ಮಂಡ್ಯದಲ್ಲಿ ಸ್ಪರ್ಧೆ ಹಿಂದೆ ಕುಮಾರಸ್ವಾಮಿಯ ಹಲವು ರಾಜಕೀಯ ಲೆಕ್ಕಾಚಾರ!

|

Updated on: Mar 26, 2024 | 10:03 PM

ಮಂಡ್ಯ ಲೋಕಸಭಾ ಕ್ಷೇತ್ರದ ಜೆಡಿಎಸ್-ಬಿಜೆಪಿ ಮೈತ್ರಿ ಅಭ್ಯರ್ಥಿ ಯಾರು ಎನ್ನುವ ಕಗ್ಗಂಟು ಕೊನೆಯಾಗಿದೆ.. ಬಿಕ್ಕಟ್ಟು ಅಂತ್ಯವಾಗಿದೆ. ರಾಜ್ಯದ ಬಹುತೇಕ ಎಲ್ಲಾ ಕ್ಷೇತ್ರಕ್ಕೂ ಅಭ್ಯರ್ಥಿ ಫಿಕ್ಸ್ ಆಗಿದ್ರೂ ಮಂಡ್ಯ ಕ್ಷೇತ್ರ ಮಾತ್ರ ಕಗ್ಗಂಟಾಗಿಯೇ ಉಳಿದಿತ್ತು. ಸುಮಲತಾ ಸ್ಪರ್ಧಿಸ್ತಾರಾ? ಹೆಚ್‌ಡಿಕೆ ಕಣಕ್ಕಿಳೀತಾರಾ? ನಿಖಿಲ್ ಕುಮಾರಸ್ವಾಮಿ ಮತ್ತೊಮ್ಮೆ ಅಗ್ನಿ ಪರೀಕ್ಷೆ ಎದುರಿಸ್ತಾರಾ ಅನ್ನೋ ಪ್ರಶ್ನೆಗಳು ಮಂಡ್ಯ ಜನರ ತಲೆಯಲ್ಲಿ ಗಿರಕಿ ಹೊಡೀತಿತ್ತು. ಆದ್ರೆ, ಇದೀಗ ಅಂತಿಮವಾಗಿ ಮಂಡ್ಯದಿಂದ ಕುಮಾರಸ್ವಾಮಿ ಕಣಕ್ಕಿಳಿಯುವುದು ಫಿಕ್ಸ್ ಆಗಿದೆ. ಇದರೊಂದಿಗೆ ಮಂಡ್ಯದಲ್ಲಿ ಅಭ್ಯರ್ಥಿ ಯಾರು ಎನ್ನುವ ಮಿಲಿಯನ್ ಡಾಲರ್ ಪ್ರಶ್ನೆಗೆ ಕೊನೆಗೂ ತೆರೆಬಿದ್ದಿದೆ. ಇನ್ನು ಕುಮಾರಸ್ವಾಮಿ ಮಂಡ್ಯ ಸ್ಪರ್ಧೆ ಹಿಂದೆ ಹಲವು ರಾಜಕೀಯ ಲೆಕ್ಕಾಚಾರಗಳು ಅಡಗಿವೆ.

ಮಂಡ್ಯದಲ್ಲಿ ಸ್ಪರ್ಧೆ ಹಿಂದೆ ಕುಮಾರಸ್ವಾಮಿಯ ಹಲವು ರಾಜಕೀಯ ಲೆಕ್ಕಾಚಾರ!
ಹೆಚ್​ಡಿ ಕುಮಾರಸ್ವಾಮಿ
Follow us on

ಬೆಂಗಳೂರು.ಮಂಡ್ಯ, (ಮಾರ್ಚ್ 26): ಮಾಜಿ ಮುಖ್ಯಮಂತ್ರಿ ಎಚ್​ಡಿ ಕುಮಾರಸ್ವಾಮಿ(HD Kumaraswamy )ಕೊನೆಗೂ ಮಂಡ್ಯ ಲೋಕಸಭಾ ಕ್ಷೇತ್ರದಿಂದ(Mandya Loksabha constituency) ಕಣಕ್ಕಿಳಿಯುವುದು ಖಚಿತವಾಗಿದೆ. ಇದರೊಂದಿಗೆ ರಾಜಕೀಯ ಕರ್ಮಭೂಮಿ ರಾಮನಗರ ತೊರೆದು ಎಚ್‌ಡಿ ಕುಮಾರಸ್ವಾಮಿ ಮಂಡ್ಯದತ್ತ ಕಾಲಿಟ್ಟಿದ್ದಾರೆ. ಇದರೊಂದಿಗೆ ಮಂಡ್ಯ ಜಿಲ್ಲೆಯ ಜೆಡಿಎಸ್‌ ಕಾರ್ಯಕರ್ತರ ಪ್ರೀತಿಗೆ ಮಣಿಯಬೇಕಾ ಅಥವಾ ರಾಜಕೀಯ ಜನ್ಮ ಕೊಟ್ಟ ರಾಮನಗರ ಜಿಲ್ಲೆಯನ್ನು ಕೈಬಿಡಬೇಕಾ? ಎನ್ನುವ ಧರ್ಮ ಸಂಕಟದಿಂದ ಕುಮಾರಸ್ವಾಮಿ ಕೊನೆಗೂ ಆಚೆ ಬಂದಿದ್ದಾರೆ. ಇನ್ನು ಕುಮಾರಸ್ವಾಮಿ ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆಯ ಬಗ್ಗೆ ನಾನಾ ರಾಜಕೀಯ ಲೆಕ್ಕಾಚಾರವೂ ಇದೆ. ಅದೇನಂದ್ರೆ, ಕಾಂಗ್ರೆಸ್ ಅಭ್ಯರ್ಥಿ ಸ್ಟಾರ್ ಚಂದ್ರು ಮಣಿಸಲು ಎಚ್‌ಡಿಕೆಯಿಂದ ಮಾತ್ರ ಸಾಧ್ಯ ಎನ್ನುವುದು ಜೆಡಿಎಸ್ ಕಾರ್ಯಕರ್ತರ ಅಭಿಪ್ರಾಯ. ಜೊತೆಗೆ ಹಳೇ ಮೈಸೂರು ಭಾಗದಲ್ಲಿ ಜೆಡಿಎಸ್ ಪಕ್ಷ ಸಂಘಟನೆಗೆ ಸಹಕಾರಿಯಾಗುತ್ತೆ. ಕುಮಾರಸ್ವಾಮಿ ಸ್ಪರ್ಧೆಯಿಂದ ಜೆಡಿಎಸ್ ಕಾರ್ಯಕರ್ತರಲ್ಲಿ ಉತ್ಸಾಹ ಹೆಚ್ಚುತ್ತೆ. ಮಂಡ್ಯದಲ್ಲಿ ಎಚ್‌.ಡಿ ಕುಮಾರಸ್ವಾಮಿ ಅವರಿಗೆ ಅಭಿಮಾನಿ ಬಳಗವಿದ್ದು, ಎಚ್‌ಡಿಕೆ ಸ್ವರ್ಧೆ ಮಾಡಿದ್ರೆ ಎಲ್ಲರೂ ಒಟ್ಟಿಗೆ ಕೆಲಸ ಮಾಡುತ್ತಾರೆ. ಅಲ್ಲದೇ ಯಾರ ವಿರೋಧವೂ ಇರಲ್ಲ. ಗೆಲುವು ಸುಲಭ ಎನ್ನೋ ಲೆಕ್ಕಾಚಾರ.

ಎಚ್​ಡಿಕೆ ಮಂಡ್ಯ ಸ್ಪರ್ಧೆ ಹಿಂದೆ ರಾಜಕೀಯ ಲೆಕ್ಕಾಚಾರ

ಇನ್ನು ಮಾಜಿ ಸಿಎಂ ಎಚ್‌.ಡಿ. ಕುಮಾರಸ್ವಾಮಿ ಅವರು ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸ್ಪರ್ಧೆ ಮಾಡಲು ಏನು ಕಾರಣ ಎಂಬುದನ್ನು ನೋಡುವುದಾದರೆ, ಜೆಡಿಎಸ್‌ಗೆ ಈಗ ಅಸ್ತಿತ್ವದ ಪ್ರಶ್ನೆ ಎದುರಾಗಿದೆ. ಈ ಕಾರಣಕ್ಕಾಗಿಯೇ ಬಿಜೆಪಿ ಜತೆ ಮೈತ್ರಿಯನ್ನು ಮಾಡಿಕೊಳ್ಳಲಾಗಿದೆ. ಕಳೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ಗ್ಯಾರಂಟಿ ಯೋಜನೆಗಳಿಂದ ಕೊಚ್ಚಿ ಹೋಗಿರುವ ಪಕ್ಷವನ್ನು ಮತ್ತೆ ಗಟ್ಟಿಗೊಳಿಸಬೇಕಿದೆ. ಈ ಕಾರಣಕ್ಕೆ ಈಗ ಜೆಡಿಎಸ್‌ ಪಾಲಾಗಿರುವ ಮೂರೂ ಕ್ಷೇತ್ರವನ್ನು ಗೆಲ್ಲಬೇಕು. ಇದೇ ಕಾರಣಕ್ಕೆ ತಾವು ಮಂಡ್ಯದಿಂದ ಸ್ಪರ್ಧೆ ಮಾಡಿದರೆ ಜನರು ಮತ ಹಾಕಿ ಜೆಡಿಎಸ್‌ ಅನ್ನು ಗೆಲ್ಲಿಸುತ್ತಾರೆ ಎಂಬ ವಿಶ್ವಾಸವನ್ನು ಎಚ್‌ಡಿಕೆ ಹೊಂದಿದ್ದಾರೆ. ಇದರ ಜತೆಗೆ ಎನ್‌ಡಿಎ ಸರ್ಕಾರ ರಚನೆ ಬಳಿಕ ಕೇಂದ್ರದಲ್ಲಿ ಮಂತ್ರಿ ಸ್ಥಾನವೂ ಸಿಗಲಿದೆ ಎಂದು ಹೇಳಲಾಗುತ್ತಿದೆ. ಇದರಿಂದ ರಾಜಕೀಯವಾಗಿ ಮತ್ತಷ್ಟು ಶಕ್ತಿಯನ್ನು ಪಡೆಯಬಹುದಾಗಿದೆ ಎನ್ನುವ ಲೆಕ್ಕಾಚಾರ ಕುಮಾರಸ್ವಾಮಿಯವರದ್ದಾಗಿದೆ. ಇನ್ನು ರಾಜಕೀಯ ಎದುರಾಳಿ ಹಾಲಿ ಸಂಸದೆ ಸುಮಲತಾ ಅಂಬರೀಶ್ ಅವರನ್ನು ಸೈಡ್​ಲೈನ್ ಮಾಡಲೆಂದೇ ಖುದ್ದು ಕುಮಾರಸ್ವಾಮಿ ಈ ನಿರ್ಧಾರ ಕೈಗೊಂಡಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: ಮಂಡ್ಯದಲ್ಲಿ ಕುಮಾರಸ್ವಾಮಿ ಗೆದ್ರೆ ಚನ್ನಪಟ್ಟಣದಲ್ಲಿ ನಿಖಿಲ್ ಪ್ರತಿಷ್ಠಾಪನೆ: ಯೋಗೇಶ್ವರ್​ಗೆ ಕಾಂಗ್ರೆಸ್ ಗಾಳ

ಕುಮಾರಸ್ವಾಮಿ ಲೋಕಸಭಾ ಕಣಕ್ಕೆ ಇಳಿಯುವುದು ಇದು ಹೊಸದೆನಲ್ಲ. ಈ ಹಿಂದೆ 1996ರಲ್ಲಿ ಕನಕಪುರದಿಂದ ಆಯ್ಕೆ ಆಗಿದ್ದರು. 2009ರಲ್ಲಿ ಬೆಂಗಳೂರು ಗ್ರಾಮಾಂತರದಿಂದ ಜಯಗಳಿಸಿದ್ದರು. ಬಳಿಕ 2014ರ ಚುನಾವಣೆಯಲ್ಲಿ ಚಿಕ್ಕಬಳ್ಳಾಪುರದಿಂದ ಸ್ಪರ್ಧಿಸಿ ಸೋಲುಕಂಡಿದ್ದು. ಇದೀಗ ಮತ್ತೊಮ್ಮೆ ಹಲವು ಲೆಕ್ಕಾಚಾರಗಳೊಂದಿಗೆ ಲೋಕಸಭಾ ಅಖಾಡಕ್ಕಿಳಿದಿದ್ದಾರೆ.

ಸುಮಲತಾ ನಡೆಯತ್ತ ಎಲ್ಲರ ಚಿತ್ತ

ಮಂಡ್ಯದಿಂದ ಕುಮಾರಸ್ವಾಮಿ ಅಭ್ಯರ್ಥಿ ಎನ್ನುವುದು ಫಿಕ್ಸ್ ಆಗಿದೆ. ಹೀಗಾಗಿ ಸುಮಲತಾ ನಡೆಯತ್ತ ಎಲ್ಲರ ಚಿತ್ತ ನೆಟ್ಟಿದೆ. ನಾಳೆ(ಮಾರ್ಚ್ 27) ಬೆಂಗಳೂರಿನಲ್ಲಿ ಸಂಸದೆ ಸುಮಲತಾ ಸಭೆ ನಡೆಸೋ ಸಾಧ್ಯತೆ ಇದ್ದು, ಆಪ್ತರು, ಬೆಂಬಲಿಗರ ಜೊತೆ ಚರ್ಚಿಸಿ ಮುಂದಿನ ನಿರ್ಧಾರ ಕೈಗೊಳ್ಳಲಿದ್ದಾರೆ. ಸುಮಲತಾ ಎಚ್‌ಡಿಕೆಗೆ ಬೆಂಬಲ ಕೊಡ್ತಾರಾ? ಪಕ್ಷೇತರರಾಗಿ ಸ್ಪರ್ಧಿಸ್ತಾರಾ ಎನ್ನುವುದೇ ಇನ್ನೂ ಸಸ್ಪೆನ್ಸ್ ಆಗಿದೆ. ಸುಮಲತಾ ಅವರ ಮೌನ ನೋಡಿದರೆ ಬಿಜೆಪಿ ಹೈಕಮಾಂಡ್ ಮಾತಿಗೆ ತಲೆ ಭಾಗಿದ್ದಾರೆ ಎನ್ನಲಾಗುತ್ತಿದೆ. ಆದರೂ ಕೊನೆ ಕ್ಷಣದಲ್ಲಿ ಯಾವುದೇ ಅಚ್ಚರಿ ನಿರ್ಧಾರ ಕೈಗೊಂಡರೂ ಅಚ್ಚರಿಪಡಬೇಕಿಲ್ಲ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ