ಐಎಎಸ್​ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಂಡ ಕಾಂಗ್ರೆಸ್​ ಸರ್ಕಾರ; ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ

| Updated By: ಗಣಪತಿ ಶರ್ಮ

Updated on: Jul 19, 2023 | 7:16 PM

ಪ್ರತಿಪಕ್ಷಗಳ ನಾಯಕರನ್ನು ಸ್ವಾಗತಿಸಲು ಹಿರಿಯ ಐಎಎಸ್​ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನು ಪ್ರಶ್ನಿಸಿದ ಬಿಜೆಪಿ, ಜೆಡಿಎಸ್ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಐಎಎಸ್​ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಂಡ ಕಾಂಗ್ರೆಸ್​ ಸರ್ಕಾರ; ಹೆಚ್​ಡಿ ಕುಮಾರಸ್ವಾಮಿ ವಾಗ್ದಾಳಿ
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು, ಜುಲೈ 19: ವಿಧಾನಸಭೆ ಕಲಾಪದ ವೇಳೆ ಅಶಿಸ್ತಿನ ವರ್ತನೆ ತೋರಿದ ಬಿಜೆಪಿ ಶಾಸಕರನ್ನು (BJP MLAs) ಸ್ಪೀಕರ್ ಯುಟಿ ಖಾದರ್ ಅಮಾನತುಗೊಳಿಸಿದ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಹಾಗೂ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ಧ ಜೆಡಿಎಸ್ ನಾಯಕ ಹೆಚ್​​ಡಿ ಕುಮಾರಸ್ವಾಮಿ (HD Kumaraswamy) ವಾಗ್ದಾಳಿ ನಡೆಸಿದ್ದಾರೆ. ವಿಧಾನಸೌಧದಲ್ಲಿ ಮಾತನಾಡಿದ ಅವರು, ರಾಜ್ಯ ಕಾಂಗ್ರೆಸ್​ ಸರ್ಕಾರ ದರ್ಪ, ದಬ್ಬಾಳಿಕೆ ನಡೆಸುತ್ತಿದೆ. ಐಎಎಸ್​ ಅಧಿಕಾರಿಗಳನ್ನು ಗುಲಾಮರಂತೆ ನಡೆಸಿಕೊಂಡಿದ್ದಾರೆ. ಇದನ್ನು ಪ್ರಶ್ನಿಸಿದ್ದಕ್ಕೆ ಬಿಜೆಪಿ, ಜೆಡಿಎಸ್ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸಿದೆ ಎಂದು ಅವರು ಟೀಕಿಸಿದ್ದಾರೆ.

ಪ್ರತಿಪಕ್ಷಗಳ ನಾಯಕರನ್ನು ಸ್ವಾಗತಿಸಲು ಹಿರಿಯ ಐಎಎಸ್​ ಅಧಿಕಾರಿಗಳನ್ನು ದುರ್ಬಳಕೆ ಮಾಡಿಕೊಳ್ಳಲಾಗಿದೆ. ಇದನ್ನು ಪ್ರಶ್ನಿಸಿದ ಬಿಜೆಪಿ, ಜೆಡಿಎಸ್ ಮೇಲೆ ಸರ್ಕಾರ ದಬ್ಬಾಳಿಕೆ ನಡೆಸಿದೆ. ಅದರ ಬದಲು, ನಮ್ಮಿಂದ ತಪ್ಪಾಗಿದೆ, ಇನ್ಮುಂದೆ ಮಾಡುವುದಿಲ್ಲ ಎಂದು ಹೇಳಿದ್ದರೆ ಸಾಕಾಗುತ್ತಿತ್ತು. ಆದರೆ, ಆಡಳಿತಾರೂಢ ಕಾಂಗ್ರೆಸ್​ನವರಿಗೆ ಇದು ಪ್ರತಿಷ್ಠೆಯಾಗಿದೆ ಎಂದು ಕುಮಾರಸ್ವಾಮಿ ಕಿಡಿಕಾರಿದರು.

ಸಮ್ಮಿಶ್ರ ಸರ್ಕಾರದಲ್ಲಿ ನಾನು ಸಿಎಂ ಆಗಿದ್ದಾಗ ಬೇರೆ ರಾಜ್ಯಗಳ ಸಿಎಂಗಳ ಸ್ವಾಗತಕ್ಕೆ ಐಎಎಸ್ ಅಧಿಕಾರಿಗಳನ್ನು ನಿಯೋಜಿಸಿರಲಿಲ್ಲ. ಜೆಡಿಎಸ್​ ನಾಯಕರಾಗಿದ್ದ ಡ್ಯಾನಿಶ್​ ಅಲಿ ಸ್ವಾಗತಕ್ಕೂ ನೇಮಿಸಿರಲಿಲ್ಲ. ಅಧಿಕಾರಿ ಒ.ಎಸ್.ಪಾಟೀಲ್​ರನ್ನು ನಾನು ನೇಮಕ ಮಾಡಿರಲಿಲ್ಲ. ಆದರೆ, ಸರ್ಕಾರದ ಸಮನ್ವಯ ಸಮಿತಿ ಅಧ್ಯಕ್ಷರಾಗಿದ್ದ ಸಿದ್ದರಾಮಯ್ಯ ತಮಗೆ ವಿಶೇಷ ಕ್ಯಾಬಿನ್, ಅಧಿಕಾರಿ ಬೇಕು ಎಂದಿದ್ದರು. ಸರ್ಕಾರದಲ್ಲಿ ಯಾವುದೇ ಸ್ಥಾನ ಇಲ್ಲದಿದ್ದರೂ ಸವಲತ್ತು ಪಡೆದಿದ್ದರು. ಅಂಥವರು ಇಂದು ನಮ್ಮ ಬಗ್ಗೆ ಮಾತನಾಡುತ್ತಿದ್ದಾರೆಂದು ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದರು.

ಇದನ್ನೂ ಓದಿ: BJP MLAs Suspended: ಸದನದಲ್ಲಿ ಅತಿರೇಕದ ವರ್ತನೆ; ಹತ್ತು ಮಂದಿ ಬಿಜೆಪಿ ಶಾಸಕರ ಅಮಾನತು

ಬಿಜೆಪಿ, ಜೆಡಿಎಸ್​ ಒಟ್ಟಿಗೆ ಸೇರಿ ಸರ್ಕಾರದ ವಿರುದ್ಧ ಹೋರಾಡುತ್ತೇವೆ. ಧರಣಿನಿರತರಿಗೆ ಶಿಕ್ಷೆ ಕೊಡುತ್ತೇವೆಂದು ಊಟಕ್ಕೆ ಬಿಟ್ಟಿರಲಿಲ್ಲ. ಭೋಜನ ವಿರಾಮಕ್ಕೆ ಬಿಡದೆ ಡೆಪ್ಯುಟಿ ಸ್ಪೀಕರ್​ ಕಲಾಪ ನಡೆಸಿದ್ದರು. ಮುಖ್ಯಮಂತ್ರಿ ಸಿದ್ದರಾಮಯ್ಯ ಸೂಚನೆ ಮೇರೆಗೆ ಡೆಪ್ಯುಟಿ ಸ್ಪೀಕರ್​ ಕಲಾಪ ಮುಂದುವರಿಸಿದ್ದರು. ಹಸಿವಿನಿಂದ ಆಕ್ರೋಶಗೊಂಡು ಕೆಲವರು ಕಾಗದ ಪತ್ರ ಹರಿದಿದ್ದಾರೆ. ಸ್ಪೀಕರ್ ಪೀಠದಲ್ಲಿ ಕುಳಿತ ಮೇಲೆ ಯಾವುದೇ ಸಮುದಾಯಕ್ಕೆ ಸೇರಲ್ಲ. ಸ್ಪೀಕರ್ ಪೀಠದಲ್ಲಿ ಕುಳಿತವರು 224 ಶಾಸಕರಿಗೆ ರಕ್ಷಣೆ ಕೊಡಬೇಕು. ದಲಿತ ಶಾಸಕರಿಗೆ ಅವಮಾನ ಮಾಡಿದ್ದಾರೆಂದು ಅನುಕಂಪ ಗಿಟ್ಟಿಸಲು ಕಾಂಗ್ರೆಸ್​ನವರು ಯತ್ನಿಸುತ್ತಿದ್ದಾರೆ. ಇಂತಹ ರಾಜಕೀಯ ಗಿಮಿಕ್​ ಹೆಚ್ಚು ದಿನ ನಡೆಯುವುದಿಲ್ಲ ಎಂದು ಅವರು ಟೀಕಿಸಿದರು.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 6:17 pm, Wed, 19 July 23