ಮುಂಗಾರು ಹಂಗಾಮಿಗೂ ಮುನ್ನ ನಡೆಯುವ ಅನ್ನದಾತರ ಹಬ್ಬದ ಖದರ್: ಫೋಟೋಸ್ ನೋಡಿ
ಉತ್ತರ ಕರ್ನಾಟಕದಲ್ಲಿ ಕಾರ ಹುಣ್ಣಿಮೆ ವಿಜೃಂಭಣೆಯಿಂದ ಆಚರಿಸಲಾಗುತ್ತದೆ. ಮುಂಗಾರು ಹಂಗಾಮಿಗೂ ಮುನ್ನ ನಡೆಯುವ ಅನ್ನದಾತರ ಹಬ್ಬದ ಖದರ್ ಬೇರೆಯೇ ಆಗಿರುತ್ತದೆ. ಇಂಥ ಕಾರಹುಣ್ಣಿಮೆ ಆದ ನಂತರ ಏಳು ದಿನಗಳ ನಂತರ ವಿಜಯಪುರ ಜಿಲ್ಲೆ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಕಾರಹುಣ್ಣಿಮೆ ಕರಿ ಹರಿಯಲಾಗುತ್ತದೆ. ಕರಿ ಹರಿಯುವ ಮುನ್ನ ಎತ್ತುಗಳನ್ನು ಬೆದರಿಸಲಾಗುತ್ತದೆ. ಎತ್ತುಗಳನ್ನು ಬೆದರಿಸಿ ಹತೋಟಿಗೆ ತರುವುದು ಸಾಹಸದ ಕೆಲಸ. ಈ ಕುರಿತು ವರದಿ ಇಲ್ಲಿದೆ
Updated on:Jun 18, 2025 | 7:57 PM

ವಿಜಯಪುರ ಜಿಲ್ಲೆಯ ಬಬಲೇಶ್ವರ ತಾಲೂಕಿನ ಕಾಖಂಡಕಿ ಗ್ರಾಮದಲ್ಲಿ ಕಾರ ಹುಣ್ಣಿಮೆಯಾದ ಏಳು ದಿನಗಳ ಬಳಿಕ ಕರಿ ಹರಿಯಲಾಗುತ್ತದೆ. ಅದಕ್ಕೂ ಮುನ್ನ ಗ್ರಾಮದ ಯುವಕರ ತಂಡಗಳು ಮದವೇರಿದ ಹೋರಿಗಳ ಎತ್ತುಗಳನ್ನು ಬೆದರಿಸುವ ಪದ್ದತಿ ನಡೆಯುತ್ತದೆ. ವಿವಿಧ ಬಣ್ಣಗಳಿಂದ ಎತ್ತು ಹಾಗೂ ಹೋರಿಗಳನ್ನು ಅಲಂಕಾರ ಮಾಡಿ, ಹಗ್ಗಗಳನ್ನು ಕಟ್ಟಿ ಬೆದರಿಸಿ ಓಡಿಸುತ್ತಾರೆ. ನಂತರ ಅವುಗಳನ್ನು ನಿಯಂತ್ರಣ ಮಾಡುತ್ತಾ ಎಂಜಾಯ್ ಮಾಡುತ್ತಾರೆ.

ಯುವಕರ ತಂಡಗಳು ಬೆದರಿಸುತ್ತಿದ್ದಂತೆ ಎತ್ತುಗಳು ಪ್ರತಿದಾಳಿ ಮಾಡುತ್ತವೆ. ದಾಳಿಯಿಂದ ರಕ್ಷಣೆ ಮಾಡಿಕೊಳ್ಳುತ್ತಲೇ ಅವುಗಳನ್ನು ಮತ್ತೆ ಕೆರಳಿಸುತ್ತಾರೆ. ಅಪಪಾಯಕಾರಿ ಹಾಗೂ ರೋಮಾಂಚನಕಾರಿಯಾಗಿ ಈ ಪದ್ದತಿ ನೂರಾರು ವರ್ಷಗಳಿಂದ ನಡೆದುಕೊಂಡು ಬಂದಿದೆ.

ಹಿಂದಿನ ಕಾಲದಲ್ಲಿ ಓರ್ವ ವ್ಯಕ್ತಿ ತನ್ನ ತಾಯಿಗೆ ಬೇಗ ಊಟ ನೀಡು ಎಂದು ಕೇಳಿದಾಗ ನೀನೇನು ಏಳೂರ ಕರಿ ತಂದಿದ್ದೀಯಾ? ಯಾಕೆ ಅವಸರ ಮಾಡುತ್ತೀಯಾ ಎಂದು ತಾಯಿ ಹೇಳಿದ ಕಾರಣ ಆತ ಸುತ್ತಮುತ್ತಲ ಏಳೂರ ಕರಿಗಳನ್ನು ತಂದು ಊಟ ಮಾಡಿದ್ದನಂತೆ. ಹೀಗಾಗಿ ಕಾರಹುಣ್ಣಿಮೆಯಾದ ಏಳು ದಿನಗಳ ಬಳಿಕ ಕಾಖಂಡಕಿಯಲ್ಲಿ ಕರಿ ಹರಿಯಲಾಗುತ್ತದೆ.

ಪ್ರತಿ ಬಾರಿ ಎತ್ತುಗಳನ್ನು ಬೆದರಿಸುವ ವೇಳೆ ಅವಘಡಗಳು ಸಂಭವಿಸುತ್ತವೆ. ಹಿಂದಿನ ವರ್ಷಗಳಲ್ಲಿ ಹಲವಾರು ಜನರ ಪ್ರಾಣಕ್ಕೆ ಕುತ್ತು ಬಂದ ಘಟನೆಗಳೂ ಸಹ ನಡೆದಿವೆ. ಈ ವರ್ಷವೂ ಸಹ ಅವಘಡಗಳಿಗೆ ಕಾಖಂಡಕಿಯ ಕರಿ ಹರಿಯುವ ಪದ್ದತಿಯ ಆಚರಣೆ ಹೊರತಾಗಿರಲಿಲ್ಲ. ನೆರದ ಜನ ಜಂಗುಳಿಯನ್ನು ಕಂಡು ಬೆದರಿದ ಎತ್ತೊಂದು ಜನರ ಗುಂಪಿನ ಮೇಲೆಯೇ ಎರಗಿ ಎಲ್ಲರನ್ನು ತುಳಿದು ಘಟನೆ ನಡೆಯಿತು. ಯಾವಾಗ ಎತ್ತೊಂದು ಜನರ ಮೇಲೆ ಜಿಗಿದು ಬಿಟ್ಟಿತೋ ಆಗ ಎತ್ತಿನ ಕಾಲಡಿ ಹಲವಾರು ಜನರು ಸಿಕ್ಕು ನರಳಾಡಿದರು.

ನಂತರ ಎತ್ತು ವಾಪಸ್ ಓಡುವಾಗ ಯುವತಿಯೋರ್ವಳ ಮೇಲೆ ಹತ್ತಿಳಿದ ಕಾರಣ ಯುವತಿ ಪ್ರಜ್ಞೆ ತಪ್ಪಿ ಬಿದ್ದಳು. ಆಕೆಯನ್ನು ಅಂಬ್ಯುಲೆನ್ಸ್ ಮೂಲಕ ಆಸ್ಪತ್ರೆಗೆ ರವಾನೆ ಮಾಡಲಾಯಿತು. ಇನ್ನು, ಜಾನುವಾರುಗಳನ್ನು ಬೆದರಿಸುವ ವೇಳೆ ಸ್ವಲ್ಪ ಯಾಮಾರಿದರೂ ಅಪಾಯ ಕಟ್ಟಿಟ್ಟ ಬುತ್ತಿ. ಎತ್ತೊಂದು ಓಡಿ ಬರುವಾಗ ವ್ಯಕ್ತಿಯೋರ್ವ ಮೈಮರೆತು ನಿಂತಿದ್ದನು. ಈತನ ಬಳಿಗೆ ಬಂದ ಎತ್ತು ಕೊಂಬಿನಲ್ಲಿ ಆತನನ್ನು ಎತ್ತಿ ಬೀಸಾಡಿದೆ. ಆದರೆ, ಈ ಬಾರಿ ಯಾರೋಬ್ಬರ ಪ್ರಾಣಕ್ಕೆ ಕುತ್ತು ತರುವ ಘಟನೆಗಳು ನಡೆದಿಲ್ಲ ಎಂಬುದು ಸಮಾಧಾನದ ವಿಚಾರವಾಗಿದೆ.

ಎತ್ತುಗಳನ್ನು ಬೆದರಿಸುವ ಪದ್ಧತಿ ಮುಗಿದ ಬಳಿಕ ಗ್ರಾಮದ ಮಾಲೀಗೌಡರಾದ ಪಾಟೀಲರ ಕುಟುಂಬದಿಂದ ಕರಿ ಹರಿಯಲಾಗುತ್ತದೆ. ಕಂದು ಬಣ್ಣದ ಹಾಗೂ ಬಿಳಿ ಬಣ್ಣದ ಎತ್ತುಗಳನ್ನು ಪಾಟೀಲರ ಮನೆಯಿಂದ ಹಿಮ್ಮುಖವಾಗಿ ಗ್ರಾಮದ ಅಗಸಿಗೆ ತರುತ್ತಾರೆ. ಅಲ್ಲಿ ಪೂಜೆ ನೆರವೇರಿಸಿ ನೈವೇದ್ಯ ಅರ್ಪಿಸಿದ ಬಳಿಕ ಎರಡೂ ಎತ್ತುಗಳನ್ನು ಬಿಡುತ್ತಾರೆ. ಯಾವ ಬಣ್ಣದ ಎತ್ತು ಮೊದಲು ಮನೆ ಸೇರುತ್ತದೆಯೋ ಆ ಬಣ್ಣದ ಬೆಳೆಗಳು ಈ ಬಾರಿ ಹುಲುಸಾಗಿ ಬೆಳೆಯುತ್ತವೆ ಎಂಬ ನಂಬಿಕೆಯಿದೆ.

ಕರಿ ಹರಿಯೋದು, ಜಾನುವಾರುಗಳ ಬೆದರಿಸುವುದನ್ನು ವೀಕ್ಷಿಸಲು ಸುತ್ತಮುತ್ತಲ ಜಿಲ್ಲೆಗಳ ಹಾಗೂ ನೆರೆಯ ಮಹರಾಷ್ಟ್ರ ರಾಜ್ಯದ ಜನರು ಆಗಮಿಸುತ್ತಾರೆ. ಈ ವೇಳೆ ಹೆಚ್ಚಿನ ಪೊಲೀಸರನ್ನು ಭದ್ರತೆಗಾಗಿ ನಿಯೋಜನೆ ಮಾಡಲಾಗಿರುತ್ತದೆ.
Published On - 7:57 pm, Wed, 18 June 25

ನನ್ನ ಹೆಸರು ಅಶೋಕ ಯಡಳ್ಳಿ, ಟಿವಿ9 ಕನ್ನಡ ಸುದ್ದಿ ವಾಹಿನಿಯಲ್ಲಿ ಕಳೆದ 2012 ರಿಂದ ವಿಜಯಪುರ ಜಿಲ್ಲಾ ಪ್ರತಿನಿಧಿಯಾಗಿ ಸೇವೆ ಸಲ್ಲಿಸುತ್ತಿದ್ದೇನೆ. ಟಿವಿ9 ಸಂಸ್ಥೆಗೂ ಮುನ್ನ ಹೈದರಾಬಾದಿನ ರಾಮೋಜಿ ರಾವ್ ಪೀಲ್ಮ್ ಸಿಟಿಯಲ್ಲಿದ್ದ ಈಟಿವಿ ಕನ್ನಡ ಮನರಂಜನೆ ಹಾಗೂ ಸುದ್ದಿ ವಾಹಿನಿಯಲ್ಲಿ ಸೇವೆ ಸಲ್ಲಿಸುತ್ತಿದ್ದೆ. ಇದು ನನ್ನ ಕೆಲಸದ ಬಗ್ಗೆ ಹೇಳಿರೋ ಮಾಹಿತಿಯಾಗಿದ್ದು ವೈಯುಕ್ತಿಕ ಮಾಹಿತಿ ಬಗ್ಗೆ ಹೇಳದಾದರೆ. ನಾನು ಮೂಲತಃ ಧಾರವಾಡ ಜಿಲ್ಲೆಯವ. ಧಾರವಾಡ ತಾಲೂಕಿನ ಅಮ್ಮಿನಬಾವಿ ಗ್ರಾಮ ನಮ್ಮೂರು. ತಂದೆ ತಾಯಿ ಸಹೋದರ ಸಹೋದರಿಯರ ತುಂಬು ಕುಟುಂಬ. ಮೂಲತಃ ಕೃಷಿ ಕುಟುಂಬವಾಗಿದ್ದು, ಹಿರಿಯರಿಂದ ಬಂದ ಜಮೀನುಗಳಿವೆ. ಪ್ರಾಥಮಿಕ ಶಿಕ್ಷಣ ನಮ್ಮೂರಲ್ಲೇ ಬಳಿಕ ಹೈಸ್ಕೂಲ್ ನಿಂದ ಹಿಡಿದು ಪಿಜಿವರೆಗೂ ಧಾರವಾಡ. ಕರ್ನಾಟಕ ವಿಶ್ವವಿದ್ಯಾಲಯದಿಂದ ಪತ್ರಿಕೋಧ್ಯಮ ಮತ್ತು ಸಮೂಹ ಸಂವಹನ ವಿಭಾಗದಿಂದ ಸ್ನಾತಕೋತ್ತರ ಪದವಿ ಪಡೆದಿದ್ದೇನೆ. ಟಿವಿ9 ನಲ್ಲಿ ಹಲವಾರು ಉತ್ತಮ ವರದಿಗಳನ್ನು ನೀಡಿದ ಹೆಮ್ಮೆ ತೃಪ್ತಿ ನನಗಿದೆ. ಆಲಮೇಲದ ವಿದ್ಯಾರ್ಥಿನಿಯರ ಮೇಲಿನ ಲೈಂಗಿಕ ದೌರ್ಜನ್ಯ ಬಹಿರಂಗ ಮಾಡಿದ್ದು, ವಿಜಯಪುರ ಬಾಗಲಕೋಟೆಯಲ್ಲಿ ಕೊಳವೆ ಬಾವಿಯಲ್ಲಿ ಬಿದ್ದಿದ್ದ ಮಕ್ಕಳ ಕುರಿತ ವರದಿ. ಹಾವಿನ ಸೇಡಿಗೆ ಒಳಗಾಗಿದ್ದ ಯುವಕನ ಸಮಸ್ಯೆ ಬಗೆ ಹರಿಸಿದ್ದು. ಉಷ್ಣ ವಿದ್ಯುತ್ ಸ್ಥಾವರದ ಗಲಾಟೆ ಹೀಗೆ ಹಲವಾರು ವಿಶೇಷ ಸುದ್ದಿಗಳು, ಚುನಾವಣೆ, ರಾಜಕೀಯ, ಕ್ರೀಡೆ, ಹೀಗೂ ಉಂಟೇ, ವಾರೆಂಟ್, ಮಾರುವೇಷ, ಸಾಧನೆ, ಕೃಷಿ ಹೀಗೆ ಅನೇಕ ವಿಚಾರಗಳ ಕುರಿತ ಸುದ್ದಿಗಳಿಗೆ ನ್ಯಾಯ ಒದಗಿಸಿದ್ದೇನೆಂದು ನಂಬಿದ್ದೇನೆ. ಭವಿಷ್ಯದಲ್ಲಿ ಇನ್ನೂ ಹೆಚ್ಚಿನ ಉತ್ತಮ ವರದಿಗಳನ್ನು ಮಾಡುವ ಹಂಬಲ - ಆಸಕ್ತಿಯಿದೆ. ಕ್ರೀಡೆ, ಸಾಮಾಜಿಕ, ಕೃಷಿಯಲ್ಲಿ ಹೆಚ್ಚಿನ ಆಸಕ್ತಿಯಿದೆ. ಧನ್ಯವಾದಗಳು.......
Read More