ಕೋಮುದ್ವೇಷ, ಪ್ರಚೋದಿಸುವವರ ವಿರುದ್ಧ ಕ್ರಮ: ಮೊದಲ ಭೇಟಿಯಲ್ಲೇ ಗುಡುಗಿದ ದಕ್ಷಣ ಕನ್ನಡ ಉಸ್ತುವಾರಿ ಸಚಿವ

ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ನೀಡಿದ್ದಕ್ಕೆ ಖುಷಿಯಾಗಿದೆ. ಯೂತ್ ಕಾಂಗ್ರೆಸ್ ಸಮಯದಿಂದಲೂ ನಾನು ಇಲ್ಲಿಗೆ ಬರುತ್ತಿದ್ದೇನೆ ಎಂದು ದಕ್ಷಿಣ ಕನ್ನಡ ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್​ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಆಗಮಿಸಿದ ಅವರು ‘ಜಿಲ್ಲೆ ಜನರ ನಾಡಿ‌ಮಿಡಿತ ಸ್ವಲ್ಪವಾದರೂ ನನಗೆ ಗೊತ್ತಿದೆ ಎಂದರು.

ಕೋಮುದ್ವೇಷ, ಪ್ರಚೋದಿಸುವವರ ವಿರುದ್ಧ ಕ್ರಮ: ಮೊದಲ ಭೇಟಿಯಲ್ಲೇ ಗುಡುಗಿದ ದಕ್ಷಣ ಕನ್ನಡ ಉಸ್ತುವಾರಿ ಸಚಿವ
ದಿನೇಶ್​ ಗುಂಡೂರಾವ್​
ಕಿರಣ್ ಹನುಮಂತ್​ ಮಾದಾರ್

Updated on: Jun 11, 2023 | 11:41 AM

ದಕ್ಷಿಣ ಕನ್ನಡ: ‘ಜಿಲ್ಲಾ ಉಸ್ತುವಾರಿ ನೀಡಿದ್ದಕ್ಕೆ ಖುಷಿಯಾಗಿದೆ. ಯೂತ್ ಕಾಂಗ್ರೆಸ್(Congress) ಸಮಯದಿಂದಲೂ ನಾನು ಇಲ್ಲಿಗೆ ಬರುತ್ತಿದ್ದೇನೆ ಎಂದು ದಕ್ಷಿಣ ಕನ್ನಡ(Dakshina Kannada) ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ (Dinesh Gundu Rao)​ ಹೇಳಿದರು. ಜಿಲ್ಲಾ ಉಸ್ತುವಾರಿ ಸಚಿವರಾದ ಮೇಲೆ ಮೊದಲ ಬಾರಿಗೆ ಆಗಮಿಸಿದ ಅವರು ‘ಜಿಲ್ಲೆ ಜನರ ನಾಡಿ‌ಮಿಡಿತ ಸ್ವಲ್ಪವಾದರೂ ನನಗೆ ಗೊತ್ತಿದೆ. ದಕ್ಷಿಣ ಕನ್ನಡ ಈ ರಾಜ್ಯದ ಅತ್ಯಂತ ಪ್ರತಿಷ್ಠಿತ ಜಿಲ್ಲೆ.​ ಆಗಾಗ ಬಂದು ಜನರ ಜೊತೆ ಸಂಪರ್ಕದಲ್ಲಿ ಇರುತ್ತೇನೆ, ಅಭಿವೃದ್ಧಿ, ಯೋಜನೆಗಳ ಅನುಷ್ಠಾನಕ್ಕೆ ಪ್ರಥಮ ಆದ್ಯತೆ ನೀಡುತ್ತೇನೆ. ಜೊತೆಗೆ ಜಿಲ್ಲೆಯಲ್ಲಿ ಕಾನೂನು ಸುವ್ಯವಸ್ಥೆ ಸರಿಯಾಗಿ ಇರಬೇಕು. ಕಾನೂನು‌ ಉಲ್ಲಂಘಿಸಿದವರ ಮೇಲೆ ಪೊಲೀಸರು ಕ್ರಮ ಕೈಗೊಳ್ಳಬೇಕು ಎಂದರು.

ಮಂಗಳೂರಿನ ಸರ್ಕ್ಯುಟ್ ಹೌಸ್​ನಲ್ಲಿ ಸುದ್ದಿಗೋಷ್ಟಿ ನಡೆಸಿ ಮಾತನಾಡಿದ ಸಚಿವ ದಿನೇಶ್ ಗುಂಡೂರಾವ್ ‘ಜಿಲ್ಲೆಗೆ ಜನ ಬರಬೇಕು, ಇಲ್ಲಿ ಬಂಡವಾಳ ಹೂಡಬೇಕು. ಇನ್ನು ಇಲ್ಲಿ ಅನೇಕ ಸಂಧರ್ಭದಲ್ಲಿ ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ. ಪೊಲೀಸರು ಪಕ್ಷಪಾತ ಮಾಡದೇ ಕಾನೂನು‌ ಉಲ್ಲಂಘಿಸಿದವರ ಮೇಲೆ ಕ್ರಮ ತೆಗೆದುಕೊಳ್ಳಬೇಕು. ಪ್ರಚೋದನೆ, ಬೆಂಕಿ ಹಚ್ಚೋ ಕೆಲಸ ಸುಲಭ, ಅದನ್ನ ಆರಿಸೋದು ಕಷ್ಟ. ಹೀಗಾಗಿ ಅಧಿಕಾರಿಗಳು ಮತ್ತು ಜಿಲ್ಲಾಡಳಿತ ಸರಿಯಾಗಿ ಕೆಲಸ ಮಾಡಬೇಕು. ನಾನು ಯಾವುದೇ ಪಕ್ಷ, ಸಂಘಟನೆ ಅಂತ ಹೇಳಲ್ಲ, ಎಲ್ಲರೂ ಸರಿಯಿರಬೇಕು ಎಂದಿದ್ದಾರೆ. ಯಾವುದೇ ಜಾತಿ ಧರ್ಮದ ತಾರತಮ್ಯ ಇಲ್ಲದೇ ಜನರು‌ ಬದುಕಬೇಕು. ಮಳೆಗಾಲಕ್ಕೆ ಜಿಲ್ಲಾಡಳಿತ ಸಕಲ ಸಿದ್ದತೆ ಮಾಡಿಕೊಳ್ಳಬೇಕು‌. ಇವತ್ತು ಸಭೆ ಕರೆದಿದ್ದೇನೆ, ಮುಂದಿನ ವಾರ ಮತ್ತೆ ಸಭೆ ಮಾಡ್ತೇನೆ. ಪ್ರಕೃತಿ ವಿಕೋಪಗಳ ಸಮಸ್ಯೆ ಬಗ್ಗೆ ಮಾಹಿತಿ ಪಡೀತಿನಿ. ನಮ್ಮ ಯೋಜನೆಗಳ ಜಾರಿ ಬಗ್ಗೆಯೂ ನಾನು ಸಭೆ ಮಾಡ್ತೇನೆ ಎಂದರು.

ಇದನ್ನೂ ಓದಿ:ಅದೃಷ್ಟದ ಬೆನ್ನುಹತ್ತಿದ ದಕ್ಷಿಣ ಕನ್ನಡ ಜಿಲ್ಲಾ ಬಿಜೆಪಿ, ಅಲ್ಲಿ ಮಾಡಿರುವುದೇನು?

ಕೋಮುದ್ವೇಷ, ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ

ಇನ್ನು ಜಿಲ್ಲೆಯಲ್ಲಿ ಕೋಮುದ್ವೇಷ, ಪ್ರಚೋದಿಸುವವರ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ. ಗೃಹ ಸಚಿವರು ಆ್ಯಂಟಿ‌ ಕಮ್ಯುನಲ್​ ವಿಂಗ್ ಸ್ಥಾಪಿಸುವುದಾಗಿ ಈಗಾಗಲೇ ಹೇಳಿದ್ದಾರೆ. ಇದು ದ್ವೇಷ ಸಾಧಿಸೋ ವಿಂಗ್ ಆಗಬಾರದು, ಸಾಮರಸ್ಯ ಕಾಪಾಡೋ ದಳ ಆಗಬೇಕು ಎಂದರು. ಇದೇ ವೇಳೆ ಬಿಜೆಪಿ ಅವಧಿಯಲ್ಲಿ ಕೆಲ ಸಂಘ ಸಂಸ್ಥೆಗಳಿಗೆ ಭೂಮಿ ಪರಭಾರೆ ವಿಚಾರ ‘ಭೂಮಿ ಹಂಚಿಕೆ ವೇಳೆ ಕೆಲ ಲೋಪದೋಷಗಳು ಆಗಿರುವ ಮಾಹಿತಿ ಇದೆ. ಕಂದಾಯ ಇಲಾಖೆ ಈ ಲೋಪದೋಷಗಳನ್ನು ಪರಿಶೀಲಿಸಿ ಸರಿಪಡಿಸಬೇಕು ಎಂದು ಮಂಗಳೂರಿನಲ್ಲಿ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್​​​ ಹೇಳಿದರು.

ಇನ್ನು ಈ ಸಂದರ್ಭದಲ್ಲಿ ಶಕ್ತಿ ಯೋಜನೆ ಕುರಿತು ಮಾತನಾಡಿದ ಅವರು‘ಇವತ್ತು ಶಕ್ತಿ ಯೋಜನೆ ಜಾರಿಯಾಗಲಿದೆ, ರಾಜ್ಯದ ಮಹಿಳೆಯರಿಗೆ ಉಪಯೋಗಕ್ಕೆ ಬರಲಿದೆ. ಇನ್ನು ಮಂಗಳೂರಿನಲ್ಲಿ ಹೆಚ್ಚಾಗಿ ಖಾಸಗಿ ಬಸ್​ಗಳಿದ್ದು, ಆ ಕ್ಷೇತ್ರಕ್ಕೆ ಈ ಯೋಜನೆ ವಿಸ್ತರಿಸಲು ಆಗಲ್ಲ. ಮಂಗಳೂರಿಗೆ ಅಂತ ವಿಶೇಷ ವ್ಯವಸ್ಥೆ ಮಾಡಲು‌ ಆಗಲ್ಲ. ಈ ಕುರಿತು ಹೆಚ್ಚುವರಿ ಸರ್ಕಾರಿ ಬಸ್ ಓಡಿಸೋ ಬಗ್ಗೆ ಯೋಚನೆ ಮಾಡ್ತೇವೆ. ಈ ಬಗ್ಗೆ ‌ಮುಂದಿನ ಸಭೆಯಲ್ಲಿ ನಾವು ಚರ್ಚೆ ಮಾಡುವುದಾಗಿ ಹೇಳಿದರು.

ಇನ್ನಷ್ಟು ರಾಜಕೀಯ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

Loading...
Unable to load recommendations.
Follow Us