Sign In

By signing in or creating an account, you agree with Associated Broadcasting Company's Terms & Conditions and Privacy Policy.

ಸಿದ್ದರಾಮಯ್ಯ ಕೂಡಲೇ ಚಲುವರಾಯಸ್ವಾಮಿ ರಾಜೀನಾಮೆ ಪಡೆಯಬೇಕು; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ

ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಎಲ್ಲ ಮಿತಿಗಳನ್ನು ಮೀರುತ್ತಿದೆ. ಗುತ್ತಿಗೆದಾರರು ಕೂಡ ಆಣೆ ಪ್ರಮಾಣದ ಬಗ್ಗೆ ಮಾತನಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಲಿ ಎಂದು ಹೇಳುತ್ತಿದ್ದಾರೆ. ಅವರು ಆಣೆ ಮಾಡಲಿ ಅಥವಾ ಗುತ್ತಿಗೆದಾರರು ತಪ್ಪು ಮಾಡಿದ್ದರೆ ಕೇಸ್ ಹಾಕಲಿ ಎಂದು ಜೋಶಿ ಸವಾಲೆಸೆದರು.

ಸಿದ್ದರಾಮಯ್ಯ ಕೂಡಲೇ ಚಲುವರಾಯಸ್ವಾಮಿ ರಾಜೀನಾಮೆ ಪಡೆಯಬೇಕು; ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಆಗ್ರಹ
ಪ್ರಹ್ಲಾದ್ ಜೋಶಿ
Follow us
ಹರೀಶ್ ಜಿ.ಆರ್​. ನವದೆಹಲಿ
| Updated By: Ganapathi Sharma

Updated on: Aug 11, 2023 | 6:45 PM

ನವದೆಹಲಿ, ಆಗಸ್ಟ್ 11: ಕರ್ನಾಟಕ ಕೃಷಿ ಸಚಿವ ಚಲುವರಾಯಸ್ವಾಮಿ (Chaluvarayaswamy) ವಿರುದ್ಧ ಗಂಭೀರ ಆರೋಪ ಕೇಳಿಬಂದಿದೆ. ಆ ಕುರಿತು ರಾಜ್ಯಪಾಲರಿಗೆ ದೂರು ನೀಡಿದ್ದರೂ ಸಚಿವರ ರಾಜೀನಾಮೆ ಪಡೆದಿಲ್ಲ ಎಂದು ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ (Prahlad Joshi) ಆಕ್ಷೇಪ ವ್ಯಕ್ತಪಡಿಸಿದ್ದಾರೆ. ದೆಹಲಿಯಲ್ಲಿ ಮಾತನಾಡಿದ ಅವರು, ಹಿಂದೆ ಬಿಜೆಪಿ ಸರ್ಕಾರ ಇದ್ದಾಗ ಕೆಎಸ್​ ಈಶ್ವರಪ್ಪ ವಿರುದ್ಧ ಆರೋಪ ಬಂದಾಗ ರಾಜೀನಾಮೆಗೆ ಒತ್ತಾಯಿಸಿದ್ದರು. ಪ್ರತಿಪಕ್ಷಗಳ ಒತ್ತಾಯದ ಮೇರೆಗೆ ಈಶ್ವರಪ್ಪನವರ ರಾಜೀನಾಮೆ ಪಡೆಯಲಾಗಿತ್ತು. ಆದರೆ, ಈಗ ರಾಜ್ಯದಲ್ಲಿ ಅಧಿಕಾರಿಗಳನ್ನು ಬೆದರಿಸುವ ಕೆಲಸ ನಡೆಯುತ್ತಿದೆ. ಪ್ರಕರಣ ಮುಚ್ಚಿಹಾಕುವ ಸಾಧ್ಯತೆ ಇದೆ ಎಂದು ಹೇಳಿದ್ದಾರೆ.

ಸಚಿವರ ವಿರುದ್ಧ ಕೇಳಿಬಂದಿರುವ ಆರೋಪಗಳ ಬಗ್ಗೆ ಎಸ್​ಐಟಿ ಅಥವಾ ಲೋಕಾಯುಕ್ತ ಮೂಲಕ ಸ್ವತಂತ್ರ ತನಿಖೆ ಮಾಡಬೇಕು. ಮುಖ್ಯಮಂತ್ರಿ ಸಿದ್ದರಾಮಯ್ಯ ಕೂಡಲೇ ಚಲುವರಾಯಸ್ವಾಮಿ ಅವರ ರಾಜೀನಾಮೆ ಪಡೆಯಬೇಕು ಎಂದು ಜೋಶಿ ಆಗ್ರಹಿಸಿದ್ದಾರೆ.

ರಾಜ್ಯ ಕಾಂಗ್ರೆಸ್ ಸರ್ಕಾರ ಭ್ರಷ್ಟಾಚಾರದ ಎಲ್ಲ ಮಿತಿಗಳನ್ನು ಮೀರುತ್ತಿದೆ. ಗುತ್ತಿಗೆದಾರರು ಕೂಡ ಆಣೆ ಪ್ರಮಾಣದ ಬಗ್ಗೆ ಮಾತನಾಡುತ್ತಿದ್ದಾರೆ. ಉಪ ಮುಖ್ಯಮಂತ್ರಿ ಡಿಕೆ ಶಿವಕುಮಾರ್, ಅಜ್ಜಯ್ಯನ ಮಠಕ್ಕೆ ಬಂದು ಆಣೆ ಮಾಡಲಿ ಎಂದು ಹೇಳುತ್ತಿದ್ದಾರೆ. ಅವರು ಆಣೆ ಮಾಡಲಿ ಅಥವಾ ಗುತ್ತಿಗೆದಾರರು ತಪ್ಪು ಮಾಡಿದ್ದರೆ ಕೇಸ್ ಹಾಕಲಿ ಎಂದು ಜೋಶಿ ಸವಾಲೆಸೆದರು.

ಇದನ್ನೂ ಓದಿ: ಕೆಂಪಣ್ಣ ಕ್ಲೀನ್‌ಚಿಟ್ ಕೊಟ್ಟರೆ ಬಿಲ್ ಬಿಡುಗಡೆಯಾಗುತ್ತಾ? ಎಟಿಎಂ ಸರ್ಕಾರ ಎಂಬುದು ಮತ್ತೆ ನಿಜವಾಗುತ್ತಿದೆ; ಬೊಮ್ಮಾಯಿ ಆಕ್ರೋಶ

ಮಳೆಯಿಂದ ಸಾಕಷ್ಟು ಹಾನಿಯಾಗಿದೆ, ರಸ್ತೆಗಳು ಹಾಳಾಗಿ ಸಂಚಾರ ಸ್ಥಗಿತಗೊಂಡಿದೆ. ಅಭಿವೃದ್ಧಿ ಕಾರ್ಯಗಳಿಗೆ ಸರ್ಕಾರ ಅನುದಾನ ಬಿಡುಗಡೆ ಮಾಡುತ್ತಿಲ್ಲ. ರಾಜ್ಯ ಸರ್ಕಾರ ಗ್ಯಾರಂಟಿ ಜೊತೆಗೆ ಅಭಿವೃದ್ಧಿ ಕೆಲಸವನ್ನೂ ಮಾಡಬೇಕು. ಗುತ್ತಿಗೆದಾರರು ಬಿಜೆಪಿ ಸರ್ಕಾರದ ವಿರುದ್ಧ ಆರೋಪಿಸಿದಾಗ ಅವರನ್ನು ಬಳಸಿಕೊಂಡರು. ಈಗ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿದಾಕ್ಷಣ ಬಿಜೆಪಿ ಪರ ಅಂತ ಟೀಕಿಸುತ್ತಿದ್ದಾರೆ. ಗುತ್ತಿಗೆದಾರರ ಕೆಲಸ ಪರಿಶೀಲಿಸಿ ತಪ್ಪು ಮಾಡಿದ್ದರೆ ಕಪ್ಪುಪಟ್ಟಿಗೆ ಸೇರಿಸಬೇಕು ಎಂದು ಪ್ರಹ್ಲಾದ್ ಜೋಶಿ ಸರ್ಕಾರವನ್ನು ಒತ್ತಾಯಿಸಿದ್ದಾರೆ.

ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ