ಲಕ್ಷ್ಮಣ ಸವದಿ ಹುಟ್ಟುಹಬ್ಬದ ಬ್ಯಾನರ್​ನಲ್ಲಿಲ್ಲ ಕಾಂಗ್ರೆಸ್ ಚಿಹ್ನೆ: ಬಿಜೆಪಿ ಘರ್​ ವಾಪ್ಸಿಗೆ ರೆಕ್ಕೆಪುಕ್ಕ

| Updated By: Rakesh Nayak Manchi

Updated on: Feb 06, 2024 | 3:37 PM

ಕಾಂಗ್ರೆಸ್ ಶಾಸಕ ಲಕ್ಷ್ಮಣ ಸವದಿ ಅವರ ಜನ್ಮದಿನಕ್ಕೆ ಶುಭಕೋರುವ ಬ್ಯಾನರ್​ಗಳಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇಲ್ಲದಿರುವುದು ಕುತೂಹಲಕ್ಕೆ ಕಾರಣವಾಗಿದೆ. ಅಲ್ಲದೆ, ಬಿಜೆಪಿಗೆ ಸವದಿ ಮರು ಸೇರ್ಪಡೆಯಾಗುತ್ತಾರೆ ಎನ್ನುವ ಚರ್ಚೆಗೆ ರೆಕ್ಕೆಪುಕ್ಕ ಬಂದಂತಾಗಿದೆ. ಬ್ಯಾನರ್​ಗಳಲ್ಲಿ ಪಕ್ಷದ ಚಿಹ್ನೆ ಇಲ್ಲದಿರುವ ಬಗ್ಗೆ ಸ್ವತಃ ಸವದಿ ಅವರೇ ಸ್ಪಷ್ಟನೆ ನೀಡಿದ್ದಾರೆ.

ಲಕ್ಷ್ಮಣ ಸವದಿ ಹುಟ್ಟುಹಬ್ಬದ ಬ್ಯಾನರ್​ನಲ್ಲಿಲ್ಲ ಕಾಂಗ್ರೆಸ್ ಚಿಹ್ನೆ: ಬಿಜೆಪಿ ಘರ್​ ವಾಪ್ಸಿಗೆ ರೆಕ್ಕೆಪುಕ್ಕ
ಲಕ್ಷ್ಮಣ ಸವದಿ ಹುಟ್ಟುಹಬ್ಬದ ಬ್ಯಾನರ್​ನಲ್ಲಿಲ್ಲ ಕಾಂಗ್ರೆಸ್ ಚಿಹ್ನೆ: ಬಿಜೆಪಿ ಘರ್​ ವಾಪ್ಸಿಗೆ ರೆಕ್ಕೆಪುಕ್ಕ
Follow us on

ನವದೆಹಲಿ, ಫೆ.6: ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್​ ವಾಪಸ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಲಕ್ಷ್ಮಣ ಸವದಿ (Laxman Savadi) ಸಹ ಮಾತೃ ಪಕ್ಷಕ್ಕೆ ವಾಪಸ್ ಆಗುತ್ತಾರೆ ಎನ್ನುವ ಚರ್ಚೆಗಳು ನಡೆಯುತ್ತಿವೆ. ಇದರ ಮಧ್ಯೆ ಸವದಿ ಹುಟ್ಟುಹಬ್ಬದ ಬ್ಯಾನರ್​ನಲ್ಲಿ ಕಾಂಗ್ರೆಸ್ ಪಕ್ಷದ ಚಿಹ್ನೆ ಇರದಿರುವುದು ಸವದಿ ಬಿಜೆಪಿ (BJP) ಮರುಸೇರ್ಪಡೆ ಗಾಸಿಪ್ ಗಳಿಗೆ ಮತ್ತೆ ರೆಕ್ಕೆಪುಕ್ಕ ಬಂದಂತಾಗಿದೆ.

ಫೆಬ್ರವರಿ 16 ರಂದು ಲಕ್ಷ್ಮಣ ಸವದಿ ಅವರು 64ನೇ ವರ್ಷಕ್ಕೆ ಕಾಲಿಡಲಿದ್ದಾರೆ. ಹೀಗಾಗಿ ಸವದಿ ಆಪ್ತರು, ಕಾಂಗ್ರೆಸ್​ ಮುಖಂಡರು ಬೆಳಗಾವಿ ಜಿಲ್ಲೆಯ ಅಥಣಿ ಪಟ್ಟಣದಲ್ಲಿ ಬ್ಯಾನರ್​ಗಳನ್ನು ಹಾಕಿದ್ದಾರೆ. ಆದರೆ, ಶಾಸಕರಿಗೆ ಶುಭ ಕೋರುವ ಬ್ಯಾನರ್​ನಲ್ಲಿ ಕಾಂಗ್ರೆಸ್ ಚಿಹ್ನೆಯೇ ಮಾಯವಾಗಿದೆ. ಇದು ಸವದಿ ಕಾಂಗ್ರೆಸ್​ನಿಂದ ಅಂತರ ಕಾಯ್ದುಕೊಳ್ಳುತ್ತಿದ್ದಾರಾ ಅನ್ನೋ ಚರ್ಚೆಗೆ ಕಾರಣವಾಗಿದೆ.

ಈ ಬಗ್ಗೆ ದೆಹಲಿಯಲ್ಲಿ ಟಿವಿ9ಗೆ ಸ್ಪಷ್ಟನೆ ನೀಡಿದ ಸವದಿ, ನಾನು ಎಂದೂ ಕೂಡ ಹುಟ್ಟುಹಬ್ಬ ಆಚರಿಸಿಕೊಳ್ಳುವುದಿಲ್ಲ. ಬಿಜೆಪಿಯಲ್ಲಿ ಇದ್ದಾಗಲೂ ಅಷ್ಟೇ ಈಗಲೂ ಅಷ್ಟೆ, ಹುಟ್ಟುಹಬ್ಬ ಆಚರಿಸಲ್ಲ. ಅಭಿಮಾನಿಗಳಿಗೂ ಬ್ಯಾನರ್​ ಹಾಕದಂತೆ ಹೇಳುತ್ತೇನೆ. ಆದರೆ ಅಭಿಮಾನಿಗಳು, ಬೆಂಬಲಿಗರು ಬ್ಯಾನರ್​ ಹಾಕಿಕೊಳ್ಳುತ್ತಾರೆ. ಜಗದೀಶ್ ಶೆಟ್ಟರ್​ ಬೇರೆ, ನಾನು ಬೇರೆ ಎಂದ ಸವದಿ, ನನ್ನ ವಿಚಾರಗಳು ಬೇರೆ, ಶೆಟ್ಟರ್ ವಿಚಾರಗಳು ಬೇರೆ. ನಾನು ಯಾವುದೇ ಕಾರಣಕ್ಕೂ ಕಾಂಗ್ರೆಸ್​ ಪಕ್ಷ ಬಿಡಲ್ಲ ಎಂದರು.

ಇದನ್ನೂ ಓದಿ: ಜಗದೀಶ್ ಶೆಟ್ಟರ್ ಬಿಜೆಪಿ ಸೇರ್ಪಡೆ ಬೆನ್ನಲ್ಲೇ ಅಲರ್ಟ್ ಆದ ‘ಕೈ’ ಹೈಕಮಾಂಡ್; ಲಕ್ಷ್ಮಣ ಸವದಿ ಜೊತೆ ನಿರಂತರ ಸಂಪರ್ಕ

ನನ್ನ ಮೈಯಲ್ಲಿ ಇರುವುದು ನನ್ನ ತಂದೆಯ ಡಿಎನ್​ಎ

ಸವದಿ ದೇಹದಲ್ಲಿ ಬಿಜೆಪಿ ಡಿಎನ್​ಎ ಇದೆ ಎಂಬ ಬಿಜೆಪಿ ನಾಯಕರ ಹೇಳಿಕೆಗೆ ತಿರುಗೇಟು ನೀಡಿದ ಸವದಿ, ನನ್ನ ಮೈಯಲ್ಲಿ ಇರುವುದು ನನ್ನ ತಂದೆಯ ಡಿಎನ್​ಎ. ಅಲ್ಲಿ ಅವಮಾನ ಆಗಿದ್ದಕ್ಕೆ ಬಿಜೆಪಿ ಬಿಟ್ಟು ಕಾಂಗ್ರೆಸ್​ಗೆ ಸೇರಿದ್ದೇನೆ. ನಾನು ಮತ್ತೆ ಬಿಜೆಪಿಗೆ ಹೋಗುವುದಕ್ಕೆ ಹುಚ್ಚಾ ಎಂದು ಹೇಳಿದರು.

ಸಂಕಷ್ಟದ ಸಮಯದಲ್ಲಿ ರಾಜ್ಯಕ್ಕೆ ಬರಬೇಕಿರುವ ಅನುದಾನ ನೀಡಬೇಕು

ಕೇಂದ್ರದ ತಾರತಮ್ಯ ಧೋರಣೆ ಖಂಡಿಸಿ ನಾಳೆ ದೆಹಲಿಯಲ್ಲಿ ಪ್ರತಿಭಟನೆ ಆಯೋಜಿಸಿರುವ ಬಗ್ಗೆ ಮಾತನಾಡಿದ ಸವದಿ, ರಾಜ್ಯಕ್ಕೆ ಕೇಂದ್ರ ಸರ್ಕಾರ ನ್ಯಾಯಸಮ್ಮತ ಅನುದಾನ ನೀಡುತ್ತಿಲ್ಲ. ಸಂಕಷ್ಟ ಸಂದರ್ಭದಲ್ಲಿ ರಾಜ್ಯಕ್ಕೆ ಬರಬೇಕಿರುವ ಅನುದಾನ ನೀಡಬೇಕು. ಕರ್ನಾಟಕದಿಂದ ಎಷ್ಟು GST ಸಂಗ್ರಹ ಆಗುತ್ತೆ ಎಂಬ ಬಗ್ಗೆ ಚರ್ಚಿಸಲಿ ಎಂದರು.

ರಾಜ್ಯದ ಸಂಸದರಿಗೆ ನಾನು ಪ್ರಶ್ನೆ ಮಾಡುತ್ತೇನೆ. ನೀವು ಗುಜರಾತ್​​ನಿಂದ ಗೆದ್ದಿದ್ದೀರಾ? ಇಲ್ಲ ಕರ್ನಾಟಕದಿಂದ ಗೆದ್ದಿದ್ದೀರಾ? ರಾಜ್ಯಕ್ಕೆ ಆಗುತ್ತಿರುವ ಅನ್ಯಾಯದ ಬಗ್ಗೆ ಯಾಕೆ ಪ್ರಶ್ನೆ ಮಾಡುತ್ತಿಲ್ಲ ಎಂದು ಸವದಿ ಪ್ರಶ್ನಿಸಿದರು. ಡಿಕೆ ಶಿವಕುಮಾರ್ ಜೈಲಿಗೆ ಹೋಗಿ ಬಂದಿರುವ ಬಗ್ಗೆ ಕೆ.ಎಸ್​.ಈಶ್ವರಪ್ಪ ಮಾತಾಡುತ್ತಾರೆ. ಹಾಗಾದರೆ ಬಿಎಸ್​ ಯಡಿಯೂರಪ್ಪ ಜೈಲಿಗೆ ಹೋಗಿಲ್ವಾ ಅಂತಾ ನಾವು ಕೇಳಬೇಕಾಗುತ್ತದೆ ಎಂದರು.

ರಾಜಕೀಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ