ಹಾವೇರಿಯಲ್ಲಿ ಹನಿ ನೀರಿಗೂ ಹಾಹಾಕಾರ; ಆಹಾರಕ್ಕಾಗಿ ಒಣ ಜಮೀನಿಗೆ ನುಗ್ಗಿದ ಜಿಂಕೆಗಳ ನರಳಾಟ
ಹಾವೇರಿ ಜಿಲ್ಲೆಯ ಹೊರಭಾಗದಲ್ಲಿ ಕುಡಿಯುವ ನೀರಿಗಾಗಿ ಜಿಂಕೆಗಳು ಪರದಾಡುತ್ತಿರುವ ಮನಕಲಕುವ ದೃಶ್ಯಗಳು ಕಂಡುಬಂದಿವೆ. ತಿನ್ನಲು ಹಸಿರು ಹುಲ್ಲು ಹಾಗೂ ಕುಡಿಯಲು ನೀರಿಗಾಗಿ ಜಿಂಕೆಗಳು ಅಲೆದಾಡುತ್ತಿವೆ.
Updated on:Jun 24, 2023 | 11:23 AM

ಹಾವೇರಿ ಜಿಲ್ಲೆಯಲ್ಲಿ ವರುಣನ ದರ್ಶನವೇ ಆಗುತ್ತಿಲ್ಲ. ಒಂದು ಹನಿ ನೀರಿಗೂ ಹಾಹಾಕಾರ ಶುರುವಾಗಿದೆ. ಭೂ ತಾಯಿ ಒಡಲು ತಂಪು ಮಾಡಬೇಕಿದ್ದ ಮಳೆರಾಯನೇಕೋ ಈ ಬಾರಿ ಮುನಿಸಿಕೊಂಡಿದ್ದಾನೆ.

ಹನಿ ನೀರಿಲ್ಲದೇ ಭೂತಾಯಿ ಒಣಗಿದ್ದಾಳೆ. ಬರಗಾಲದ ಛಾಯೆ ಆವರಿಸಿದೆ. ಬಿಸಿಲ ಬೇಗೆಗೆ ನೀರಲ್ಲದೇ ಅದೆಷ್ಟೋ ಪ್ರಾಣಿ ಪಕ್ಷಿಗಳು, ಜಾನುವಾರುಗಳು ಕಂಗೆಟ್ಟು ಹೋಗಿವೆ. ಕೆರೆ, ಬಾವಿ, ನದಿ ಯಾವುದರಲ್ಲೂ ತೊಟ್ಟು ನೀರಿಲ್ಲ.

ಹಾವೇರಿ ಜಿಲ್ಲೆಯ ಹೊರಭಾಗದಲ್ಲಿ ಕುಡಿಯುವ ನೀರಿಗಾಗಿ ಜಿಂಕೆಗಳು ಪರದಾಡುತ್ತಿರುವ ಮನಕಲಕುವ ದೃಶ್ಯಗಳು ಕಂಡುಬಂದಿವೆ. ತಿನ್ನಲು ಹಸಿರು ಹುಲ್ಲು ಹಾಗೂ ಕುಡಿಯಲು ನೀರಿಗಾಗಿ ಜಿಂಕೆಗಳು ಅಲೆದಾಡುತ್ತಿವೆ.

ಒಣ ಜಮೀನಿನಲ್ಲಿ ಜಿಂಕೆಗಳ ಗುಂಪೊಂದು ಹಸಿರು ಹುಲ್ಲು ಕಾಣದೆ ಕಂಗಾಲಾಗಿವೆ. ಪ್ರತಿ ವರ್ಷ ಮುಂಗಾರು ಆರಂಭ ಆಗಿ ಇಷ್ಟೊತ್ತಿಗೆ ಒಳ್ಳೆಯ ಹುಲ್ಲು ಬೆಳೆಯುತ್ತಿತ್ತು. ಆದ್ರೆ ಈ ವರ್ಷ ಮುಂಗಾರು ವ್ಯತ್ಯಯವಾಗಿರುವುದರಿಂದ ಆಹಾರದ ನಿರೀಕ್ಷೆಯಲ್ಲಿ ಬಂದ ಜಿಂಕೆಗಳು ಕಂಗಾಲಾಗಿವೆ.

ಹಾವೇರಿ ಜಿಲ್ಲೆಯಲ್ಲಿ ಬಹಳಷ್ಟು ಸಂಖ್ಯೆಯಲ್ಲಿ ಜಿಂಕೆಗಳಿವೆ. ಮಳೆ ಚನ್ನಾಗಿಯಾದ್ರೆ ಜಿಂಕೆಗಳು ಈ ರೀತಿ ರಸ್ತೆ, ಜಮೀನುಗಳಲ್ಲಿ ಕಂಡುಬರುವುದಿಲ್ಲ. ಆದ್ರೆ ಈ ಬಾರಿ ಮಳೆಯಿಲ್ಲದ ಅವುಗಳು ಕೂಡ ಪರಿತಪಿಸುತ್ತಿವೆ.

ಮೂಕ ಪ್ರಾಣಿಗಳು ನೀರಿಗಾಗಿ, ಆಹಾರಕ್ಕಾಗಿ ಈ ರೀತಿ ಅಲೆದಾಡುವ ದೃಶ್ಯ ಮನಕಲಕುವಂತಿದೆ. ಹೀಗಾಗಿ ವರುಣನ ಆಗಮನಕ್ಕೆ ಅನೇಕ ಕಡೆ ವಿಶೇಷ ಪೂಜೆ, ಪ್ರಾರ್ಥನೆಗಳು ನಡೆಯುತ್ತಿವೆ.
Published On - 11:04 am, Sat, 24 June 23

ಹುಟ್ಟಿದ್ದು ಕೋಟೆ ನಾಡು ಚಿತ್ರದುರ್ಗ. ಬಾಲ್ಯ ಕಳೆದದ್ದು ಖ್ಯಾತ ಕಾದಂಬರಿಕಾರ ತ.ರಾ.ಸು ಅವರ ತಳುಕು. ವಿದ್ಯಾಭ್ಯಾಸ ಬೆಂಗಳೂರಿನಲ್ಲಿ. ಓದಿದ್ದು ಬಿಬಿಎಂ ಆದ್ರೂ ಪತ್ರಕರ್ತೆ ಆಗಬೇಕು ಎಂಬ ಕನಸು ಹಲವು ವರ್ಷಗಳಿಂದ ಮಾಧ್ಯಮದಲ್ಲಿ ಮುನ್ನುಗ್ಗಲು ಸಹಾಯ ಮಾಡಿದೆ. ಪುಸ್ತಕ ಓದುವುದು, ಸಂಗೀತಾ, ಪ್ರವಾಸ ನನ್ನ ಹವ್ಯಾಸ.
Read More




