Vastu Tips: ಈ ಒಂದು ವಸ್ತುವನ್ನು ಅಕ್ಕಿ ಪಾತ್ರೆಯಲ್ಲಿ ಇರಿಸಿ, ಆಹಾರ, ಹಣದಕ್ಕೆಂದೂ ಕೊರತೆಯಾಗದು!
ಹಿಂದೂ ಧರ್ಮದಲ್ಲಿ ಅಕ್ಕಿ ಕೇವಲ ಧಾನ್ಯವಲ್ಲ, ಸಮೃದ್ಧಿ ಮತ್ತು ದೈವಿಕ ಆಶೀರ್ವಾದದ ಸಂಕೇತ. ಅನ್ನಪೂರ್ಣೆಯ ಕೃಪೆಗಾಗಿ ಅಡುಗೆಮನೆಯ ಅಕ್ಕಿ ಡಬ್ಬಿ ಯಾವಾಗಲೂ ತುಂಬಿರಬೇಕು. ವಾಸ್ತು ಪ್ರಕಾರ, ಅಡುಗೆಮನೆಯ ಶುಚಿತ್ವ ಮತ್ತು ಅಕ್ಕಿಯ ಸರಿಯಾದ ಸಂಗ್ರಹವು ಆರ್ಥಿಕ ಸ್ಥಿತಿಯನ್ನು ಸುಧಾರಿಸುತ್ತದೆ. ಅಕ್ಕಿಯನ್ನು ಗೌರವಿಸುವುದು, ದಾನ ಮಾಡುವುದು ಪುಣ್ಯ ಮತ್ತು ಸಂಪತ್ತು ತರುತ್ತದೆ ಎಂದು ನಂಬಲಾಗಿದೆ.

ಹಿಂದೂ ಧರ್ಮದಲ್ಲಿ ಅಕ್ಕಿ ಕೇವಲ ಒಂದು ಧಾನ್ಯವಲ್ಲ, ಅದು ಜೀವನದ ಆಧಾರ, ಸಮೃದ್ಧಿಯ ಸಂಕೇತ ಮತ್ತು ದೈವಿಕ ಆಶೀರ್ವಾದದ ರೂಪವಾಗಿದೆ. ನಮ್ಮ ಸಂಪ್ರದಾಯದಲ್ಲಿ ಅಕ್ಕಿಯನ್ನು ದೇವಿ ಅನ್ನಪೂರ್ಣೆ ಅವರ ಕೃಪೆಯಾಗಿ ಕಾಣಲಾಗುತ್ತದೆ. ಅನ್ನಪೂರ್ಣೆ ಎಂದರೆ ಅನ್ನವನ್ನು ನೀಡುವ ತಾಯಿ, ಮನೆಗಳಲ್ಲಿ ಅನ್ನದ ಕೊರತೆ ಬರದಂತೆ ಕಾಪಾಡುವ ಶಕ್ತಿ. ಅದಕ್ಕಾಗಿ ಅಡುಗೆಮನೆಯ ಅಕ್ಕಿ ಡಬ್ಬಿ ಯಾವಾಗಲೂ ತುಂಬಿರಬೇಕು ಎಂಬ ನಂಬಿಕೆ ಇದೆ. ಡಬ್ಬಿ ಸಂಪೂರ್ಣ ಖಾಲಿಯಾಗುವುದು ಜೀವನದಲ್ಲಿ ಕೊರತೆಯ ಸಂಕೇತವೆಂದು ಪರಿಗಣಿಸಲಾಗುತ್ತದೆ, ಆದರೆ ಸ್ವಲ್ಪವಾದರೂ ಅಕ್ಕಿ ಉಳಿದಿದ್ದರೆ ಮನೆಗೆ ಸದಾ ಆಹಾರ ಮತ್ತು ಹಣದ ಹರಿವು ನಿರಂತರವಾಗಿರುತ್ತದೆ ಎಂದು ಹಿರಿಯರು ಹೇಳುತ್ತಾರೆ.
ಅಡುಗೆಮನೆ ಮನೆಯ ಹೃದಯವಾಗಿದ್ದು, ವಾಸ್ತು ಪ್ರಕಾರ ಅದು ಅಗ್ನಿ ತತ್ವವನ್ನು ಪ್ರತಿನಿಧಿಸುತ್ತದೆ. ಈ ಸ್ಥಳ ಸ್ವಚ್ಛವಾಗಿದ್ದರೆ ಮತ್ತು ಧಾನ್ಯಗಳು ಸಮರ್ಪಕವಾಗಿ ಸಂಗ್ರಹವಾಗಿದ್ದರೆ, ಮನೆಯ ಆರ್ಥಿಕ ಸ್ಥಿತಿ ಸ್ಥಿರವಾಗುತ್ತದೆ ಎಂಬ ನಂಬಿಕೆ ಇದೆ. ಅಕ್ಕಿ ಡಬ್ಬಿಯನ್ನು ನಿಯಮಿತವಾಗಿ ಸ್ವಚ್ಛಗೊಳಿಸಿ, ತೇವ ಅಥವಾ ಕೀಟಗಳಿಲ್ಲದಂತೆ ನೋಡಿಕೊಳ್ಳುವುದು ಕೇವಲ ಆಧ್ಯಾತ್ಮಿಕ ದೃಷ್ಟಿಯಿಂದಲ್ಲ, ಆರೋಗ್ಯದ ದೃಷ್ಟಿಯಿಂದಲೂ ಮುಖ್ಯ.
ಕೆಲವು ಮನೆಗಳಲ್ಲಿ ಅಕ್ಕಿ ಕಾಳುಗಳೊಳಗೆ ಎರಡು ಬೆಳ್ಳಿ ನಾಣ್ಯಗಳನ್ನು ಅಥವಾ ಹಳದಿ ಅರಿಶಿನದ ಕೊಂಬು ಕೆಂಪು ಬಟ್ಟೆಯಲ್ಲಿ ಕಟ್ಟಿಟ್ಟು ಇಡುವ ಪದ್ಧತಿ ಇದೆ. ಕೆಂಪು ಬಣ್ಣ ಶಕ್ತಿ ಮತ್ತು ಲಕ್ಷ್ಮೀ ತತ್ವದ ಸಂಕೇತವಾಗಿದ್ದು, ಅರಿಶಿನ ಪವಿತ್ರತೆ ಮತ್ತು ಆರೋಗ್ಯವನ್ನು ಸೂಚಿಸುತ್ತದೆ. ಬೆಳ್ಳಿ ನಾಣ್ಯಗಳು ಶುದ್ಧತೆ ಮತ್ತು ಧನಾಗಮನದ ಸಂಕೇತವೆಂದು ಪರಿಗಣಿಸಲಾಗುತ್ತದೆ. ಈ ಸಣ್ಣ ಪರಿಹಾರದಿಂದ ಅಡುಗೆಮನೆಯಲ್ಲಿ ಅನ್ನಪೂರ್ಣೆಯ ನೆಲೆಸುವಿಕೆ ಹೆಚ್ಚುತ್ತದೆ ಮತ್ತು ಮನೆಯಲ್ಲಿ ಸಮೃದ್ಧಿ ಕಡಿಮೆಯಾಗುವುದಿಲ್ಲ ಎಂಬ ವಿಶ್ವಾಸ ಇದೆ.
ಇದನ್ನೂ ಓದಿ: ಮನೆಯ ಹತ್ತಿರ ಪಾರಿಜಾತ ಗಿಡ ಇರುವುದು ಅಶುಭನಾ? ಜ್ಯೋತಿಷ್ಯ ಸಲಹೆ ಇಲ್ಲಿದೆ
ಪೂರ್ವಜರು ಅಕ್ಕಿಯನ್ನು ಅತ್ಯಂತ ಗೌರವದಿಂದ ಬಳಕೆ ಮಾಡುತ್ತಿದ್ದರು. ಅಕ್ಕಿ ನೆಲಕ್ಕೆ ಬಿದ್ದರೆ ಅದನ್ನು ತುಳಿಯದೆ ಎತ್ತಿ ತಲೆಗೆ ಸ್ಪರ್ಶಿಸುವ ಸಂಸ್ಕಾರವೂ ಅದೇ ಗೌರವದ ಸೂಚನೆ. ಹೊಸ ಅಕ್ಕಿ ಮನೆಗೆ ಬಂದಾಗ ಮೊದಲು ದೇವರಿಗೆ ನೈವೇದ್ಯವಾಗಿ ಅರ್ಪಿಸಿ ನಂತರ ಬಳಸುವ ಪದ್ಧತಿ ಇನ್ನೂ ಹಲವಾರು ಮನೆಗಳಲ್ಲಿ ಕಂಡುಬರುತ್ತದೆ. ಶುಭ ದಿನಗಳಲ್ಲಿ ಬಡವರಿಗೆ ಅಕ್ಕಿ ದಾನ ಮಾಡುವುದು ಧನಪ್ರವಾಹವನ್ನು ಹೆಚ್ಚಿಸುತ್ತದೆ ಮತ್ತು ಮನೆಗೆ ಪುಣ್ಯ ತರುತ್ತದೆ ಎಂದು ನಂಬಲಾಗುತ್ತದೆ. ಈ ಎಲ್ಲಾ ಆಚರಣೆಗಳು ಕೇವಲ ಅಂಧನಂಬಿಕೆಗಳಲ್ಲ; ಅವು ಸಂಗ್ರಹದ ಮಹತ್ವ, ಶಿಸ್ತಿನ ಜೀವನ ಮತ್ತು ಆಹಾರದ ಪಾವಿತ್ರ್ಯವನ್ನು ನೆನಪಿಸುವ ಸಾಂಸ್ಕೃತಿಕ ಮೌಲ್ಯಗಳಾಗಿವೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
