ಸಾಲ ಕೊಡದ ಸಿಟ್ಟಿಗೆ 17 kg ಚಿನ್ನ ಕದ್ದರು: ಬ್ಯಾಂಕ್ ದರೋಡೆ ಮಾಡಲೆಂದೇ ಆ ವೆಬ್ ಸಿರೀಸ್ ನೋಡಿದ್ದ ಸಹೋದರರು
6 ತಿಂಗಳ ಬಳಿಕ ದಾವಣಗೆರೆಯ ನ್ಯಾಮತಿ ಎಸ್ಬಿಐ ಬ್ಯಾಂಕ್ ದರೋಡೆ ಕೇಸ್ಗೆ ಮಹತ್ವದ ಟ್ವಿಸ್ಟ್ ಸಿಕ್ಕಿದೆ. 2024 ಅಕ್ಟೋಬರ್ 28ರಂದು ನ್ಯಾಮತಿ ಪಟ್ಟಣದಲ್ಲಿರುವ SBI ಬ್ಯಾಂಕ್ನಲ್ಲಿದ್ದ ಬರೋಬರಿ 13 ಕೋಟಿ ರೂಪಾಯಿ ಮೌಲ್ಯದ ಚಿನ್ನಾಭರಣ ಕಳುವು ಮಾಡಲಾಗಿತ್ತು. ಖದೀಮರ ಹಿಂದೆ ಬಿದ್ದ ಪೊಲೀಸರು ಭರ್ಜರಿ ಬೇಟೆಯಾಡಿದ್ದು, ಕಳ್ಳರ ಗ್ಯಾಂಗ್ ಅನ್ನು ಬಲೆಗೆ ಬೀಳಿಸುವಲ್ಲಿ ಸಕ್ಸಸ್ ಆಗಿದ್ದಾರೆ. ಈ ಆರೋಪಿಗಳು ಬ್ಯಾಂಕ್ನಲ್ಲಿ ಬೇಕರಿ ಬ್ಯುಸಿನೆಸ್ ಮಾಡಲು ಸಾಲ ಕೇಳಿದ್ದರು. ಸಾಲ ಕೊಡಲು ಬ್ಯಾಂಕ್ ಸಿಬ್ಬಂದಿ ನಿರಾಕರಿಸಿದ್ದು, ಬ್ಯಾಂಕ್ ಅನ್ನೇ ಗುಡಿಸಿ ಗುಂಡಾಂತರ ಮಾಡಿದ್ದರು. ಸಾಲ ಕೊಡದ ಸಿಟ್ಟಿನಲ್ಲಿ ವೆಬ್ ಸಿರೀಸ್ನಲ್ಲಿ ದರೋಡೆ ಮಾಡುವುದನ್ನು ನೋಡಿ ಪ್ಲ್ಯಾನ್ ಮಾಡಿದ್ದರು. ಹಾಗಾದ್ರೆ, ಯಾವುದು ಆ ವೆಬ್ ಸಿರೀಸ್? ಎನ್ನುವ ಡಿಟೇಲ್ಸ್ ಇಲ್ಲಿದೆ.
Updated on: Mar 31, 2025 | 10:19 PM

ದಾವಣಗೆರೆಯ ನ್ಯಾಮತಿ ಎಸ್ಬಿಐ ಬ್ಯಾಂಕ್ ದರೋಡೆ ಪ್ರಕರಣ ಇಡೀ ಕರ್ನಾಟಕದ ಗಮನ ಸೆಳೆದಿತ್ತು. ದಾವಣಗೆರೆ ಪೊಲೀಸರು ಕಬ್ಬಿಣದ ಕಡಲೆಯಾಗಿದ್ದ ಈ ಪ್ರಕರಣವನ್ನು ಆರು ತಿಂಗಳುಗಳ ಬಳಿಕ ಭೇದಿಸಿದ್ದು, 13 ಕೋಟಿ ಮೌಲ್ಯದ 17 ಕೆಜಿ ಚಿನ್ನವನ್ನು ವಶಕ್ಕೆ ಪಡೆದಿದ್ದಾರೆ.

ತಮಿಳು ನಾಡು ಮೂಲದ ತಮಿಳುನಾಡಿನ ಮಧುರೈ ನಿವಾಸಿ ಹಾಲಿ ವಾಸ ನ್ಯಾವತಿ 30 ವರ್ಷದ ವಿಜಯ್ ಹಾಗೂ ಅವರ ತಮ್ಮ 28 ವರ್ಷದ ಅಜಯ್ ಈ ದರೋಡೆಯ ಮಾಸ್ಟರ್ ಮೈಂಡ್. ಅವರಿಗೆ ಸಹಾಯ ಆಗಲು ಅವರ ತಂಗಿಯ ಗಂಡ ಪರಮಾನಂದನ್ನ ಸೇರಿಸಿಕೊಂಡಿದ್ದರು. ಸ್ಥಳೀಯವಾಗಿ ನ್ಯಾಮತಿ ತಾಲೂಕಿನನ ಸುರಹೊನ್ನೆ ಗ್ರಾಮದ ನಿವಾಸಿಗಳಾದ ಮಂಜುನಾಥ್, ಚಂದ್ರು, ಬೆಳಗುತ್ತಿ ಗ್ರಾಮದ ಅಭಿಷೇಕ ಹೀಗೆ ಆರು ಜನ ಸೇರಿ 13 ಕೋಟಿ ರೂಪಾಯಿ ಚಿನ್ನದ ಆಭರಣ ದೋಚಿದ್ದರು.

ಬರೋಬರಿ 13 ಕೋಟಿ ರೂಪಾಯಿ ಮೌಲ್ಯದ ಚಿನ್ನದ ಆಭರಣ ಕಳ್ಳತನ ಆಗಿತ್ತು. ಕಳ್ಳತನ ಮಾಡಿದವರು ಮಹಾ ಚಾಲಾಕಿಗಳು. ಅಪ್ಪಿ ತಪ್ಪಿ ಅವರು ಮೊಬೈಲ್ ಬಳಸಿರಲಿಲ್ಲ. ಜೊತೆಗೆ ಬ್ಯಾಂಕ್ ನಲ್ಲಿದ್ದ ಸಿಸಿ ಕ್ಯಾಮರಾ ಡಿವಿಆರ್ ಸಹಿ ನಾಪತ್ತೆ ಮಾಡಿದ್ದರು. ಜೊತೆಗೆ ಖಾರದ ಪುಡಿ ಹಾಕಿ ಸಾಕ್ಷಿ ನಾಶ ಮಾಡಿದ್ದರು. ಇದನ್ನೆ ನೋಡಿದ ಪೊಲೀಸರು ಅಂತರರಾಜ್ಯ ಗ್ಯಾಂಗ್ ಹತ್ತಾರು ರಾಜ್ಯ ಸುತ್ತಿದ್ದರು. ಈ ಪ್ರಕರಣ ಬಿಟ್ಟು ಬೇರೆ ಪ್ರಕರಣ ಪತ್ತೆ ಹಚ್ಚಿದ್ರು. ಇನ್ನೇನು ಮುಗಿಯಿತು ಎಂದು ಕುಳಿತಾಗ ಒಂದು ಸಾಕ್ಷಿ ಸಿಕ್ಕಿತ್ತು. ಕಳುವಾದ ಚಿನ್ನ ಇರುವ ತಮಿಳುನಾಡಿನ ಹಾಳು ಬಾವಿಗೆ ಕರೆದುಕೊಂಡು ಹೋಗಿತ್ತು.

ಅವರು ಮಾಡಿದ್ದು ಮೊದಲ ಸಲ ದರೋಡೆ. ಆದ್ರೆ ಮಹಾ ಕಿಲಾಡಿಗಳು. ಯೂಟ್ಯೂಬ್ ನಲ್ಲಿ ಬ್ಯಾಂಕ್ ದರೋಡೆ ಬಗ್ಗೆ ನೋಡುತ್ತಿದ್ದರು. NETFLIX ನ MONEY HEIST ಅವರಿಗೆ ಪ್ರೇರಣೆ. ಇದರಲ್ಲಿ ಬರುವ ಪ್ರೋಫೆಸರ್ ಒಬ್ಬರ ಪಾತ್ರವನ್ನ ನ್ಯಾಮತಿ ಬ್ಯಾಂಕ್ ದರೋಡೆ ಪ್ರರಕರಣದಲ್ಲಿ ವಿಜಯ್ ವಹಿಸಿದ್ದ. ಇವರಿಗೆ ಬೇಗ ಶ್ರೀಮಂತರಾಗಬೇಕು ಎಂಬು ಹುಚ್ಚಿತ್ತು. ವಿಜಯ ಬಳಿ ಇರುವ ಡಸ್ಟರ್ ಕಾರ್ ತೆಗೆದುಕೊಂಡು ದರೋಡೆ ಮಾಡಿ ಸಿಸಿ ಕ್ಯಾಮರಾ ಇಲ್ಲದ ರಸ್ತೆಯಲ್ಲಿ ಸಂಚಾರ ಮಾಡಿ. ನವೆಂಬರ್ ನಲ್ಲಿ ತಾವು ಕದ್ದ 17.70 ಕೆಜಿ ಚಿನ್ನವನ್ನ ಒಂದು ಬಾಕ್ಸ್ ಮಾಡಿ ಅದಕ್ಕೆ ವಿಶೇಷ ಪೂಜೆ ಮಾಡಿ, ಕಾರ್ ನಲ್ಲಿ ತನ್ನ ಸ್ವಗ್ರಾಮವಾದ ತಮಿಳುನಾಡಿನ ಮಧುರೈ ಬಳಿ ಹಳ್ಳಿಗೆ ಹೋಗಿ ನಿರ್ಜನ ಪ್ರದೇಶದಲ್ಲಿ ಇದ್ದ ಹಾಳು ಬಾವಿಯಲ್ಲಿ ಚಿನ್ನ ತುಂಬಿದ ಬಾಕ್ಸ್ ಇಟ್ಟು ಬಂದಿದ್ದ.

ಎರಡು ಮೂರು ವರ್ಷವಾಗುವ ತನಕ ಇದನ್ನ ಹೊರೆಗೆ ತೆಗೆಯದಂತೆ ನಿರ್ಧಾರ ಮಾಡಿದ್ದರು. ಅಷ್ಟರಲ್ಲಿ ಜನ ಮರೆಯುತ್ತಾರೆ ಎಂಬುವುದು ಪ್ಲಾನ್. ಚಿನ್ನ ಇಟ್ಟಿದ್ದು ವಿಜಯ್ ಬಿಟ್ಟರೇ ಯಾರಿಗೂ ಗೊತ್ತಿರಲ್ಲ. ವಿಜಯ್ ಆರೋಪಿಯನ್ನ ಕರೆದುಕೊಂಡು ಚಿನ್ನ ತೆಗೆದಾಗ ಗ್ರಾಮಸ್ಥರೆ ಬೆಚ್ಚಿ ಬಿದ್ದಿದ್ದರು. ಕಾರಣ ಈ ವಿಚಾರ ಸ್ವಂತ ಕುಟುಂಬದವರ ಜೊತೆ ಸಹ ಮಾತಾಡಿರಲಿಲ್ಲ.

ಉತ್ತರ ಪ್ರದೇಶ ಸೇರಿದಂತೆ ಹತ್ತಾರು ರಾಜ್ಯ ಸುತ್ತಿದರು ಕೂಡಾ ಆರೋಪಿಗಳ ಸುಳಿವು ಸಿಕ್ಕಿರಲಿಲ್ಲ. ಮಾರ್ಚ ಮೂರ ರಂದು ಒಂದು ಸಣ್ಣ ಸುಳಿವು ಸಿಕ್ಕಿತ್ತು. ಇದಕ್ಕ ನೋಡಿದ್ದ ಬ್ಯಾಂಕ್ ನಿಂದ ಕೂಗಳತೆ ದೂರದಲ್ಲಿ ಇರುವ ವಿಜಯ್ - ಅಜಯ್ ಎಂಬ ಕಿಲಾಡಿ ಸಹೋದರು. ಇವರು ಬ್ಯಾಂಕ್ ನಲ್ಲಿ ಸಾಲಾ ಕೇಳಿದಾಗ ಸಾಲ ನಿರಾಕರಿಸಿದ್ದಕ್ಕೆಕ ಸಿಟ್ಟಾಗಿ ದರೋಡೆ ಪ್ಲಾನ್ ಮಾಡಿದ್ದರು.

ಆರೋಪಿ ವಿಜಯ್ಕುಮಾರ್ ಬೇಕರಿ ಉದ್ಯಮ ಉನ್ನತ ಮಟ್ಟಕ್ಕೆ ಏರಿಸಲು ಸಾಲಕ್ಕಾಗಿ ಬ್ಯಾಂಕ್ಗೆ ಅರ್ಜಿ ಸಲ್ಲಿಸಿದ್ದ. ಈತನ ಕ್ರೆಡಿಟ್ ಸ್ಕೋರ್ ಕಡಿಮೆ ಇದ್ದಿದ್ದರಿಂದ ಸಾಲದ ಅರ್ಜಿ ವಜಾಗೊಂಡಿತ್ತು. ಇದರಿಂದ ಕಂಗಾಲಾಗಿದ್ದ ವಿಜಯ್ ಕುಮಾರ್ ಬ್ಯಾಂಕ್ ಕಳ್ಳತನಕ್ಕೆ ಸ್ಕೆಚ್ ಹಾಕಿ ಈ ಗ್ಯಾಂಗ್ ಸೃಷ್ಟಿ ಮಾಡಿದ್ದ.

ನ್ಯಾಮತಿ SBI ಬ್ಯಾಂಕಿನ ಹಿಂದೆ ಕಾಡು ರೀತಿಯಲ್ಲಿ ಮರ ಗಿಡಗಳು ಬೆಳೆದಿರುವುದು ದರೋಡೆಗೆ ಅನುಕೂಲವಾಗಿದೆ. ದರೋಡೆಗಾಗಿ ಸುಮಾರು 4 ಕಿ.ಮೀ. ದೂರ ನಡೆದುಕೊಂಡೇ ಬಂದಿದ್ದ ಆರೋಪಿಗಳು ಬ್ಯಾಂಕಿನ ಮುಖ್ಯದ್ವಾರವನ್ನು ಒಡೆದು ಒಳನುಗ್ಗಿದ್ದರು. ಆಭರಣಗಳನ್ನು ಸಂಗ್ರಹಿಸಿ ಇಡಲಾಗಿದ್ದ ಬೀರುಗಳನ್ನು ಗ್ಯಾಸ್ ಕಟ್ಟರ್ ಬಳಸಿ ಕೋಟ್ಯಾಂತರ ರೂ. ಮೌಲ್ಯದ 17 ಕೆಜಿ ಆಭರಣಗಳನ್ನು ದರೋಡೆ ಮಾಡಿಕೊಂಡು ಪರಾರಿಯಾಗಿದ್ದರು.

ಕಳ್ಳರ ಗ್ಯಾಂಗ್ ದರೋಡೆಯ ಸುಳಿವು ಸಿಗಬಾರದು ಎಂದು ಬ್ಯಾಂಕಿನ ತುಂಬಾ ಖಾರದ ಪುಡಿ ಎರಚಿ ಸಾಕ್ಷಿಗಳನ್ನು ನಾಶಪಡಿಸುವ ಯತ್ನ ಮಾಡಿದ್ದರು. ಇದೇ ಮೊದಲ ಬಾರಿಗೆ ಈ ದರೋಡೆ ಪ್ರಕರಣದಲ್ಲಿ ಆರೋಪಿಗಳು ಭಾಗಿಯಾಗಿರುವುದು ಮೇಲ್ನೋಟಕ್ಕೆ ಕಂಡು ಬಂದಿದೆ.

ಬ್ಯಾಂಕ್ನಲ್ಲಿ ಕದ್ದಿದ್ದ ಚಿನ್ನಾಭರಣಗಳನ್ನು ಆರೋಪಿಗಳು ತಮಿಳುನಾಡಿನ ಮಧುರೈ ಪಕ್ಕದ ಹಳ್ಳಿ ತೆಗೆದುಕೊಂಡು ಹೋಗಿ ತೋಟದ ಭಾವಿಯಲ್ಲಿ ಮುಚ್ಚಿಟ್ಟಿದ್ದರು. ಈ ಕಳ್ಳತನಕ್ಕೆ ಕಳ್ಳರ ಗ್ಯಾಂಗ್ ಗಡಿಚೌಡಮ್ಮಗೆ ಅಷ್ಟದಿಗ್ಬಂಧನ ಪೂಜೆ ಮಾಡಿಸಿದ್ದರಂತೆ. ಸಿನಿಮಾ, ಯೂಟ್ಯೂಬ್ ವಿಡಿಯೋ ನೋಡಿ ಮೊದಲ ಕಳ್ಳತನವನ್ನೇ ಬಹಳ ವ್ಯವಸ್ಥಿತವಾಗಿ ಇವರು ಮಾಡಿ ಮುಗಿಸಿದ್ದರು.

ಚನ್ನಗಿರಿ ಎಸ್ಪಿ ಶ್ಯಾಮ್ ವರ್ಗೀಸ್, ಗ್ರಾಮಾಂತರ ಡಿವೈಎಸ್ಪಿ ಬಿಎಸ್ ಬಸವರಾಜ್ ಸೇರಿ ಐದು ತಂಡ ಮಾಡಿದ ಸಾಧನೆ ಮೆಚ್ಚುಗೆ ವ್ಯಕ್ತವಾಗಿದೆ. ಈ ತಂಡದ ಹತ್ತು ಜನಕ್ಕೆ ಈ ವರ್ಷದ ಮುಖ್ಯಮಂತ್ರಿ ದಪಕ ಸಿಕ್ಕಿದೆ. ಕಿಲಾಡಿಗಳು ಅಂದರ್ ಆಗಿದ್ದಾರೆ. ಚಿನ್ನವಿಟ್ಟ ಜನ ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.



















