
ಅಯೋಧ್ಯೆಯ ರಾಮಮಂದಿರದಲ್ಲಿ ಪ್ರತಿಷ್ಠಾಪನೆ ಮಾಡಲಾಗಿರುವ ರಾಮಲಲ್ಲಾನ ವಿಗ್ರಹವನ್ನು ಕೆತ್ತನೆ ಮಾಡಿದ್ದ ಮೈಸೂರು ಮೂಲದ ಅರುಣ್ ಯೋಗಿರಾಜ್ ಅವರಿಗೆ ಇದೀಗ ಗೌರವ ಡಾಕ್ಟರೇಟ್ ಲಭಿಸಿದೆ.

ಮಥುರಾ ಸಂಸ್ಕೃತಿ ಯೂನಿವರ್ಸಿಟಿಯಿಂದ ಶಿಲ್ಪಿ ಅರುಣ್ ಯೋಗಿರಾಜ್ಗೆ ಅವರಿಗೆ ಗೌರವ ಡಾಕ್ಟರೇಟ್ ನೀಡಲಾಯಿತು. ಯೂನಿವರ್ಸಿಟಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾಜಿ ರಾಷ್ಟ್ರಪತಿ ರಾಮ್ ನಾಥ್ ಕೋವಿಂದ್ ಅವರು ಅರುಣ್ ಯೋಗಿರಾಜ್ ಅವರಿಗೆ ಡಾಕ್ಟರ್ ಆಫ್ ಫಿಲಾಸಫಿ (ಡಿ. ಫಿಲ್) ಪದವಿ ಪ್ರದಾನ ಮಾಡಿದರು.

ಮೈಸೂರಿನ ಅಗ್ರಹಾರದ ನಿವಾಸಿಯಾದ ಇವರು ಎಂಬಿಎ ಮುಗಿಸಿ ತಂದೆಯ ಕೆಲಸ ಮುಂದುವರಿಸಿದ್ದರು. ಅರುಣ್ ಯೋಗಿರಾಜ್ ಅವರ ಅಸಾಧಾರಣ ಉತ್ಸಾಹ, ಕಲೆ ಮತ್ತು ಶಿಲ್ಪಕಲೆಗೆ ಸಲ್ಲಿಸಿದ ನಿಷ್ಕಳಂಕ ಸೇವೆ, ವಿಶೇಷವಾಗಿ ಸಾಂಸ್ಕೃತಿಕ ಪ್ರಾಮುಖ್ಯತೆ ಪರಿಗಣಿಸಿ ಪದವಿ ಪ್ರದಾನ ಮಾಡಲಾಗಿದೆ.

ಅರುಣ್ ಯೋಗಿರಾಜ್ ಅವರ ಕುಟುಂಬ ಕಲ್ಲಿನ ವಿಗ್ರಹ ಶಿಲ್ಪದಲ್ಲಿ ಸರಿ ಸುಮಾರು 200 ವರ್ಷಗಳ ಪರಂಪರೆ ಹೊಂದಿದೆ. ಯೋಗಿರಾಜ್ ಅವರ ತಂದೆ, ತಾತ, ಮುತ್ತಾತ, ಅವರ ತಂದೆ ಹೀಗೆ ಬರೋಬ್ಬರಿ ಐದು ತಲೆ ಮಾರಿನಿಂದ ಕಲ್ಲಿನ ಶಿಲ್ಪ ಕಲೆಯಲ್ಲಿ ಇವರ ವಂಶಸ್ಥರು ತೊಡಗಿಕೊಂಡಿದ್ದಾರೆ.

ಅಷ್ಟೇ ಅಲ್ಲ, ಮೈಸೂರು ರಾಜರ ಆಸ್ತಾನದಲ್ಲಿದ್ದ ಅರುಣ್ ಯೋಗಿರಾಜ್ ಅಜ್ಜ ಬಸವಣ್ಣ ಎಂಬುವವರು ಇದ್ದರು. ಇದೀಗ ಸುಮಾರು 200 ವರ್ಷದ ಹಿಂದಿನವರ ಕಲೆ ಅರುಣ್ ಅವರಿಗೆ ಸಿದ್ಧಿಸಿದೆ.

ಇನ್ನು ಅರುಣ್ ಅವರು ರಾಮಲಲ್ಲಾನ ವಿಗ್ರಹ, ದೆಹಲಿಯ ಇಂಡಿಯಾ ಗೇಟ್ ಬಳಿಯ ಅಮರ್ ಜವಾನ್ ಜ್ಯೋತಿಯ ಹಿಂದೆ ಸ್ಥಾಪಿಸಲಾಗಿರುವ ಸುಭಾಷ್ ಚಂದ್ರ ಬೋಸ್ ಅವರ 30-ಅಡಿ ಪ್ರತಿಮೆ, ಕೇದಾರನಾಥದ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ಶಿಲ್ಪ ಮತ್ತು ಮೈಸೂರಿನ 21 ಅಡಿ ಎತ್ತರದ ಹನುಮಾನ್ ಪ್ರತಿಮೆ ಕೂಡ ಅರುಣ್ ಯೋಗಿರಾಜ್ ಕೆತ್ತನೆಯಲ್ಲಿ ಮೂಡಿಬಂದಿದೆ.
Published On - 4:13 pm, Tue, 30 July 24