
ಕೋಟೆನಾಡು ಚಿತ್ರದುರ್ಗ ಜಿಲ್ಲೆಯ ಹಿರಿಯೂರು ತಾಲೂಕಿನ ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಸಂಬಂಧಗಳನ್ನು ಗಟ್ಟಿಗೊಳಿಸುವ ಬುಡಕಟ್ಟು ಸಂಸ್ಕೃತಿಯ ಅಪರೂಪದ ಆಚರಣೆಯೊಂದು ನಡೆಯುತ್ತಿದೆ. ಅದುವೇ ಅತ್ತಿಗೆ ನಾದಿನಿಯರು ತಲೆಗೆ ಡಿಕ್ಕಿ ಹೊಡೆವ ಡಿಕ್ಕಿ ಹಬ್ಬ. ವಿಶಿಷ್ಟ ಆಚರಣೆಗೆ ಸಾವಿರಾರು ಜನರು ಸಾಕ್ಷಿಯಾಗಿದ್ದಾರೆ.

ಚಿಕ್ಕೀರಣ್ಣನ ಮಾಳಿಗೆ ಗ್ರಾಮದಲ್ಲಿ ಬುಡಕಟ್ಟು ಸಮುದಾಯದ ಜನ ವಿಶಿಷ್ಟ ಹಬ್ಬವನ್ನು ಆಚರಿಸುತ್ತಾರೆ. ಅಹೋಬಲ ನರಸಿಂಹಸ್ವಾಮಿ ದೇವರ ಜಾತ್ರೆ, ಉತ್ಸವದ ಅಂಗವಾಗಿ ಈ ಆಚರಣೆ ನಡೆಯುತ್ತದೆ. ದೇವರ ಉತ್ಸವ ಮೆರವಣಿಗೆ ವೇಳೆ ನೆಲಕ್ಕೆ ಬಾಳೆ ಹಣ್ಣು, ಬೆಲ್ಲ ಹಾಕಿ ಸೇವಿಸುವ ಸಾಂಪ್ರದಾಯಿಕ ಮಣೇವು ಸಾಂಪ್ರದಾಯಿಕ ಆಚರಣೆ ಸಹ ಆಚರಿಸಲಾಗುತ್ತದೆ.

ಯುವಕರು ಟಗರುಗಳನ್ನು ತಂದು ದೇಗುಲದ ಆವರಣದಲ್ಲಿ ಡಿಕ್ಕಿ ಹೊಡೆಸಿ ಖುಷಿ ಪಡುತ್ತಾರೆ. ಆ ಬಳಿಕ ಅತ್ತಿಗೆ ನಾದಿನಿಯರು ಸಾಂಪ್ರದಾಯಿಕ ಡಿಕ್ಕಿ ಹಬ್ಬ ಆಚರಿಸುತ್ತಾರೆ. ಈ ಆಚರಣೆ ಅತ್ತಿಗೆ ನಾದಿನಿಯರ ಪ್ರೀತಿಯ ಅಪ್ಪುಗೆಯ ಹಬ್ಬವಾಗಿದ್ದು, ಪುರಾತನ ಕಾಲದಿಂದಲೂ ಆಚಿರಿಸಿಕೊಂಡು ಬರಲಾಗುತ್ತಿದೆ ಅಂತಾರೆ ಅಧ್ಯಾಪಕ ಡಾ.ಕರಿಯಪ್ಪ ಮಾಳಿಗೆ ಅವರು.

ಇನ್ನು ಈ ಗ್ರಾಮದ ಹೆಣ್ಣುಮಕ್ಕಳು ಅದೆಷ್ಟು ದೂರದ ಊರಿಗೆ ಸೊಸೆಯಾಗಿ ಹೋಗಿದ್ದರೂ ಸಹ ತಪ್ಪದೆ ಈ ಹಬ್ಬಕ್ಕೆ ಬರುತ್ತಾರೆ. ಅತ್ತಿಗೆ, ನಾದಿನಿಯರ ಮಧ್ಯೆ ಏನೇ ವೈಮನಸ್ಸು ಇದ್ದರೂ ಸಹ ಇಂದು ಒಂದಾಗಿ ಹಬ್ಬ ಆಚರಿಸುತ್ತಾರೆ. ಈ ಹಬ್ಬಕ್ಕೆ ಗೈರಾದರೆ ಸಣ್ಣ ತಲೆನೋವು ಬಂದರೂ ಈ ಹಬ್ಬಕ್ಕೆ ಗೈರಾಗಿದ್ದಕ್ಕೆ ಬಂತೆಂಬ ಭಾವನೆ ಮೂಡತ್ತದೆ. ಹೀಗಾಗಿ, ಅತ್ತಿಗೆ ಮತ್ತು ನಾದಿನಿಯರು ಈ ಹಬ್ಬದಲ್ಲಿ ತಪ್ಪದೇ ಪಾಲ್ಗೊಳ್ತಾರೆ ಎನ್ನುತ್ತಾರೆ ರಂಜಿತಾ.

ಒಟ್ಟಾರೆಯಾಗಿ ಚಿತ್ರದುರ್ಗದ ಸಿಎನ್ ಮಾಳಿಗೆ ಗ್ರಾಮದಲ್ಲಿ 3 ದಿನ ಕಾಲ ನಡೆದ ಅಹೋಬಲ ನರಸಿಂಹಸ್ವಾಮಿ ಉತ್ಸವಕ್ಕೆ ತೆರೆ ಬಿದ್ದಿದೆ. ಈ ಅಪರೂಪದ ಆಚರಣೆಯ ಮೂಲಕ ಬಾಂಧ್ಯವಗಳು ಮತ್ತಷ್ಟು ಗಟ್ಟಿಗೊಳ್ಳುತ್ತವೆ ಎಂಬುದು ಜನರ ನಂಬಿಕೆ ಆಗಿದೆ. ಒಟ್ಟಿನಲ್ಲಿ ಬುಡಕಟ್ಟು ಸಂಸ್ಕೃತಿಯ ಡಿಕ್ಕಿ ಹಬ್ಬ ಆಚರಿಸಿ ಅತ್ತಿಗೆ-ನಾದಿನಿಯರು ಖುಷಿಪಟ್ಟಿದ್ದಾರೆ.