ಕೇಂದ್ರದ ವಿರುದ್ಧ ಪ್ರತಿಭಟನೆಗೆ 20 ಕೋಟಿ ವೆಚ್ಚದಲ್ಲಿ ಜಾಹೀರಾತು; ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು

ಅನುದಾನದಲ್ಲಿ ತಾರತಮ್ಯ ಖಂಡಿಸಿ ನಾಳೆ ದೆಹಲಿಯ ಜಂತರ್ ಮಂತರ್​ನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಪ್ರತಿಭಟನೆ ನಡೆಯಲಿದೆ. ಸಿಎಂ, ಡಿಸಿಎಂ, ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಈ ಬಗ್ಗೆ ಸರ್ಕಾರದ ಲೋಗೋ ಬಳಸಿ ಜಾಹೀರಾತು ನೀಡಲಾಗಿದ್ದು, ಇದನ್ನು ವಿರೋಧಿಸಿದ ಬಿಜೆಪಿ, ರಾಜ್ಯಪಾಲರಿಗೆ ದೂರು ನೀಡಿದೆ.

ಕೇಂದ್ರದ ವಿರುದ್ಧ ಪ್ರತಿಭಟನೆಗೆ 20 ಕೋಟಿ ವೆಚ್ಚದಲ್ಲಿ ಜಾಹೀರಾತು; ರಾಜ್ಯ ಸರ್ಕಾರದ ವಿರುದ್ಧ ರಾಜ್ಯಪಾಲರಿಗೆ ಬಿಜೆಪಿ ದೂರು
ದೆಹಲಿ ಪ್ರತಿಭಟನೆಗೆ ಕರ್ನಾಟಕ ಸರ್ಕಾರದಿಂದ ಜಾಹೀರಾತು; ರಾಜ್ಯಪಾಲರಿಗೆ ಬಿಜೆಪಿಯಿಂದ ದೂರು
Edited By: Rakesh Nayak Manchi

Updated on: Feb 06, 2024 | 4:03 PM

ಬೆಂಗಳೂರು, ಫೆ.6: ಅನುದಾನದಲ್ಲಿ ತಾರತಮ್ಯ ಖಂಡಿಸಿ ನಾಳೆ ದೆಹಲಿಯ ಜಂತರ್ ಮಂತರ್​ನಲ್ಲಿ ಕರ್ನಾಟಕ ಕಾಂಗ್ರೆಸ್ ಸರ್ಕಾರದಿಂದ ಪ್ರತಿಭಟನೆ (Congress Govt Protest) ನಡೆಯಲಿದೆ. ಸಿಎಂ, ಡಿಸಿಎಂ, ಸಚಿವರು, ಶಾಸಕರು ಭಾಗಿಯಾಗಲಿದ್ದಾರೆ. ಈ ನಡುವೆ ಸರ್ಕಾರದ ಲೋಗೋ ಬಳಸಿ ಜಾಹೀರಾತು ನೀಡಿರುವುದನ್ನು ವಿರೋದಿಸಿ ರಾಜ್ಯ ಬಿಜೆಪಿ (BJP) ಘಟಕವು ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಅವರಿಗೆ ದೂರು ನೀಡಿದೆ.

ಬಿಜೆಪಿ ರಾಜ್ಯ ಪ್ರಧಾನ ಕಾರ್ಯದರ್ಶಿ ಪಿ. ರಾಜೀವ್, ರಾಜ್ಯ ಉಪಾಧ್ಯಕ್ಷ ಹರತಾಳು ಹಾಲಪ್ಪ ಮತ್ತು ವಿಧಾನ ಪರಿಷತ್ ಸದಸ್ಯ ಛಲವಾದಿ ನಾರಾಯಣಸ್ವಾಮಿ ಅವರನ್ನೊಳಗೊಂಡ ನಿಯೋಗವು ಇಂದು ರಾಜಭವನಕ್ಕೆ ತೆರಳಿ ರಾಜ್ಯಪಾಲರ ಅನುಪಸ್ಥಿತಿಯಲ್ಲಿ ಕಾರ್ಯದರ್ಶಿಗೆ ದೂರು ಸಲ್ಲಿಕೆ ಮಾಡಿದೆ.

ಇದನ್ನೂ ಓದಿ: ಕರ್ನಾಟಕ ಕೈ ಶಾಸಕರ ಪ್ರತಿಭಟನೆ ಲೋಕಸಭೆಯಲ್ಲಿ ಪ್ರಸ್ತಾಪ: ನಿರ್ಮಲಾ ಸೀತಾರಾಮನ್ ಹೇಳಿದ್ದಿಷ್ಟು

ಬಳಿಕ ಮಾತನಾಡಿದ ಪಿ. ರಾಜೀವ್, ದೆಹಲಿ ಪ್ರತಿಭಟನೆ ಯಾತ್ರೆಗೆ ರಾಜ್ಯ ಸರ್ಕಾರ ಜಾಹೀರಾತು ನೀಡಿದೆ. ಕರ್ನಾಟಕ ಸರ್ಕಾರದ ಲಾಂಛನ ಬಳಸಿಕೊಂಡು ಜಾಹೀರಾತು ನೀಡಲಾಗಿದೆ. ನನಗೆ ಇರುವ ಮಾಹಿತಿ ಪ್ರಕಾರ ಸರ್ಕಾರ ಈ ಜಾಹೀರಾತಿಗಾಗಿ 20 ಕೋಟಿ ರೂ. ಖರ್ಚು ಮಾಡಿದೆ. ಬರದ ವೇಳೆ ಬಿಡಿಗಾಸೂ ಬಿಡುಗಡೆ ಮಾಡದ ಸರ್ಕಾರ ಸಾರ್ವಜನಿಕ ಹಣ ದುರ್ಬಳಕೆ ಮಾಡಿಕೊಂಡಿದೆ ಎಂದು ಆರೋಪಿಸಿದರು.

ಸಾರ್ವಜನಿಕರ ಹಣವನ್ನು ವೈಯಕ್ತಿಕ ತೆವಲಿನ ಕಾರ್ಯಕ್ರಮಕ್ಕೆ ದುರುಪಯೋಗ ಮಾಡಿರುವುದು ಸಂವಿಧಾನ ವಿರೋಧಿಯಾಗಿದೆ. ಸರ್ಕಾರದ ವಿರುದ್ಧ ಹಾಗೂ ಮಾಹಿತಿ ಮತ್ತು ಪ್ರಚಾರ ಇಲಾಖೆಯ ವಿರುದ್ಧ ಕೂಡಲೇ ಕ್ರಮ ಜರುಗಿಸಬೇಕು. ಜಾಹೀರಾತಿಗೆ ಖರ್ಚು ಮಾಡಿದ ಹಣವನ್ನು ಸಿಎಂ ಹಾಗೂ ವಾರ್ತಾ ಇಲಾಖೆ ಆಯುಕ್ತರ ಖಾಸಗಿ ಖಾತೆಯಿಂದ ವಾಪಸ್ ಪಡೆಯಬೇಕು ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:01 pm, Tue, 6 February 24

ಕಿರಣ್​ ಹನಿಯಡ್ಕ
Follow Us