Kannada News Photo gallery Minister Krishna Byre Gowda participated in Kolar's Chaudadeanahalli Bandidya Vara and Karna Bhooshan Mahotsava
ತಲೆಮಾರಿಗೊಮ್ಮೆ ನಡೆಯುವ ಹುಟ್ಟೂರಿನ ಹಬ್ಬದಲ್ಲಿ ಕೃಷ್ಣಬೈರೇಗೌಡ: 29 ವರ್ಷಕ್ಕೊಮ್ಮೆ ನಡೆಯುವ ಜಾತ್ರೆ
ಅದು ತಲೆಮಾರಿಗೊಮ್ಮೆ ನಡೆಯುವ ಊರ ಹಬ್ಬ ದೇವರ ಉತ್ಸವ, ಸ್ವತಂತ್ರ್ಯ ಬಂದ ಹೊಸದರಲ್ಲಿ ಅಂದರೆ 1952 ರಲ್ಲಿ ನಡೆದಿದ್ದ ಊರ ಹಬ್ಬ ನಂತರದಲ್ಲಿ 1996 ರಲ್ಲಿ ನಡೆದಿತ್ತು ಸದ್ಯ ಈಗ 29 ವರ್ಷಗಳ ನಂತರ ಊರ ಅಬ್ಬ ಅದ್ದೂರಿಯಾಗಿ ಆಯೋಜನೆಗೊಂಡಿದೆ. ಅಷ್ಟಕ್ಕು, ಅದು ಯಾವ ಊರ ಹಬ್ಬ? ಫೋಟೋಸ್ ನೋಡಿ.
ಕೋಲಾರ ತಾಲೂಕು ಚೌಡದೇನಹಳ್ಳಿ ಗ್ರಾಮ ಕಂದಾಯ ಸಚಿವ ಕೃಷ್ಣ ಬೈರೇಗೌಡ ಅವರು ಹುಟ್ಟೂರಾಗಿದೆ. ಈ ಗ್ರಾಮದಲ್ಲಿ ಸದ್ಯ ಸಂಭ್ರಮ ಮನೆ ಮಾಡಿದೆ. ಈ ಗ್ರಾಮದಲ್ಲಿ ತಲೆಮಾರಿಗೊಮ್ಮೆ ಬಂಡಿದ್ಯಾವರ ಹಾಗೂ ಕರ್ಣ ಭೂಷಣ ಮಹೋತ್ಸವ ನಡೆಯುತ್ತದೆ.
1 / 7
ಈ ಮಹೋತ್ಸವವನ್ನು ತಲೆಮಾರಿಗೊಮ್ಮೆ ಮಾತ್ರ ಮಾಡಲಾಗುತ್ತದೆ. 29 ವರ್ಷಗಳ ಹಿಂದೆ ಅಂದರೆ 1996 ರಲ್ಲಿ ಮಾಡಲಾಗಿತ್ತು. ಅದಕ್ಕೂ ಮೊದಲು 1952 ರಲ್ಲಿ ಈ ಉತ್ಸವ ನಡೆದಿತ್ತು. 1952 ರಲ್ಲಿ ಬಂಡಿದ್ಯಾವರ ಉತ್ಸವ ಮಾಡಲಾಗಿತ್ತು. ನಂತರ 44 ವರ್ಷಗಳ ಬಳಿಕೆ ಅಂದರೆ 1996 ರಲ್ಲಿ ಮಾಡಲಾಗಿತ್ತು. ಇದಾದ ನಂತರ ಈಗ 2025ರಲ್ಲಿ ಉತ್ಸವ ಜರುಗಿದೆ.
2 / 7
ಗ್ರಾಮದ ಎಲ್ಲ ಜಾತಿ-ಜನಾಂಗದವರು ಗ್ರಾಮದಲ್ಲಿರುವ ದೇವರುಗಳಿಗೆ ವಿಶೇಷ ಪೂಜೆ ಸಲ್ಲಿಸುತ್ತಾರೆ. ಅಲ್ಲದೆ ಹೊಸ ತಲೆಮಾರಿನ ಯುವಕರಿಗೆ ದೀಪ ಕೊಡುವುದು ಕಿವಿ ಚುಚ್ಚುವುದು, ಹೂ ಮುಸಿಸುವ ಸಂಪ್ರದಾಯವನ್ನು ನಡೆಸಲಾಗುತ್ತದೆ. ಈ ಮೂಲಕ ತಲೆಮಾರಿನ ಜವಾಬ್ದಾರಿಗಳನ್ನು ಹಸ್ತಾಂತರ ಮಾಡಲಾಗುತ್ತದೆ. ಹೀಗೆ, ತಮ್ಮ ಹಳೆಯ ಸಂಪ್ರದಾಯ ಹಾಗೂ ಸಂಸ್ಕೃತಿಯನ್ನು ಉಳಿಸುವ ಬೆಳೆಸುವ ನಿಟ್ಟಿನಲ್ಲಿ ಇಂಥ ಹಬ್ಬ ಆಚರಣೆಗಳು ಬಹಳ ಮುಖ್ಯ ಎಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.
3 / 7
ಆರು ದಿನಗಳ ಕಾಲ ನಡೆಯುವ ಬಂಡಿದ್ಯಾವರ ಉತ್ಸವ ಹಾಗೂ ಕರ್ಣ ಭೂಷಣ ಮಹೋತ್ಸವದಲ್ಲಿ ಮೊದಲ ದಿನ ಪಾಠಪ್ಪ ದೇವರಿಗೆ ಪೂಜೆ ಸಲ್ಲಿಸಿ ನಂತರ ಗ್ರಾಮಕ್ಕೆ ದಿಗ್ಬಂಧನ ಹಾಕಲಾಗುತ್ತದೆ. ಈ ವೇಳೆ ಗ್ರಾಮಕ್ಕೆ ಬಂದವರು ಗ್ರಾಮದಲ್ಲಿ ಉಳಿದುಕೊಳ್ಳಬೇಕಾಗುತ್ತದೆ. ಗ್ರಾಮದಲ್ಲಿ ಕೆಲವೊಂದು ಕಟ್ಟು ಪಾಡುಗಳನ್ನು ಪಾಲನೆ ಮಾಡಲಾಗುತ್ತದೆ. ಗ್ರಾಮದಲ್ಲಿ ಯಾರೂ ಚಪ್ಪಲಿ ಧರಿಸಿ ಓಡಾಡುವಂತಿಲ್ಲ.
4 / 7
ಗ್ರಾಮದಲ್ಲಿ ಯಾವುದೇ ವಾಹನಗಳು ಓಡಾಡುವಂತಿಲ್ಲ. ಹೊರಗಿನ ಜನರು ಗ್ರಾಮದಲ್ಲಿ ಇರುವಂತಿಲ್ಲ. ಹೀಗೆ, ಹಲವು ಕಟ್ಟುಪಾಡುಗಳನ್ನು ಪಾಲಿಸಿಕೊಂಡು ಬರಲಾಗಿದೆ. ಆರು ದಿನಗಳ ಬಂಡಿದ್ಯಾವರ ಉತ್ಸವಕ್ಕೆ ಶುಕ್ರವಾರ (ಏ.18) ಸಚಿವ ಕೃಷ್ಣ ಬೈರೇಗೌಡ ಅವರು ಕುಟುಂಬ ಸಮೇತರಾಗಿ ತೆರಳಿ ಪೂಜೆ ಸಲ್ಲಿಸಿ ಬಂಡಿದ್ಯಾವರ ಉತ್ಸವಕ್ಕೆ ಚಾಲನೆ ನೀಡಿದರು.
5 / 7
ಹಬ್ಬಕ್ಕೆಂದು ಕಳೆದೊಂದು ವರ್ಷದಿಂದಲೇ ತಯಾರಿ ಮಾಡಿಕೊಳ್ಳಲಾಗುತ್ತಿದೆ. ಗ್ರಾಮದಲ್ಲಿರುವ ದೇವಾಲಯಗಳಿಗೆ ಸುಣ್ಣಬಣ್ಣ ಬಳಿಯಲಾಗಿದೆ. ಗ್ರಾಮದ ಜನರೆಲ್ಲರೂ ತಮ್ಮ ತಮ್ಮ ಮನೆಗಳಿಗೆ ಸುಣ್ಣ-ಬಣ್ಣ ಬಳಿದು ಹಬ್ಬಕ್ಕೆ ತಯಾರಿ ಮಾಡಿಕೊಂಡಿಕೊಂಡಿದ್ದಾರೆ. ಈ ಆರು ದಿನಗಳ ಕಾಲ ಊರಿನ ಹೊರಗಿನವರು ಕುಲಕ್ಕೆ ಸಂಬಂಧಪಟ್ಟವರು ಎಲ್ಲರೂ ಕೂಡಾ ಗ್ರಾಮಕ್ಕೆ ಬಂದು ಈ ಕಾರ್ಯಕ್ರಮಗಳಲ್ಲಿ ಭಾಗವಹಿಸುತ್ತಾರೆ.
6 / 7
ಒಟ್ಟಾರೆಯಾಗಿ ತಲೆಮಾರಿಗೊಮ್ಮೆ ನಡೆಯುವ ಇಂಥಹದೊಂದು ಊರ ಹಬ್ಬ, ಊರಿನ ಸಂಬಂಧಗಳನ್ನು ಬೆಸೆಯುವ ಜೊತೆಗೆ ಊರಿನ ಕುಟುಂಬದ ಜವಾಬ್ದಾರಿಗಳನ್ನು ಯುವ ಪೀಳಿಗೆಗೆ ಹಸ್ತಾಂತರಿಸುವ ಸಂಪ್ರದಾಯಗಳನ್ನು ತಿಳಿಸಿಕೊಡುತ್ತಿದೆ. ಗ್ರಾಮದ ಶಕ್ತಿ ದೇವರುಗಳಿಗೆ ಪೂಜೆ ಸಲ್ಲಿಸಿ ಗ್ರಾಮದಲ್ಲಿ ಶಾಂತಿ ನೆಮ್ಮದಿ ನೆಲೆಸುವಂತೆ ಎಲ್ಲರೂ ಭಕ್ತಿಯಿಂದ ಪ್ರಾರ್ಥನೆ ಮಾಡುತ್ತಾರೆ.