
ಸದ್ಯಕ್ಕೆ ಕ್ರಿಕೆಟ್ ಪ್ರಿಯರ ಮನಸಿನಲ್ಲಿ ಮೂಡಿರುವ ಪ್ರಶ್ನೆಯೆಂದರೆ ವೈಭವ್ ಸೂರ್ಯವಂಶಿಗೆ ತಂಡದಲ್ಲಿ ಆಡುವ ಅವಕಾಶ ಸಿಗುವುದು ಯಾವಾಗ ಎಂಬುದು. ಪ್ರತಿಯೊಬ್ಬ ಅಭಿಮಾನಿಯೂ ವೈಭವ್ಗೆ ಆದಷ್ಟು ಬೇಗ ಟೀಂ ಇಂಡಿಯಾದಲ್ಲಿ ಸ್ಥಾನ ಸಿಗಬೇಕು ಎಂಬ ಅಭಿಪ್ರಾಯ ಹೊಂದಿದ್ದಾರೆ. ಅಭಿಮಾನಿಗಳ ಜೊತೆಗೆ ವಿಶ್ವ ಕ್ರಿಕೆಟ್ನ ದಿಗ್ಗಜರೂ ಕೂಡ ಇದೇ ಮಾತನ್ನು ಹೇಳುತ್ತಿದ್ದಾರೆ. ಅಂತಹವರ ಸಾಲಿಗೆ ಇದೀಗ ಎಬಿ ಡಿವಿಲಿಯರ್ಸ್ ಕೂಡ ಸೇರಿಕೊಂಡಿದ್ದಾರೆ.

ವೈಭವ್ ಸೂರ್ಯವಂಶಿಯ ಅಂತರರಾಷ್ಟ್ರೀಯ ಪಾದಾರ್ಪಣೆಯ ಬಗ್ಗೆ ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಅಭಿಪ್ರಾಯ ಹಂಚಿಕೊಂಡಿರುವ ಡಿವಿಲಿಯರ್ಸ್, ಐಪಿಎಲ್ನಲ್ಲಿ ವೈಭವ್ ಪ್ರದರ್ಶನ ನೀಡಿದ ರೀತಿಯನ್ನು ಗಮನಿಸಿದರೆ, ಅವರಿಗೆ ಐರ್ಲೆಂಡ್ ವಿರುದ್ಧ ಅವಕಾಶ ಸಿಗಬೇಕಿತ್ತು. ಅಂತರರಾಷ್ಟ್ರೀಯ ಕ್ರಿಕೆಟ್ಗೆ ಪಾದಾರ್ಪಣೆ ಮಾಡಲು ವೈಭವ್ಗೆ ಐರ್ಲೆಂಡ್ ವಿರುದ್ಧದ ಟಿ20 ಸರಣಿ ಸೂಕ್ತವಾಗಿತ್ತು.

ಆದರೆ ವೈಭವ್ಗೆ ಇನ್ನೂ ಅವಕಾಶ ಸಿಗದಿರುವುದು ದುರದೃಷ್ಟಕರ. ವೈಭವ್ ಈ ಬಾರಿಯ ಐಪಿಎಲ್ನಲ್ಲಿ ಆಡಿದ್ದನ್ನು ನೋಡಿದರೆ, ಇತರ ಆಟಗಾರರಂತೆಯೇ ಅದೇ ಪ್ರಕ್ರಿಯೆಯ ಮೂಲಕ ಹೋಗಬೇಕು ಎಂಬ ರಯಾನ್ ಅವರ ಮಾತನ್ನು ನಾನು ಒಪ್ಪುವುದಿಲ್ಲ. ವೈಭವ್ಗೆ ಈಗಾಗಲೇ ಅವಕಾಶ ನೀಡಬೇಕಿತ್ತು. ವಿಶೇಷವಾಗಿ ಐರ್ಲೆಂಡ್ನಂತಹ ಕೆಳ ಶ್ರೇಯಾಂಕದ ತಂಡದ ವಿರುದ್ಧ ವೈಭವ್ ಆಡಲೇಬೇಕಿತ್ತು ಎಂದಿದ್ದಾರೆ.

ಇನ್ನು ಐರ್ಲೆಂಡ್ ವಿರುದ್ಧ ಟೀಂ ಇಂಡಿಯಾದ ಸರಣಿ ಸೋಲಿನ ಬಗ್ಗೆ ಮಾತನಾಡಿರುವ ಡಿವಿಲಿಯರ್ಸ್, ‘ಟೀಂ ಇಂಡಿಯಾ ಗೆಲುವಿನ ಲಯಕ್ಕೆ ಮರಳುವುದಕ್ಕೆ ಸಂಬಂಧಿಸಿದಂತೆ ಸ್ವಲ್ಪ ಕೆಲಸ ಮಾಡಬೇಕಾಗಿದೆ. ತಂಡದಲ್ಲಿ ಒಗ್ಗಟ್ಟು ಮೂಡಬೇಕು, ಮರು ತಯಾರಿ ಮಾಡಿಕೊಳ್ಳಬೇಕು ಮತ್ತು ಯುಕೆಯಲ್ಲಿ ಆಡಲು ಒಂದು ಮಾರ್ಗವನ್ನು ಕಂಡುಕೊಳ್ಳಬೇಕು.

ಇಂಗ್ಲೆಂಡ್ನ ಪರಿಸ್ಥಿತಿಗಳಲ್ಲಿ ಆಡುವುದು ಸುಲಭವಲ್ಲ. ಇಲ್ಲಿ ಐಪಿಎಲ್ ತರಹದ ಸ್ಕೋರ್ಗಳು ಇರುವುದಿಲ್ಲ. ನೀವು ಇಲ್ಲಿ 250 ರಿಂದ 260 ರನ್ ಗಳಿಸಲು ಸಾಧ್ಯವಿಲ್ಲ. ಇಲ್ಲಿ ಕ್ರಿಕೆಟ್ ಅನ್ನು ಹೆಚ್ಚಿನ ತಂತ್ರದೊಂದಿಗೆ ಆಡಬೇಕಾಗುತ್ತದೆ. ಕೆಲವೊಮ್ಮೆ 140 ರಿಂದ 160 ರನ್ ಗಳಿಸುವುದು ಸುಲಭವಲ್ಲ ಎಂದು ಡಿವಿಲಿಯರ್ಸ್ ಅಭಿಪ್ರಾಯಪಟ್ಟಿದ್ದಾರೆ.