- TV9 Kannada Photo gallery Krishnam Vande Jagadguru: Sri Krishna Janmashtami is celebrated in Dharwad
ಕೃಷ್ಣಂ ವಂದೇ ಜಗದ್ಗುರು : ಶ್ರೀಕೃಷ್ಣ ಜನ್ಮಾಷ್ಠಮಿಗೆ ಧಾರವಾಡದಲ್ಲಿ ಭಾವೈಕ್ಯತೆಯ ಮೆರಗು
ಶ್ರೀಕೃಷ್ಣನ ಲೀಲೆಗಳಿಗೆ ಧಾರವಾಡದಲ್ಲಿ ಮುಸ್ಲಿಮರೂ ಮಾರು ಹೋಗಿದ್ದಾರೆ ಅನ್ನೋದಕ್ಕೆ ಇಂದು ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ. ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಧಾರವಾಡ ನಗರದ ಆಲೂರು ವೆಂಕಟರಾವ್ ವೃತ್ತದ ಬಳಿಯ ಶಿಕ್ಷಕರ ತರಬೇತಿ ಸಂಸ್ಥೆಯ ಆವರಣದಲ್ಲಿರುವ ಸರಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರು ಧರ್ಮಾತೀತವಾಗಿ ಭಾಗವಹಿಸಿ ಗಮನ ಸೆಳೆದರು.
Updated on:Sep 06, 2023 | 5:33 PM

ಶ್ರೀಕೃಷ್ಣ ಎಂದರೆ ಹಿಂದೂಗಳಿಗೆ ದೇವರು. ಆತನ ಲೀಲೆಗಳಿಗೆ ಮಾರು ಹೋಗದವರೇ ಇಲ್ಲ. ಹೀಗಾಗಿ ಹಿಂದೂ ದೇವರ ಪೈಕಿ ಅತ್ಯಂತ ಹೆಚ್ಚು ಭಕ್ತರನ್ನು ಹೊಂದಿದ ದೇವರೆಂದರೆ ಅದು ಶ್ರೀಕೃಷ್ಣನೇ. ಇಂಥ ಶ್ರೀಕೃಷ್ಣನ ಲೀಲೆಗಳಿಗೆ ಧಾರವಾಡದಲ್ಲಿ ಮುಸ್ಲಿಮರೂ ಮಾರು ಹೋಗಿದ್ದಾರೆ ಅನ್ನೋದಕ್ಕೆ ಇಂದು ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮವೇ ಸಾಕ್ಷಿ. ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ಸರಕಾರಿ ಶಾಲೆಯೊಂದರಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಕ್ಕಳು ಹಾಗೂ ಪೋಷಕರು ಧರ್ಮಾತೀತವಾಗಿ ಭಾಗವಹಿಸಿ ಗಮನ ಸೆಳೆದರು.

ಧಾರವಾಡದ ಸರಕಾರಿ ಮಾದರಿ ಪ್ರಾಯೋಗಿಕ ಪ್ರಾಥಮಿಕ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಅಂಗವಾಗಿ ನಡೆದ ಕಾರ್ಯಕ್ರಮಗಳು ಗಮನ ಸೆಳೆದವು. ಪ್ರತಿವರ್ಷದಂತೆ ಈ ವರ್ಷವೂ ಶಾಲೆಯಲ್ಲಿ ಶ್ರೀಕೃಷ್ಣ ಜನ್ಮಾಷ್ಠಮಿ ಆಚರಿಸಲಾಯಿತು. ಈ ಶಾಲೆಯ ವಿಶೇಷವೇನೆಂದರೆ, ಶಾಲೆಯಲ್ಲಿ 1 ರಿಂದ 8 ನೇ ತರಗತಿಯವರೆಗೆ 320 ಬಾಲಕಿಯರು ಓದುತ್ತಿದ್ದಾರೆ. ಈ ಪೈಕಿ ಶೇ. 60 ರಷ್ಟು ಬಾಲಕಿಯರು ಮುಸ್ಲಿಂ ಜನಾಂಗಕ್ಕೆ ಸೇರಿದ್ದಾರೆ. ಆದರೂ ಇಲ್ಲಿ ಶ್ರೀಕೃಷ್ಣ-ರಾಧೆಯರ ವೇಷ ತೊಟ್ಟು ತಮ್ಮ ಪೋಷಕರೊಂದಿಗೆ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಸಂಭ್ರಮದಿಂದ ಆಚರಿಸಿದ್ದು ವಿಶೇಷವಾಗಿತ್ತು.

ಈ ಶಾಲೆಯಲ್ಲಿ ನೂರು ವರ್ಷಗಳಷ್ಟು ಹಳೆಯದಾದ ತೊಟ್ಟಿಲೊಂದಿದೆ. ಅಂದಿನಿಂದಲೂ ಶ್ರೀಕೃಷ್ಣ ಜನ್ಮಾಷ್ಠಮಿ ದಿನದಂದು ಇದೇ ತೊಟ್ಟಿಲನ್ನು ಬಳಸಲಾಗುತ್ತಿದೆ. ಪ್ರತಿವರ್ಷ ಶ್ರೀಕೃಷ್ಣನ ಪ್ರತಿಮೆಯನ್ನು ಇದರಲ್ಲಿ ಇಟ್ಟು ತೊಟ್ಟಿಲು ತೂಗಿ ಶ್ರೀಕೃಷ್ಣ ಜನ್ಮಾಷ್ಠಮಿಯನ್ನು ಆಚರಿಸಲಾಗುತ್ತಿದೆ. ಇಂದು ಕೂಡ ಶಿಕ್ಷಕಿಯರು, ಮಕ್ಕಳ ತಾಯಂದಿರು ಕೃಷ್ಣನ ಪ್ರತಿಮೆಯನ್ನು ಇಟ್ಟು ತೂಗಿ ಸಂಭ್ರಮಿಸಿದರು.

ಧರ್ಮ ಧರ್ಮಗಳ ನಡುವೆ ವಿಷಬೀಜ ಬಿತ್ತಿ, ಅದರಿಂದ ಲಾಭ ಪಡೆದುಕೊಳ್ಳುತ್ತಿರೋ ಜನರ ಮಧ್ಯೆ ದೇವರು ಎಲ್ಲರಿಗೂ ಒಂದೇ ಅನ್ನೋ ರೀತಿಯಲ್ಲಿ ಇಂಥ ಕಾರ್ಯಕ್ರಮದಲ್ಲಿ ಭಾಗವಹಿಸೋ ಮೂಲಕ ಮುಸ್ಲಿಂ ಸಮುದಾಯದವರು ತೋರಿಸಿಕೊಟ್ಟಿದ್ದು ನಿಜಕ್ಕೂ ಸಂತಸದ ಸಂಗತಿಯೇ ಸರಿ.

ಟಿವಿ-9 ಡಿಜಿಟಲ್ ಜೊತೆಗೆ ಮಾತನಾಡಿದ ಶಾಲೆಯ ಮುಖ್ಯ ಶಿಕ್ಷಕ ಎಂ. ಆರ್. ಹಿರೇಮಠ, ಇಲ್ಲಿ ಎಲ್ಲ ರೀತಿಯ ಹಬ್ಬಗಳನ್ನು ಮಾಡುತ್ತಾ ಬರಲಾಗುತ್ತಿದೆ. ಇಲ್ಲಿನ ಶೇ. 60 ರಷ್ಟು ಮಕ್ಕಳು ಮುಸ್ಲಿಂ ಸಮುದಾಯಕ್ಕೆ ಸೇರಿದ್ದಾರೆ. ಅಚ್ಚರಿಯ ಸಂಗತಿ ಅಂದರೆ ಪ್ರತಿವರ್ಷ ಇಲ್ಲಿ ನಡೆಯೋ ಎಲ್ಲ ರೀತಿಯ ಹಬ್ಬಗಳಲ್ಲಿ ಭಾಗಿಯಾಗಿ, ಖುಷಿಪಡುತ್ತಾರೆ ಎಂದಿದ್ದಾರೆ.

ಎಂಟನೇ ತರಗತಿ ವಿದ್ಯಾರ್ಥಿನಿ ರಾಹತ್ ಮಾತನಾಡಿ, ನಮಗೆ ಇವತ್ತು ಖುಷಿಯ ದಿನ. ನಾನು ರಾಧೆಯ ವೇಷ ತೊಟ್ಟು ಬಂದರೆ, ನನ್ನ ಗೆಳತಿ ಅಪ್ಸಾನಾ, ಶ್ರೀಕೃಷ್ಣನ ವೇಷ ತೊಟ್ಟು ಬಂದಿದ್ದಾಳೆ. ನಾವು ಕೃಷ್ಣನನ್ನು ತೊಟ್ಟಿಲಲ್ಲಿ ಹಾಕಿದ್ದು ತೂಗಿದ್ದು ಖುಷಿ ತಂದಿತು. ಇದೇ ಮೊದಲ ಬಾರಿಗೆ ನಾನು ರಾಧಾಳ ವೇಷ ತೊಟ್ಟಿದ್ದೇನೆ. ಇದಂತೂ ನನಗೆ ತುಂಬಾನೇ ಖುಷಿ ಕೊಟ್ಟಿದೆ ಅನ್ನುತ್ತಾಳೆ.
Published On - 5:32 pm, Wed, 6 September 23

ಕೊಪ್ಪಳದವರಾದ ನರಸಿಂಹಮೂರ್ತಿ ಪ್ಯಾಟಿ ಸದ್ಯ ಟಿವಿ9 ವಾಹಿನಿಯ ಧಾರವಾಡ ಜಿಲ್ಲಾ ಹಿರಿಯ ವರದಿಗಾರರು. ಮೆಕ್ಯಾನಿಕಲ್ ಇಂಜನಿಯರಿಂಗ್ ಮುಗಿಸಿರುವ ಇವರು, ಕೆಲವರ್ಷ ಕೊಪ್ಪಳ ಜಿಲ್ಲೆಯಲ್ಲಿ ಐಟಿಐ ಕಾಲೇಜಿನ ಉಪನ್ಯಾಸಕರಾಗಿ ಕಾರ್ಯ ನಿರ್ವಹಿಸಿದ್ದಾರೆ. 23 ವರ್ಷಗಳಿಂದ ಪತ್ರಿಕೋದ್ಯಮದಲ್ಲಿ ಸಕ್ರಿಯರಾಗಿದ್ದು, ಮೊದಲು ಕೊಪ್ಪಳ ಜಿಲ್ಲೆ, ನಂತರ ಧಾರವಾಡ ಜಿಲ್ಲಾ ಹಿರಿಯ ವರದಿಗಾರರಾಗಿ ಕಳೆದ 17 ವರ್ಷಗಳಿಂದ ಟಿವಿ9 ವಾಹಿನಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದಾರೆ. ವರದಿಗಾರಿಕೆಯ ಜೊತೆಗೆ ಪ್ರಬಂಧ ರಚನೆ ಇವರ ಆಸಕ್ತಿಯಾಗಿದ್ದು ಈಗಾಗಲೇ 'ಬ್ರಾಹ್ಮಣ ಕುರುಬ' ಮತ್ತು 'ಕೃಷ್ಣಾಚಾರ್ @ ಕಿಷ್ಕಿಂಧಾ ಬಾರ್' ಪ್ರಬಂಧ ಸಂಕಲನಗಳನ್ನು ಪ್ರಕಟಿಸಿದ್ದಾರೆ. ಅವರ ಪ್ರಬಂಧಗಳು ಕಥನದ ಚೆಲುವು, ಸೊಬಗು ಮತ್ತು ಅರ್ಥವ್ಯಾಪ್ತಿಯಿಂದಾಗಿ ಓದುಗನ ಮನ ತಣಿಸುತ್ತವೆ ಎಂದು ವಿಮರ್ಶಕರು ಗುರುತಿಸಿದ್ದಾರೆ. ಸಾವಯವ ಹಾಗೂ ಅರಣ್ಯ ಕೃಷಿಕರೂ ಆಗಿರುವ ನರಸಿಂಹಮೂರ್ತಿ ಪ್ಯಾಟಿ ಸಂಗೀತ, ಟ್ರೆಕ್ಕಿಂಗ್, ಪ್ರವಾಸಗಳಲ್ಲೂ ಆಸಕ್ತಿ ಹೊಂದಿದ್ದಾರೆ.
Read More



