Mansore Engagement: ನಿರ್ದೇಶಕ ಮಂಸೋರೆ ನಿಶ್ಚಿತಾರ್ಥದ ಫೋಟೋಗಳು ಇಲ್ಲಿವೆ
‘ಹರಿವು’, ‘ನಾತಿಚರಾಮಿ’ ಮತ್ತು ‘ಆಕ್ಟ್ 1978’ ಚಿತ್ರಗಳಿಗೆ ನಿರ್ದೇಶನ ಮಾಡಿದವರು ಮಂಸೋರೆ. ಈ ಪೈಕಿ ಹರಿವು ಮತ್ತು ನಾತಿಚರಾಮಿ ಚಿತ್ರಗಳಲ್ಲಿ ಸಂಚಾರಿ ವಿಜಯ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು
Updated on:Aug 09, 2021 | 4:31 PM

ರಾಷ್ಟ್ರ ಪ್ರಶಸ್ತಿ ಪುರಸ್ಕೃತ ನಿರ್ದೇಶಕ ಮಂಸೋರೆ ಅವರು ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಭಾನುವಾರ (ಜು.4) ಅವರು ಅಖಿಲಾ ಎಂಬುವವರ ಜೊತೆ ನಿಶ್ಚಿತಾರ್ಥ ಮಾಡಿಕೊಂಡಿದ್ದು, ಶೀಘ್ರದಲ್ಲೇ ಹಸೆಮಣೆ ಏರಲಿದ್ದಾರೆ. ಕೊರೊನಾ ವೈರಸ್ ಲಾಕ್ಡೌನ್ ನಿಯಮಾವಳಿ ಅನುಸಾರ ಕೆಲವೇ ಕೆಲವು ಮಂದಿಯ ಸಮ್ಮುಖದಲ್ಲಿ ಈ ನಿಶ್ಚಿತಾರ್ಥ ನೆರವೇರಿದೆ. ಕುಟುಂಬದವರು, ಆಪ್ತರು, ಸ್ನೇಹಿತರು ಸೇರಿ ಕೆಲವರಿಗೆ ಮಾತ್ರ ಆಹ್ವಾನ ನೀಡಲಾಗಿತ್ತು. ಆಗಸ್ಟ್ 15ರಂದು ಮಂಸೋರೆ-ಅಖಿಲಾ ಬಾಳಬಂಧನಕ್ಕೆ ಒಳಗಾಗಲಿದ್ದಾರೆ.

‘ಹರಿವು’, ‘ನಾತಿಚರಾಮಿ’ ಮತ್ತು ‘ಆಕ್ಟ್ 1978’ ಚಿತ್ರಗಳಿಗೆ ನಿರ್ದೇಶನ ಮಾಡಿದವರು ಮಂಸೋರೆ. ಈ ಪೈಕಿ ಹರಿವು ಮತ್ತು ನಾತಿಚರಾಮಿ ಚಿತ್ರಗಳಲ್ಲಿ ಸಂಚಾರಿ ವಿಜಯ್ ಅವರು ಮುಖ್ಯಭೂಮಿಕೆ ನಿಭಾಯಿಸಿದ್ದರು. ಈ ಎರಡೂ ಸಿನಿಮಾಗಳಿಗೆ ರಾಷ್ಟ್ರ ಪ್ರಶಸ್ತಿ ಒಲಿದು ಬಂದಿತ್ತು. ‘ಆಕ್ಟ್ 1978’ ಚಿತ್ರದಲ್ಲೂ ಸಂಚಾರಿ ವಿಜಯ್ ಒಂದು ಪಾತ್ರ ಮಾಡಿದ್ದರು. ಈಗ ಮಂಸೋರೆ ಅವರು ರಾಣಿ ಅಕ್ಕಬ್ಬನ ಕುರಿತು ಸಿನಿಮಾ ಮಾಡುವ ತಯಾರಿಯಲ್ಲಿದ್ದಾರೆ. ಅದರ ನಡುವೆಯೇ ಮದುವೆ ಎಂಬ ಹೊಸ ಅಧ್ಯಾಯ ಆರಂಭಿಸುತ್ತಿದ್ದಾರೆ.

ಮಂಸೋರೆ ಮಾಡಿರುವುದು ಮೂರೇ ಸಿನಿಮಾಗಳಾದರೂ ಕೂಡ ಆ ಚಿತ್ರಗಳ ಸಾಧನೆ ದೊಡ್ಡದು. 2014ರಲ್ಲಿ ಬಂದ ‘ಹರಿವು' ಹಾಗೂ 2018ರಲ್ಲಿ ಬಿಡುಗಡೆಯಾದ ‘ನಾತಿಚರಾಮಿ' ಚಿತ್ರಕ್ಕೆ ಅತ್ಯುತ್ತಮ ಪ್ರಾದೇಶಿಕ ಚಿತ್ರ ರಾಷ್ಟ್ರಪ್ರಶಸ್ತಿ ಬಂದಿತ್ತು. ‘ನಾತಿಚರಾಮಿ' ಸಿನಿಮಾದ ಹಾಡಿಗೆ ಮಂಸೋರೆ ಅವರಿ ‘ಉತ್ತಮ ಸಾಹಿತ್ಯಕ್ಕೆ ರಾಷ್ಟ್ರಪ್ರಶಸ್ತಿ’ ಪಡೆದುಕೊಂಡರು. ಅಲ್ಲದೆ, ಇತರೆ ಮೂರು ವಿಭಾಗಗಳಲ್ಲಿ ಆ ಚಿತ್ರಕ್ಕೆ ರಾಷ್ಟ್ರ ಪ್ರಶಸ್ತಿ ಗೌರವ ಸಿಕ್ಕಿತ್ತು. ಆ ಚಿತ್ರದ ನಿರ್ದೇಶನಕ್ಕಾಗಿ ಮಂಸೋರೆ ಅವರಿಗೆ ಉತ್ತಮ ನಿರ್ದೇಶಕ ಫಿಲ್ಮ್ ಫೇರ್ ಪ್ರಶಸ್ತಿಯ ಕೂಡ ಒಲಿದು ಬಂದಿತ್ತು.

ಕಳೆದ ವರ್ಷ ಲಾಕ್ ಡೌನ್ ಬಳಿಕ ಬಿಡುಗಡೆಯಾದ ‘ಆಕ್ಟ್ 1978’ ಚಿತ್ರಕ್ಕೆ ಇಡೀ ಸ್ಯಾಂಡಲ್ವುಡ್ ಮೆಚ್ಚುಗೆ ಸೂಚಿಸಿದ್ದು ವಿಶೇಷ. ಹಂಸಲೇಖ, ದರ್ಶನ್ ಮುಂತಾದ ಸೆಲೆಬ್ರಿಟಿಗಳು ಮಂಸೋರೆ ಮತ್ತು ತಂಡಕ್ಕೆ ಭೇಷ್ ಎಂದಿದ್ದರು. ಬಾಕ್ಸ್ ಆಫೀಸ್ನಲ್ಲಿ ಕೆಲವು ಸಿಕ್ಕಿದ್ದು ಮಾತ್ರವಲ್ಲದೆ, ವಿಮರ್ಶಕರಿಂದಲೂ ಈ ಚಿತ್ರಕ್ಕೆ ಪ್ರಶಂಸೆ ವ್ಯಕ್ತವಾಗಿತ್ತು. ರಾಣಿ ಅಬ್ಬಕ್ಕನ ಕುರಿದ ಸಿನಿಮಾ ಮಾತ್ರವಲ್ಲದೆ, ಮತ್ತೊಂದು ಹೊಸ ಚಿತ್ರ ಘೋಷಿಸಲು ಕೂಡ ಮಂಸೋರೆ ಪ್ಲ್ಯಾನ್ ಮಾಡಿಕೊಂಡಿದ್ದಾರೆ.
Published On - 6:23 pm, Sun, 4 July 21




