
ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವಕ್ಕೆ (Mysore Dasara) ಅಂತಿಮ ಹಂತದ ಸಿದ್ಧತೆಗಳು ನಡೆಯುತ್ತಿವೆ. ಚಾಮುಂಡಿಬೆಟ್ಟದಲ್ಲಿ ನಾಡಹಬ್ಬ ದಸರಾ ಉದ್ಘಾಟನೆಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತಿದೆ. ನಾಳೆ ಬೆಳಿಗ್ಗೆ 10 ಗಂಟೆಗೆ ರಾಷ್ಟ್ರಪತಿ ದ್ರೌಪದಿ ಮುರ್ಮು (Draupadi Murmu) ಬೆಳ್ಳಿ ರಥದಲ್ಲಿರುವ ಪಂಚಲೋಹದ ಮಹಿಷಮರ್ದಿನಿಯ ಪಂಚಲೋಹದ ವಿಗ್ರಹಕ್ಕೆ ಪೂಜೆ ಸಲ್ಲಿಸುವ ಮೂಲಕ ದಸರಾ ಮಹೋತ್ಸವಕ್ಕೆ ವಿಧ್ಯುಕ್ತ ಚಾಲನೆ ನೀಡಲಿದ್ದಾರೆ. ದಸರಾ ಉದ್ಘಾಟನೆ ಹಿನ್ನೆಲೆಯಲ್ಲಿ ಮೈಸೂರು ನಗರದೆಲ್ಲೆಡೆ ಪೊಲೀಸರು ಬಂದೋಬಸ್ತ್ ಒದಗಿಸಿದ್ದಾರೆ. ಚಾಮುಂಡಿ ಬೆಟ್ಟದಲ್ಲಿ ಭದ್ರತೆಗಾಗಿ 500ಕ್ಕೂ ಹೆಚ್ಚು ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ದಸರಾ ಉದ್ಘಾಟನೆಗಾಗಿ ರಾಷ್ಟ್ರಪತಿ ಆಗಮಿಸುವ ಹಿನ್ನೆಲೆಯಲ್ಲಿ ಚಾಮುಂಡಿ ಬೆಟ್ಟದ ಸುತ್ತಲೂ ಪೊಲೀಸ್ ಸರ್ಪಗಾವಲು ಹಾಕಲಾಗಿದೆ. ಬೆಟ್ಟಕ್ಕೆ ತೆರಳುವ ತಾವರೆಕಟ್ಟೆ ಮುಖ್ಯ ದ್ವಾರದಲ್ಲಿ ವಾಹನಗಳ ತಪಾಸಣೆ ಮಾಡಲಾಗುತ್ತಿದೆ. ಯಾವುದೇ ಅಹಿತಕರ ಘಟನೆ ನಡೆಯದಂತೆ ಪೊಲೀಸರು ಕಟ್ಟೆಚ್ಚರ ವಹಿಸಿದ್ದಾರೆ. ಬೆಟ್ಟದ ಪಾದದಿಂದ ತುದಿಯವರೆಗೂ ವಿಶೇಷ ಪೊಲೀಸ ದಳವು ಹಲವು ಬಾರಿ ಮಾರ್ಗವನ್ನು ತಪಾಸಣೆ ಮಾಡಿದೆ. ಬೆಟ್ಟದ ಮಾರ್ಗದಲ್ಲಿ 24 ಗಂಟೆ ಮೊದಲೇ ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ.
ಪ್ಲಾಸ್ಟಿಕ್ ಮುಕ್ತ ದಸರಾ ಅಭಿಯಾನಕ್ಕೆ ಹಲವು ಸಂಸ್ಥೆಗಳ ನೆರವು
ಪ್ಲಾಸ್ಟಿಕ್ ಮುಕ್ತ ದಸರಾ ಅಭಿಯಾನಕ್ಕೆ ಹಲವು ಸಂಸ್ಥೆಗಳು ನೆರವು ನೀಡುತ್ತಿವೆ ಎಂದು ‘ಟಿವಿ9’ಗೆ ಜೆಎಸ್ಎಸ್ ಯೋಗ ಸಂಸ್ಥೆಯ ಸಂಸ್ಥಾಪಕ ಶ್ರೀಹರಿ ಪ್ರತಿಕ್ರಿಯಿಸಿದರು. ನಗರದ ವಿವಿಧೆಡೆ ಬಿದ್ದಿರುವ ಪ್ಲಾಸ್ಟಿಕ್ ಸಂಗ್ರಹಿಸಿ ಜನರಲ್ಲಿ ಜಾಗೃತಿ ಮೂಡಿಸಲಾಗುವುದು. ಇದಕ್ಕಾಗಿ ಪ್ರತ್ಯೇಕ ಕಾರ್ಯಪಡೆ ರಚಿಸಲಾಗಿದೆ. ಪ್ಲಾಸ್ಟಿಕ್ ತಯಾರಿಕೆ ನಿಲ್ಲಿಸುವಂತೆ ಮನವಿ ಮಾಡಲಾಗಿದೆ ಎಂದರು. ರಾಜವಂಶಸ್ಥರಾದ ಯದುವೀರ ಅವರು ನಮಗೆ ಸಾಥ್ ನೀಡಿರುವುದು ಆನೆ ಬಲ ಬಂದಂತೆ ಆಗಿದೆ. ಪ್ಲಾಸ್ಟಿಕ್ ಮುಕ್ತ ದಸರಾ ಆಚರಣೆ ನಮ್ಮ ಉದ್ದೇಶ ಎಂದು ಹೇಳಿದರು.
ಮೈಸೂರಿನ ಕುಪ್ಪಣ್ಣ ಪಾರ್ಕ್ನ ಗಾಜಿನಮನೆಯಲ್ಲಿ ನಡೆಯಲಿರುವ ಫಲಪುಷ್ಪ ಪ್ರದರ್ಶನದ ಸ್ಥಳಕ್ಕೆ ಉಸ್ತುವಾರಿ ಸಚಿವ ಎಸ್.ಟಿ.ಸೋಮಶೇಖರ್ ಮತ್ತು ಸಂಸದ ಪ್ರತಾಪ್ ಸಿಂಹ ಭೇಟಿ ನೀಡಿ ಪರಿಶೀಲಿಸಿದರು. ದಸರಾ ಹಿನ್ನೆಲೆಯಲ್ಲಿ ರಾಷ್ಟ್ರಪತಿ ಭವನದ ಪ್ರತಿಕೃತಿಯನ್ನು ಹೂಗಳಿಂದ ನಿರ್ಮಿಸಲಾಗುತ್ತಿದೆ. ಬೆಳಿಗ್ಗೆ 11.30ಕ್ಕೆ ತೋಟಗಾರಿಕೆ ಸಚಿವರು ಪ್ರದರ್ಶನ ಉದ್ಘಾಟಿಸಲಿದ್ದಾರೆ. ಪ್ರದರ್ಶನಕ್ಕಾಗಿ 50 ಸಾವಿರಕ್ಕೂ ಹೆಚ್ವು ಹೂಕುಂಡಗಳನ್ನು ಬಳಸಲಾಗುತ್ತಿದೆ ಎಂದು ಸೋಮಶೇಖರ್ ಹೇಳಿದರು. ಈ ಬಾರಿ ಪುಸ್ತಕ ಮೇಳ ಇಲ್ಲ ಅದರೆ ಕೈಗಾರಿಕ ಮೇಳ ಸೇರಿದಂತೆ ಸಾಕಷ್ಟು ಕಾರ್ಯಕ್ರಮಗಳು ನಡೆಯಲಿದೆ ಎಂದು ಸಂಸದ ಪ್ರತಾಪ್ ಸಿಂಹ ಹೇಳಿದರು.
ನಾಡದೇವಿಯ ದರ್ಶನ ಪಡೆದ ಸಿದ್ದರಾಮಯ್ಯ ಪತ್ನಿ
ನವರಾತ್ರಿಯ ಪಾಡ್ಯದ ಮುನ್ನಾದಿನವಾದ ಭಾನುವಾರ ಸಿದ್ದರಾಮಯ್ಯ ಪತ್ನಿ ಪಾರ್ವತಿ ಅವರು ಚಾಮುಂಡಿ ಬೆಟ್ಟದಲ್ಲಿ ಚಾಮುಂಡೇಶ್ವರಿ ದರ್ಶನ ಪಡೆದರು. ಅರ್ಧ ಗಂಟೆಗೂ ಹೆಚ್ಚುಕಾಲ ದೇಗುಲದಲ್ಲಿದ್ದ ಅವರು ಚಾಮುಂಡಿ ತಾಯಿಗೆ ವಿಶೇಷ ಪೂಜೆ ಸಲ್ಲಿಸಿದರು. ಪ್ರತಿ ವರ್ಷ ನವರಾತ್ರಿಯ ಒಂಬತ್ತೂ ದಿನ ಅವರು ಚಾಮುಂಡೇಶ್ವರಿ ದರ್ಶನ ಪಡೆಯುತ್ತಾರೆ.
Published On - 2:18 pm, Sun, 25 September 22