ್ಯಾಮ್ಸ್ಟ್ರಿಂಗ್ ಸ್ಟ್ರೈನ್ಗೆ ಒಳಗಾಗಿರುವ ರಾಣಾಗೆ ವೈದ್ಯರು ಹೆಚ್ಚಿನ ವಿಶ್ರಾಂತಿ ಸೂಚಿಸಿದ್ದು, ಹೀಗಾಗಿ ಅವರು ಕೂಡ ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ. (PC: Getty Images)

ನಿತೀಶ್ ಕುಮಾರ್ ರೆಡ್ಡಿ: ಭಾರತ ತಂಡದ ಯುವ ಆಲ್ರೌಂಡರ್ ನಿತೀಶ್ ಕುಮಾರ್ ರೆಡ್ಡಿ ಎಡ ಕ್ವಾಡ್ರಿಸೆಪ್ಸ್ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಕ್ವಾಡ್ರಿಸೆಪ್ಸ್ ಎಂಬುದು ತೊಡೆಯ ಮುಂಭಾಗದಲ್ಲಿರುವ ನಾಲ್ಕು ದೊಡ್ಡ ಸ್ನಾಯುಗಳ ಸಮೂಹ. ವೇಗದ ಬೌಲಿಂಗ್ ಮತ್ತು ಬ್ಯಾಟಿಂಗ್ ವೇಳೆ ತೀವ್ರವಾಗಿ ಓಡುವುದರಿಂದ ಈ ಸ್ನಾಯುಗಳ ಮೇಲೆ ಒತ್ತಡ ಬಿದ್ದು ಗಾಯಗೊಂಡಿದ್ದಾರೆ. (PC: Getty Images)

ಆಕಾಶ್ ದೀಪ್: ಟೀಮ್ ಇಂಡಿಯಾ ವೇಗಿ ಆಕಾಶ್ ದೀಪ್ ಬೆನ್ನಿನ ಭಾಗದ ಸ್ಟ್ರೆಸ್ ರಿಯಾಕ್ಷನ್ನಿಂದ ಬಳಲುತ್ತಿದ್ದಾರೆ. ಇದು ವೇಗದ ಬೌಲರ್ಗಳಲ್ಲಿ ಕಂಡುಬರುವ ಅತ್ಯಂತ ಗಂಭೀರ ಸಮಸ್ಯೆ. ಬೆನ್ನುಮೂಳೆಯ ಮೂಳೆಗಳ ಮೇಲೆ ನಿರಂತರ ಒತ್ತಡ ಬಿದ್ದಾಗ ಮೂಳೆಯಲ್ಲಿ ಸಣ್ಣದಾಗಿ ಬಿರುಕು ಬಿಡುವ ಆರಂಭಿಕ ಹಂತವೇ 'ಸ್ಟ್ರೆಸ್ ರಿಯಾಕ್ಷನ್'. (PC: Getty Images)

ವರುಣ್ ಚಕ್ರವರ್ತಿ: ಭಾರತ ತಂಡದ ಮಿಸ್ಟರಿ ಸ್ಪಿನ್ನರ್ ವರುಣ್ ಚಕ್ರವರ್ತಿ ಗ್ರೇಡ್ 2 ಹ್ಯಾಮ್ಸ್ಟ್ರಿಂಗ್ ಟೇರ್ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಇದು ಸಾಮಾನ್ಯ ಸ್ನಾಯು ಸೆಳೆತಕ್ಕಿಂತ ಗಂಭೀರವಾದದ್ದು. ಗ್ರೇಡ್ 2 ಎಂದರೆ ತೊಡೆಯ ಹಿಂಭಾಗದ ಸ್ನಾಯುಗಳು ಭಾಗಶಃ ಹರಿದಿರುತ್ತವೆ. ಇದರಿಂದ ಓಡುವಾಗ ತೀವ್ರವಾದ ನೋವು ಕಾಣಿಸಿಕೊಳ್ಳುತ್ತದೆ. ಸದ್ಯ ಈ ಸಮಸ್ಯೆಗಾಗಿ ವರುಣ್ ಚಕ್ರವರ್ತಿ ಚಿಕಿತ್ಸೆ ಮುಂದುವರೆಸಿದ್ದಾರೆ. (PC: Getty Images)

ಸಾಯಿ ಸುದರ್ಶನ್: ಟೀಮ್ ಇಂಡಿಯಾದ ಯುವ ಎಡಗೈ ಬ್ಯಾಟರ್ ಸಾಯಿ ಸುದರ್ಶನ್ ಕಾಲಿನ ಹೆಬ್ಬೆರಳಿನ ಗಾಯದ ಸಮಸ್ಯೆಯಿಂದ ಬಳಲುತ್ತಿದ್ದಾರೆ. ಆದಾಗ್ಯೂ, ಅವರನ್ನು ಶ್ರೀಲಂಕಾ ವಿರುದ್ಧದ ಟೆಸ್ಟ್ ಸರಣಿಗೆ ಆಯ್ಕೆ ಮಾಡಲಾಗಿದೆ. ಆದರೆ ಮೊದಲ ಟೆಸ್ಟ್ ಪಂದ್ಯಕ್ಕೂ ಮುನ್ನ ಅವರಿಗೆ ಫಿಟ್ನೆಸ್ ಪರೀಕ್ಷೆ ನಡೆಯಲಿದ್ದು, ಅವರು ಸಂಪೂರ್ಣ ಫಿಟ್ ಆಗಿದ್ದರೆ ಮಾತ್ರ ಪ್ಲೇಯಿಂಗ್ ಇಲೆವೆನ್ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. (PC: Getty Images)