
ಎರಡು ಬಿಎಂಟಿಸಿ ಬಸ್ಗಳ ನಡುವೆ ಆಟೋ ಸಿಲುಕಿ ಚಾಲಕ ಹಾಗೂ ಓರ್ವ ಪ್ರಯಾಣಿಕ ದಾರುಣವಾಗಿ ಮೃತಪಟ್ಟಿರುವ ಘಟನೆ ಬೆಂಗಳೂರಿನ ಬನಶಂಕರಿ ಸಂಚಾರಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಸಂಭವಿಸಿದೆ.

ಬೆಂಗಳೂರಿನ ಹನುಮಂತನಗರದ ಸೀತಾ ಸರ್ಕಲ್ ಬಳಿ ಅಪಘಾತ ಸಂಭವಿಸಿದ್ದು, 2 ಬಿಎಂಟಿಸಿ ಬಸ್ಗಳ ನಡುವೆ ಆಟೋ ಸಿಲುಕಿ ಅಪ್ಪಚ್ಚಿಯಾಗಿದೆ. ಹಾಗೇ ಆಟೋದಲ್ಲಿದ್ದ ಚಾಲಕ ಹಾಗೂ ಓರ್ವ ಪ್ರಯಾಣಿಕ ಸಹ ಅದರಲ್ಲೇ ಮುದ್ದೆಯಾಗಿದ್ದಾರೆ, ಆಟೋದ ಸ್ಥಿತಿ ನೋಡಿದರೆ ಅಪಘಾತದ ಭೀಕರತೆ ಹೇಳುತ್ತೆ.

ಆಟೋ ಚಾಲಕ ವಿಜಯ್ ಕುಮಾರ್(50) ಹಾಗೂ ಪ್ರಯಾಣಿಕ ವಿಷ್ಣುಬಾಟಿಯ (70) ಎಂದು ಗುರುತಿಸಲಾಗಿದ್ದು, ಇಂದು ಮಧ್ಯಾಹ್ನ 12 ಗಂಟೆ ಸುಮಾರಿನಲ್ಲಿ ಹೊಸಕೆರೆ ಹಳ್ಳಿ ಕ್ರಾಸ್ ಸೀತಾ ಸರ್ಕಲ್ ಸಮೀಪ ಮುಂದೆ ಹೋಗುತ್ತಿದ್ದ ಬಿಎಂಟಿಸಿ ಬಸ್ ಚಾಲಕ ಏಕಾಏಕಿ ಬ್ರೇಕ್ ಹಾಕಿದ್ದರಿಂದ ಇದರ ಹಿಂದೆ ಬರುತ್ತಿದ್ದ ಆಟೋ ಬಸ್ಗೆ ಡಿಕ್ಕಿ ಹೊಡೆದಿದೆ.

ಮುಂದೆ ಇದ್ದ ಬಿಎಂಟಿಸಿ ಬಸ್ ದಿಢೀರ್ ಬ್ರೇಕ್ ಹಾಕಿದ್ದರಿಂದ ಹಿಂದೆ ಇದ್ದ ಆಟೋ ಡಿಕ್ಕಿ ಹೊಡೆದಿದೆ. ಅದೇ ವೇಳೆಗೆ ಹಿಂದೆ ಬರುತ್ತಿದ್ದ ಮತ್ತೊಂದು ಬಿಎಂಟಿಸಿ ಬಸ್ ಆಟೋಗೆ ಡಿಕ್ಕಿ ಹೊಡೆದಿದೆ. ಇದರಿಂದ ಎರಡು ಬಸ್ಗಳ ಮಧ್ಯೆ ಆಟೋ ಸಿಲುಕಿ ಅಪ್ಪಚ್ಚಿಯಾಗಿ ಚಾಲಕ ಹಾಗೂ ಪ್ರಯಾಣಿಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ.

ಸುದ್ದಿ ತಿಳಿಯುತ್ತಿದ್ದಂತೆ ಪೊಲೀಸರು ಸ್ಥಳಕ್ಕೆ ದೌಡಾಯಿಸಿ ಪರಿಶೀಲಿಸಿ ಆಟೋದಲ್ಲಿ ಸಿಲುಕಿಗೊಂಡು ಮೃತಪಟ್ಟ ಇಬ್ಬರ ಮೃತದೇಹಗಳನ್ನು ಆಸ್ಪತ್ರೆಗೆ ರವಾನಿಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ಬಿಎಂಟಿಸಿ ಬಸ್ ಜಪ್ತಿ ಮಾಡಿ ಚಾಲಕನನ್ನು ಸಹ ವಶಕ್ಕೆ ಪಡೆದು ಕೊಂಡು ಮುಂದಿನ ಕ್ರಮ ಕೈಗೊಂಡಿದ್ದಾರೆ.

ಅಪಘಾತದಿಂದಾಗಿ ಸೀತಾ ಸರ್ಕಲ್ ಬಳಿ ಕೆಲ ಕಾಲ ಫುಲ್ ಟ್ರಾಫಿಕ್ ಉಂಟಾಗಿತ್ತು. ಕೂಡಲೇ ಸಂಚಾರಿ ಪೊಲೀಸರು ಸ್ಥಳದಲ್ಲಿದ್ದು, ಸುಗಮ ಸಂಚಾರಕ್ಕೆ ಅನುವು ಮಾಡಿಕೊಟ್ಟರು.
Published On - 5:15 pm, Fri, 28 February 25