ಅಕಾಲ ಮೃತ್ಯು ದೋಷ ನಿವಾರಣೆಗೆ ಈ ಮಹಾಮೃತ್ಯುಂಜಯ ಮಂತ್ರ ಪಠಿಸಿ

| Updated By: ಅಕ್ಷಯ್​ ಪಲ್ಲಮಜಲು​​

Updated on: Jan 25, 2024 | 5:32 PM

 ನಿಮಗೆ ಗೊತ್ತಾ? ಮಹಾಮೃತ್ಯುಂಜಯ ಮಂತ್ರ ಸಕಲವನ್ನು ಸಿದ್ಧಿಸಿಕೊಳ್ಳಲು ನೆರವಾಗುವ ಏಕೈಕ ಮಂತ್ರವಾಗಿದೆ. ಮೃತ್ಯುಂಜಯ ಮಂತ್ರ ಅಥವಾ ರುದ್ರ ಮಂತ್ರವು ಹಿಂದೂ ಧರ್ಮದಲ್ಲಿನ ಪ್ರಮುಖ ಮಂತ್ರಗಳಲ್ಲಿ ಒಂದಾಗಿದ್ದು, ಇದು ಅತ್ಯಂತ ಹಳೆಯ ಮತ್ತು ಜನಪ್ರಿಯವೂ ಆಗಿದೆ. ನಿರಂತರವಾಗಿ ಈ ಮಂತ್ರವನ್ನು ಜಪಿಸುವ ವ್ಯಕ್ತಿಯನ್ನು ಯಮರಾಜನು ಕೂಡ ಯಮಲೋಕಕ್ಕೆ ಕರೆದುಕೊಂಡು ಹೋಗಲು ಹೆದರುತ್ತಾನೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಅಷ್ಟು ದೈವಿಕ ಶಕ್ತಿಯನ್ನು ತುಂಬಿಕೊಂಡಿರುವ ಮಂತ್ರ ಪಠಣೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಅಕಾಲ ಮೃತ್ಯು ದೋಷ ನಿವಾರಣೆಗೆ ಈ ಮಹಾಮೃತ್ಯುಂಜಯ ಮಂತ್ರ ಪಠಿಸಿ
Follow us on

ಶಿವನನ್ನು ಮೆಚ್ಚಿಸುವುದು ತುಂಬಾ ಸುಲಭ ಎಂಬ ಮಾತನ್ನು ನೀವು ಕೇಳಿರಬಹುದು. ಏಕೆಂದರೆ ಆತ ಭಕ್ತರಿಗೆ ಬೇಗ ಒಲಿಯುತ್ತಾನೆ. ಶೀಘ್ರದಲ್ಲೇ ಮಾಡಿದಂತಹ ಪೂಜೆಯಿಂದ ಸಂತುಷ್ಟನಾಗಿ ಬೇಡಿದ ವರಪ್ರಸಾದವನ್ನು ನೀಡುತ್ತಾನೆ. ಹಾಗಾಗಿ ಮೊರೆ ಕೇಳಿದಾಕ್ಷಣ ಬರುವ ಮಹಾದೇವನಿಗೆ ಬಿಲ್ವ ಪತ್ರೆ, ಅಭಿಷೇಕ ಎಲ್ಲಕಿಂತ ಪ್ರೀಯವಾದದ್ದು ಮಂತ್ರ ಪಠಣವಾಗಿದೆ. ನಿಮಗೆ ಗೊತ್ತಾ? ಮಹಾಮೃತ್ಯುಂಜಯ ಮಂತ್ರ ಸಕಲವನ್ನು ಸಿದ್ಧಿಸಿಕೊಳ್ಳಲು ನೆರವಾಗುವ ಏಕೈಕ ಮಂತ್ರವಾಗಿದೆ. ಮೃತ್ಯುಂಜಯ ಮಂತ್ರ ಅಥವಾ ರುದ್ರ ಮಂತ್ರವು ಹಿಂದೂ ಧರ್ಮದಲ್ಲಿನ ಪ್ರಮುಖ ಮಂತ್ರಗಳಲ್ಲಿ ಒಂದಾಗಿದ್ದು, ಇದು ಅತ್ಯಂತ ಹಳೆಯ ಮತ್ತು ಜನಪ್ರಿಯವೂ ಆಗಿದೆ. ನಿರಂತರವಾಗಿ ಈ ಮಂತ್ರವನ್ನು ಜಪಿಸುವ ವ್ಯಕ್ತಿಯನ್ನು ಯಮರಾಜನು ಕೂಡ ಯಮಲೋಕಕ್ಕೆ ಕರೆದುಕೊಂಡು ಹೋಗಲು ಹೆದರುತ್ತಾನೆ ಎಂದು ಶಿವ ಪುರಾಣದಲ್ಲಿ ಹೇಳಲಾಗಿದೆ. ಅಷ್ಟು ದೈವಿಕ ಶಕ್ತಿಯನ್ನು ತುಂಬಿಕೊಂಡಿರುವ ಮಂತ್ರ ಪಠಣೆಯಿಂದ ಎಷ್ಟೆಲ್ಲಾ ಪ್ರಯೋಜನಗಳಿವೆ ಗೊತ್ತಾ?

ಮಹಾಮೃತ್ಯುಂಜಯ ಮಂತ್ರ ಪಠಣೆ ಮಾಡುವುದರಿಂದ ಸಿಗುವ ಲಾಭಗಳೇನು?

“ಓಂ ತ್ರಯಂಬಕಂ ಯಜಾಮಹೇ, ಸುಗಂಧಿಂ ಪುಷ್ಟಿವರ್ಧನಂ,

ಉರ್ವ ರುಕಮಿವ ಬಂಧನಾನ್, ಮೃತ್ಯೋರ್ ಮೋಕ್ಷಿಯೇ ಮಾಮೃತಾತ್”

ಈ ಮಂತ್ರದ ಪಠಣೆಯು ನಿಮ್ಮ ಜೀವನದಲ್ಲಿ ಮಾಡಿದ ಎಲ್ಲಾ ಪಾಪಗಳನ್ನು ನಿವಾರಿಸುತ್ತದೆ. ಪ್ರತಿದಿನ ಈ ಮಂತ್ರ ಪಠಿಸುವುದರಿಂದ ನಿಮಗೆ ಉತ್ತಮ ಆರೋಗ್ಯ, ಸಂಪತ್ತು, ಸಮೃದ್ಧಿ ಮತ್ತು ದೀರ್ಘಾಯುಷ್ಯ ಸಿಗುತ್ತದೆ. ಎಲ್ಲಕ್ಕಿಂತ ಮುಖ್ಯವಾಗಿ ವಿಪತ್ತುಗಳಿಂದ ರಕ್ಷಿಸುತ್ತದೆ. ಇದು ನಿಮ್ಮನ್ನು ದೈಹಿಕವಾಗಿ, ಮಾನಸಿಕವಾಗಿ ಮತ್ತು ಭಾವನಾತ್ಮಕವಾಗಿ ಶಾಂತವಾಗಿರಿಸುತ್ತದೆ. ಶುಭಕಾರ್ಯಕ್ಕೆ ಅಥವಾ ಅಗತ್ಯ ಕೆಲಸಕ್ಕೆ ಮನೆಯಿಂದ ಹೊರಡುವ ಮುನ್ನ ಈ ಮಂತ್ರವನ್ನು ಕನಿಷ್ಟ ಒಂಭತ್ತು ಬಾರಿಯಾದರೂ ಪಠಿಸುವ ಮೂಲಕ ನಿಮ್ಮ ಕೆಲಸ ಆರಂಭಿಸಿ.

ಅಕಾಲ ಮೃತ್ಯು ದೋಷ ನಿವಾರಣೆ ಮಾಡುತ್ತದೆ;

ಅಕಾಲಿಕ ಮರಣವನ್ನು ತಪ್ಪಿಸಲು, ದೊಡ್ಡ ದೊಡ್ಡ ಕಾಯಿಲೆಗಳಿಂದ ಪಾರಾಗಲು ಈ ಮಹಾಮೃತ್ಯುಂಜಯ ಮಂತ್ರವನ್ನು ಜಪಿಸುವ ಬಗ್ಗೆ ಧರ್ಮಗ್ರಂಥಗಳು ಮತ್ತು ಪುರಾಣಗಳಲ್ಲಿ ವಿಶೇಷ ಉಲ್ಲೇಖವಿದೆ. ಹಾಗಾಗಿ ಇದನ್ನು ರಕ್ಷಣಾ ಮಂತ್ರ ಎಂದೂ ಕೂಡ ಕರೆಯಲಾಗುತ್ತದೆ. ಇನ್ನು ನಿಮ್ಮ ಮನೆಯ ಸದಸ್ಯರು ಅನಾರೋಗ್ಯದಿಂದ ಬಳಲುತ್ತಿದ್ದು ಆ ಸಮಯದಲ್ಲಿ ಅವರಿಗೆ ಮಂತ್ರ ಪಠಿಸಲು ಸಾಧ್ಯವಾಗದೇ ಇದ್ದಲ್ಲಿ ನೀವು ಅವರ ಪರವಾಗಿ ಈ ಮಂತ್ರವನ್ನು ಪಠಿಸಬಹುದಾಗಿದೆ. ಈ ಮಂತ್ರಕ್ಕಿರುವ ಶಕ್ತಿಯು ನಿಮ್ಮ ಪ್ರೀತಿಪಾತ್ರರಿಗೆ ಭಗವಂತನ ಅನುಗ್ರಹ ದೊರಕುವಂತೆ ಮಾಡಿ ಅಕಾಲ ಮೃತ್ಯು ದೋಷದ ನಿವಾರಣೆ ಮಾಡುತ್ತದೆ.

ಮಹಾಮೃತ್ಯುಂಜಯ ಮಂತ್ರವನ್ನು ಹೇಗೆ ಮತ್ತು ಯಾವ ರೀತಿಯಲ್ಲಿ ಪಠಿಸಬೇಕು?

ಈ ಮಂತ್ರ ಪಠಿಸುವುದಕ್ಕಾಗಿ, ಸೋಮವಾರದ ದಿನ ಅಥವಾ ಪ್ರದೋಷ ವ್ರತವಿರುವ ದಿನವನ್ನು ಆಯ್ದುಕೊಳ್ಳುವುದು ಅತ್ಯಂತ ಸೂಕ್ತವಾಗಿದೆ. ಈ ಎರಡೂ ದಿನಗಳು ಶಿವನ ಆರಾಧನೆಗೆ ಪ್ರಶಸ್ತ ದಿನವಾದ್ದರಿಂದ ಈ ದಿನದಂದು ಮಂತ್ರವನ್ನು ಪಠಣೆ ಮಾಡುವ ಮೂಲಕ ವಿಶೇಷ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಇದರ ಹೊರತಾಗಿ 108 ಬಾರಿ ನಿತ್ಯ ಪಠಣೆ ಮಾಡಬಹುದು ಅಥವಾ ಶಿವನ ದೇವಸ್ಥಾನ ಹತ್ತಿರ ಇರುವವರು ಅಲ್ಲಿಯೇ ಮಹಾಮೃತ್ಯುಂಜಯ ಜಪವನ್ನು ಮಾಡಿಸಬಹುದು.

ಸೂಚನೆ: ಈ ಮಂತ್ರವನ್ನು ಎಚ್ಚರಿಕೆಯಿಂದ ಪಠಿಸಬೇಕು ಹಾಗಾಗಿ ಉಚ್ಚಾರಣೆ ಮತ್ತು ಶಬ್ದಗಳ ಜೋಡಣೆಯನ್ನು ಸರಿಯಾಗಿ ನೋಡಿಕೊಂಡು ಪಠಣ ಮಾಡಿ.

ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ