ಶೆಟ್ಟರ್ ಪಕ್ಷ ತೊರೆದಿದ್ದಕ್ಕೆ ಡಿಕೆ ಶಿವಕುಮಾರ್​ಗೆ ಎಚ್ಚರಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ

| Updated By: ಗಣಪತಿ ಶರ್ಮ

Updated on: Jan 26, 2024 | 9:24 AM

ಜಗದೀಶ್ ಶೆಟ್ಟರ್ ಅವರನ್ನು ಕಾಂಗ್ರೆಸ್​ಗೆ ಕರೆತರುವಲ್ಲಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್ ಪ್ರಮುಖ ಪಾತ್ರ ವಹಿಸಿದ್ದರು. ಇದೀಗ ಶೆಟ್ಟರ್ ಕೆಲವೇ ತಿಂಗಳುಗಳಲ್ಲಿ ಮರಳಿ ಬಿಜೆಪಿ ಸೇರಿರುವುದು ಒಂದರ್ಥದಲ್ಲಿ ಡಿಕೆ ಶಿವಕುಮಾರ್​ಗೆ ಹಿನ್ನಡೆಯಾದಂತೆಯೇ ಎನ್ನಲಾಗುತ್ತಿದೆ.

ಶೆಟ್ಟರ್ ಪಕ್ಷ ತೊರೆದಿದ್ದಕ್ಕೆ ಡಿಕೆ ಶಿವಕುಮಾರ್​ಗೆ ಎಚ್ಚರಿಕೆ ಕೊಟ್ಟ ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ & ಡಿಕೆ ಶಿವಕುಮಾರ್
Follow us on

ಬೆಂಗಳೂರು, ಜನವರಿ 26: ಜಗದೀಶ್ ಶೆಟ್ಟರ್ (Jagadish Shettar) ಪಕ್ಷ ತೊರೆದು ಮರಳಿ ಬಿಜೆಪಿ (BJP) ಸೇರ್ಪಡೆಯಾಗಿರುವ ವಿಚಾರವಾಗಿ ಕೆಪಿಸಿಸಿ ಅಧ್ಯಕ್ಷರೂ ಆಗಿರುವ ಡಿಸಿಎಂ ಡಿಕೆ ಶಿವಕುಮಾರ್​ಗೆ (DK Shivakumar) ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kharge) ಬಹಿರಂಗವಾಗಿಯೇ ಎಚ್ಚರಿಕೆ ನೀಡಿದ್ದಾರೆ. ಗಣರಾಜ್ಯೋತ್ಸವ ಪ್ರಯುಕ್ತ ಬೆಂಗಳೂರಿನ ಕೆಪಿಸಿಸಿ ಕಚೇರಿಯಲ್ಲಿ ಶುಕ್ರವಾರ ಅವರು ಧ್ವಜಾರೋಹಣ ನೆರವೇರಿಸಿದರು. ಇದಕ್ಕೂ ಮುನ್ನ ಅವರು ಡಿಕೆ ಶಿವಕುಮಾರ್​​ಗೆ ಎಚ್ಚರಿಕೆ ನೀಡಿದ್ದಾರೆ.

ಪಕ್ಷಕ್ಕೆ ಯಾರನ್ನಾದರೂ ಸೇರಿಸಿಕೊಳ್ಳುವಾಗ ಯೋಚಿಸಬೇಕು. ಅವರ ಹಿನ್ನೆಲೆ, ಸಿದ್ಧಾಂತ ಏನೆಂದು ಅರಿತುಕೊಳ್ಳಬೇಕು. ಪಕ್ಷಕ್ಕೆ ನಿಷ್ಠಾವಂತರು ಮಾತ್ರ ಬರಬೇಕು. ಹೀಗೆ ಬಂದರು, ಹಾಗೆ ಹೋದರು ಅಂತ ಆಗಬಾರದು. ಅವರ ತತ್ವಗಳ ಆಧಾರದ ಮೇಲೆ ಸೇರ್ಪಡೆ ಮಾಡಿಕೊಳ್ಳಿ ಎಂದು ರಾಜ್ಯ ನಾಯಕರಿಗೆ ಖರ್ಗೆ ಕಿವಿಮಾತು ಹೇಳಿದರು. ಜತೆಗೆ, ಪರೋಕ್ಷವಾಗಿ ಶೆಟ್ಟರ್ ಬಗ್ಗೆ ಅಸಮಧಾನ ವ್ಯಕ್ತಪಡಿಸಿದರು.

ಇನ್ನು ಧ್ವಜಾರೋಹಣ ನೆರವೇರಿಸಿ ನಂತರ ಮಾತನಾಡಿದ ಖರ್ಗೆ, ಬಿಜೆಪಿ ವಿರುದ್ಧ ವಾಗ್ದಾಳಿ ನಡೆಸಿದರು. ಜನವರಿ 26 ಭಾರತದ ಇತಿಹಾಸದಲ್ಲಿ ವಿಶೇಷ ದಿನ. ಸಂವಿಧಾನ ಇಲ್ಲದಿದ್ರೆ ಪ್ರಜಾಪ್ರಭುತ್ವ ಉಳಿಯುತ್ತಿರಲಿಲ್ಲ. ಸಂವಿಧಾನ ತಿರುಚುವ ಕುತಂತ್ರವನ್ನು ಆರ್​ಎಸ್​ಎಸ್, ಬಿಜೆಪಿ ಮಾಡುತ್ತಿವೆ. ಸ್ವಾಯತ್ತ ಸಂಸ್ಥೆಗಳನ್ನ ನಾಶ ಮಾಡಲು ಬಿಜೆಪಿ ಪ್ರಯತ್ನಿಸುತ್ತಿದೆ. ಪ್ರಧಾನಿ ಮೋದಿ ಆರ್​ಎಸ್​ಎಸ್ ಕೈಗೊಂಬೆಯಾಗಿ ನಡೆದುಕೊಂಡಿದ್ದಾರೆ. ಇದರಿಂದ ನ್ಯಾಯಾಂಗ, ಜಾತ್ಯತೀತ ತತ್ವಕ್ಕೆ ದೊಡ್ಡ ಪೆಟ್ಟು ಬಿದ್ದಿದೆ ಎಂದರು.

ದನ್ನೂ ಓದಿ: ಶೆಟ್ಟರ್​​ ಬಿಜೆಪಿಗೆ ಮರಳಿದ ಬೆನ್ನಲ್ಲೇ ಸವದಿ ಜತೆ ಮಾತುಕತೆ ನಡೆಸಿದ ಡಿಕೆಶಿ

ಇವತ್ತು ಸಂವಿಧಾನವನ್ನು ಮುನ್ನಡೆಸುತ್ತಿರುವ ಜನ ಸರಿ ಇಲ್ಲ. ದೇಶದಲ್ಲಿ ಸ್ವಾತಂತ್ರ್ಯ ಬಂದ ದಿನದಿಂದ 2014ರವರೆಗೆ 55 ಲಕ್ಷ ಕೋಟಿ ರೂಪಾಯಿ ಸಾಲ ಇತ್ತು. ಒಂದು ಕೋಟಿ ಐವತ್ತು ಲಕ್ಷದಷ್ಟು ಸಾಲ ಇವತ್ತು ಹೆಚ್ಚಾಗಿದೆ. ಅನುಭವದಿಂದ ದೇಶಕ್ಕೆ ಒಳ್ಳೆಯ ಕೆಲಸವನ್ನು ನಮ್ಮ ನಾಯಕರು ಮಾಡಿಕೊಟ್ಟಿದ್ದಾರೆ. ನಮ್ಮ ಯುವಕರಿಗೆ ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನ ಕಷ್ಟ ಇದೆ ಎಂದು ಖರ್ಗೆ ಹೇಳಿದರು.

ಎಲ್ಲರ ಓಟಿಗೂ ಒಂದೇ ಬೆಲೆ. ನನ್ನ ಓಟಿಗೂ ಒಂದೇ ಬೆಲೆ ಟಾಟಾ ಬಿರ್ಲಾ ಓಟಿಗೂ ಒಂದೇ ಬೆಲೆ. ಆದರೆ ಕೆಲವರು ತಾವೇ ಎಲ್ಲ ಅಂತ ಹೇಳಿಕೊಂಡು ತಿರುಗುತ್ತಿದ್ದಾರೆ. ಸಂವಿಧಾನ ಹಾಗೂ ಪ್ರಜಾಪ್ರಭುತ್ವ ಕಾಪಾಡಲು ನಾವೆಲ್ಲರೂ ಒಗ್ಗಟ್ಟಾಗಿ ಇರಬೇಕು ಎಂದು ಖರ್ಗೆ ಕರೆ ನೀಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ