Daily Devotional: ಮನೆ ಗೋಡೆಗಳಲ್ಲಿ ಈ ಗಿಡ ಚಿಗುರಿದರೆ ತಕ್ಷಣ ಕಿತ್ತು ಹಾಕಿ; ಇಲ್ಲದಿದ್ದರೆ ಸಂಕಷ್ಟ ತಪ್ಪಿದ್ದಲ್ಲ!
ಮನೆ ಗೋಡೆಗಳು, ಚಾವಣಿ ಅಥವಾ ಕಾಂಪೌಂಡ್ ಮೇಲೆ ಅರಳಿಗಿಡ, ಬೇವಿನ ಮರ, ನಿಂಬೆ ಮರ ಬೆಳೆಯುವುದು ವಾಸ್ತು ಪ್ರಕಾರ ಅಶುಭ ಎನ್ನಲಾಗುತ್ತದೆ. ಇದು ಹಣಕಾಸಿನ ತೊಂದರೆ, ಆರೋಗ್ಯ ಸಮಸ್ಯೆ, ಕುಟುಂಬದಲ್ಲಿ ಕಲಹಕ್ಕೆ ಕಾರಣವಾಗಬಹುದು. ಸೂಕ್ತ ಪೂಜೆ ಮಾಡಿ ವೃಕ್ಷವನ್ನು ದೇವಸ್ಥಾನದ ಬಳಿ ನೆಡುವುದರಿಂದ ಶುಭ ಫಲ ಪಡೆಯಬಹುದು ಎಂದು ಡಾ. ಬಸವರಾಜ್ ಗುರೂಜಿ ಸಲಹೆ ನೀಡಿದ್ದಾರೆ.

ಮನೆಯ ಗೋಡೆಗಳ ಮೇಲೆ, ಕಾಂಪೌಂಡ್ ಒಳಗೆ ಅಥವಾ ಚಾವಣಿಯ ಮೇಲೆ ತಾನಾಗಿಯೇ ಬೆಳೆಯುವ ಕೆಲವು ವೃಕ್ಷಗಳ ಬಗ್ಗೆ ಧರ್ಮಶಾಸ್ತ್ರ ಮತ್ತು ವಾಸ್ತುಶಾಸ್ತ್ರದಲ್ಲಿ ಉಲ್ಲೇಖವಿದೆ. ಎಲ್ಲ ಮರಗಳಲ್ಲ, ಆದರೆ ಅಶ್ವತ್ಥ (ಅರಳಿ), ಬೇವಿನ ಮತ್ತು ನಿಂಬೆ ಮರಗಳು ಇಂತಹ ಸ್ಥಳಗಳಲ್ಲಿ ಬೆಳೆದರೆ ಅವುಗಳ ಫಲ ಮತ್ತು ವಿಶೇಷತೆಗಳ ಬಗ್ಗೆ ತಿಳಿದುಕೊಳ್ಳುವುದು ಮುಖ್ಯ. ಈ ವೃಕ್ಷಗಳು ಇಂತಹ ಅನಿರೀಕ್ಷಿತ ಸ್ಥಳಗಳಲ್ಲಿ ಬೆಳೆದಾಗ ಅದು ಶುಭವೋ ಅಶುಭವೋ ಎಂಬುದನ್ನು ಅರಿಯಬೇಕು. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಅಶ್ವತ್ಥ ವೃಕ್ಷವು ಬಹಳ ಪವಿತ್ರವೆಂದು ಪೂಜಿಸಲ್ಪಡುತ್ತದೆ. ಆದರೆ, ಇದೇ ಅಶ್ವತ್ಥ ವೃಕ್ಷ ವಾಸ್ತು ಪ್ರಕಾರ ಮನೆಯ ಗೋಡೆ, ಚಾವಣಿ ಅಥವಾ ಕಾಂಪೌಂಡ್ ಮೇಲೆ ತಾನಾಗಿಯೇ ಬೆಳೆದರೆ, ಅದನ್ನು ಶುಭಸೂಚಕವೆಂದು ಪರಿಗಣಿಸಲಾಗುವುದಿಲ್ಲ. ನಾವು ಹಳೆಯ ಮನೆಗಳ ಬಳಿ, ಬಿದ್ದುಹೋದ ಮನೆಗಳ ಗೋಡೆಗಳಲ್ಲಿ, ಅಥವಾ ಕಾಂಪೌಂಡ್ ಒಳಗೆ ಅರಳಿಗಿಡ ಬೆಳೆದಿರುವುದನ್ನು ಅನೇಕ ಬಾರಿ ಗಮನಿಸಿರುತ್ತೇವೆ. ನಮ್ಮ ನಂಬಿಕೆಗಳ ಪ್ರಕಾರ, ಇಂತಹ ಸ್ಥಳಗಳಲ್ಲಿ ಅರಳಿಗಿಡ ಬೆಳೆದರೆ, ಆ ವೃಕ್ಷಕ್ಕೆ ಯಾವುದೋ ಒಂದು ಸಮಯದಲ್ಲಿ ದೇವರ ಲಹರಿಗಳು ಅಥವಾ ಅಂಶಗಳು ಆವಾಹನೆ ಆಗುತ್ತವೆ. ಸಂಸಾರಿಗಳಾದ ನಾವು, ಅಂತಹ ಪ್ರಬಲ ಶಕ್ತಿಯನ್ನು ಸದಾ ಪೂಜೆ, ಶುದ್ಧತೆ ಮತ್ತು ಆಚರಣೆಗಳ ಮೂಲಕ ತಡೆದುಕೊಳ್ಳುವುದು ಸಾಮಾನ್ಯ ಜೀವನದಲ್ಲಿ ಕಷ್ಟವಾಗುತ್ತದೆ.
ಇಂತಹ ಪರಿಸ್ಥಿತಿಯಲ್ಲಿ ಏನಾಗಬಹುದು?
ಮನೆಯಲ್ಲಿ ಹಣದ ಹರಿವಿಗೆ ಅಡ್ಡಿಯಾಗಬಹುದು, ಕೆಲಸಕಾರ್ಯಗಳು ಸ್ಥಗಿತಗೊಳ್ಳಬಹುದು, ಕುಟುಂಬದಲ್ಲಿ ಸಣ್ಣಪುಟ್ಟ ಆರೋಗ್ಯ ಸಮಸ್ಯೆಗಳು, ಭಿನ್ನಾಭಿಪ್ರಾಯಗಳು ಮತ್ತು ಕೋಪತಾಪಗಳು ಹೆಚ್ಚಾಗಬಹುದು. ಮನೆ ಬಾಡಿಗೆಗೆ ನೀಡಲು ಅಥವಾ ಮಾರಾಟ ಮಾಡಲು ಕಷ್ಟವಾಗಬಹುದು, ಯಾಕೆಂದರೆ ಅನೇಕರಿಗೆ ಈ ನಂಬಿಕೆಗಳ ಬಗ್ಗೆ ಅರಿವಿರುತ್ತದೆ. ನಾವು ಎಷ್ಟೋ ಬಾರಿ ಈ ಮನೆ ತುಂಬಾ ಚೆನ್ನಾಗಿದೆ, ಆದರೆ ಯಾಕೋ ತಗೊಳೋಕೆ ಆಗ್ತಾ ಇಲ್ಲ ಎಂಬ ಮಾತುಗಳನ್ನು ಕೇಳಿರುತ್ತೇವೆ. ಇದೇ ರೀತಿ ಬೇವಿನ ಮರ ಅಥವಾ ನಿಂಬೆ ಮರ ಕೂಡ ಮನೆಯ ಗೋಡೆ, ಚಾವಣಿ ಅಥವಾ ಕಾಂಪೌಂಡ್ ಮೇಲೆ ಬೆಳೆದರೆ ಅವು ಕೂಡ ಅಷ್ಟೇ ಶುಭ ಫಲಗಳನ್ನು ನೀಡುವುದಿಲ್ಲ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?
ಇದಕ್ಕೆ ಪರಿಹಾರವೇನು?
ಈ ರೀತಿ ಮರಗಳು ಮನೆಯ ರಚನೆಗಳಿಗೆ ಅಂಟಿಕೊಂಡು ಬೆಳೆದಾಗ, ಅವುಗಳಿಗೆ ಯೋಗ್ಯವಾದ ಪೂಜೆಗಳನ್ನು ಮಾಡಿಸಿ, ನಂತರ ಯಾರ ಕೈಯಲ್ಲಾದರೂ ಅವುಗಳನ್ನು ಎಚ್ಚರಿಕೆಯಿಂದ ತೆಗೆಸಿ, ಬೇರೆ ದೇವಸ್ಥಾನಗಳ ಆವರಣದಲ್ಲಿ ಅಥವಾ ಸೂಕ್ತವಾದ ಪವಿತ್ರ ಸ್ಥಳಗಳಲ್ಲಿ ನೆಡಿಸಬೇಕು. ಹೀಗೆ ಮಾಡಿದರೆ ಅವುಗಳು ಶುಭ ಫಲಗಳನ್ನು ನೀಡುತ್ತವೆ. ಒಂದು ವೇಳೆ ಅವುಗಳನ್ನು ಹಾಗೆಯೇ ನಿರ್ಲಕ್ಷಿಸಿದರೆ, ಆ ಕುಟುಂಬದಲ್ಲಿ ಕಷ್ಟದ ಪರಿಸ್ಥಿತಿಗಳು ಎದುರಾಗಬಹುದು. ಅಚಾನಕ್ ಆಗಿ ಆ ಮರವು ಮುರಿದುಬಿದ್ದರೆ, ಅದನ್ನು ಬೇರೆ ಕಡೆ ನೆಡಲು ಸಾಧ್ಯವಾಗುವುದಿಲ್ಲ. ಅಂತಹ ಸಮಯದಲ್ಲಿ ಅದನ್ನು ನೀರಿಗೆ ಅರ್ಪಿಸುವುದು ಅತ್ಯುತ್ತಮ ಪರಿಹಾರ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




