ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ದರೂ ಹಿಡಿದು ತರುತ್ತೇವೆ: ಸಿದ್ದರಾಮಯ್ಯ

| Updated By: ವಿವೇಕ ಬಿರಾದಾರ

Updated on: May 03, 2024 | 12:55 PM

Prajwal Revanna Sexual Assault Case: ಸಂಸದ ಪ್ರಜ್ವಲ್​ ರೇವಣ್ಣ ಅವರು ಮಹಿಳೆಯರ ಮೇಲೆ ಲೈಂಗಿಕ ದೌರ್ಜನ್ಯ ಮತ್ತು ಕಿರುಕುಳ ನೀಡಿದ್ದಾರೆ ಎಂಬ ಆರೋಪದಡಿ ದೂರು ದಾಖಲಾಗಿದೆ. ಪ್ರಕರಣದ ವಿಚಾರಣೆ ಎಸ್​ಐಟಿ ನಡೆಸುತ್ತಿದೆ. ಆದರೆ ಪ್ರಜ್ವಲ್​ ರೇವಣ್ಣ ವಿದೇಶದಲ್ಲಿದ್ದಾರೆ. ಈ ವಿಚಾರವಾಗಿ ಮುಖ್ಯಮಂತ್ರಿ ಸಿದ್ದರಾಮಯ್ಯ ಮಾತನಾಡಿ, ಯಾವುದೇ ದೇಶದಲ್ಲಿದ್ದರು ಹಿಡಿದು ತರುತ್ತೇವೆ ಎಂದರು.

ಪ್ರಜ್ವಲ್ ರೇವಣ್ಣ ಯಾವುದೇ ದೇಶದಲ್ಲಿದ್ದರೂ ಹಿಡಿದು ತರುತ್ತೇವೆ: ಸಿದ್ದರಾಮಯ್ಯ
ಸಿಎಂ ಸಿದ್ದರಾಮಯ್ಯ
Follow us on

ಬೆಂಗಳೂರು, ಮೇ 03: ಪ್ರಜ್ವಲ್ ರೇವಣ್ಣ (Prajwal Revanna) ಅವರು ಯಾವುದೇ ದೇಶದಲ್ಲಿದ್ದರೂ
ಹಿಡಿದು ತರುತ್ತೇವೆ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ (Siddaramaiah) ಅವರು ಹೇಳಿದರು. ಬಾಗಲಕೋಟೆಯಲ್ಲಿ ಮಾಧ್ಯಮ ಪ್ರತಿನಿಧಿಗಳೊಂದಿಗೆ ಮಾತನಾಡಿದ ಅವರು, ಪ್ರಜ್ವಲ್​ ರೇವಣ್ಣ ಅವರ ಪಾಸ್​ಪೋರ್ಟ್ ಸಂಬಂಧ ನಾನು ಪ್ರಧಾನಿ ಮೋದಿಯವರಿಗೆ ಪತ್ರ ಬರೆದಿದ್ದೇನೆ. ಪಾಸ್​ಪೋರ್ಟ್​ ರದ್ದತಿ ಅಧಿಕಾರವಿರುವುದು ಕೇಂದ್ರ ಸರ್ಕಾರಕ್ಕೆ ಮಾತ್ರ. ಆದರೆ ಪ್ರಜ್ವಲ್ ರೇವಣ್ಣ ಅವರನ್ನು ಕೇಂದ್ರ ಸರಕಾರವೇ ರಕ್ಷಣೆ ‌ಮಾಡುತ್ತಿದೆ ಎಂದು ಆರೋಪಿಸಿದರು.

ಹೆಚ್​ಡಿ ಕುಮಾರಸ್ವಾಮಿ ಚುನಾವಣೆ ವೇಳೆ ಪ್ರಜ್ವಲ್ ರೇವಣ್ಣ ನನ್ನ ಮಗ ಎಂದು ಹೇಳಿದ್ದರು. ನನ್ನ ಮಗ ನಿಖಿಲ್​ ಬೇರೆ ಅಲ್ಲ, ಪ್ರಜ್ವಲ್ ರೇವಣ್ಣ ಬೇರೆ ಅಲ್ಲ ಅಂದಿದ್ದರು. ಈಗ ಅವರ ಕುಟುಂಬ ಬೇರೆ ನಮ್ಮ ಕುಟುಂಬ ಬೇರೆ ಅಂತಿದ್ದಾರೆ. ಪ್ರಜ್ವಲ್ ಪ್ರಕರಣ ಮೊದಲೆ ಬಿಜೆಪಿಗೂ ಗೊತ್ತಿತ್ತು. ಆದರೂ ಜೆಡಿಎಸ್ ಜೊತೆ ಹೊಂದಾಣಿಕೆ ಮಾಡಿಕೊಂಡರು. ಈಗ ಯಾಕೆ ಕ್ರಮ ವಹಿಸುತ್ತಿಲ್ಲ ಎಂದು ಪ್ರಶ್ನಿಸಿದರು.

ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ: ಡಿಕೆ ಶಿವಕುಮಾರ್​

ಪ್ರಕರಣದ ತನಿಖೆಗೆ ಪೊಲೀಸರಿಗೆ ಫ್ರೀ ಹ್ಯಾಂಡ್ ನೀಡಲಾಗಿದೆ. ಬಿಜೆಪಿಯವರು ಈಗ ಯಾಕೆ ಯಾರು ಮಾತನಾಡುತ್ತಿಲ್ಲ. ಸಿ.ಟಿ.ರವಿ, ಪ್ರಹ್ಲಾದ್ ಜೋಶಿ, ಶೋಭಾ ಕರಂದ್ಲಾಜೆ, ಸದಾನಂದಗೌಡ, ಆರ್​. ಅಶೋಕ್​​ ಎಲ್ಲಿ ಹೋದರು? ಮಹಿಳೆಯರ ಬಗ್ಗೆ ಗೌರವ ಇಟ್ಟುಕೊಂಡಿದ್ದೇವೆಂದು ಹೇಳುತ್ತಾರೆ, ಈಗ ಮಹಿಳೆಯರಿಗೆ ಅನ್ಯಾಯ ಆಗಿದೆ ಯಾಕೆ ಮಾತನಾಡಿಲ್ಲ. ಸಂತ್ರಸ್ತ ಮಹಿಳೆಯರಿಗೆ ಧೈರ್ಯ ಹೇಳುವ ಕೆಲಸ ಮಾಡಲಿ ಎಂದು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಹೇಳಿದರು.

ಇದನ್ನೂ ಓದಿ: ಅಶ್ಲೀಲ ವಿಡಿಯೋ ಪ್ರಕರಣ: ಮಾಜಿ ಸಚಿವ ಹೆಚ್​ಡಿ ರೇವಣ್ಣಗೆ ಮತ್ತೊಂದು ಸಂಕಷ್ಟ, ಮೈಸೂರಿನಲ್ಲಿಯೂ ಕೇಸ್ ದಾಖಲು

ಲೋಕಸಭೆ ಚುನಾವಣೆ ಬಳಿಕ ಸಿದ್ದರಾಮಯ್ಯ ಅವರ ಸಿಡಿ ಬಿಡಬಹುದು ಎಂಬ ಬಿಜೆಪಿ ಅಭ್ಯರ್ಥಿ ರಾಜುಗೌಡ ಹೇಳಿಕೆಗೆ ಡಿಸಿಎಂ ಡಿಕೆ ಶಿವಕುಮಾರ್ ತಿರುಗೇಟು ನೀಡಿದರು. ರಾಜುಗೌಡ ಒಬ್ಬ ಮೆಂಟಲ್ ಕೇಸ್ ಎಂದರು.

ನೋಟಿಸ್​ಗೆ ಸ್ಪಂದಿಸದಿದ್ದರೇ ಕಾನೂನು ಕ್ರಮ: ಪರಮೇಶ್ವರ್​

ಸೆಕ್ಷನ್​​ 41ಎ ಅಡಿಯಲ್ಲಿ ಪ್ರಜ್ವಲ್​​ಗೆ ನೋಟಿಸ್ ಜಾರಿ ಮಾಡಿದ್ದೇವೆ. ಪ್ರಜ್ವಲ್ ಪರ ವಕೀಲರು ಟೈಂ ಕೊಡಿ ಅಂತ ಕೇಳಿದ್ದಾರೆ. ಸಮಯ ಕೊಡಲು ಅವಕಾಶ ಇಲ್ಲ ಎಂದು ತಿಳಿಸಿದ್ದೇವೆ. ಹೆಚ್​ಡಿ ರೇವಣ್ಣ ಕೂಡ 24 ಗಂಟೆ ಸಮಯ ಕೇಳಿದ್ದಾರೆ. ಕಾನೂನು ಪ್ರಕಾರ ಮತ್ತೊಂದು ನೋಟಿಸ್ ನೀಡಿದ್ದೇವೆ. ಅದಕ್ಕೂ ಸ್ಪಂದಿಸದಿದ್ದರೆ ಕಾನೂನು ಕ್ರಮ ಕೈಗೊಳ್ಳುತ್ತೇವೆ. ಲುಕ್ ಔಟ್ ನೊಟೀಸ್ ಕೂಡ ಜಾರಿ ಮಾಡಿದ್ದೇವೆ ಎಂದು ಗೃಹ ಸಚಿಚ ಜಿ ಪರಮೇಶ್ವರ್​​ ಹೇಳಿದರು.

ರಾಜ್ಯದ ಇನ್ನಷ್ಟು ಸುದ್ದಿಗಳಿಗೆ ಇಲ್ಲಿ ಕ್ಲಿಕ್ ಮಾಡಿ

Published On - 11:58 am, Fri, 3 May 24