
ಭಾರತದ ಪ್ರತಿಯೊಂದು ದೇವಾಲಯಕ್ಕೂ ತನ್ನದೇ ಆದ ವಿಶಿಷ್ಟ ಇತಿಹಾಸ ಮತ್ತು ಆಚರಣೆಗಳಿವೆ. ಆದರೆ ಕೇರಳದ ಕೊಲ್ಲಂ ಜಿಲ್ಲೆಯ ಚವಲಕರ ಬಳಿ ಇರುವ ‘ಕೊಟ್ಟಂಕುಳಂಗರ ಶ್ರೀದೇವಿ ದೇವಾಲಯ’ದ ಸಂಪ್ರದಾಯ ಇಡೀ ಜಗತ್ತಿನ ಗಮನ ಸೆಳೆದಿದೆ. ಈ ದೇವಾಲಯದಲ್ಲಿ ದೇವಿಯ ದರ್ಶನ ಪಡೆಯಲು ಬಯಸುವ ಪುರುಷರು ಸಾಮಾನ್ಯ ಉಡುಪುಗಳನ್ನು ಧರಿಸಿ ಪ್ರವೇಶಿಸುವಂತಿಲ್ಲ. ಬದಲಿಗೆ, ಸೀರೆಯನ್ನುಟ್ಟು, ಸಂಪೂರ್ಣವಾಗಿ ಮಹಿಳೆಯಂತೆ ಶೃಂಗಾರಗೊಂಡ ನಂತರವೇ ದೇವಿಯ ಸನ್ನಿಧಿ ಪ್ರವೇಶಿಸಲು ಅವಕಾಶ ಸಿಗುತ್ತದೆ.
ಪ್ರತಿ ವರ್ಷ ಮಾರ್ಚ್ ತಿಂಗಳಿನಲ್ಲಿ ದೇವಾಲಯದಲ್ಲಿ ‘ಚಮಯವಿಳಕ್ಕು’ (Chamayavillakku) ಎಂಬ ವಾರ್ಷಿಕ ಉತ್ಸವವು ಅತ್ಯಂತ ವಿಜೃಂಭಣೆಯಿಂದ ನಡೆಯುತ್ತದೆ. ಈ ಸಂದರ್ಭದಲ್ಲಿ ದೇಶದ ಮೂಲೆ ಮೂಲೆಗಳಿಂದಷ್ಟೇ ಅಲ್ಲದೆ, ವಿದೇಶಗಳಿಂದಲೂ ಸಾವಿರಾರು ಪುರುಷರು ದೇವಾಲಯಕ್ಕೆ ಆಗಮಿಸುತ್ತಾರೆ. ದೇವಾಲಯದ ನಿಯಮದಂತೆ ಪ್ಯಾಂಟ್, ಶರ್ಟ್, ಕುರ್ತಾ ಅಥವಾ ಯಾವುದೇ ಸಾಂಪ್ರದಾಯಿಕ ಪುರುಷರ ಉಡುಪಿನಲ್ಲಿ ಬರಲು ಅವಕಾಶವಿಲ್ಲ. ದೇವಿಯ ಕೃಪೆಗೆ ಪಾತ್ರರಾಗಲು ಪ್ರತಿಯೊಬ್ಬ ಭಕ್ತನೂ ಸೀರೆ ಉಟ್ಟು, ಮುಖಕ್ಕೆ ಮೇಕಪ್ ಹಚ್ಚಿ, ಕೈಗೆ ಬಳೆ, ಕೂದಲಿಗೆ ಹೂವಿನ ಹಾರ ಮತ್ತು ಆಭರಣಗಳನ್ನು ಧರಿಸಿ ಮಹಿಳೆಯ ರೂಪ ತಳೆಯುತ್ತಾರೆ. ರಾತ್ರಿಯಿಡೀ ಕೈಯಲ್ಲಿ ದೀಪ (ವಿಳಕ್ಕು) ಹಿಡಿದು ದೇವಿಯ ಪ್ರದಕ್ಷಿಣೆ ಹಾಕುವುದು ಈ ಹಬ್ಬದ ಮುಖ್ಯ ವೈಶಿಷ್ಟ್ಯ.
ಹಬ್ಬದ ದಿನಗಳಲ್ಲಿ ಲಕ್ಷಾಂತರ ಪುರುಷರು ಮಹಿಳೆಯರ ವೇಷ ಧರಿಸುವುದರಿಂದ, ದೇವಾಲಯದ ಸುತ್ತಮುತ್ತ ವಿಶೇಷ ವ್ಯವಸ್ಥೆಗಳನ್ನು ಮಾಡಲಾಗಿರುತ್ತದೆ. ದೇವಾಲಯದ ಸುತ್ತ ನೂರಾರು ತಾತ್ಕಾಲಿಕ ಬ್ಯೂಟಿ ಪಾರ್ಲರ್ಗಳು ಮತ್ತು ಮೇಕಪ್ ಸ್ಟಾಲ್ಗಳು ತಲೆಯೆತ್ತುತ್ತವೆ. ಪರಿಣಿತ ಮೇಕಪ್ ಕಲಾವಿದರು ಪುರುಷರಿಗೆ ಅಚ್ಚುಕಟ್ಟಾಗಿ ಸೀರೆ ಕಟ್ಟುವುದು, ಮೇಕಪ್ ಮಾಡುವುದು ಹಾಗೂ ಆಭರಣಗಳನ್ನು ತೊಡಿಸಲು ಸಹಾಯ ಮಾಡುತ್ತಾರೆ. ವಯಸ್ಸಿನ ಭೇದವಿಲ್ಲದೆ ಸಣ್ಣ ಮಕ್ಕಳಿಂದ ಹಿಡಿದು ವೃದ್ಧರವರೆಗೆ ಯಾವುದೇ ಹಿಂಜರಿಕೆಯಿಲ್ಲದೆ ಭಕ್ತಿಯಿಂದ ಈ ಅಲಂಕಾರ ಮಾಡಿಕೊಂಡು ಹಬ್ಬದಲ್ಲಿ ಪಾಲ್ಗೊಳ್ಳುತ್ತಾರೆ.
ಇದನ್ನೂ ಓದಿ: ತಪ್ಪಿಯೂ ಈ ದಿನ ದೇವರ ಕೋಣೆಯನ್ನು ಸ್ವಚ್ಛಗೊಳಿಸಬೇಡಿ; ಸರಿಯಾದ ನಿಯಮ ಇಲ್ಲಿದೆ
ಈ ಅಪರೂಪದ ಆಚರಣೆಯ ಹಿಂದೆ ಒಂದು ಕುತೂಹಲಕಾರಿ ಹಿನ್ನೆಲೆಯಿದೆ. ಬಹಳ ಹಿಂದೆ, ಈ ಪ್ರದೇಶದಲ್ಲಿದ್ದ ದನಗಾಹಿ ಹುಡುಗರು ಆಟವಾಡುತ್ತಾ ಹುಡುಗಿಯರಂತೆ ವೇಷ ಧರಿಸಿ ಇಲ್ಲಿನ ಸ್ವಯಂಭೂ ಕಲ್ಲಿಗೆ (ದೇವಿಯ ಸಂಕೇತ) ಹೂವುಗಳನ್ನು ಅರ್ಪಿಸಿ ಪೂಜಿಸುತ್ತಿದ್ದರು. ಅವರ ಮುಗ್ಧ ಭಕ್ತಿಗೆ ಒಲಿದ ದೇವಿಯು ಪ್ರತ್ಯಕ್ಷಳಾಗಿ ಅವರಿಗೆ ಆಶೀರ್ವದಿಸಿದಳು ಎಂಬ ನಂಬಿಕೆಯಿದೆ. ಆ ಘಟನೆಯ ನೆನಪಿಗಾಗಿ ಮತ್ತು ದೇವಿಯನ್ನು ಪ್ರಸನ್ನಗೊಳಿಸಲು ಅಂದಿನಿಂದ ಪುರುಷರು ಮಹಿಳೆಯರ ವೇಷ ಧರಿಸಿ ಪೂಜಿಸುವ ಸಂಪ್ರದಾಯ ಆರಂಭವಾಯಿತು.
ಈ ದೇವಾಲಯಕ್ಕೆ ಭೇಟಿ ನೀಡಿ, ಸ್ತ್ರೀ ರೂಪದಲ್ಲಿ ದೇವಿಯನ್ನು ಆರಾಧಿಸಿದರೆ ಭಕ್ತರ ಪ್ರತಿಯೊಂದು ಇಷ್ಟಾರ್ಥಗಳೂ ಈಡೇರುತ್ತವೆ ಎಂಬ ದೃಢ ನಂಬಿಕೆಯಿದೆ. ಉತ್ತಮ ಉದ್ಯೋಗ, ಆರೋಗ್ಯ, ಕೌಟುಂಬಿಕ ಶಾಂತಿ, ವಿವಾಹ ಯೋಗ ಹಾಗೂ ಸಂತಾನ ಭಾಗ್ಯಕ್ಕಾಗಿ ಪ್ರಾರ್ಥಿಸಿ ಸಹಸ್ರಾರು ಭಕ್ತರು ಈ ಹಬ್ಬದಲ್ಲಿ ಭಾಗವಹಿಸುತ್ತಾರೆ. ಧರ್ಮ, ಭಕ್ತಿ ಮತ್ತು ಲಿಂಗ ನಿರಪೇಕ್ಷಿತ ಸಂಸ್ಕೃತಿಯನ್ನು ಬೆಸೆಯುವ ಈ ಆಚರಣೆ ಕೇರಳದ ಅತ್ಯಂತ ಅಪರೂಪದ ಆಧ್ಯಾತ್ಮಿಕ ಪರಂಪರೆಯಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ