ಸಾವಿರಾರು ವರ್ಷಗಳ ಹಿಂದೆಯೇ ಮಳೆ ಕೊಯ್ಲು ಅಳವಡಿಸಿಕೊಂಡು ನಿರ್ಮಿಸಿರುವ ಈ ದೇವಾಲಯಕ್ಕೆ ಹೋಗೋಣಾ ಬನ್ನೀ!

Ellora Kailasa Temple: ತಂತ್ರಜ್ಞಾನಕ್ಕೆ ಸವಾಲಾಗಿರುವ ಸುಮಾರು 1200 ವರ್ಷಗಳಷ್ಟು ಹಳೆಯ ಎಲ್ಲೋರದ ಕೈಲಾಸ ದೇವಾಲಯ ವಸ್ತುಶಿಲ್ಪದ ಚಕಿತ ಎನ್ನಬಹುದು. ಈ ದೇವಾಲಯವನ್ನು ಒಂದೇ ಕಲ್ಲಿನಲ್ಲಿ ನಿರ್ಮಿಸಲಾಗಿದೆ. ಇಲ್ಲಿ ಇನ್ನೊಂದು ವಿಶೇಷವೆಂದರೆ ಎಲ್ಲೋರದ ದೇವಸ್ಥಾನಗಳಲ್ಲಿ ಮಳೆ ಕೊಯ್ಲು ಅಳವಡಿಸಲಾಗಿದೆ. ಈ ದೇವಾಲಯ ನಿರ್ಮಾಣದ ಹಿಂದೆ ಅದ್ಭುತ ಕಥೆಯೂ ಇದೆ. ಬನ್ನಿ ಈ ಬಗ್ಗೆ ಈ ಲೇಖನದಲ್ಲಿ ವಿಸ್ತಾರವಾಗಿ ತಿಳಿಯಿರಿ.

ಸಾವಿರಾರು ವರ್ಷಗಳ ಹಿಂದೆಯೇ ಮಳೆ ಕೊಯ್ಲು ಅಳವಡಿಸಿಕೊಂಡು ನಿರ್ಮಿಸಿರುವ ಈ ದೇವಾಲಯಕ್ಕೆ ಹೋಗೋಣಾ ಬನ್ನೀ!
ಎಲ್ಲೋರದ ಕೈಲಾಸ ದೇವಾಲಯ
Follow us
|

Updated on:Sep 10, 2024 | 3:19 PM

ಮಳೆ ತುಸು ಹೆಚ್ಚೇ ಸುರಿದರೂ ಮನೆಗಳಿಗೆ ನೀರು ನುಗ್ಗುವುದು, ಜಲಾಶಯಗಳ ಗೇಟು ಕಿತ್ತುಹೋಗುವುದು ಈಗೀಗ ಸಾಮಾನ್ಯವಾಗಿದೆ. ಇನ್ನು ಬಿಹಾರದಲ್ಲಿ ಇತ್ತೀಚೆಗೆ ವಾರ ಹದಿನೈದು ದಿನದಲ್ಲಿ ಹತ್ತಾರು ಬ್ರಿಡ್ಜ್​​ಗಳೇ ಉದುರಿಬಿದ್ದವು. ಅತ್ಯಾಧುನಿಕ ನಿರ್ಮಾಣ ತಂತ್ರಜ್ಞಾನದ ಮಧ್ಯೆಯೂ ಇಂದಿನ ಮಾನವ ನಿರ್ಮಿತ ಕಟ್ಟಡಗಳು ಶಿಥಿಲಗೊಳ್ಳುತ್ತಿರುವುದನ್ನು ನೋಡಿದಾಗ ಮನುಷ್ಯನ ಮೇಲಿನ ನಂಬಿಕೆಯೇ ಕುಸಿಯುತ್ತದೆ. ಇದಕ್ಕಿಂತಾ ಕೆಟ್ಟ ಪ್ರಸಂಗವೆಂದರೆ ಇತ್ತೀಚೆಗೆ ರಾಜಧಾನಿ ದೆಹಲಿಯಲ್ಲಿ ಮಳೆ ಸ್ವಲ್ಪ ಜೋರಾಗಿ ಬಿದ್ದಾಗ ನೀರು ಬೇಸ್​ಮೆಂಟ್​​ಗೆ ನುಗ್ಗಿ ಭವಿಷ್ಯದ ಆಶಾಕಿರಣವಾಗಿದ್ದ ಮೂವರು ಐಎಎಸ್ ಆಕಾಂಕ್ಷಿಗಳು ಕೆಲವೇ ಕ್ಷಣಗಳಲ್ಲಿ ಜಲಸಮಾಧಿಯಾದರು. ಇದೆಲ್ಲಾ ದುರದೃಷ್ಟಕರ ತಾಜಾ ಬೆಳವಣಿಗೆಗಳಿಗೆ ಹಿಡಿದ ಕನ್ನಡಿಯಾಗಿದೆ.

ಅಷ್ಟಕ್ಕೂ ಇದೆಲ್ಲಾ ಯಾಕೆ ಹೇಳಬೇಕಾಯಿತು ಅಂದರೆ ಸರಿಸುಮಾರು 1200 ವರ್ಷಗಳ ಹಿಂದೆ ಸಮತಟ್ಟಾದ ಬೆಟ್ಟದಲ್ಲಿ ಏಕಶಿಲೆಯಲ್ಲಿ ಬೃಹದಾಕಾರದ ದೇವಸ್ಥಾನವನ್ನು ನಿರ್ಮಿಸಲಾಯಿತು. ಮಹಾರಾಷ್ಟ್ರದ ಎಲ್ಲೋರಾ ಗುಹೆಗಳಲ್ಲಿ ಕೆತ್ತಿದ ಆ ದೇಗುಲವೇ ಕೈಲಾಸ ಮಂದಿರ. ಸಾವಿರಾರು ವರ್ಷಗಳೇ ಉರುಳಿದರೂ ಆ ಬೆಟ್ಟದಿಂದ ಒಂದು ಚಿಕ್ಕ ಬಂಡೆಯೂ ಉರುಳಿಲ್ಲ! ಅಷ್ಟು ಸದೃಢವಾಗಿ ಬಂಡೆಯಂತೆ ನಿಂತಿದೆ ಆ ದೇವಸ್ಥಾನ. ಅದೇ ಇಂದಿನ ‘ಆಧುನಿಕ ಕರಕುಶಲ ಕರ್ಮಿಗಳು’ ಅಂದರೆ ದುಷ್ಕರ್ಮಿಗಳು ತಾವು ಕಟ್ಟಲಾಗದಿದ್ದರೂ ಅದನ್ನು ಬೀಳಿಸುವಲ್ಲಿ ಎತ್ತಿದ ಕೈ ಆಗಿದ್ದಾರೆ. ಯಾಕೆಂದರೆ ಆ ಕೈಲಾಸ ಮಂದಿರದಲ್ಲಿದ್ದ ಹಲವಾರು ಅದ್ಭುತ ಕುಶಲ ಕೆತ್ತನೆಗಳು, ವಿಗ್ರಹಗಳನ್ನು ಈ ದುಷ್ಕರ್ಮಿಗಳು ಮನಸೋಇಚ್ಛೆ ಕಡಿದುಹಾಕಿದ್ದಾರೆ. ಇದು ಮಾನವ ದುರಂತವೇ ಸರಿ.

ಇನ್ನು, ಲೇಖನದ ಆರಂಭದಲ್ಲಿ ಮಳೆ ಕುರಿತಾದ ಅವಘಡಗಳನ್ನು ಪ್ರಸ್ತಾಪಿಸಿದ್ದೇಕೆ ಎಂದರೆ ಸಾವಿರಾರು ವರ್ಷಗಳ ಹಿಂದಿನ ಕೈಲಾಸ ಮಂದಿರದಲ್ಲಿ ಮಳೆಕೊಯ್ಲು ವ್ಯವಸ್ಥೆಯನ್ನು ಕಟ್ಟಲಾಗಿತ್ತು. ಬೆಟ್ಟದ ಮೇಲಿಂದ ನೀರು ಹರಿದುಬರುತ್ತಿದ್ದರೂ ಕೆಳಮಟ್ಟದಲ್ಲಿರುವ ದೇವಸ್ಥಾನದೊಳಕ್ಕೆ ಒಂದು ಹನಿ ನೀರು ಹರಿದುಬಾರದಂತೆ ವ್ಯವಸ್ಥಿತವಾಗಿ ದೇವಸ್ಥಾನದ ತಲೆಯ ಸುತ್ತಲೂ ಬೆಟ್ಟದ ಆವರಣದಲ್ಲಿ ಕಾಲುವೆಗಳನ್ನು ಅಂದೇ ನಿರ್ಮಿಸಲಾಗಿದೆ. ಬೆಟ್ಟದಿಂದ ಬರುವ ಮಳೆ ನೀರು ದೇವಸ್ಥಾನದೊಳಕ್ಕೆ ನುಗ್ಗದೆ, ಮುಂದಕ್ಕೆ ಕೃಷಿ ಭೂಮಿಗಳತ್ತ ಹರಿದುಹೋಗುವಂತೆ ಅಂದಿಗೇ ಕಾಲುವೆ ವ್ಯವಸ್ಥೆಗಳನ್ನು ನಿರ್ಮಾಣ ಮಾಡಲಾಗಿದೆ. ಅದು ಅದ್ಭುತವಲ್ಲದೆ ಮತ್ತಿನ್ನೇನು, ಅಲ್ಲವಾ? ಬನ್ನಿ ಹಾಗಾದರೆ ಬೆಟ್ಟದ ತಳದಲ್ಲಿರುವ ಆ ಪೌರಾಣಿಕ ದೇಗುಲಕ್ಕೆ ಒಂದು ಪ್ರದಕ್ಷಿಣೆ ಹಾಕಿ ಆ ಕಾಲದ ಅದ್ಭುತ ರಚನೆ ಹೇಗಿದೆ ಎಂಬುದನ್ನು ಕಣ್ತುಂಬಿಕೊಂಡು ಬರೋಣ.

ಸಾವಿರಾರು ವರ್ಷಗಳ ಹಿಂದೆ ಒಂದೇ ಕಲ್ಲಿನಲ್ಲಿ ಕೆತ್ತಲಾದ ಎಲ್ಲೋರವೂ ಅದ್ಭುತವೇ ಸರಿ

ಮಹಾರಾಷ್ಟ್ರದ ಔರಂಗಾಬಾದ್‌ನಲ್ಲಿರುವ ಎಲ್ಲೊರಾ ಗುಹೆಗಳು ವಾಸ್ತುಶಿಲ್ಪದ ಅದ್ಭುತ ಎನ್ನಬಹುದು. ಎಲ್ಲೋರದಲ್ಲಿರುವ 34 ಗುಹೆ ದೇವಾಲಯಗಳಲ್ಲಿ ಕೈಲಾಸ ದೇವಸ್ಥಾನವೂ ಒಂದು. ಇದನ್ನು ಕೈಲಾಸನಾಥ ದೇವಾಲಯ ಎಂದೂ ಸಹ ಕರೆಯುತ್ತಾರೆ. ಆಗ್ರಾದ ತಾಜ್ ಮಹಲ್ ಅನ್ನು ಪ್ರಪಂಚದ ಅದ್ಭುತಗಳಲ್ಲಿ ಒಂದು ಎಂದು ಪರಿಗಣಿಸಲಾಗಿದೆ. ಆದರೆ ಕೈಲಾಸ ದೇವಾಲಯವನ್ನು ಪ್ರಪಂಚದ ಅದ್ಭುತ ಎಂದು ಪರಿಗಣಿಸಲಾಗಿಲ್ಲ. ಆಧುನಿಕ ಉಪಕರಣಗಳನ್ನು ಬಳಸಿಕೊಂಡು ತಾಜ್ ಮಹಲ್ ಅನ್ನು ಮರುಸೃಷ್ಟಿಸಬಹುದು ಆದರೆ ಕೈಲಾಸ ದೇವಾಲಯವನ್ನು ಸೃಷ್ಟಿಸಲು ಆಗಲ್ಲ ಎಂದು ಅನೇಕರು ವಾದ ಮಾಡಿದ್ದಾರೆ. ಇದು ನಿಜವೂ ಹೌದು. ಒಂದೇ ಕಲ್ಲಿನಲ್ಲಿ ಇಂತಹ ಬೃಹತ್ ದೇವಾಲಯಗಳ ಸೂಕ್ಷ್ಮ ಕೆತ್ತನೆ ಅಸಾಧ್ಯದ ಮಾತು.

ಕೈಲಾಸ ದೇವಸ್ಥಾನ ಕುರಿತು esamskriti.com ವೆಬ್​ಸೈಟ್​​ನಲ್ಲಿ ಪ್ರಕಟವಾಗಿರುವ ಫೋಟೋಗಳನ್ನು ನೋಡಲು ಇಲ್ಲಿ ಕ್ಲಿಕ್ ಮಾಡಿ

ಆಧುನಿಕ ಉಪಕರಣಗಳು, ಯಂತ್ರಗಳೇ ಇಲ್ಲದ ಸಾವಿರಾರು ವರ್ಷಗಳ ಹಿಂದೆಯೇ ಇಂತಹ ದೇವಾಲಯವನ್ನು ಹೇಗೆ ನಿರ್ಮಿಸಲಾಯಿತು ಎಂದು ವಿಜ್ಞಾನದಲ್ಲೂ ಉತ್ತರ ಸಿಕ್ಕಿಲ್ಲ. ಕೈಲಾಸ ದೇವಾಲಯವು ವಿಶ್ವದ ಅತಿದೊಡ್ಡ ಏಕಶಿಲೆಯ ವಾಸ್ತುಶಿಲ್ಪವಾಗಿದೆ. ಈ ದೇವಾಲಯವನ್ನು ನಿರ್ಮಿಸಲು ದೈತ್ಯ ಪರ್ವತವನ್ನೇ ಕಡಿದು ಕೆತ್ತನೆ ಮಾಡಲಾಗಿದೆ. ಈ ದೇವಾಲಯವನ್ನು ನಿರ್ಮಿಸಲು 18-20 ವರ್ಷಗಳು ಬೇಕಾಯಿತು ಎಂದು ಕೆಲ ಕಡೆ ಉಲ್ಲೇಖವಿದೆ. Ellora Kailasa Temple history and detailed information who built who destroyed kannada news

ಇದನ್ನೂ ಓದಿ: Thanjavur Brihadeeswara Temple: ಸಾವಿರ ವರ್ಷಗಳಷ್ಟು ಹಳೆಯ ಈ ದೇವಾಲಯದಲ್ಲಿ ಅಡಗಿದೆ ಊಹಿಸಲೂ ಆಗದಷ್ಟು ವಿಸ್ಮಯ

ಬೃಹತ್ ಶಿಲೆಯ ಈ ದೇವಾಲಯವು 8 ನೇ ಶತಮಾನದಲ್ಲಿ ಬಸಾಲ್ಟಿಕ್ ಬಂಡೆಗಳಿಂದ (Basaltic Rocks) ಕೆತ್ತಲಾಗಿದೆ ಎಂದು ನಂಬಲಾಗಿದೆ. ಕೈಲಾಸ ದೇವಾಲಯದ ರಚನೆಯು ದ್ರಾವಿಡ ಶೈಲಿಯ ವಾಸ್ತುಶಿಲ್ಪವನ್ನು ಹೊಂದಿದೆ. ಕೈಲಾಸ ದೇವಾಲಯವು ರಾಷ್ಟ್ರಕೂಟ ವಂಶದ ರಾಜ ಒಂದನೇ ಕೃಷ್ಣನಿಂದ ನಿರ್ಮಿಸಲ್ಪಟ್ಟಿತು ಎಂದು ಇತಿಹಾಸ ಹೇಳುತ್ತೆ. ಹಿಂದೂ ಪುರಾಣಗಳ ಪ್ರಕಾರ ಕೈಲಾಸ ಪರ್ವತದಲ್ಲಿ ಶಿವನ ನಿವಾಸದ ಪ್ರತಿರೂಪವಾಗಿ ಈ ದೇವಾಲಯವನ್ನು ನಿರ್ಮಿಸಲಾಗಿದೆ ಎಂದು ನಂಬಲಾಗಿದೆ.

Ellora Kailasa Temple

ಪುರಾತತ್ತ್ವ ಶಾಸ್ತ್ರಜ್ಞರ ಪ್ರಕಾರ, ಈ ಅದ್ಭುತ ರಚನೆಗಳನ್ನು ಮಾಡಲು 400,000 ಟನ್‌ಗಳಿಗಿಂತ ಹೆಚ್ಚು ದೊಡ್ಡ ಬೆಟ್ಟದಂತ ಬಂಡೆಯನ್ನೇ ಕೊರೆಯಲಾಗಿದೆ. ಪರ್ವತದ ತುದಿಯಿಂದ ಪ್ರಾರಂಭಿಸಿ ಕೆಳಮುಖವಾಗಿ ಕೆತ್ತಲಾಗಿದೆ. ಇಲ್ಲಿನ ದೇವಾಲಯವು 60 ಅಡಿ (18.29 ಮೀಟರ್) ಎತ್ತರ ಮತ್ತು 200 ಅಡಿ (60.69 ಮೀಟರ್) ಅಗಲವಿದೆ. ದೇವಾಲಯದ ಪ್ರವೇಶದ್ವಾರದಲ್ಲಿ ದೊಡ್ಡ ಸ್ತಂಭಗಳು, ವಿಭಿನ್ನ ಕೆತ್ತನೆ, ರಚನೆಗಳಿನ್ನು ನೋಡಬಹುದು. ಒಳಾಂಗಣ ಅಂಗಳವನ್ನು ‘ಯು’ ಆಕಾರದಲ್ಲಿ ನಿರ್ಮಿಸಲಾಗಿದ್ದು ಅದು ವಿಶಾಲವಾಗಿ ಕಾಣುತ್ತದೆ. ಸ್ತಂಭಗಳ ಮೇಲಿನ ಕೆತ್ತನೆಗಳು ಪೌರಾಣಿಕ ಕಥೆಗಳನ್ನು ಚಿತ್ರಿಸುತ್ತವೆ.

18-20 ವರ್ಷದಲ್ಲಿ 400,000 ಟನ್ ಕಲ್ಲು ಕೊರೆದು ಅದ್ಭುತವಾದ ದೇವಾಲಯ ನಿರ್ಮಿಸಲು ಯಾವ ರೀತಿ ಕಾರ್ಮಿಕರು ಕೆಲಸ ಮಾಡಿರಬಹುದು? ಆಗಿನ ಇಂಜಿನಿಯರ್​ಗಳು ಎಷ್ಟು ಶ್ರಮ ಪಟ್ಟಿರಬೇಕು? ಯಾವ ಆಧುನಿಕ ಉಪಕರಣಗಳು, ಯಂತ್ರಗಳೇ ಇಲ್ಲದೆ ಯಾವ ರೀತಿ ಸೂಕ್ಷ್ಮ ಕೆತ್ತನೆಗಳನ್ನು ಮಾಡಿರಬಹುದು? ಒಂದು ಚಿಕ್ಕ ತಪ್ಪೂ ಆಗದಂತೆ ಅಷ್ಟು ಅಚ್ಚುಕಟ್ಟಾಗಿ ಹೇಗೆ ದೇವಾಲಯ ನಿರ್ಮಿಸಿದರು ಎಂಬುವುದನ್ನೂ ನಾವು ಊಹಿಸಲು ಅಸಾಧ್ಯ.

Ellora Kailasa Temple history and detailed information who built who destroyed kannada news ಇನ್ನು ತುಂಬಾ ವಿಶೇಷವೆಂದರೆ, ಈ ದೇವಾಲಯವು ವಿವಿಧ ಗೋಪುರಗಳನ್ನು ಸಂಪರ್ಕಿಸುವ ಸೇತುವೆಗಳನ್ನು ಹೊಂದಿದೆ. ಅಂಗಳದಲ್ಲಿ ಎರಡು ಧ್ವಜಸ್ತಂಭ ಇವೆ. ಇದು ಒಳಚರಂಡಿ ಮತ್ತು ಮಳೆನೀರು ಕೊಯ್ಲು ವ್ಯವಸ್ಥೆಯನ್ನು ಹೊಂದಿದೆ. ಇತ್ತೀಚಿನ ದಿನಗಳಲ್ಲಿ ನಮ್ಮ ಸಿಟಿಗಳಲ್ಲಿ ಕಂಡು ಬರದ ವ್ಯವಸ್ಥೆ ಪುರಾತನ ದೇವಾಲಯಗಳಲ್ಲಿದೆ. ಕೈಲಾಸ ದೇವಾಲಯವು ಶಿಲ್ಪಕಲೆಗೆ ಗಮನಾರ್ಹ ಕೊಡುಗೆ ಆಗಿದೆ. ಮುಖ್ಯ ಪ್ರಾಂಗಣದಲ್ಲಿ ಶಿವಲಿಂಗವಿದ್ದು ಎದುರಿಗೆ ನಂದಿಯ ವಿಗ್ರಹವಿದೆ. ಈ ದೇವಾಲಯದ ಪ್ರಮುಖ ಅಂಶವೆಂದರೆ ತಳದಲ್ಲಿ ಆನೆಯ ಶಿಲ್ಪಗಳನ್ನು ಕಾಣಬಹುದು. ಇದು ಇಡೀ ದೇವಾಲಯವು ಈ ಆನೆಯ ಮೇಲೆ ನಿಂತಿದೆ ಎನ್ನುವಂತೆ ಭಾಸವಾಗುತ್ತೆ.

Ellora Kailasa Temple history and detailed information who built who destroyed kannada news

ವಿಷ್ಣುವಿನ ವಿವಿಧ ಅವತಾರಗಳನ್ನು ಚಿತ್ರಿಸುವ 10 ಕೆತ್ತನೆಗಳನ್ನು ನಾವು ಇಲ್ಲಿ ಕಾಣಬಹುದು. ಕೆಲವೆಡೆ ಮಹಾಭಾರತ ಮತ್ತು ರಾಮಾಯಣಕ್ಕೂ ಸಂಬಂಧಿಸುವ ಸನ್ನಿವೇಶಗಳ ಕೆತ್ತನೆಗಳಿವೆ. ರಾವಣ ಕೈಲಾಸ ಪರ್ವತವನ್ನು ಎತ್ತಲು ಪ್ರಯತ್ನಿಸುತ್ತಿರುವ ಶಿಲ್ಪವೂ ಇಲ್ಲಿ ಇದೆ.

ಕೈಲಾಸ ದೇವಾಲಯದ ಗೋಡೆಗಳ ಮೇಲಿದೆ ಪೌರಾಣಿಕ ಕಥೆಗಳು

ಕೈಲಾಸ ದೇವಾಲಯದಲ್ಲಿ 30 ದಶಲಕ್ಷಕ್ಕೂ ಹೆಚ್ಚು ಸಂಸ್ಕೃತ ಕೆತ್ತನೆಗಳಿವೆ ಎಂದು ಪುರಾತತ್ತ್ವ ಶಾಸ್ತ್ರಜ್ಞರು ಅಂದಾಜಿಸಿದ್ದಾರೆ. ಮತ್ತು ಇವುಗಳನ್ನು ಇನ್ನೂ ಕೂಡ ಅನುವಾದಿಸಲು ಸಾಧ್ಯವಾಗಿಲ್ಲವಂತೆ. ಇನ್ನು ಈ ದೇವಾಲಯದೊಳಗೆ ಕೆಲವು ಸುರಂಗಗಳಿವೆ ಮತ್ತು ಕೆಲವು ಪುರಾತತ್ತ್ವಜ್ಞರು ಈ ಸುರಂಗದೊಳಗೆ ಹೋದರೆ ವಿಶಾಲವಾದ ಭೂಗತ ನಗರ ಇರಬಹುದೆಂದು ಶಂಕಿಸಿದ್ದಾರೆ. ಆದರೆ ಈ ಸುರಂಗಗಳು ತುಂಬಾ ಚಿಕ್ಕದಾಗಿದ್ದು ಓರ್ವ ಮನುಷ್ಯ ನುಗ್ಗುವುದೂ ಕಷ್ಟವಾಗಿದೆ. ಸದ್ಯ ಈಗ ಈ ಸುರಂಗಗಳ ಪ್ರವೇಶವನ್ನು ನಿರ್ಬಂಧಿಸಲಾಗಿದೆ.

Ellora Kailasa Temple history and detailed information who built who destroyed kannada news

ಕೈಲಾಸ ದೇವಾಲಯವನ್ನು ನಿರ್ಮಿಸಿದವರು ಯಾರು?

ಕೈಲಾಸ ದೇವಾಲಯವನ್ನು ಕೇವಲ 18 ವರ್ಷಗಳಲ್ಲಿ ನಿರ್ಮಿಸಲಾಗಿದೆ ಎಂದು ಕೆಲ ಪುರಾವೆಗಳ ಆಧಾರದ ಮೇಲೆ ಅಂದಾಜಿಸಲಾಗಿದೆ. ಆದರೆ ಕೆಲ ವಿದ್ವಾಂಸರು ಇದನ್ನು ನಿರ್ಮಿಸಲು ಶತಮಾನವೇ ಬೇಕಾಯಿತು ಎಂದು ಅಭಿಪ್ರಾಯಪಟ್ಟಿದ್ದಾರೆ. ಇನ್ನು ಪುರಾತತ್ವಶಾಸ್ತ್ರಜ್ಞ M. K. ಧವಲಿಕರ್ ಅವರ ಪ್ರಕಾರ, ಕೈಲಾಸ ದೇವಾಲಯದ ಪ್ರಮುಖ ಭಾಗವನ್ನು ಒಂದನೇ ಕೃಷ್ಣನ (ಸುಮಾರು 756-773 AD) ಆಳ್ವಿಕೆಯಲ್ಲಿ ನಿರ್ಮಿಸಲಾಯಿತು. ಆದರೆ ಉಳಿದ ಭಾಗಗಳನ್ನು ನಂತರದ ಆಡಳಿತಗಾರರ ಸಮಯದಲ್ಲಿ ನಿರ್ಮಿಸಲಾಯಿತು. ಆದರೆ ಖಚಿತ ಮಾಹಿತಿ ಸಿಕ್ಕಿಲ್ಲ ಎಂದು ತಿಳಿಸಿದ್ದಾರೆ.

ರಾಜನ ಉಳಿಸಿಕೊಳ್ಳಲು ದೇವಾಲಯ ನಿರ್ಮಾಣದ ಪ್ರತಿಜ್ಞೆ ಮಾಡಿದ ರಾಣಿ

ಕೈಲಾಸ ದೇವಾಲಯದ ನಿರ್ಮಾಣವನ್ನು ಉಲ್ಲೇಖಿಸುವ ಮಧ್ಯಕಾಲೀನ ಮರಾಠಿ ದಂತಕಥೆಯೊಂದಿದೆ. ಮತ್ತು ಇದನ್ನು ಕೃಷ್ಣ ಯಾಜ್ಞವಲ್ಕಿಯ ಕಥಾ-ಕಲ್ಪತರುದಲ್ಲಿ ಕಾಣಬಹುದು. ದಂತಕಥೆಯ ಪ್ರಕಾರ, ಸ್ಥಳೀಯ ರಾಜನು ತೀವ್ರ ಅನಾರೋಗ್ಯಕ್ಕೆ ಒಳಗಾಗುತ್ತಾನೆ. ಅವನನ್ನು ಉಳಿಸಲು ಆತನ ರಾಣಿಯು ಶಿವನನ್ನು ಪ್ರಾರ್ಥಿಸುತ್ತಾಳೆ. ರಾಜ ಬೇಗ ಗುಣಮುಖನಾದರೆ ಶಿವನ ದೇವಾಲಯವನ್ನು ನಿರ್ಮಿಸುವುದಾಗಿ ಪ್ರತಿಜ್ಞೆ ಮಾಡುತ್ತಾಳೆ. ಅಷ್ಟೇ ಅಲ್ಲದೆ ದೇವಾಲಯದ ಮೇಲ್ಭಾಗ ನಿರ್ಮಾಣವಾಗಿ ಅದನ್ನು ನಾನು ನೋಡುವವರೆಗೂ ಏನನ್ನೂ ತಿನ್ನುವುದಿಲ್ಲ ಎಂದು ಆಕೆ ಶಪಥ ಮಾಡುತ್ತಾಳೆ.

ರಾಜ ಗುಣಮುಖನಾದ ನಂತರ, ರಾಣಿಯೇ ಮುಂದೆ ನಿಂತು ದೇವಾಲಯದ ನಿರ್ಮಾಣದ ಯೋಜನೆಯನ್ನು ರೂಪಿಸಲು ಪ್ರಸಿದ್ಧ ವಿದ್ವಾಂಸರು, ವಾಸ್ತುಶಿಲ್ಪಿಗಳನ್ನು ಕರೆಯುತ್ತಾಳೆ. ಆದರೆ ಬಹುತೇಕ ವಾಸ್ತುಶಿಲ್ಪಿಗಳು ಪೂರ್ಣ ದೇವಾಲಯವನ್ನು ನಿರ್ಮಿಸಲು ವರ್ಷಗಳೇ ಬೇಕು ಎಂದು ಹೇಳುತ್ತಾರೆ. ವಾಸ್ತುಶಿಲ್ಪಿಗಳ ಉತ್ತರದಿಂದ ಬೇಸರಗೊಂಡ ರಾಜ-ರಾಣಿ ವರ್ಷಾನುಗಟ್ಟಲೆ ಉಪವಾಸವಿರಲು ಆಗದು ಎಂದು ಚಿಂತಿತರಾಗುತ್ತಾರೆ.

Ellora Kailasa Temple

ಆಗ ಕೋಕಾಸನು ಎಂಬ ವಾಸ್ತುಶಿಲ್ಪಿ ಮುಂದೆ ಬಂದು ತಾನು ಈ ದೇವಾಲಯದ ನಿರ್ಮಾಣ ಮಾಡುವುದಾಗಿಯೂ ಹಾಗೂ ಒಂದು ವಾರದೊಳಗೆ ದೇವಾಲಯ ಮೇಲ್ಭಾಗವು ಗೋಚರಿಸುವುದಾಗಿಯೂ ಹೇಳುತ್ತಾನೆ. ಇದರಿಂದ ಸಂತಸಗೊಂಡ ರಾಣಿ ಒಂದು ವಾರ ಉಪವಾಸವಿದ್ದರು. ವಾಸ್ತುಶಿಲ್ಪಿ ಕೋಕಾಸನು ಬೃಹತ್ ಬೆಟ್ಟದಂತಹ ಏಕ ಶಿಲಾ ಕಲ್ಲನ್ನು ಮೇಲಿನಿಂದ ಕೊರೆಸಿ ಕೇವಲ ಒಂದು ವಾರದಲ್ಲಿ ದೇವಾಲಯದ ಮೇಲ್ಭಾಗವನ್ನು ನಿರ್ಮಿಸಿದನು. ದೇವಾಲಯದ ಮೇಲ್ಭಾಗವನ್ನು ನೋಡಿ ರಾಣಿ ಉಪವಾಸ ಬಿಟ್ಟರು. ಆದರೆ, ಇಡೀ ಕೈಲಾಸ ದೇವಾಲಯವನ್ನು ಕೆತ್ತಲು ಎಷ್ಟು ಸಮಯ ಬೇಕಾಯಿತು ಎಂಬುದು ಯಾರಿಗೂ ತಿಳಿದಿಲ್ಲ. ಈ ಕಥೆಯನ್ನು ಉಲ್ಲೇಖಿಸಲಾಗಿರುವ ಮೇರುಕೃತಿಯನ್ನೂ ಯಾರು ಬರೆದರು? ಯಾವ ಆಧಾರದ ಮೇಲೆ ಬರೆಯಲಾಯಿತು ಎಂಬುದರ ಕುರಿತು ಯಾವುದೇ ಲಿಖಿತ ದಾಖಲೆಗಳಿಲ್ಲ.

ಹೆಚ್ಚಿನ ಕಥೆಗಳು ಈ ದೇವಾಲಯ ನಿರ್ಮಾಣಕ್ಕೆ 18 ವರ್ಷಗಳು ಬೇಕಾದವು ಎಂದು ಸೂಚಿಸುತ್ತವೆ, ಆದರೆ ಕೇವಲ 18 ವರ್ಷಗಳಲ್ಲಿ ಮೇಲಿನಿಂದ ಕೆಳಕ್ಕೆ ಗಟ್ಟಿಯಾದ ಬಂಡೆಯನ್ನು ಕೆತ್ತಿ ಈ ರೀತಿಯ ದೇವಾಲಯವನ್ನು ನಿರ್ಮಿಸುವುದು ಅಸಾಧ್ಯವೆಂದು ಹೇಳಬಹುದು.

ಔರಂಗಜೇಬನ ದಾಳಿಗೂ ಅಲ್ಲಾಡದ ದೇವಾಲಯ

ಎಲ್ಲೋರಾದ ಕೈಲಾಸ ದೇವಾಲಯದ ವಿನಾಶಕ್ಕೆ ಪ್ರಯತ್ನಿಸಿದ ಬಗ್ಗೆ ಒಂದು ಕುತೂಹಲಕಾರಿ ಕಥೆಯಿದೆ. ಮೊಘಲ್ ಚಕ್ರವರ್ತಿ ಔರಂಗಜೇಬ್ ಕೈಲಾಸ ದೇವಾಲಯದ ಮೇಲೂ ದಾಳಿ ಮಾಡಲು ಪ್ರಯತ್ನಿಸಿದ್ದ. 1682 ರಲ್ಲಿ ಕೈಲಾಸ ದೇವಾಲಯವನ್ನು ಕೆಡವಲು ಆದೇಶಿಸಿದ್ದ. ನಂತರ, 1000 ಕಾರ್ಮಿಕರು 3 ವರ್ಷಗಳ ಕಾಲ ಹಗಲಿರುಳು ಶ್ರಮಿಸಿದ್ದರು. ಆದರೆ ಅವರಿಂದ ದೇವಾಲಯವನ್ನು ನಾಶ ಮಾಡಲಾಗಿಲ್ಲ. ಕೇವಲ ಕೆಲವು ಪ್ರತಿಮೆಗಳನ್ನು ವಿರೂಪಗೊಳಿಸಲಷ್ಟೇ ಆಗಿದ್ದು ಎನ್ನಲಾಗಿದೆ. ಕೊನೆಗೆ ಔರಂಗಜೇಬ್ ಕೈಲಾಸ ದೇವಾಲಯವನ್ನು ವಿನಾಶಗೊಳಿಸುವ ಯೋಜನೆಯನ್ನು ಕೈಬಿಟ್ಟ ಎಂದು ತಿಳಿದುಬಂದಿದೆ.

Ellora Kailasa Temple

ಕೈಲಾಸ ದೇವಾಲಯ ತಲುವುದು ಹೇಗೆ?

ಔರಂಗಾಬಾದ್​ನಲ್ಲಿ ವಿಮಾನ ನಿಲ್ದಾಣವಿದೆ. ಭಾರತದ ಹಲವಾರು ಪ್ರಸಿದ್ಧ ನಗರಗಳಿಂದ ಇಲ್ಲಿನ ವಿಮಾನ ನಿಲ್ದಾಣಕ್ಕೆ ವಿಮಾನ ಸಂಪರ್ಕವಿದೆ. ಬೆಂಗಳೂರಿನಿಂದ ಔರಂಗಾಬಾದ್‌ಗೆ ನೇರವಾಗಿ ವಿಮಾನದ ಮೂಲಕ ಬರಬಹುದು. ಅಥವಾ ರೈಲು ಸೇವೆ, ಬಸ್ ಸೇವೆ ಕೂಡ ಲಭ್ಯವಿದೆ. ಇನ್ನು ಔರಂಗಾಬಾದ್‌ ನಗರದೊಳಗಿನ ಬಸ್ಸುಗಳು, ಆಟೋರಿಕ್ಷಾಗಳು ಮತ್ತು ಟ್ಯಾಕ್ಸಿಗಳ ಮೂಲಕ ಕೈಲಾಸ ದೇವಾಲಯಕ್ಕೆ ಹೋಗಬಹುದು.

ಕೈಲಾಸ ದೇವಸ್ಥಾನಕ್ಕೆ ಭೇಟಿ ನೀಡಲು ಉತ್ತಮ ಸಮಯ?

ಔರಂಗಾಬಾದ್‌ಗೆ ಭೇಟಿ ನೀಡಲು ಮತ್ತು ಕೈಲಾಸ ದೇವಾಲಯವನ್ನು ನೋಡಲು ಉತ್ತಮ ಸಮಯವೆಂದರೆ ಡಿಸೆಂಬರ್ ತಿಂಗಳು. ಡಿಸೆಂಬರ್​ನಲ್ಲಿ ಎಲ್ಲೋರಾದಲ್ಲಿ ಮಹಾರಾಷ್ಟ್ರ ಪ್ರವಾಸೋದ್ಯಮ ಅಭಿವೃದ್ಧಿ ನಿಗಮ (MTDC) ಯಿಂದ ಭಾರತೀಯ ಶಾಸ್ತ್ರೀಯ ಸಂಗೀತ ಉತ್ಸವ ನಡೆಯುತ್ತದೆ. ಈ ಹಬ್ಬದಲ್ಲಿ ಆಸಕ್ತಿ ಇಲ್ಲದಿದ್ದರೆ, ಅಕ್ಟೋಬರ್ ನಿಂದ ಫೆಬ್ರುವರಿ ಭೇಟಿ ನೀಡಲು ಅತ್ಯುತ್ತಮ ಸಮಯ. ಇನ್ನು ಮಂಗಳವಾರ ಹೊರತುಪಡಿಸಿ ಎಲ್ಲಾ ದಿನಗಳಲ್ಲಿ ಬೆಳಗ್ಗೆ 6 ರಿಂದ ಸಂಜೆ 6 ರವರೆಗೆ ಕೈಲಾಸ ದೇವಾಲಯಕ್ಕೆ ಭೇಟಿ ನೀಡಬಹುದು.

ಮತ್ತಷ್ಟು ಪ್ರೀಮಿಯಂ ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ

Published On - 2:32 pm, Tue, 10 September 24