BJP ಸಾಧನಾ ಸಮಾವೇಶದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಕಣ್ಣೀರು

| Updated By: Skanda

Updated on: Jul 26, 2021 | 12:05 PM

ಸಾಧನಾ ಸಮಾವೇಶದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗದ್ದಿತರಾಗಿದ್ದಾರೆ. ಭಾಷಣದ ವೇಳೆ ಭಾವುಕರಾದ ಸಿಎಂ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ.

BJP ಸಾಧನಾ ಸಮಾವೇಶದಲ್ಲಿ ಸಿಎಂ ಬಿಎಸ್​ ಯಡಿಯೂರಪ್ಪ ಕಣ್ಣೀರು
ಬಿ.ಎಸ್​.ಯಡಿಯೂರಪ್ಪ
Follow us on

ಬೆಂಗಳೂರು: ರಾಜ್ಯ ಸರ್ಕಾರ ಎರಡು ವರ್ಷ ಪೂರೈಸಿದ ಹಿನ್ನೆಲಯಲ್ಲಿ ವಿಧಾನಸೌಧದಲ್ಲಿ ಆಯೋಜಿಸಲಾದ ಸಾಧನಾ ಸಮಾವೇಶದಲ್ಲಿ ಮಾತನಾಡುವಾಗ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಗದ್ದಿತರಾಗಿದ್ದಾರೆ. ಭಾಷಣದ ವೇಳೆ ಭಾವುಕರಾದ ಸಿಎಂ ಯಡಿಯೂರಪ್ಪ ಕಣ್ಣೀರು ಹಾಕಿದ್ದಾರೆ. ಶಿಕಾರಿಪುರ ಜನ 7 ಬಾರಿ ಶಾಸಕನಾಗಿ ಮಾಡಿದ್ದಕ್ಕೆ ಅಧಿಕಾರ ಸಿಕ್ಕಿತು. ಶಿಕಾರಿಪುರ ಜನರಿಂದ ನನಗೆ ಸಿಎಂ ಸ್ಥಾನ ಸಿಕ್ಕಿತು ಎಂದು ಹೇಳುತ್ತಲೇ ಅವರ ಕಣ್ಣಾಲಿಗಳು ಒದ್ದೆಯಾಗಿವೆ.

ಎಲ್ಲೋ ಮಂಡ್ಯದ ಬೂಕನಕೆರೆಯಲ್ಲಿ ಹುಟ್ಟಿ, ಶಿವಮೊಗ್ಗಕ್ಕೆ ಬಂದು ಶಿಕಾರಿಪುರದಲ್ಲಿ ಜೀವನ ಆರಂಭ ಮಾಡಿದೆ. ಆರ್‌ಎಸ್ಎಸ್ ಪ್ರಚಾರಕನಾಗಿ ಕೆಲಸ ಮಾಡಿದ್ದೆ. ಶಿಕಾರಿಪುರ ಪುರಸಭೆ ಚುನಾವಣೆಯಲ್ಲಿ ಗೆದ್ದು ಅಧ್ಯಕ್ಷನಾದೆ. ಅಧ್ಯಕ್ಷನಾಗಿದ್ದ ಸಂದರ್ಭದಲ್ಲಿ ಮಾರಣಾಂತಿಕ ಹಲ್ಲೆಯಾಗಿತ್ತು. ಕಚೇರಿಗೆ ಹೋಗುವ ಸಂದರ್ಭದಲ್ಲಿ ನನ್ನ ಮೇಲೆ ಹಲ್ಲೆ ಮಾಡಿದಾಗ ನನ್ನ ಜೀವನ ಮುಗಿದೇ ಹೋಯಿತು ಎಂದುಕೊಂಡಿದ್ದೆ. ಆಗ ನಾನು ಬದುಕಿದರೆ ನನ್ನ ಜೀವನ ರಾಜ್ಯದ ಜನರ ಸೇವೆಗೆ ಮೀಸಲು ಎಂದು ನನ್ನ ಕುಟುಂಬಸ್ಥರಿಗೆ ಹೇಳಿದ್ದೆ. ಇದುವರೆಗೂ ಆ ಮಾತಿನಂತೆ ನಡೆದುಕೊಂಡಿದ್ದೇನೆ ಎಂದು ಹೇಳಿದ್ದಾರೆ.

ವಾಜಪೇಯಿಯವರು ಕೇಂದ್ರ ಸಚಿವರಾಗಿ ಎಂದಿದ್ದರು. ನಾನು ಅದಕ್ಕೆ ರಾಜ್ಯದಲ್ಲಿ ಪಕ್ಷ ಕಟ್ಟಬೇಕೆಂದು ಹೇಳಿದ್ದೆ. ಪಕ್ಷ ಕಟ್ಟುವ ಸಂದರ್ಭದಲ್ಲಿ ಜನ ಸೇರುವುದು ಕಷ್ಟವಾಗಿತ್ತು. ಆದರೂ ಆ ಸಂದರ್ಭದಲ್ಲಿ ಎದೆಗುಂದದೆ ಪಕ್ಷವನ್ನು ಕಟ್ಟಿದೆ. ಶಿಕಾರಿಪುರದಿಂದ ನಾನು 7 ಬಾರಿ ಆಯ್ಕೆಯಾಗಿದ್ದೇನೆ. ಶಿಕಾರಿಪುರದ ಜನರ ಆಶೀರ್ವಾದದಿಂದ ಆಯ್ಕೆಯಾದೆ. ನಾನು ಶಿವಮೊಗ್ಗದಲ್ಲಿ ಸೈಕಲ್‌ನಲ್ಲಿ ಹೋಗಿ ಪಕ್ಷ ಕಟ್ಟಿದ್ದೇನೆ. ನನಗೆ ಕಾರು ಇಲ್ಲದ ಸಂದರ್ಭದಲ್ಲಿ ಸೈಕನಲ್ಲಿ ಸಂಚಾರ ಮಾಡುವುದಾಗಿತ್ತು. ಆದರೆ ಈಗ ದೇಶದಲ್ಲಿ ಪಕ್ಷ ಪ್ರಬಲವಾಗಿ ಬೆಳೆದು ನಿಂತಿದೆ. ನಾವೆಲ್ಲಾ ಒಟ್ಟಾಗಿ ಸೇರಿ ಪಕ್ಷವನ್ನು ಬಲಪಡಿಸಿದ್ದೇವೆ. ಇದರ ಪರಿಣಾಮವೇ ನಾವು ಅಧಿಕಾರಕ್ಕೆ ಬಂದಿದ್ದೇವೆ ಎಂದು ಅಭಿಪ್ರಾಯಪಟ್ಟರು.

ಎರಡು ವರ್ಷದ ಸಾಧನಾ ಸಮಾವೇಶದಲ್ಲಿ ಮಾತನಾಡುತ್ತಾ, 75 ವರ್ಷ ದಾಟಿದವರಿಗೆ ಅಧಿಕಾರ ಕೊಡದಿರಲು ಬಿಜೆಪಿಯಲ್ಲಿ ನಿರ್ಧರಿಸಿದ್ದರೂ ನನ್ನ ಮೇಲಿನ ಪ್ರೀತಿ ವಾತ್ಸಲ್ಯದಿಂದ ಪ್ರಧಾನಿ ಮೋದಿ, ಅಮಿತ್ ಶಾ ಅವಕಾಶ ಮಾಡಿಕೊಟ್ಟರು. ಮತ್ತೊಮ್ಮೆ ಪ್ರಧಾನಿ ಮೋದಿ ಆಡಳಿತ ಬರಬೇಕು. ಆಗ ಮಾತ್ರ ಭಾರತ ಜಗತ್ತಿನಲ್ಲಿ ಪ್ರಬಲ ರಾಷ್ಟ್ರವಾಗಲಿದೆ. ಇದು ಈ ದೇಶದ ಅಭಿಪ್ರಾಯವಾಗಿದೆ ಎಂದು ಯಡಿಯೂರಪ್ಪ ತಿಳಿಸಿದರು.

ಇದನ್ನೂ ಓದಿ:
ಹೈಕಮಾಂಡ್ ಸಂದೇಶಕ್ಕೆ ಬೆಳಗ್ಗಿನವರೆಗೂ ಕಾದು ನೋಡೋಣ; ಕೊನೆಯ ನಿಮಿಷದವರೆಗೂ ಸಿಎಂ ಆಗಿ ಕೆಲಸ ಮಾಡ್ತೇನೆ: ಬಿಎಸ್ ಯಡಿಯೂರಪ್ಪ

Published On - 11:51 am, Mon, 26 July 21