ಗವಿಸಿದ್ದೇಶ್ವರ ಜಾತ್ರೆಯ 2ನೇ ದಿನ ಸ್ಪೆಷಲ್ ಮಿರ್ಚಿ ಬಜ್ಜಿ: ಇದರ ವಿಶೇಷತೆ ಏನು ಗೊತ್ತಾ?
ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆಯಲ್ಲಿ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದಾರೆ. ಎರಡನೇ ದಿನದ ಮೆಣಸಿನಕಾಯಿ ಜಾತ್ರೆಯಲ್ಲಿ ದಾಸೋಹವಾಗಿ ಲಕ್ಷಾಂತರ ಮೆಣಸಿನಕಾಯಿ ತಿನಿಸುಗಳನ್ನು ವಿತರಿಸಲಾಯಿತು. ಉತ್ತರ ಕರ್ನಾಟಕದಲ್ಲಿ ಜನಪ್ರಿಯವಾದ ಮೆಣಸಿನಕಾಯಿ ತಿನಿಸುಗಳನ್ನು ಸ್ವಾಮೀಜಿಯವರ ಆಶಯದಂತೆ ಭಕ್ತರಿಗೆ ಉಚಿತವಾಗಿ ನೀಡಲಾಗಿದೆ. ಇದು ದಕ್ಷಿಣ ಭಾರತದ ಕುಂಭಮೇಳಕ್ಕೆ ಸಮಾನವಾದ ಈ ಜಾತ್ರೆ ಅನೇಕ ವಿಶೇಷತೆಗಳನ್ನು ಹೊಂದಿದೆ.
Updated on: Jan 16, 2025 | 7:09 PM

ಕರ್ನಾಟಕದಲ್ಲಿ ಒಂದಿಲ್ಲೊಂದು ಕಡೆ ಜಾತ್ರೆ, ಉತ್ಸವ ನಡೆಯುತ್ತಲೇ ಇರುತ್ತವೆ. ಆದರೆ ಎಲ್ಲಾ ಜಾತ್ರೆಗಳಿಗಿಂತ ಕೊಪ್ಪಳದ ಗವಿಸಿದ್ದೇಶ್ವರ ಮಠದ ಜಾತ್ರೆ ವಿಭಿನ್ನವಾಗಿದೆ. ಈ ವರ್ಷದ ಜಾತ್ರೆ ನಿನ್ನೆಯಿಂದ ಆರಂಭವಾಗಿದ್ದು, ಇಂದು ಎರಡನೇ ದಿನ ಮಿರ್ಚಿ ಜಾತ್ರೆ ನಡೆಯಿತು. ಲಕ್ಷ ಲಕ್ಷ ಮಿರ್ಚಿ ತಯಾರು ಮಾಡಲಾಗಿದ್ದು, ಭಕ್ತರು ಸವಿದು, ಬಾಯಿ ಚಪ್ಪರಿಸಿದ್ದಾರೆ. ಅದರಲ್ಲೂ ಉತ್ತರ ಕರ್ನಾಟಕ ಮಂದಿಗೆ ಮಿರ್ಚಿ ಅಂದ್ರೆ ಬಾಯಿಲ್ಲಿ ನೀರು ಬರ್ತವೆ. ಅಂತಹ ತಿನಿಸನ್ನು ದಾಸೋಹ ರೂಪದಲ್ಲಿ ನೀಡುವ ಕೆಲಸವನ್ನು ಮಠದ ಜಾತ್ರೆಯಲ್ಲಿ ಮಾಡಲಾಯಿತು.

ಕೊಪ್ಪಳದ ಗವಿಮಠದ ಜಾತ್ರೆ ದಕ್ಷಿಣ ಭಾರತದ ಕುಂಭಮೇಳ ಅಂತಲೇ ಪ್ರಸಿದ್ದಿಯನ್ನು ಪಡೆದಿದೆ. ನಿನ್ನೆ ಜಾತ್ರೆ ಆರಂಭವಾಗಿದ್ದು, ನಿನ್ನೆ ಸಂಜೆ ನಡೆದ ರಥೋತ್ಸವದಲ್ಲಿ ಐದು ಲಕ್ಷಕ್ಕೂ ಹೆಚ್ಚು ಭಕ್ತರು ಸಾಕ್ಷಿಯಾಗಿದ್ದರು. ಇಂದು ಜಾತ್ರೆಯ ಎರಡನೇ ದಿನವಾಗಿದ್ದು, ಭಕ್ತರು ಮಿರ್ಚಿ ಜಾತ್ರೆ ಅಂತಲೇ ಕರೆಯುತ್ತಾರೆ. ಇದಕ್ಕೆ ಕಾರಣ, ಇಂದು ದಾಸೋಹದಲ್ಲಿ ಭಕ್ತರು ತಮಗೆ ಎಷ್ಟು ಬೇಕಾದಷ್ಟು ಮಿರ್ಚಿಯನ್ನು ಸವಿಯಬಹುದಾಗಿದೆ.

ಹೌದು... ಮಠದ ಜಾತ್ರೆಗೆ ಬರುವ ಭಕ್ತರಿಗೆ ಮಠದ ಕಡೆಯಿಂದ ಮಹಾದಾಸೋಹದ ವ್ಯವಸ್ಥೆಯನ್ನು ಮಾಡಲಾಗಿದೆ. ದಾಸೋಹ ಅಂದರೆ ಕೇವಲ ಅನ್ನ, ಸಾರು, ಸಿಹಿ ತಿನಿಸುಗಳು, ರೊಟ್ಟಿ, ಕಾಳು ಪಲ್ಲೆ, ಹಿಂಡಿ ಸೇರಿದಂತೆ ಭೂರಿ ಬೋಜನವನ್ನು ಗವಿಮಠದ ಜಾತ್ರೆಯಲ್ಲಿ ನೀಡಲಾಗುತ್ತದೆ. ಇಂದಿನ ಮಹಾದಾಸೋಹದಲ್ಲಿ ಮಿರ್ಚಿ ದಾಸೋಹ ನಡೆಸಲಾಯಿತು. ಊಟಕ್ಕೆ ಬರುವ ಭಕ್ತರಿಗೆ ಕೇಳಿದಷ್ಟು ಇಂದು ಮಿರ್ಚಿ ಬಜ್ಜಿಯನ್ನು ನೀಡಲಾಯಿತು. ಸ್ವತಃ ಗವಿಮಠದ ಸ್ವಾಮೀಜಿ, ಮಿರ್ಚಿ ಬಜ್ಜೆ ಹಾಕಿದ್ದು ವಿಶೇಷವಾಗಿತ್ತು.

ಮಿರ್ಚಿ ಬಜ್ಜಿ ದಾಸೋಹ ಹಿನ್ನೆಲೆಯಲ್ಲಿ, ಮುಂಜಾನೆ ಐದು ಗಂಟೆಯಿಂದಲೇ ಮಿರ್ಚಿ ಬಜ್ಜಿ ತಯಾರಿಕೆ ಆರಂಭಿಸಲಾಗಿತ್ತು. ಮಿರ್ಚಿ ತಯಾರಿಸಲು ಮಠದ ಮಿರ್ಚಿ ಭಕ್ತಮಂಡಳಿ ರಚಿಸಲಾಗಿದ್ದು, ಈ ಮಿರ್ಚಿ ಮಂಡಳಿಯವರು, ಕಳೆದ ಹತ್ತು ವರ್ಷಗಳಿಂದ ಜಾತ್ರೆಯ ಎರಡನೇ ದಿನ ಐದು ಲಕ್ಷಕ್ಕೂ ಹೆಚ್ಚು ಮಿರ್ಚಿಗಳನ್ನು ತಯಾರಿಸಿ, ಭಕ್ತರಿಗೆ ಪ್ರಸಾದಕ್ಕೆ ನೀಡುತ್ತಾರೆ. ಇಂದು ಮುಂಜಾನೆ ಐದು ಗಂಟೆಯಿಂದ ಮಿರ್ಚಿ ತಯಾರಿಕೆ ಆರಂಭಿಸಿದ್ದು, ರಾತ್ರಿ ಹನ್ನೆರಡು ಗಂಟೆಯವರಗೆ ಮಿರ್ಚಿ ತಯಾರಿಕೆ ನಡೆಯಲಿದೆ.

ಇನ್ನು ಮಿರ್ಚಿ ತಯಾರಿಕೆಗೆ 25 ಕ್ವಿಂಟಲ್ ಹಸೆ ಕಡ್ಲಿ ಹಿಟ್ಟು, 22 ಕ್ವಿಂಟಲ್ ಹಸಿ ಮೆಣಸಿನಕಾಯಿ, ಹದಿನೈದು ಬ್ಯಾರಲ್ ಎಣ್ಣೆ, ಐವತ್ತು ಕಿಲೋ ಅಜವಾನ್, 60 ಸಿಲಿಂಡರ್ಗಳನ್ನು ಬಳಸಿಕೊಳ್ಳಲಾಗಿದೆ. ಒಂದು ತಂಡದಲ್ಲಿ ನೂರು ಜನರಿದ್ದು, ಈ ರೀತಿಯ ನಾಲ್ಕು ತಂಡಗಳು ಇಡೀ ದಿನ ಮಿರ್ಚಿ ತಯಾರಿಸುತ್ತಿದ್ದಾರೆ.

ಮಠದ ಕಡೆಯಿಂದ ಸಾಮಾಗ್ರಿಗಳನ್ನು ನೀಡಿದರೆ, ಭಕ್ತರು ಮಿರ್ಚಿ ತಯಾರಿಕೆ ಮಾಡಿ ಮಹಾದಾಸೋಹಕ್ಕೆ ನೀಡುತ್ತಾರೆ. ಉತ್ತರ ಕರ್ನಾಟಕದ್ದ ಪ್ರಸಿದ್ದ ತಿನಿಸು ಅಂದರೆ ಅದು ಮಿರ್ಚಿ. ಹೀಗಾಗಿ ಮಠದ ಭಕ್ತರಿಗೆ ಕೂಡ ಮಿರ್ಚಿ ತಿನಿಸಬೇಕು ಅನ್ನೋದು ಮಠದ ಪೀಠಾಧಿಪತಿಯಾಗಿರುವ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿಗಳ ಆಶಯವಾಗಿದೆ. ಅವರ ಆಶಯದಂತೆ ಮಠದಲ್ಲಿ ಜಾತ್ರೆಯ ಎರಡನೇ ದಿನ ಮಿರ್ಚಿ ಜಾತ್ರೆ ನಡೆಯಿತು.

ಉತ್ತರ ಕರ್ನಾಟಕ ಭಾಗದಲ್ಲಿ ಮಿರ್ಚಿ ಸುಪ್ರಸಿದ್ದ ತಿನಿಸು. ಆದರೆ ಒಂದೆರಡು ಮಿರ್ಚಿ ತಿಂದು ಬಾಯಿ ಚಪ್ಪರಿಸುವ ಜನರಿಗೆ, ಇಂದು ಎಷ್ಟು ಬೇಕಾದರೂ ಮಿರ್ಚಿ ಸವಿಯುವ ಅವಕಾಶವನ್ನು ಮಠದಿಂದ ಮಾಡಲಾಗಿದ್ದು ವಿಶೇಷ.
























