ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ: ಇಂದು ಬೆಂಗಳೂರಿನಲ್ಲಿ ಅಮಿತ್ ಶಾ ಮಹತ್ವದ ಸಭೆ

| Updated By: Ghanashyam D M | ಡಿ.ಎಂ.ಘನಶ್ಯಾಮ

Updated on: May 03, 2022 | 7:18 AM

ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ‘ಚಾಣಕ್ಯ’ ಅಮಿತ್ ಶಾ (BJP Leader Amit Shah) ಮಂಗಳವಾರ ಕರ್ನಾಟಕಕ್ಕೆ ಭೇಟಿ ನೀಡಿದ್ದು, ಪಕ್ಷದ ಹಿರಿಯ ನಾಯಕರು ಮತ್ತು ವಿವಿಧ ಮೋರ್ಚಾಗಳ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ.

ವಿಧಾನಸಭಾ ಚುನಾವಣೆಗೆ ಬಿಜೆಪಿ ಸಿದ್ಧತೆ: ಇಂದು ಬೆಂಗಳೂರಿನಲ್ಲಿ ಅಮಿತ್ ಶಾ ಮಹತ್ವದ ಸಭೆ
ಕೇಂದ್ರ ಗೃಹ ಸಚಿವ ಅಮಿತ್ ಶಾ
Follow us on

ಬೆಂಗಳೂರು: ಕೇಂದ್ರ ಗೃಹ ಸಚಿವ ಮತ್ತು ಬಿಜೆಪಿ ‘ಚಾಣಕ್ಯ’ ಅಮಿತ್ ಶಾ (BJP Leader Amit Shah) ಮಂಗಳವಾರ ಕರ್ನಾಟಕಕ್ಕೆ ಭೇಟಿ ನೀಡಿದ್ದು, ಪಕ್ಷದ ಹಿರಿಯ ನಾಯಕರು ಮತ್ತು ವಿವಿಧ ಮೋರ್ಚಾಗಳ ನಾಯಕರೊಂದಿಗೆ ಮಹತ್ವದ ಸಭೆ ನಡೆಸಲಿದ್ದಾರೆ. ಈ ಸಭೆಗಳಲ್ಲಿ ಮುಂದಿನ ವರ್ಷ, ಅಂದರೆ 2023ರಲ್ಲಿ ನಡೆಯಲಿರುವ ಕರ್ನಾಟಕ ವಿಧಾನಸಭೆ ಚುನಾವಣೆಯ ಸಿದ್ಧತೆಯ ಪರಾಮರ್ಶೆ ನಡೆಸಲಿದ್ದಾರೆ. ವಿಧಾನಸಭೆಗೆ ಬಿಜೆಪಿ ಅನುಸರಿಸಬೇಕಾದ ಕಾರ್ಯತಂತ್ರಗಳ ಮಾರ್ಗಸೂಚಿಯನ್ನೂ ಅವರು ಸಲಹೆ ಮಾಡಲಿದ್ದಾರೆ. ದೆಹಲಿಯಿಂದ ವಿಶೇಷ ವಿಮಾನದ ಮೂಲಕ ಮಧ್ಯರಾತ್ರಿ ಬೆಂಗಳೂರಿನ ಎಚ್​ಎಎಲ್​ ವಿಮಾನ ನಿಲ್ದಾಣಕ್ಕೆ ಅಮಿತ್ ಶಾ ಆಗಮಿಸಿದರು. ವಿಮಾನ ನಿಲ್ದಾಣದಲ್ಲಿ ಅಮಿತ್ ಶಾ ಅವರನ್ನು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಗೃಹ ಸಚಿವ ಆರಗ ಜ್ಞಾನೇಂದ್ರ, ಬಿಜೆಪಿ ಕರ್ನಾಟಕ ಉಸ್ತುವಾರಿ ಅರುಣ್ ಸಿಂಗ್, ಕೇಂದ್ರ ಸಮಿತಿಯ ನಾಯಕ ಸಿ.ಟಿ ರವಿ, ಸಚಿವರಾದ ನಾರಾಯಣಗೌಡ, ಕೇಂದ್ರ ಸಚಿವ ಪ್ರಲ್ಹಾದ ಜೋಷಿ ಮತ್ತು ಸಂಸದ ತೇಜಸ್ವಿ ಸೂರ್ಯ ಸ್ವಾಗತಿಸಿದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಅಧಿಕೃತ ಕಾರ್ಯಕ್ರಮ ಮತ್ತು ಪಕ್ಷದ ಕಾರ್ಯಕ್ರಮದಲ್ಲಿ ಅಮಿತ್ ಶಾ ಪಾಲ್ಗೊಳ್ಳಲಿದ್ದಾರೆ. ಅಮಿತ್ ಶಾ ಉಪಸ್ಥಿತಿಯಲ್ಲಿ ಮಧ್ಯಾಹ್ನ 3 ಗಂಟೆಯಿಂದ ಸಂಜೆ 4 ಗಂಟೆಯವರೆಗೆ ಬೆಂಗಳೂರಿನ ಖಾಸಗಿ ಹೊಟೆಲ್​ನಲ್ಲಿ ಬಿಜೆಪಿ ರಾಜ್ಯ ಘಟಕದ ವಿಶೇಷ ಸಭೆ ನಡೆಯಲಿದೆ. ಈ ಸಭೆಯಲ್ಲಿ ಕೋರ್ ಕಮಿಟಿ ಸದಸ್ಯರು, ರಾಜ್ಯ ಪದಾಧಿಕಾರಿಗಳು, ಮೋರ್ಚಾಗಳ ಮುಖಂಡರು ಸೇರಿ 60 ಪ್ರಮುಖರು ಪಾಲ್ಗೊಳ್ಳಲಿದ್ದಾರೆ. ಸಭೆಯಲ್ಲಿ ಬಿಜೆಪಿಯ ಚುನಾವಣಾ ರೂಟ್ ಮ್ಯಾಪ್ ಸಿದ್ಧವಾಗಲಿದೆ. ಚುನಾವಣೆ ಸಿದ್ಧತೆ ಬಗ್ಗೆ ರಾಜ್ಯ ನಾಯಕರಿಗೆ ಟಾಸ್ಕ್ ರೂಪದಲ್ಲಿ ಅಮಿತ್ ಶಾ ಸಲಹೆಗಳನ್ನು ನೀಡಲಿದ್ದಾರೆ.

ಕಳೆದ ಬಾರಿಯ ಭೇಟಿ ವೇಳೆ ನೀಡಿದ್ದ ಸಲಹೆಗಳ ಅನುಷ್ಠಾನದ ಬಗ್ಗೆಯೂ ಅಮಿತ್ ಶಾ ಪರಾಮರ್ಶನೆ ನಡೆಸಲಿದ್ದಾರೆ. ಹಳೇ ಮೈಸೂರು ಭಾಗದಲ್ಲಿ ಪಕ್ಷ ಸಂಘಟನೆ ಬಗ್ಗೆ ಮಾಹಿತಿ ಕೇಳಲಿದ್ದಾರೆ. ಸಭೆಯಲ್ಲಿ ಸಂಪುಟ ಪುನಾರಚನೆ ಬಗ್ಗೆ ಯಾವುದೇ ಚರ್ಚೆ ನಡೆಯುವ ಸಾಧ್ಯತೆ ಇಲ್ಲ ಎಂದು ಮೂಲಗಳು ಅಭಿಪ್ರಾಯಪಟ್ಟಿವೆ.

ಚುನಾವಣಾ ಸಿದ್ಧತೆ ಚುರುಕು
ಕರ್ನಾಟಕದ ವಿಧಾನಸಭೆಗೆ 2023ರಲ್ಲಿ ಚುನಾವಣೆ (Karnataka Assembly Elections 2023) ನಡೆಯಲಿದೆ. ದಕ್ಷಿಣ ಭಾರತದಲ್ಲಿ ಬಿಜೆಪಿ (BJP) ಅಧಿಕಾರದಲ್ಲಿರುವ ಏಕೈಕ ರಾಜ್ಯ ಕರ್ನಾಟಕ. ಇಲ್ಲಿ ಅಧಿಕಾರ ಉಳಿಸಿಕೊಳ್ಳಬೇಕು ಎಂದು ಬಿಜೆಪಿಯ ಕೇಂದ್ರ ನಾಯಕರು ನಿರ್ಧರಿಸಿದ್ದು, ಈಗಿನಿಂದಲೇ ಸಿದ್ಧತೆ ಚುರುಕುಗೊಳಿಸುವಂತೆ ಸೂಚನೆ ನೀಡಿದ್ದಾರೆ. ವಿಧಾನಸಭೆ ಚುನಾವಣೆಯ ದಿಕ್ಸೂಚಿಯನ್ನಿಟ್ಟುಕೊಂಡು ಬಿಜೆಪಿಯ ಕರ್ನಾಟಕ ಘಟಕವು ಈಗಾಗಲೇ ರಣತಂತ್ರ ರೂಪಿಸುತ್ತಿದೆ. ಮಲ್ಲೇಶ್ವರದಲ್ಲಿರುವ ಬಿಜೆಪಿಯ ರಾಜ್ಯ ಕಚೇರಿಯಲ್ಲಿ ಕಮಲ ಪಾಳಯದ ಅತಿರಥ ಮಹಾರಥರ ದಂಡು ಸೇರಿಕೊಂಡು, ಈಗಾಗಲೇ ದೊಡ್ಡಮಟ್ಟದ ಗೇಮ್ ಪ್ಲಾನ್ ರೂಪಿಸಿದೆ.

ಇತ್ತೀಚೆಗೆ ನಡೆದ ಸಭೆಯಲ್ಲಿ ಬಿಜೆಪಿ ವರಿಷ್ಠ ಬಿ.ಎಲ್.ಸಂತೋಷ್ ಸಹ ಪಾಲ್ಗೊಂಡಿದ್ದರು. ಸುಮಾರು ಎರಡೂವರೆ ಗಂಟೆಗಳ ಕಾಲ ನಡೆದ ಈ ಮಹತ್ವದ ಸಭೆಯಲ್ಲಿ ಮುಂದಿನ ಅವಧಿಗೂ ಬಿಜೆಪಿಯನ್ನು ಅಧಿಕಾರಕ್ಕೆ ತರುವ ಬಗ್ಗೆ ಸುದೀರ್ಘ ಚರ್ಚೆ ನಡೆಯಿತು. ಕುಟುಂಬ ರಾಜಕಾರಣಕ್ಕಿಂತ ವೈಯಕ್ತಿಕ ವರ್ಚಸ್ಸು, ಹೊಸ ಪ್ರತಿಭೆಗಳಿಗೆ, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವ ಕುರಿತು ಬಿ.ಎಲ್.ಸಂತೋಷ್ ತಮ್ಮ ಆಲೋಚನೆಗಳನ್ನು ಪ್ರಸ್ತಾಪಿಸಿದರು.

ಸಭೆ ಮುಕ್ತಾಯಗೊಂಡ ಬಳಿಕ ಮಾತನಾಡಿದ ಬಿಜೆಪಿ ಕೇಂದ್ರ ಘಟಕದ ನಾಯಕ ಮತ್ತು ಶಾಸಕ ಸಿ.ಟಿ.ರವಿ, ಪಕ್ಷ ಸೇರ್ಪಡೆ ಆಗುವವರ ಕುರಿತು ಹಾಗೂ ಪಕ್ಷ ಸಂಘಟನೆ ವಿಚಾರಗಳ ಬಗ್ಗೆ ಪ್ರಸ್ತಾಪಿಸಿದರು. ಹಳೇ ಮೈಸೂರು, ಕಲ್ಯಾಣ ಕರ್ನಾಟಕ ಭಾಗ ಸೇರಿದಂತೆ ಹಲವೆಡೆಗಳಿಂದ ಬಿಜೆಪಿಗೆ ಬರಲು ಸಿದ್ಧರಿರುವವರು ಇದ್ದಾರೆ ಎಂದು ರವಿ ಸಭೆಯಲ್ಲಿ ತಿಳಿಸಿದರು. ಸಭೆಯ ನಂತರ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಮಾಧ್ಯಮಗಳಿಗೆ ಹೇಳಲು ಆಗದ ವಿಚಾರಗಳು ಸಾಕಷ್ಟು ಚರ್ಚೆಯಾಯಿತು ಎಂದಿದ್ದರು.

ಬಿ.ಎಲ್.ಸಂತೋಷ್ ಅವರು ಬಿಜೆಪಿಯ ಪ್ರಯೋಗಶೀಲತೆ ಕುರಿತು ನೀಡಿದ ಹೇಳಿಕೆಗೆ ಸೀಮಿತ ಅರ್ಥ ಕಲ್ಪಿಸುವುದು ಬೇಡ ಎಂದ ರವಿ, ‘ಸಂತೋಷ್ ಅವರ ಹೇಳಿಕೆಯು ಇಡೀ ದೇಶಕ್ಕೆ ಸಂಬಂಧಿಸಿದ್ದು. ಉತ್ತರ ಪ್ರದೇಶ ಮುಖ್ಯಮಂತ್ರಿಯಾಗಿರುವ ಯೋಗಿ ಆದಿತ್ಯನಾಥ ಅವರಂಥವರು ಬೆಳಕಿಗೆ ಬಂದಿದ್ದು ಇಂಥ ಪ್ರಯೋಗಶೀಲತೆಯಿಂದಲೇ. ಪಕ್ಷದ ಸಿದ್ಧಾಂತಕ್ಕೆ ಬದ್ಧರಾದ ಕಾರ್ಯಕರ್ತರು ಯಾವ ಎತ್ತರಕ್ಕೆ ಬೇಕಾದರೂ ಹೋಗಬಹುದು. ಆದರೆ ಒಂದು ಕುಟುಂಬದ ಹಿನ್ನೆಲೆಯಿಂದ ಬಂದಿದ್ದೇವೆ ಎಂಬುದಷ್ಟೇ ಕಾರಣ ಆಗಲಾರದು ಎಂದು ಹೇಳಿದರು. ಸಿ.ಟಿ.ರವಿ ಅವರ ಈ ಹೇಳಿಕೆಯಲ್ಲಿ ಬಿ.ಎಸ್.ಯಡಿಯೂರಪ್ಪ ಕುಟುಂಬಕ್ಕೆ ನೀಡಿದ ಟಾಂಗ್ ಎಂದೇ ವಿಶ್ಲೇಷಿಸಲಾಗುತ್ತಿದೆ.

2023ರ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿಯ ನಡೆ ಹೇಗಿರಬಹುದು ಎಂಬ ಇಣುಕುನೋಟವನ್ನೂ ಸಭೆ ನೀಡಿರುವುದು ಸುಳ್ಳಲ್ಲ. ಬಿಜೆಪಿ ಜಯಗಳಿಸಲು ಏನೆಲ್ಲಾ ಮಾಡಬೇಕು ಎಂಬ ಬಗ್ಗೆ ಚಿಂತನೆ ನಡೆಸಿರುವ ಹಿರಿಯ ನಾಯಕರು ರಣತಂತ್ರ ರೂಪಿಸಲು ಮುಂದಾಗಿದ್ದಾರೆ. ಕುಟುಂಬ ರಾಜಕಾರಣಕ್ಕೆ ಬ್ರೇಕ್ ಹಾಕುವುದು, ನಿಷ್ಠಾವಂತ ಕಾರ್ಯಕರ್ತರಿಗೆ ಅವಕಾಶ ನೀಡುವುದು ಬಿಜೆಪಿಯ ಆದ್ಯತೆಯಾಗಲಿದೆ. ಮುಂದಿನ ದಿನಗಳಲ್ಲಿ ಇದು ಏನೆಲ್ಲ ತಿರುವು ಪಡೆದುಕೊಳ್ಳುತ್ತದೆ ಎನ್ನುವ ಚರ್ಚೆ ಈಗಾಗಲೇ ರಾಜ್ಯ ರಾಜಕಾರಣದಲ್ಲಿ ಆರಂಭವಾಗಿದೆ.

ಇದನ್ನೂ ಓದಿ: ಕನ್ನಡ ಬಿಡಿ ಎಂದು ಅಮಿತ್ ಶಾ ಎಲ್ಲಿಯೂ ಹೇಳಿಲ್ಲ; ಸಿದ್ದರಾಮಯ್ಯ ಮಾತಿಗೆ ಸಿ ಟಿ ರವಿ ತಿರುಗೇಟು

ಇದನ್ನೂ ಓದಿ: ಬಿಜೆಪಿಯಿಂದ ಕೃತಕ ಕಲ್ಲಿದ್ದಲು ಅಭಾವ ಸೃಷ್ಟಿ: ಸಿದ್ದರಾಮಯ್ಯ ಗಂಭೀರ ಆರೋಪ

Published On - 7:18 am, Tue, 3 May 22