- Kannada News Photo gallery Former Karnataka CM SM Krishna renovated his hometown Somanahalli temple, Kannada News
ಕೊನೆಗಾಲದಲ್ಲಿ ಹುಟ್ಟೂರಿನ ದೇವಸ್ಥಾನವನ್ನು ಜೀರ್ಣೋದ್ಧಾರ ಮಾಡಿಸಿದ್ದ ಎಸ್ಎಂ ಕೃಷ್ಣ
ಕರ್ನಾಟಕದ ಮಾಜಿ ಮುಖ್ಯಮಂತ್ರಿ ಎಸ್.ಎಂ. ಕೃಷ್ಣ ಅವರು ನಿಧನರಾಗಿದ್ದಾರೆ. ಅವರು ತಮ್ಮ ಹುಟ್ಟೂರಿನ ಸೋಮನಹಳ್ಳಿಯ ದೇವಸ್ಥಾನದ ಜೀರ್ಣೋದ್ಧಾರ ಮಾಡಿಸಿ, ಮಂಡಲ ಪೂಜೆ ನಡೆಸಿದ್ದರು. ಮಂಡಲ ಪೂಜೆಯ ಸಂದರ್ಭದಲ್ಲಿ ಅವರು ಅನಾರೋಗ್ಯಕ್ಕೀಡಾಗಿ ಆಸ್ಪತ್ರೆಗೆ ದಾಖಲಾಗಿದ್ದರು. ತಮ್ಮ ಅಂತಿಮ ದಿನಗಳಲ್ಲಿಯೂ ತಮ್ಮ ಹುಟ್ಟೂರಿನ ಮೇಲೆ ಅಪಾರ ಪ್ರೀತಿಯನ್ನು ತೋರಿಸಿದ್ದರು. ಅವರ ಸೇವೆಯನ್ನು ಸ್ಮರಿಸಿ ಕುಟುಂಬ ಮತ್ತು ಗ್ರಾಮಸ್ಥರು ಭಾವುಕರಾಗಿದ್ದಾರೆ.
Updated on: Dec 10, 2024 | 1:00 PM

ಕರ್ನಾಟಕದ ಹಿರಿಯ ರಾಜಕಾರಣಿ, ಧೀಮಂತ ನಾಯಕ ಮಾಜಿ ಮುಖ್ಯಮಂತ್ರಿ ಎಸ್ಎಂ ಕೃಷ್ಣ ಅವರು ನಿಧಿನರಾಗಿದ್ದಾರೆ. ಎಸ್ಎಂ ಕೃಷ್ಣ ಅಂತ್ಯಕ್ರಿಯೆ ಅವರ ತವರು ಮದ್ದೂರಿನ ಸೋಮನಹಳ್ಳಿಯಲ್ಲಿ ಬುಧವಾರ ಸಂಜೆ ನಡೆಯಲಿದೆ. ಎಸ್ಎಂ ಕೃಷ್ಣಗೆ ಇಷ್ಟವಾದ ಜಾಗದಲ್ಲಿಯೇ, ಅಂದರೆ ಕಾಫಿಡೇ ಆವರಣದಲ್ಲಿ ಅಂತ್ಯಕ್ರಿಯೆ ನಡೆಯಲಿದೆ.

ಎಸ್ಎಂ ಕೃಷ್ಣ ಅವರು ಕೆಲವೇ ದಿನಗಳ ಹಿಂದೆ ಅಷ್ಟೇ ತಮ್ಮೂರಿನ ಸೋಮನಹಳ್ಳಿಯಲ್ಲಿನ ಆಂಜನೇಯಸ್ವಾಮಿ, ಮಾರಮ್ಮ, ಬೋರೆದೇವೇರ ದೇವಸ್ಥಾನವನ್ನು 45 ಲಕ್ಷ ರೂ. ವೆಚ್ಚದಲ್ಲಿ ಜೀರ್ಣೋದ್ಧಾರ ಮಾಡಿಸಿದ್ದರು.

ಬಳಿಕ 48 ದಿನಗಳ ಮಂಡಲ ಪೂಜೆ ಮಾಡಿಸಿದರು. ಮಂಡಲ ಪೂಜೆ ನಡುವೆಯೇ ಎಸ್ಎಂ ಕೃಷ್ಣ ಅವರು ತೀವ್ರ ಅನಾರೋಗ್ಯಕ್ಕೀಡಾಗಿದ್ದರು. ಕೂಡಲೆ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ದುರಾದೃಷ್ಟವಶಾತ್ ಎಸ್ಎಂ ಕೃಷ್ಣ ಅವರು ನಿಧನರಾದರು.

ತಾವು ಜೀರ್ಣೋದ್ಧಾರ ಮಾಡಿಸಿದ ದೇವಸ್ಥಾನಕ್ಕೆ ಎಸ್ಎಂ ಕೃಷ್ಣ ಅವರಿಗೆ ಹೋಗಲು ಆಗಲಿಲ್ಲ. ಎಸ್ಎಂ ಕೃಷ್ಣ ಅವರು ಅಂತಿಮ ದಿನದವರೆಗೂ ಹುಟ್ಟೂರಿನ ಮೇಲೆ ಅಪಾರ ಪ್ರೀತಿ ಹೊಂದಿದ್ದರು. ಹುಟ್ಟೂರಿಗೆ ಎಸ್ಎಂ ಕೃಷ್ಣ ಅವರು ಸಲ್ಲಿಸಿದ ಸೇವೆ ನೆನೆದು ಕುಟುಂಬಸ್ಥರು, ಗ್ರಾಮಸ್ಥರು ಭಾವುಕರಾಗಿದ್ದರು.

ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರಿಗೆ 2003-2004ರ ಅವಧಿಯಲ್ಲಿ ಎಸ್ಎಂ ಕೃಷ್ಣ ಪರಿಹಾರ ಘೋಷಣೆ ಮಾಡಿದ್ದರು. ಕೃಷ್ಣಾ ಮೇಲ್ದಂಡೆ ಯೋಜನೆಯಲ್ಲಿ ಭೂಮಿ ಕಳೆದುಕೊಂಡವರು ಪರಿಹಾರಕ್ಕೆ ಆಗ್ರಹಿಸಿ ಬಾಗಲಕೋಟೆಯಲ್ಲಿ ಬೃಹತ್ ಪ್ರತಿಭಟನೆ ನಡೆಸಿದ್ದರು. ಮುಖ್ಯಮಂತ್ರಿಗಳು ಸ್ಥಳಕ್ಕೆ ಬರಬೇಕೆಂದು ಪಟ್ಟು ಹಿಡಿದಿದ್ದರು. ಆಗ, ಎಸ್ಎಂ ಕೃಷ್ಣ ಅವರು ಸಚಿವ ಸಂಪುಟ ಸಮೇತ ಬಾಗಲಕೋಟೆ ಬಂದು, 638 ಕೋಟಿ ರೂ. ಪರಿಹಾರ ಘೋಷಣೆ ಮಾಡಿದರು.



