- Kannada News Photo gallery Retired teacher in Koragondahalli in Kolar district Raghunath Reddy grow strawberry successfully
Strawberry: ಕೋಲಾರದಲ್ಲೊಂದು ಕೆಂಪು ಕ್ರಾಂತಿ! ಹಿಂದಿನ ಜಿಲ್ಲಾ ಎಸ್ಪಿ ಸಲಹೆಯಂತೆ ಕೃಷಿಯಲ್ಲಿ ತೊಡಗಿದ ನಿವೃತ್ತ ಶಿಕ್ಷಕರೊಬ್ಬರ ಯಶೋಗಾಥೆ ಇದು
Strawberry: ಕೋಲಾರದ ಎಸ್ಪಿಯಾಗಿದ್ದ ದೇವರಾಜ್ ಅವರು ಕೋಲಾರ ಜಿಲ್ಲೆಯ ರೈತರಿಗೆ ನೀಡಿದ ಹೊಸ ಕೃಷಿ ಪದ್ದತಿಗಳ ಬಗ್ಗೆ ಮಾಹಿತಿ ನೀಡಿದ್ದರು. ಅದರಂತೆ ಕೋರಗೊಂಡನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ರಘುನಾಥ ರೆಡ್ಡಿ ಅವರು ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದು, ಯಶಸ್ಸು ಕಂಡಿದ್ದಾರೆ!
Updated on:Mar 02, 2023 | 9:31 AM

ಇತ್ತೀಚಿನವರೆಗೂ ಆ ಜಿಲ್ಲೆಯನ್ನು ಬಿಸಿಲನಾಡು, ಬರದ ನಾಡು ಎಂದೆಲ್ಲಾ ಕರೆಯಲಾಗುತ್ತಿತ್ತು. ಕಷ್ಟಪಟ್ಟು ರೈತರು ಬೆಳೆದ ಬೆಳೆಗಳಿಗೆ ಸರಿಯಾದ ಬೆಲೆ ಸಿಗದೆ ರೈತರು ಕಣ್ಣೀರು ಹಾಕುವ ಸ್ಥಿತಿ ಇತ್ತು. ಹೀಗಿರುವಾಗ ಆ ಜಿಲ್ಲೆಯಲ್ಲಿ ನಡೆದಿರುವ ಅದೊಂದು ಕೆಂಪು ಕ್ರಾಂತಿ ಈಗ ರೈತರನ್ನು ಹೊಸ ಪ್ರಯತ್ನಕ್ಕೆ ದೂಡಿದೆ. ಲಕ್ಷ ಲಕ್ಷ ಲಾಭ ಮಾಡುವಂತೆ ಪ್ರೇರೇಪಿಸುತ್ತಿದೆ.. ಅಷ್ಟಕ್ಕೂ ಏನದು ಕೆಂಪು ಕ್ರಾಂತಿ ಇಲ್ಲಿದೆ ಡೀಟೇಲ್ಸ್..

ಬಾಯಲ್ಲಿ ನೀರೂರಿಸುವಂತೆ ತೋಟದಲ್ಲಿ ಕಂಡು ಬರುವ ಸ್ಟ್ರಾಬೆರಿ ಹಣ್ಣು, ಸೊಗಸಾಗಿ ಬೆಳೆದಿರುವ ಸ್ಟ್ರಾಬೆರಿ ಗಿಡಗಳಿಂದ ಹಣ್ಣುಗಳನ್ನು ಬಿಡಿಸುತ್ತಿರುವ ರೈತರು, ಇನ್ನೊಂದೆಡೆ ತೋಟದಲ್ಲಿ ಬಿಡಿಸಿದ ಸ್ಟ್ರಾಬೆರಿ ಹಣ್ಣುಗಳನ್ನು ಪ್ಯಾಕಿಂಗ್ ಮಾಡುತ್ತಿರುವ ಕೆಲಸಗಾರರು, ಇದೆಲ್ಲಾ ದೃಶ್ಯಗಳು ನಮಗೆ ಕಂಡು ಬಂದಿದ್ದು ಕೋಲಾರ ತಾಲ್ಲೂಕು ಕೊರಗೊಂಡನಹಳ್ಳಿ ಗ್ರಾಮದಲ್ಲಿ. ಕೋರಗೊಂಡನಹಳ್ಳಿ ಗ್ರಾಮದ ರಘುನಾಥ ರೆಡ್ಡಿ ಎಂಬುವವರ ತೋಟದಲ್ಲಿ.

ಹೌದು ಇಷ್ಟು ದಿನ ಕೋಲಾರದಲ್ಲಿ ರೈತರು ಟೊಮೆಟೋ, ಆಲೂಗಡ್ಡೆ, ಬೀನ್ಸ್, ಹೂಕೋಸು, ಎಲೆಕೋಸು ಸೇರಿದಂತೆ ಹಲವು ಬಗೆಯ ತರಕಾರಿ ಬೆಳೆಗಳನ್ನು ಬೆಳೆದು, ಬೆಳೆದ ಬೆಳೆಗೆ ಸರಿಯಾದ ಬೆಲೆ ಸಿಗದೆ ಕಂಗಾಗಲಾಗಿ ನಷ್ಟ ಅನುಭವಿಸುತ್ತಿದ್ದರು. ಆದರೆ ಕಳೆದ ಕೆಲವು ತಿಂಗಳ ಹಿಂದೆ ಕೋಲಾರದ ಎಸ್ಪಿಯಾಗಿದ್ದ ಡಿ. ದೇವರಾಜ್ ಅವರು ಕೋಲಾರ ಜಿಲ್ಲೆಯ ರೈತರಿಗೆ ನೀಡಿದ ಹೊಸ ಕೃಷಿ ಪದ್ದತಿ ಹಾಗೂ ಕೃಷಿಯಲ್ಲಿ ಲಾಭ ಮಾಡುವ ಕೆಲವೊಂದು ಬೆಳೆಗಳನ್ನು ಬೆಳೆಯೋದು ಹೇಗೆ ಅನ್ನೋದರ ಮಾಹಿತಿ ನೀಡಿದ್ದರು.

ಸ್ಟ್ರಾಬೆರಿ, ಡ್ರಾಗನ್ ಪ್ರೂಟ್ ಈ ಮಾಹಿತಿಯನ್ನು ಆಧರಿಸಿ ಕೋರಗೊಂಡನಹಳ್ಳಿ ಗ್ರಾಮದ ನಿವೃತ್ತ ಶಿಕ್ಷಕ ರಘುನಾಥ ರೆಡ್ಡಿ ಅವರು ತಮ್ಮ ಎರಡೂವರೆ ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ ಬೆಳೆದಿದ್ದಾರೆ. ಬಯಲು ಸೀಮೆ ಹಾಗೂ ಹೆಚ್ಚಿನ ಬಿಸಿಲು ಇರುವ ಪ್ರದೇಶ ಕೋಲಾರದಲ್ಲಿ ಇದು ಹೇಗೆ ಬರುತ್ತೋ ಅನ್ನೋ ಆತಂಕದಲ್ಲೇ ತಮ್ಮ ಸ್ನೇಹಿತರ ಮಾರ್ಗದರ್ಶನದಲ್ಲಿ ರಘುನಾಥರೆಡ್ಡಿ ಸ್ಟ್ರಾಬೆರಿ ಬೆಳೆದಿದ್ದಾರೆ. (ವರದಿ: ರಾಜೇಂದ್ರಸಿಂಹ, ಟಿವಿ9, ಕೋಲಾರ)

ಇಂದು ಆ ಬೆಳೆ ನಿರೀಕ್ಷೆಗೂ ಮೀರಿದ ಯಶಸ್ಸು ಸಿಕ್ಕಿದ್ದು, ಎರಡೂವರೆ ಎಕರೆ ಪ್ರದೇಶದಲ್ಲಿ ಸ್ಟ್ರಾಬೆರಿ ಸಮೃದ್ದವಾಗಿ ಬೆಳೆದಿದೆ. ಮಹಾರಾಷ್ಟ್ರದಿಂದ ನಬಿಲಾ ಎಂಬ ತಳಿಯನ್ನು ತಂದು ನಾಟಿ ಮಾಡಿದ್ದ ರಘುನಾಥರೆಡ್ಡಿ ಅವರಿಗೆ ಒಂದು ಎಕರೆಗೆ ಸುಮಾರು ಎರಡೂವರೆ ಲಕ್ಷ ಖರ್ಚು ಬಂದಿತ್ತು. ಆದರೆ ಇಂದು ಸ್ಟ್ರಾಬೆರಿ ಫಸಲು ಬಂದಿದ್ದು ಪ್ರತಿನಿತ್ಯ 1000 ದಿಂದ 1500 ಬಾಕ್ಸ್ ಸ್ಟ್ರಾಬೆರಿ ಸಿಗುತ್ತಿದೆ. ಇನ್ನು ಮಾರುಕಟ್ಟೆಯಲ್ಲಿ ಒಂದು ಬಾಕ್ಸ್ ಸ್ಟ್ರಾಬೆರಿಗೆ 50 ರಿಂದ 60 ರೂಪಾಯಿ ಸಿಗುತ್ತಿದ್ದು ರಘುನಾಥರೆಡ್ಡಿ ಅವರಿಗೆ ಪ್ರತಿನಿತ್ಯ ಸಾವಿರಾರು ರೂಪಾಯಿ ಸಂಪಾದನೆಯಾಗುತ್ತಿದೆ.

ಇನ್ನು ರಘುನಾಥರೆಡ್ಡಿ ಅವರು ತನ್ನ ಸ್ನೇಹಿತರ ಸಲಹೆಯಂತೆ ಮಹಾರಾಷ್ಟ್ರದಿಂದ ನಬಿಲಾ ತಳಿಯ ಸಸಿಗಳನ್ನು ತಂದಿದ್ದು, ಒಂದು ಸಸಿಗೆ 10 ರೂಪಾಯಿ ಖರ್ಚು ಬಂದಿದೆ. ಸಸಿಗಳನ್ನು ತಂದ ರಘುನಾಥರೆಡ್ಡಿ ತಮ್ಮ ಎರಡೂವರೆ ಎಕರೆ ಜಮೀನಿಗೆ ಕೊಟ್ಟಿಗೆ ಗೊಬ್ಬರ ಹಾಕಿ ಫಲವತ್ತಾಗಿಸಿದ್ದಾರೆ. ನಂತರ ಕೋಸು ಅಥವಾ ಕ್ಯಾಪ್ಸಿಕಂ ನಾಟಿ ಮಾಡುವಂತೆ ಬದುಗಳನ್ನು ನಿರ್ಮಾಣ ಮಾಡಿ ಅದರ ಮೇಲೆ ಮಲ್ಚಿಂಗ್ ಪೇಪರ್ ಹಾಕಿ, ಹನಿ ನೀರಾವರಿ ಪೈಪ್ಗಳನ್ನು ಅಳವಡಿಸಿ ನಂತರ, ಒಂದೂವರೆ ಅಡಿಗೊಂದು ಸಸಿಗಳನ್ನು ನಾಟಿ ಮಾಡಿದ್ದಾರೆ.


ಸಸಿನಾಟಿ ಮಾಡಿದ ನಂತರ ಹತ್ತು ಹದಿನೈದು ದಿನಕ್ಕೊಮ್ಮೆ ಔಷದಿ ಸಿಂಪಡಿಸಬೇಕು. ಇದೆಲ್ಲಾ ಮಾಡಿದರೆ... 45 ನೇ ದಿನಕ್ಕೆ ಸ್ಟ್ರಾಬೆರಿ ಫಸಲು ಕೊಡಲು ಆರಂಭಿಸುತ್ತದೆ. ನಿರಂತರವಾಗಿ ಮೂರು ತಿಂಗಳ ಕಾಲ ಫಸಲು ಕೊಡುವ ಸ್ಟ್ರಾಬೆರಿ ಪ್ರತಿನಿತ್ಯ 1,000 ದಿಂದ 1,500 ಬಾಕ್ಸ್ ಸ್ಟ್ರಾಬೆರಿ ಸಿಗುತ್ತಿದೆ. ಸದ್ಯ ಮಾರುಕಟ್ಟೆಯಲ್ಲಿ ಸ್ಟ್ರಾಬೆರಿಗೆ ಒಳ್ಳೆಯ ಬೇಡಿಕೆ ಇದ್ದು ಸಫಲ್, ರಿಲಯನ್ಸ್ ಸೇರಿದಂತೆ ಹಲವು ಕಂಪನಿಗಳು ಒಂದು ಬಾಕ್ಸ್ ಸ್ಟ್ರಾಬೆರಿಗೆ 50 ರಿಂದ 60 ರೂಪಾಯಿ ಹಣ ನೀಡಿ ಖರೀದಿ ಮಾಡುತ್ತಿದ್ದಾರೆ.



ಇದರಿಂದ ಸ್ಟ್ರಾಬೆರಿ ಬೆಳೆದ ರೈತರು ಖುಷಿಯಾಗಿದ್ದಾರೆ. ಸದಾ ಟೊಮ್ಯಾಟೋ, ಆಲೂಗಡ್ಡೆ, ಕ್ಯಾಪ್ಸಿಕಂ, ಬೀನ್ಸ್ ಹೀಗೆ ಹಲವು ರೀತಿಯ ತರಕಾರಿ ಬೆಳೆದು ಬಹಳ ನಷ್ಟ ಅನುಭವಿಸುತ್ತಿದ್ದ ರೈತರಿಗೆ ರಾಷ್ಟ್ರೀಯ ಹಾಗೂ ಅಂತರಾಷ್ಟ್ರೀಯ ಮಾರುಕಟ್ಟೆಯಲ್ಲಿ ಬೇಡಿಕೆ ಇರುವ ಸ್ಟ್ರಾಬೆರಿ ಬೆಳೆಯುತ್ತಿರುವುದುದರಿಂದ ನಷ್ಟದ ಮಾತೇ ಇಲ್ಲದೆ ರೈತರು ಒಳ್ಳೆಯ ಲಾಭ ಮಾಡಬಹುದು ಅನ್ನೋದು ರೈತರ ಮಾತು.

ಒಟ್ಟಾರೆ ಕೃಷಿಯಲ್ಲಿ ಸದಾ ಹೊಸ ಹೊಸ ಪ್ರಯೋಗಗಳನ್ನು ಮಾಡುವ ಕೋಲಾರದ ರೈತರು ಸ್ಟ್ರಾಬೆರಿ ಬೆಳೆಯುವ ಮೂಲಕ ಸದ್ಯ ಕೋಲಾರದಲ್ಲಿ ಕೆಂಪು ಕ್ರಾಂತಿ ಶುರುವಾಗಿದ್ದು, ಇನ್ನು ಜಿಲ್ಲೆಯ ರೈತರು ಅಂತರಾಷ್ಟ್ರೀಯ ಮಟ್ಟದಲ್ಲಿ ಬೇಡಿಕೆ ಇರುವ ಬೆಳೆಗಳನ್ನು ಬೆಳೆಯುವ ಮೂಲಕ ರೈತರು ಹೊಸ ಹೆಜ್ಜೆ ಇಡುತ್ತಿರುವುದು ನಿಜಕ್ಕೂ ಆಶಾದಾಯಕ ಬೆಳೆವಣಿಗೆ ಅಂದರೆ ತಪ್ಪಾಗೋದಿಲ್ಲ..


Published On - 8:51 am, Thu, 2 March 23




