
ಕಲಿಯುಗ ಕಾಮಧೇನು ಶ್ರೀಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಹಿನ್ನೆಲೆ ಮಂತ್ರಾಲಯದಲ್ಲಿ ಇಂದು ಪೂರ್ವಾರಾಧನೆ ಸಂಭ್ರಮ ಮನೆ ಮಾಡಿದೆ. ರಾಯರು 700 ವರ್ಷಗಳ ಕಾಲ ವೃಂದಾವನದಲ್ಲಿರುತ್ತಾರೆ ಎಂದ ಪ್ರತೀತಿ ಇದೆ. ಪೂರ್ವಾರಾಧನೆ ಹಿನ್ನೆಲೆ ವಿಶೇಷ ಧಾರ್ಮಿಕ ಸಾಂಸ್ಕೃತಿಕ ಕಾರ್ಯಕ್ರಮಗಳು ನಡೆಯುತ್ತಿದ್ದು, ಭಕ್ತ ಸಾಗರವೇ ಹರಿದು ಬರುತ್ತಿದೆ.
ಮಂತ್ರಾಲಯದ ಗುರು ರಾಘವೇಂದ್ರ ಸ್ವಾಮಿಗಳ 355ನೇ ಆರಾಧನಾ ಮಹೋತ್ಸವ ಬಹಳ ಶ್ರದ್ಧೆಯಿಂದ ಜರುಗಿದೆ. ರಾಯರು ಸಶರೀರರಾಗಿ ವೃಂದಾವನಸ್ಥರಾದ ಮುನ್ನಾ ದಿನವನ್ನು ಪೂರ್ವಾರಾಧನೆಯಾಗಿ ಮಂತ್ರಾಲಯ ಸೇರಿದಂತೆ ದೇಶದ ಎಲ್ಲಾ ರಾಯರ ಮಠಗಳಲ್ಲಿ ಆಚರಿಸಲಾಗುತ್ತದೆ.
ಇತ್ತ ಶ್ರೀಮಠದ ಪೀಠಾಧಿಪತಿ ಸುಬುಧೇಂದ್ರ ತೀರ್ಥರ ನೇತೃತ್ವದಲ್ಲಿ ಇಡೀ ಧಾರ್ಮಿಕ ಕೈಂಕರ್ಯಗಳು ನಡೆದಿದೆ. ಪೂರ್ವಾರಾಧನೆ ಹಿನ್ನೆಲೆ ಬೆಳಿಗ್ಗೆಯಿಂದಲೇ ಮಂತ್ರಾಲಯದ ರಾಯರ ಮಠದಲ್ಲಿ ಪೂಜಾ ಕೈಂಕರ್ಯಗಳು ನಡೆದವು. ನಿರ್ಮಾಲ್ಯ ವಿಸರ್ಜನೆ, ಉತ್ಸವರಾಯರ ಪಾದಪೂಜೆ, ಪಂಚಾಮೃತ ಅಭಿಷೇಕ, ರಜತ ಸಿಂಹವಾಹನೋತ್ಸವ ಜರುಗಿದವು.
ಇಂದು ಪೂರ್ವಾರಾಧನೆ ಹಿನ್ನೆಲೆ ತಮಿಳುನಾಡಿನ ಮುಜರಾಯಿ ಇಲಾಖೆಯ ಅಧಿಕಾರಿಗಳು ಶ್ರೀರಂಗಂನ ಶ್ರೀರಂಗನಾಥ ದೇವಸ್ಥಾನದಿಂದ ರಾಯರಿಗೆ ಶೇಷವಸ್ತ್ರದ ಆಗಮನವಾಯ್ತು. ಶ್ರೀಮಠಕ್ಕೆ ಶೇಷವಸ್ತ್ರ ತಲುಪುತ್ತಿದ್ದಂತೆ ಶ್ರೀಮಠದ ಅರ್ಚಕರು, ಆಡಳಿತ ವರ್ಗ ಹಾಗೂ ಸುಬುಧೇಂದ್ರ ತೀರ್ಥರು ಶೇಷವಸ್ತ್ರವನ್ನ ಸಕಲ ವಾದ್ಯಮೇಳಗಳ ಮೂಲಕ ಸ್ವಾಗತಿಸಿದರು. ಬಳಿಕ ರಾಯರ ಮೂಲ ವೃಂದಾವನದ ಎದುರು ಪೂಜೆ ಸಲ್ಲಿಸಲಾಯಿತು.
ಇತ್ತ ರಾಯರ ಆರಾಧನೆ ಹಿನ್ನೆಲೆ ಭಕ್ತ ಸಾಗರವೇ ಮಠಕ್ಕೆ ಹರಿದು ಬರುತ್ತಿದೆ. ಏಳು ದಿನಗಳ ರಾಯರ ಆರಾಧನಾ ಮಹೋತ್ಸವದ ಪೈಕಿ ಇಂದಿನಿಂದ ಮೂರು ದಿನಗಳ ಕಾಲ ಪೂರ್ವಾರಾಧನೆ, ಮಧ್ಯಾರಾಧನೆ, ಉತ್ತರಾಧನೆ ನಡೆಯುತ್ತಿದೆ. ಭಕ್ತರು ತಮ್ಮ ಸೇವೆಯನ್ನ ರಾಯರಿಗೆ ಅರ್ಪಿಸುವ ಮೂಲಕ ಭಕ್ತಿ ಮೆರೆಯುತ್ತಿದ್ದಾರೆ.
ಪೂರ್ವರಾಧನೆ ಹಿನ್ನೆಲೆ ವಿಜೃಂಭಣೆಯಿಂದ ನಡೆದ ವಿಶೇಷ ಧಾರ್ಮಿಕ ಕೈಂಕರ್ಯಗಳಿಗೆ ಶ್ರೀಮಠ ಸಾಕ್ಷಿಯಾಗಿದ್ದು, ಇನ್ನೂ ಎರಡು ದಿನ ರಾಯರ ಭಕ್ತರಿಗೆ ಹಬ್ಬವೋ ಹಬ್ಬ.