
ಗಣೇಶ ಹಬ್ಬಕ್ಕೆ ದಿನಗಣನೆ ಆರಂಭವಾಗುತ್ತಿದ್ದಂತೆ ರಾಜ್ಯಾದ್ಯಂತ ಮೂರ್ತಿಗಳ ತಯಾರಿ ಭರದಿಂದ ಸಾಗಿದೆ. ಮಣ್ಣಿನ ಗಣೇಶನ ನಡುವೆ ಹಾವೇರಿ ಜಿಲ್ಲೆಯ ಸವಣೂರು ತಾಲೂಕಿನ ಕುರುಬರಮಲ್ಲೂರು ಗ್ರಾಮದ ಯುವ ಕಲಾವಿದ ಯಲ್ಲಪ್ಪ ದೊಡ್ಡಮನಿ ಸಂಪೂರ್ಣ ಪರಿಸರಸ್ನೇಹಿ ಪಂಚಗವ್ಯ ಗಣೇಶ ಮೂರ್ತಿಗಳನ್ನು ಸಿದ್ಧಪಡಿಸುವ ಮೂಲಕ ಎಲ್ಲರ ಗಮನ ಸೆಳೆದಿದ್ದಾರೆ.
ಕಳೆದ ನಾಲ್ಕು ವರ್ಷಗಳಿಂದ ಕೇವಲ ಹಸುವಿನ ಸೆಗಣಿಯಿಂದ ಗಣಪತಿ ಮೂರ್ತಿಗಳನ್ನು ರೂಪಿಸುತ್ತಿದ್ದ ಯಲ್ಲಪ್ಪ, ಈ ಬಾರಿ ಮತ್ತೊಂದು ಸಾಹಸಕ್ಕೆ ಕೈ ಹಾಕಿದ್ದಾರೆ. ಹಸುವಿನ ಸೆಗಣಿ ಜೊತೆಗೆ ಹಾಲು, ಮೊಸರು, ತುಪ್ಪ ಹಾಗೂ ಗೋಮೂತ್ರವನ್ನು ಹದವಾಗಿ ಬೆರೆಸಿ ಸಾಂಪ್ರದಾಯಿಕ ಪಂಚಗವ್ಯ ಗಣಪತಿಗಳನ್ನು ಅತ್ಯಂತ ಭಕ್ತಿ-ಶ್ರದ್ಧೆಯಿಂದ ತಯಾರಿಸಿದ್ದಾರೆ.
ಪಂಚಗವ್ಯ ಗಣೇಶ ಮೂರ್ತಿಗಳ ತಯಾರಿಕೆಯ ಹಿಂದೆ ಅಪಾರ ತಾಳ್ಮೆ ಹಾಗೂ ಕಠಿಣ ಪರಿಶ್ರಮವಿದೆ. ಹಸುವಿನ ಐದೂ ಅಂಶಗಳನ್ನು ನಿಗದಿತ ಪ್ರಮಾಣದಲ್ಲಿ ಮಿಶ್ರಣ ಮಾಡಿ ಪ್ಲಾಸ್ಟಿಕ್ ಮೋಲ್ಡ್ಗಳಲ್ಲಿ ತುಂಬಲಾಗುತ್ತದೆ. ಬಳಿಕ ಮೂರು ದಿನಗಳ ಕಾಲ ಚೆನ್ನಾಗಿ ಒಣಗಲು ಬಿಟ್ಟು, ನಂತರ ಯಲ್ಲಪ್ಪ ತಮ್ಮ ಕೈಚಳಕದ ಮೂಲಕ ಅಂತಿಮ ಸ್ಪರ್ಶ ನೀಡಿ ಕಣ್ಮನ ಸೆಳೆಯುವಂತೆ ಮಾಡುತ್ತಾರೆ.
ಬೆಳಗಾವಿ ಜಿಲ್ಲೆಯ ಗೋಕಾಕ ತಾಲೂಕಿನ ಕೌಜಲಗಿಯಲ್ಲಿ ನಡೆದ ವಿಶೇಷ ತರಬೇತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಕೌಶಲ ಕಲಿತ ಯಲ್ಲಪ್ಪ, ಇಂದು ರಾಜ್ಯದ ನಾನಾ ಭಾಗಗಳಿಂದ ಭಕ್ತರನ್ನು ಸೆಳೆಯುವ ಮಟ್ಟಿಗೆ ಹೆಸರುವಾಸಿಯಾಗಿದ್ದಾರೆ.
ಸಗಣಿ ಗಣಪತಿಗೆ ವಿಶೇಷವಾದ ಪೌರಾಣಿಕ ಮಹತ್ವವೂ ಇದೆ. ಶನಿದೇವನ ದೃಷ್ಟಿಯಿಂದ ತಪ್ಪಿಸಿಕೊಳ್ಳಲು ಗಣೇಶನು ಗರಿಕೆಯ ರೂಪ ತಾಳಿದಾಗ, ಅದನ್ನು ತಿಂದ ಹಸುವಿನ ಉದರದಿಂದ ಸಗಣಿಯ ಮೂಲಕ ಗಣಪತಿ ಹೊರಬಂದನು ಎಂಬ ನಂಬಿಕೆಯಿದೆ. ಈ ಪುರಾಣ ಹಿನ್ನೆಲೆ ಗೋವಿನ ಸಗಣಿ ಹಾಗೂ ಪಂಚಗವ್ಯದಿಂದ ಮಾಡುವ ಗಣೇಶ ಮೂರ್ತಿಗೆ ಬೇಡಿಕೆ ಇದೆ.
ಪ್ರಕೃತಿ ಸ್ನೇಹಿ ಪಂಚಗವ್ಯ ಗಣಪತಿಗಳಿಗೆ ಇದೀಗ ವರ್ಷದಿಂದ ವರ್ಷಕ್ಕೆ ಬೇಡಿಕೆ ದುಪ್ಪಟ್ಟಾಗುತ್ತಿದ್ದು, ಯಲ್ಲಪ್ಪರ ಪ್ರಯತ್ನ ನಿಜಕ್ಕೂ ಶ್ಲಾಘನೀಯ.
Published On - 8:48 pm, Tue, 8 September 26