ಪ್ರಿಯಾಂಕ್​ ಖರ್ಗೆಯನ್ನ ಸಚಿವ ಸಂಪುಟದಿಂದ ವಜಾ ಮಾಡಿ: ಛಲವಾದಿ ನಾರಾಯಣಸ್ವಾಮಿ

| Updated By: ವಿವೇಕ ಬಿರಾದಾರ

Updated on: Aug 27, 2024 | 1:32 PM

ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಳ್ಳುವ ಮೂಲಕ ಸಚಿವ ಪ್ರಿಯಾಂಕ್​ ಖರ್ಗೆ ಅವರು ಅಧಿಕಾರ ದುರಪಯೋಗಪಡಿಸಿಕೊಂಡಿದ್ದಾರೆ. ಇವರನ್ನು ಸಚಿವ ಸಂಪುಟದಿಂದ ವಜಾ ಮಾಡುವಂತೆ ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ ಆಗ್ರಹಿಸಿದರು.

ಪ್ರಿಯಾಂಕ್​ ಖರ್ಗೆಯನ್ನ ಸಚಿವ ಸಂಪುಟದಿಂದ ವಜಾ ಮಾಡಿ: ಛಲವಾದಿ ನಾರಾಯಣಸ್ವಾಮಿ
ಛಲವಾದಿ ನಾರಾಯಣಸ್ವಾಮಿ
Follow us on

ಬೆಂಗಳೂರು, ಆಗಸ್ಟ್​ 27: ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ (Mallikarjun Kaharge) ಅವರ ಕುಟುಂಬದವರು ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ಗೆ ಕೆಐಎಡಿಬಿಯಿಂದ ಐದು ಎಕರೆ ಜಾಗ ಪಡೆದುಕೊಂಡಿದ್ದಾರೆ. ಸಚಿವರಾಗಿ ಪ್ರಿಯಾಂಕ್‌ ಖರ್ಗೆ (Priyank Kharge) ಅಧಿಕಾರ ದುರುಪಯೋಗಪಡಿಸಿಕೊಂಡಿದ್ದಾರೆ. ಅವರನ್ನು ಸಚಿವ ಸಂಪುಟದಿಂದ ವಜಾ ಮಾಡಿ ಜಮೀನು ವಾಪಸ್‌ ಪಡೆಯಬೇಕು. ಈ ಸಂಬಂಧ ಇಂದು (ಆ.27) ರಂದು ರಾಜ್ಯಪಾಲರನ್ನು ಭೇಟಿ ಮಾಡಿ ದೂರು ಸಲ್ಲಿಸುತ್ತೇವೆ ಎಂದು ವಿಧಾನ ಪರಿಷತ್​ ಪ್ರತಿಪಕ್ಷ ನಾಯಕ ಛಲವಾದಿ ನಾರಾಯಣಸ್ವಾಮಿ (Chalavadi Narayanaswamy) ತಿಳಿಸಿದರು.

ಬೆಂಗಳೂರಿನಲ್ಲಿ ಸುದ್ದಿಗೋಷ್ಠಿ ನಡೆಸಿ ಮಾತನಾಡಿದ ಅವರು, ಸಿದ್ಧಾರ್ಥ ವಿಹಾರ ಶಿಕ್ಷಣ ಟ್ರಸ್ಟ್‌ ಒಂದು ಮನೆಗೆ ಸೀಮಿತವಾಗಿದೆ. ಸಚಿವ ಪ್ರಿಯಾಂಕ್ ಖರ್ಗೆ ಮತ್ತು ರಾಧಾಕೃಷ್ಣ ಎಂಬುವರ ಹೆಸರಿನಲ್ಲಿ ಟ್ರಸ್ಟ್​ ಇದೆ. ಕಲಬುರಗಿಯಲ್ಲಿ ಟ್ರಸ್ಟ್​​ ರಿಜಿಸ್ಟರ್ ಮಾಡಲಾಗಿದೆ. ದಲಿತರು ಅಂದರೆ ಒಂದೇ ಒಂದು ಕುಟುಂಬವಲ್ಲ. ಅನೇಕ ದಲಿತ ಕುಟುಂಬ ಕೂಡ ಇವೆ ಎಂದು ಹೇಳಿದರು.

ಒಂದೇ ಕುಟುಂಬಕ್ಕೆ ಹಲವು ಎಕರೆ ಜಮೀನು ಕೊಟ್ಟಿದ್ದಾರೆ. ಅದು ಕೂಡ ಏರೋಸ್ಪೇಸ್ ಹೆಸರಲ್ಲಿ ತೆಗೆದುಕೊಂಡಿದ್ದಾರೆ. ಇತರೆ ಟ್ರಸ್ಟ್‌ಗೂ ಅರ್ಧ ಎಕರೆ ಸಿಕ್ಕಿದ್ದರೂ ಅನುಕೂಲ ಆಗುತ್ತಿತ್ತು. ಇದು ನಂಬಿಕೆ‌ಯ ಪ್ರಶ್ನೆ. ಇದು ಮತ್ತೊಂದು ಮುಡಾ ಕೇಸ್ ಆಗಲಿದೆ. ಆ ಜಾಗ ಬೇಕು ಅಂತ‌ ಅನೇಕರು ಅರ್ಜಿ ಸಲ್ಲಿಸಿದ್ದಾರೆ. ಖರ್ಗೆ ಕುಟುಂಬ ಒಂದೇ ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಕುಟುಂಬವಲ್ಲ. ಈ ಬಗ್ಗೆ ಸಂಪೂರ್ಣ ದಾಖಲೆ‌ ಇಟ್ಟು ಮಾತನಾಡುತ್ತೇನೆ. ನಾನು ಹಿಟ್ ಆ್ಯಂಡ್​ ರನ್ ಮಾಡುವುದಿಲ್ಲ ಎಂದರು.

ಇದನ್ನೂ ಓದಿ: ಮಲ್ಲಿಕಾರ್ಜುನ ಖರ್ಗೆ ಅಂತವರಿಗೆ ಪ್ರಿಯಾಂಕ್​ ಖರ್ಗೆ ಹುಟ್ಟಿರುವುದೇ ಅನ್ಯಾಯ: ಈಶ್ವರಪ್ಪ ಕಿಡಿ

ಸಿದ್ದರಾಮಯ್ಯ ಅವರೆ ಜಾತ್ಯಾತೀತ ತತ್ವ ಎಲ್ಲಿ ಉಳಿಸಿಕೊಂಡಿದ್ದೀರಿ? ಹಿಂದೆ ಕಾವಿಧಾರಿಗಳನ್ನು ಕಂಡರೇ ಆಗುತ್ತಿರಲಿಲ್ಲ. ಈಗ ಕಾವಿಧಾರಿಗಳನ್ನೂ ಕೂಡ ತಮ್ಮ ರಕ್ಷಣೆಗೆ ಬಳಸಿಕೊಳ್ಳುತ್ತಿದ್ದಾರೆ. ಕಾವಿಧಾರಿ ಸ್ವಾಮೀಜಿಗಳು ರಾಜಕಾರಣವನ್ನು ತೊಳೆದು ಸ್ವಚ್ಚಮಾಡಬೇಕು. ಅದನ್ನು ಬಿಟ್ಟು ಭ್ರಷ್ಟಾಚಾರ ಮಾಡಿದವರ ರಕ್ಷಣೆಗೆ ಸ್ವಾಮೀಜಿಗಳು ಮುಂದಾಗುವುದು ಎಷ್ಟು ಸರಿ? ದಲಿತ ಸಮುದಾಯಕ್ಕೆ ಅನ್ಯಾಯ ಆದಾಗ ಪ್ರಶ್ನೆ ಮಾಡಬೇಕು.

ಯಾರು ದಲಿತರಿಗೆ ಅನ್ಯಾಯ ಮಾಡಿದ್ದಾರೆ ಅವರ ಪರವಾಗಿ ನಿಲ್ಲುವುದು ಎಷ್ಟು ಸರಿ? ಎಂದು ಪ್ರಶ್ನಿಸಿದರು.
ಕಾಂಗ್ರೆಸ್ ಸರ್ಕಾರ ದಲಿತರ ಸಂಹಾರ, ದಲಿತರಿಗೆ ಮೋಸ, ದಲಿತರ ಸಮಾಧಿ ಕಟ್ಟುತ್ತಿದೆ. ಮಠಾಧೀಶರು ಈ ಬಗ್ಗೆ ಪ್ರಶ್ನೆ ಮಾಡಬೇಕಿತ್ತು. ಸ್ವಾಮೀಜಿಗಳು ದಲಿತ ವರ್ಗದ ಪರವಾಗಿ ನಿಲ್ಲಿ, ಅನ್ಯಾಯ ಮಾಡಿದವರ ಪರ ನಿಲ್ಲಬೇಡಿ. ದಲಿತ ಸಂಘಟನೆಗಳು ಒಡೆದು ಹೋಗಿವೆ. ಮೋಸ ಮಾಡಿದವರ ಪರವಾಗಿ ಕೆಲವು ದಲಿತ ಸಂಘಟನೆಗಳು ನಿಂತಿವೆ ಎಂದು ಹೇಳಿದರು.

ದಲಿತರಿಗೆ ಮೀಸಲಿಟ್ಟ ಹಣವನ್ನೇ ಲೂಟಿ ಮಾಡಿದವರ ಪರ ಯಾಕೆ ನಿಂತಿದ್ದಾರೆ? ನಿಜವಾಗಿ ಅಂಬೇಡ್ಕರ್ ಬಗ್ಗೆ ವಿಶ್ವಾಸ ಇದ್ದರೆ ದಲಿತರಿಗೆ ಆದ ಅನ್ಯಾಯದ ವಿರುದ್ಧ ಹೋರಾಟ ಮಾಡಬೇಕು. ದಲಿತ ಸಂಘಟನೆಗಳು ಕಾಂಗ್ರೆಸ್​ನ ಹುಚ್ಚಾಟಕ್ಕೆ ಬಲಿಯಾಗಿವೆ ಎಂದು ವಾಗ್ದಾಳಿ ಮಾಡಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ