ದಸರಾ ಆರಂಭದ ಸಂದರ್ಭದಲ್ಲೇ ಹೂವಿನ ಬೆಲೆ ಕುಸಿತ: ಹೂವಿನಂತೆ ಬಾಡಿದ ರೈತರ ಬದುಕು!
ಗದಗಿನ ರೈತರು ನಾಡಹಬ್ಬದ ಸಂದರ್ಭದಲ್ಲಿ ಹೂವುಗಳಿಗೆ ಉತ್ತಮ ಬೆಲೆ ನಿರೀಕ್ಷಿಸಿದ್ದರು, ಆದರೆ ಬೆಲೆ ಕುಸಿತದಿಂದ ತೀವ್ರ ನಷ್ಟ ಅನುಭವಿಸುವಂತಾಗಿದೆ. ಸೇವಂತಿ, ಗುಲಾಬಿ, ಚೆಂಡು ಸೇರಿದಂತೆ ಇತರ ಹೂವಿನ ಬೆಲೆ ಕುಸಿದಿದ್ದು, ರೈತರು ಸರ್ಕಾರದಿಂದ ಸಹಾಯಕ್ಕೆ ಒತ್ತಾಯಿಸುತ್ತಿದ್ದಾರೆ. ಅತಿವೃಷ್ಟಿಯಿಂದ ಹೂವುಗಳ ಗುಣಮಟ್ಟ ಕುಂದಿದ್ದು, ರಫ್ತು ಕಡಿಮೆಯಾಗಿದೆ.
Updated on: Sep 22, 2025 | 8:36 AM

ಗದಗಿನ ರೈತರು ಭರ್ಜರಿ ಹೂವು ಬೆಳೆದು ಹೂವಿನಂಥ ಬದುಕು ಕಟ್ಟಿಕೊಳ್ಳುವ ಕನಸು ಕಂಡಿದ್ದರು. ಹಾಗೇ ರೈತರ ತೋಟಗಳಲ್ಲಿ ಕಲರ್ ಕಲರ್ ಹೂವುಗಳು ಕಂಗೊಳಿಸುತ್ತಿದ್ದವು. ನಾಳೆನಾಡ ಹಬ್ಬವೂ ಆರಂಭ ಶುರುವಾಗಿದೆ. ಹೀಗಾಗಿ ಭರ್ಜರಿ ದರ ಸಿಗುತ್ತೆ ಅಂತ ಕನಸು ಹೊತ್ತು ಮಾರುಕಟ್ಟೆಗೆ ಆಗಮಿಸಿದ್ದರು. ಆದರೆ ದರ ಕುಸಿತದಿಂದ ಗೋಳಾಡಿದ್ದಾರೆ. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬರದಿದ್ದರೆ ಸಾವಿನ ದಾರಿಯೇ ಗತಿ ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.

ಸೇವಂತಿ, ಗುಲಾಬಿ, ಸುಗಂಧಿ ರಾಜಾ, ಚೆಂಡು ಹೂವು ಹೀಗೆ ಕಲರ್ ಕಲರ್ ಹೂವುಗಳ ರಾಶಿ. ಅಬ್ಬಾ ಎಂಥಾ ಸೂಪರ್ ಹೂವುಗಳ ಅಂತ ಗ್ರಾಹಕರು ಮುಗಿಬಿದ್ದರೆ, ರೈತರ ಮುಖ ಮಾತ್ರ ಸಪ್ಪೆಯಾಗಿತ್ತು. ನಾಡಹಬ್ಬಕ್ಕೆ ನಮ್ಮ ಹೂವುಗಳಿಗೆ ಭರ್ಜರಿ ದರ ಸಿಗುತ್ತೆ ಅಂತ ನಸುಕಿನಲ್ಲೇ ಕಲರ್ಫುಲ್ ಹೂವುಗಳೊಂದಿಗೆ ರೈತರು ಮಾರುಕಟ್ಟೆಗೆ ಆಗಮಿಸಿದರೆ, ಹೂವಿನ ಬೆಲೆ ಪಾತಾಳಕ್ಕೆ ಕುಸಿದ ದರ ಕೇಳಿ ಕಂಗಾಲಾದರು.

ಗದಗ ನಗರದ ಎಪಿಎಂಸಿ ಹೂವಿನ ಮಾರುಕಟ್ಟೆಯಲ್ಲಿ ಹೂವಿನ ಬೆಲೆ ಕೇಳಿದರೆ ನೀವು ಶಾಕ್ ಆಗುತ್ತೀರಿ. ಸೇವಂತಿ 1 ಕೆಜಿಗೆ 20 ರಿಂದ 30 ರೂ., ಚೆಂಡು ಹೂವು 1 ಕೆಜಿಗೆ 10 ರಿಂದ 20 ರೂ., ಗುಲಾಬಿ 100 ರಿಂದ 120 ರೂ., ಮಲ್ಲಿಗೆ ಹೂವು ಕೆಜೆ 300 ರೂ., ಸುಗಂಧಿ ರಾಜಾ ರೂ. 80 ಕೆಜಿಗೆ ಮಾರಾಟವಾಗುತ್ತಿದೆ. ಆದರೆ ಇದೇ ಹೂವು ಗಣೇಶ ಚತುರ್ಥಿಯಲ್ಲಿ ಕೆಜೆ 300 ರಿಂದ 400 ರೂ., ಮಾರಾಟವಾಗಿತ್ತು. ರೈತರು ಫುಲ್ ಖುಷ್ ಆಗಿದ್ದರು. ನಾಡಹಬ್ಬಕ್ಕೂ ಹೀಗೆ ದರ ಸಿಗುತ್ತೆ ಅಂತ ಕನಸು ಹೊತ್ತು ಬಂದ ರೈತರು ಕಣ್ಣೀರು ಹಾಕುವಂತಾಗಿದೆ.

ಇನ್ನು ಭಾನುವಾರದ ಮಹಾಲಯ ಅಮವಾಸ್ಯೆಗೂ ದೊಡ್ಡ ಬೆಲೆ ನಿರೀಕ್ಷೆಯಲ್ಲಿದ್ದ ರೈತರಿಗೆ ಸೂಕ್ತ ಬೆಲೆ ಸಿಗದೇ ಗೋಳಾಡಿದ್ದರು. ಗದಗ ತಾಲೂಕಿನ ಲಕ್ಕುಂಡಿ, ಕದಂಪೂರ, ಶಿರುಂಜ್, ಪಾಪನಾಶಿ ಸೇರಿ ಹಲವುಗ್ರಾಮಗಳಲ್ಲಿ ಅತಿ ಹೇಚ್ಚು ಹೂವು ಬೆಳೆಯಲಾಗುತ್ತೆ. ಆದರೆ ಅತಿಯಾದ ಮಳೆಯಿಂದ ಹೂವು ತನ್ನ ಗುಣಮಟ್ಟ ಕಳೆದುಕೊಂಡಿದೆ. ಹೀಗಾಗಿ ಹೊರರಾಜ್ಯಗಳಿಗೆ ರಪ್ತು ಆಗುತ್ತಿಲ್ಲ. ಹೀಗಾಗಿ ಗದಗ ಜಿಲ್ಲೆಯಲ್ಲಿ ಅತೀ ಹೆಚ್ಚು ಹೂವು ಮಾರುಕಟ್ಟೆಗೆ ಲಗ್ಗೆ ಇಟ್ಟಿದ್ದರಿಂದ ದರ ಪಾತಾಳಕ್ಕೆ ಕುಸಿದಿದೆ.

ಒಂದು ಎಕರೆಗೆ 1 ರಿಂದ 1.50 ಲಕ್ಷ ರೂ. ಖರ್ಚು ಮಾಡಿದ್ದೇವೆ. ಲಾಭವೂ ಇಲ್ಲ, ಖರ್ಚು ಮಾಡಿದ ಹಣವೂ ಬರುತ್ತಿಲ್ಲ ಅಂತ ರೈತರು ಗೋಳಾಡಿದರು. ರಾಜ್ಯ ಮತ್ತು ಕೇಂದ್ರ ಸರ್ಕಾರಗಳು ರೈತರ ನೆರವಿಗೆ ಬರಬೇಕು ಅಂತ ಒತ್ತಾಯಿಸಿದ್ದಾರೆ. ಎಲ್ಲ ಬೆಳೆಗಳು ಅತಿವೃಷ್ಠಿಯಿಂದ ಹಾಳಾಗಿವೆ. ಈಗ ಹೂವಿನ ಬೆಲೆಯೂ ಪಾತಾಳಕ್ಕೆ ಕುಸಿದಿದೆ. ದೇಶದಲ್ಲಿ ರೈತರ ಗೋಳು ಕೇಳುವರಿಲ್ಲದಂತಾಗಿದೆ ಎಂದು ಕಿಡಿಕಾರಿದ್ದಾರೆ.

ಗದಗ ಜಿಲ್ಲೆಯಲ್ಲಿ ಒಬ್ಬೊಬ್ಬ ರೈತರು ನಾಲ್ಕು, ಐದು ಎಕರೆ ಪ್ರದೇಶದಲ್ಲಿ ಹೂವು ಬೆಳೆದಿದ್ದಾರೆ. ಒಬ್ಬೊಬ್ಬ ರೈತರು 5 ರಿಂದ 7 ಲಕ್ಷ ರೂ. ಹಣ ಖರ್ಚು ಮಾಡಿದ್ದಾರೆ. ಈಗ ಹೂವಿನ ತೋಟಗಳು ಒಣಗುತ್ತಿರೋದು ನೋಡಿ ರೈತರು ನಲುಗಿ ಹೋಗಿದ್ದಾರೆ. ಹೂವಿನೊಂದಿಗೆ ರೈತರ ಬದುಕು ಬಾಡುತ್ತಿದೆ. ಸೂಕ್ತ ಪರಿಹಾರ ನೀಡುವಂತೆ ರೈತರು ಒತ್ತಾಯಿಸಿದ್ದಾರೆ.

ಸಂಜೀವಕುಮಾರ. ರಾ. ಪಾಂಡ್ರೆ, ಮೂಲತಃ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಅಗರಖೇಡ ಗ್ರಾಮದವರು. ಸಧ್ಯ ಟಿರ್ವಿ ವಾಹಿನಿಯ ಗದಗ ಜಿಲ್ಲಾ ಹಿರಿಯ ವರದಿಗಾರರಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಬಿಎ., ಡಿಪ್ಲೋಮಾ ಇನ್ ಜರ್ನಲಿಸಮ್ ಹಾಗೂ ಅಪ್ಟೇಕ್ ನಲ್ಲಿ ಕಂಪ್ಯೂಟರ್ (HDSE) ಓದಿರುವ ಇವರು. ವಿಜಯಪುರದ ಪಿಡಿಜೆ ಹೈಸ್ಕೂಲ್ ನಲ್ಲಿ ಎರಡು ವರ್ಷ ಕಂಪ್ಯೂಟರ್ ಶಿಕ್ಷಕನಾಗಿ ಕಾರ್ಯ ನಿರ್ವಹಿಸಿದ್ದಾರೆ. 20 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯವಾಗಿದ್ದು, 2004ರಲ್ಲಿ ಮುದ್ರಣ ಮಾಧ್ಯಮದ ಮೂಲಕ ಪತ್ರಿಕೋದ್ಯಮ ವೃತ್ತಿ ಆರಂಭಿಸಿದ್ದು, ನಂತರ 2007ರಿಂದ ಎಲೇಕ್ಟ್ರಾನಿಕ್ ಮಾಧ್ಯಮದಲ್ಲಿ ಸೇವೆ ಆರಂಭಿಸಿದ್ದಾರೆ. ಟಿರ್ವಿ ವಾಹಿನಿಯಲ್ಲಿ ಬಾಗಲಕೋಟೆ, ವಿಜಯಪುರ ನಂತರ ಗದಗ ಜಿಲ್ಲೆಯ ವರದಿಗಾರರಾಗಿ 15 ವರ್ಷಗಳಿಂದ ಕಾರ್ಯ ನಿರ್ವಹಿಸುತ್ತಿದ್ದಾರೆ. ಕ್ರೀಡೆ, ಸಂಗೀತ ಹವ್ಯಾಸವಾಗಿದೆ...
Read More



