AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ನೈಸ್ ರಸ್ತೆ​ ಅಕ್ರಮದ ದಾಖಲೆ ಬಿಡುಗಡೆಗೆ ಚಂದ್ರಯಾನ ಅಡ್ಡಿ: ಹೆಚ್.​ಡಿ. ಕುಮಾರಸ್ವಾಮಿ

ನೈಸ್ ರಸ್ತೆ ಹಗರಣದ ಕುರಿತು ಕಾಂಗ್ರೆಸ್ ಸರ್ಕಾರದ ವಿರುದ್ಧ ಅದರಲ್ಲೂ ಡಿಕೆ ಶಿವಕುಮಾರ್ ವಿರುದ್ಧ ಮಾಜಿ ಸಿಎಂ ಹೆಚ್​ಡಿ ಕುಮಾರಸ್ವಾಮಿ ನಿರಂತರವಾಗಿ ವಾಗ್ದಾಳಿ ನಡೆಸುತ್ತಾ ಬರುತ್ತಿದ್ದಾರೆ. ನಾಳೆ ದಾಖಲೆ ಬಿಡುಗಡೆ ಮಾಡುವುದಾಗಿಯೂ ಹೇಳಿದ್ದರು. ಆದರೆ, ಇದಕ್ಕೆ ಚಂದ್ರಯಾನ ಅಡ್ಡಿಯಾಗುತ್ತಿದೆ ಎಂದಿದ್ದಾರೆ.

ನೈಸ್ ರಸ್ತೆ​ ಅಕ್ರಮದ ದಾಖಲೆ ಬಿಡುಗಡೆಗೆ ಚಂದ್ರಯಾನ ಅಡ್ಡಿ: ಹೆಚ್.​ಡಿ. ಕುಮಾರಸ್ವಾಮಿ
ನೈಸ್ ರಸ್ತೆ ಹಗರಣದ ದಾಖಲೆಗೆ ಚಂದ್ರಯಾನ ಅಡ್ಡಿ ಇದೆ ಎಂದ ಹೆಚ್​ಡಿ ಕುಮಾರಸ್ವಾಮಿ
Sunil MH
| Edited By: |

Updated on:Aug 22, 2023 | 2:31 PM

Share

ಬೆಂಗಳೂರು, ಆಗಸ್ಟ್ 22: ನೈಸ್ ರಸ್ತೆ ಹಗರಣದ ದಾಖಲೆ ಬಿಡುಗಡೆಗೆ ಸಮಸ್ಯೆ ಇದೆ. ನಾಳೆ ಚಂದ್ರಯಾನ ಇದೆ. ಜನರ ಗಮನ ಚಂದ್ರನ ಕಡೆ ಇರುತ್ತದೆ. ಹೀಗಾಗಿ ನಾನು ದಾಖಲೆ ಬಿಡುಗಡೆ ಮಾಡಿದರೆ ಜನರಿಗೆ ತಲುಪುದಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಹೆಚ್.​ಡಿ ಕುಮಾರಸ್ವಾಮಿ (H.D.Kumaraswamy) ಹೇಳಿದ್ದಾರೆ.

ದಾಖಲೆ ಕೊಡುತ್ತೇನೆ ಬ್ರದರ್ ಎಂದು ಹೇಳಿದ ಕುಮಾರಸ್ವಾಮಿ, ನೈಸ್ ರಸ್ತೆ ದೇವೇಗೌಡರ ಪಾಪದ ಕೂಸು ಅಂತೀರಾ. ಆದರೆ, ನೈಸ್​ನ ಉದ್ದೇಶ ಎನು? ಟೌನ್ ಶಿಪ್ ಯಾವ ರೀತಿ ಇರಬೇಕು? ಅವರು ಮಾಡಿದ್ದೇನು? ರಸ್ತೆ ಯಾವ ರೀತಿ ಇರಬೇಕು ಅಂತ‌ ದೇವೇಗೌಡರ ಒಪ್ಪಂದ ಮಾಡಿದ್ದರು. ಆದರೆ ಇವರೆಲ್ಲ ಎನು ಮಾಡಿದ್ದಾರೆ? ಇವರ ಮಹಾನ್ ಸಾಧನೆ ಬಗ್ಗೆ ಬಿಡುಗಡೆ ಮಾಡುತ್ತೇನೆ ಎಂದರು.

ಟಿಬಿ ಜಯಚಂದ್ರ ಅವರು ಯೋಜನೆಯಲ್ಲಾದ ಅಕ್ರಮದ ಬಗ್ಗೆ ಮಾತನಾಡಿದ್ದಾರೆ. ಹೀಗಾಗಿ ಅವರಿಗೆ ನಾನು ಅಭಿನಂದನೆ ಸಲ್ಲಿಸುತ್ತೇನೆ. ನೀವು ರೈತರ ಪರವಾಗಿ ಇದ್ದರೆ ಆ ಜಮೀನು ವಾಪಸ್ ಪಡೆದು ರೈತರಿಗೆ ನೀಡಿ ಎಂದು ನಾನು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಒತ್ತಾಯಿಸುತ್ತೇನೆ ಎಂದರು.

ನೈಸ್ ಹೆಸರಿನಲ್ಲಿ ಡಿಕೆ ಸಹೋದರರು ಕೊಳ್ಳೆ ಹೊಡೆದಿರುವ ರೈತರ ಭೂಮಿ ಹಾಗೂ ಅಕ್ರಮಗಳ ಬಗ್ಗೆ ಬುಧವಾರ ದಾಖಲೆ ಬಿಡುಗಡೆ ಮಾಡುತ್ತೇನೆ ಎಂದು ಕುಮಾರಸ್ವಾಮಿ ಹೇಳಿಕೆ ನೀಡಿದ್ದರು. ಡಿಕೆ ಸುರೇಶ್ ಅವರು ಸಂಸದರಾಗುವ ಮುನ್ನ ಆಸ್ತಿ ಎಷ್ಟಿತ್ತು? ಸಂಸದರಾದ ನಂತರ ಆಸ್ತಿ ಎಷ್ಟಾಯಿತು? ಎಂಬುದು ಗೊತ್ತಿದೆ ಎಂದಿದ್ದರು.

ಇದನ್ನೂ ಓದಿ: ನೈಸ್ ಅಕ್ರಮ ಆರೋಪ: ದಾಖಲೆ ಸಲ್ಲಿಸಲು ಪ್ರಧಾನಿ ಮೋದಿ ಭೇಟಿಗೆ ಅವಕಾಶ ಕೋರಿದ ಹೆಚ್​ಡಿ ಕುಮಾರಸ್ವಾಮಿ

ಡಿಕೆ ಸುರೇಶ್ ಸಹೋದರ ಡಿಕೆ ಶಿವಕುಮಾರ್ ಅವರು 2004 ರಲ್ಲಿ ನಗರಾಭಿವೃದ್ಧಿ ಸಚಿವರಾಗಿದ್ದು ರಾಮನಗರ ಜಿಲ್ಲೆಯ ಉದ್ಧಾರಕ್ಕೋ ಅಥವಾ ನೈಸ್ ಕಂಪನಿ ಉದ್ಧಾರ ಮಾಡಿ ರೈತರ ಭೂಮಿ ಲೂಟಿ ಹೊಡೆಯುವುದಕ್ಕೋ ಎಂದು ಕುಮಾರಸ್ವಾಮಿ ಪ್ರಶ್ನಿಸಿದ್ದರು.

ಜನರ ಅನುಕೂಲಕ್ಕಾಗಿ ಬೆಂಗಳೂರು ಸುತ್ತಮುತ್ತ ರಸ್ತೆಗಳನ್ನು ನಿರ್ಮಾಣ ಮಾಡಲು ನೈಸ್ ಯೋಜನೆಗೆ ಒಪ್ಪಿಗೆ ಸೂಚಿಸಿದ್ದರು. ಆದರೆ ಈ ಲೂಟಿಕೋರರು ಬೆಂಗಳೂರು ಸುತ್ತಮುತ್ತಲಿನ ರೈತರ ಭೂಮಿಯನ್ನು ಕೊಳ್ಳೆ ಹೊಡೆದರು ಎಂದು ಡಿಕೆ ಸಹೋದರರ ವಿರುದ್ಧ ಕುಮಾರಸ್ವಾಮಿ ಆಕ್ರೋಶ ಹೊರಹಾಕಿದ್ದರು.

ನೈಸ್ ಯೋಜನೆಗೆ ಹೆಚ್​ಡಿ ದೇವೇಗೌಡ ಅವರೇ ಸಹಿ ಹಾಕಿದ್ದು ಎಂದು ಡಿಕೆ ಶಿವಕುಮಾರ್ ಹೇಳಿಕೆ ನೀಡಿದ್ದರು. ಈ ಬಗ್ಗೆ ಆಕ್ರೋಶ ಹೊರಹಾಕಿದ್ದ ಕುಮಾರಸ್ವಾಮಿ, ತಾವು ಎಸಗಿದ ಅಕ್ರಮಕ್ಕೆ ತೇಪೆ ಹಚ್ಚಲು ಹೊರಟಿದ್ದಾರೆ. ನೈಸ್ ರಸ್ತೆಯ ‘ತಿರುಚಿದ ಒಪ್ಪಂದ’ದ ಬಗ್ಗೆಯೂ ಅವರು ಹೇಳಬೇಕಿತ್ತಲ್ಲವೇ? ಅಂತ ಪ್ರಶ್ನಿಸಿದ್ದರು.

ನೈಸ್ ಯೋಜನೆ ಯಾರಿಗೆಲ್ಲಾ ಕಾಮಧೇನು, ಕಲ್ಪವೃಕ್ಷವಾಗಿದೆ ನನಗಿಂತ ನಿಮಗೆ ಚೆನ್ನಾಗಿ ಗೊತ್ತು. ಧನಪಿಶಾಚಿ ರಾಜಕಾರಣಿಗಳು, ಮುಖ್ಯ ಕಾರ್ಯದರ್ಶಿ ಮಟ್ಟದವರೂ ಸೇರಿ ಅನೇಕ ಅಧಿಕಾರಿಗಳ ‘ಅನೈತಿಕ ಭ್ರಷ್ಟವ್ಯೂಹ’ ಕರ್ನಾಟಕವನ್ನು ಕಂಡರಿಯದ ರೀತಿಯಲ್ಲಿ ಲೂಟಿ ಮಾಡಿದೆ. ಈ ಲೂಟಿಯ ಕಥೆಯಲ್ಲಿ ನಿಮ್ಮ ಪಾತ್ರವೇನು? ಎಂದು ಡಿಕೆ ಶಿವಕುಮಾರ್ ಅವರನ್ನು ಕುಮಾರಸ್ವಾಮಿ ಪ್ರಶ್ನಿಸಿದ್ದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 2:30 pm, Tue, 22 August 23