
ಶಿವಪೂಜೆಯಲ್ಲಿ ಬಿಲ್ವಪತ್ರೆಗೆ (ಬೇಲ್ಪತ್ರ) ಅತ್ಯಂತ ಪವಿತ್ರವಾದ ಸ್ಥಾನವಿದೆ. ಶಿವಲಿಂಗಕ್ಕೆ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನು ಶೀಘ್ರವಾಗಿ ಪ್ರಸನ್ನನಾಗುತ್ತಾನೆ ಮತ್ತು ಭಕ್ತರ ಸಕಲ ಇಷ್ಟಾರ್ಥಗಳನ್ನು ಈಡೇರಿಸುತ್ತಾನೆ ಎಂಬುದು ನಂಬಿಕೆ. ಆದರೆ, ಶಿವ ಮಹಾಪುರಾಣದ ಪ್ರಕಾರ ಶಿವಲಿಂಗಕ್ಕೆ ಬಿಲ್ವಪತ್ರೆ ಅರ್ಪಿಸುವಾಗ ಕೆಲವು ವಿಶೇಷ ನಿಯಮಗಳನ್ನು ಕಡ್ಡಾಯವಾಗಿ ಪಾಲಿಸಬೇಕಾಗುತ್ತದೆ. ಸರಿಯಾದ ವಿಧಾನದಲ್ಲಿ ಅರ್ಪಿಸದಿದ್ದರೆ ಪೂಜೆಯ ಸಂಪೂರ್ಣ ಫಲ ಸಿಗುವುದಿಲ್ಲ. ಶಿವನ ಪೂರ್ಣ ಆಶೀರ್ವಾದ ಪಡೆಯಲು ಯಾವ ಏನು ತಪ್ಪಿಸಬೇಕು ಹಾಗೂ ಯಾವ ನಿಯಮಗಳನ್ನು ಅನುಸರಿಸಬೇಕು ಎಂಬುದರ ಸಂಪೂರ್ಣ ವಿವರ ಇಲ್ಲಿದೆ.
ಶಿವ ಪುರಾಣದ ಪ್ರಕಾರ, ಸೋಮವಾರ ಅಥವಾ ಚತುರ್ದಶಿ ತಿಥಿಯಂದು ಬಿಲ್ವಪತ್ರೆಯನ್ನು ಗಿಡದಿಂದ ಕೀಳಬಾರದು. ಈ ದಿನಗಳಲ್ಲಿ ಎಲೆಗಳನ್ನು ಕೀಳುವುದು ಅಶುಭ ಎಂದು ಪರಿಗಣಿಸಲಾಗುತ್ತದೆ. ಆದ್ದರಿಂದ, ಸೋಮವಾರ ಅಥವಾ ಚತುರ್ದಶಿಯಂದು ಶಿವನಿಗೆ ಬಿಲ್ವಪತ್ರೆ ಅರ್ಪಿಸಬೇಕಿದ್ದರೆ, ಒಂದು ದಿನ ಮುಂಚಿತವಾಗಿ (ಅಂದರೆ ಭಾನುವಾರ ಅಥವಾ ತ್ರಯೋದಶಿಯಂದು) ಎಲೆಗಳನ್ನು ಕಿತ್ತು ಕಾಯ್ದಿರಿಸಿಕೊಳ್ಳಬೇಕು. ಒಂದು ದಿನ ಮುಂಚಿತವಾಗಿ ಕಿತ್ತಿಟ್ಟ ಬಿಲ್ವಪತ್ರೆಯು ಪೂಜೆಗೆ ಅಷ್ಟೇ ಪರಿಣಾಮಕಾರಿ ಹಾಗೂ ಪವಿತ್ರವಾಗಿರುತ್ತದೆ.
ಬಿಲ್ವಪತ್ರೆಯನ್ನು ಕೀಳುವಾಗ ಯಾವಾಗಲೂ ಮೂರು ಎಲೆಗಳು ಒಂದೇ ತೊಟ್ಟಿನಲ್ಲಿ ಜೋಡಣೆಯಾಗಿರುವ ಎಲೆಯನ್ನೇ ಆರಿಸಿಕೊಳ್ಳಬೇಕು. ಈ ಮೂರು ಎಲೆಗಳು ಬ್ರಹ್ಮ, ವಿಷ್ಣು, ಮಹೇಶ್ವರರೆಂಬ ತ್ರಿಮೂರ್ತಿಗಳ ಹಾಗೂ ಶಿವನ ತ್ರಿಶೂಲದ ಸಂಕೇತವಾಗಿವೆ. ಹರಿದುಹೋದ, ಕೀಟಗಳು ತಿಂದ ಅಥವಾ ಕೇವಲ ಎರಡು ಎಲೆಗಳಿರುವ ಬಿಲ್ವಪತ್ರೆಯನ್ನು ಪೂಜೆಗೆ ಬಳಸಬಾರದು. ಹಾಗೆಯೇ, ಎಲೆಗಳನ್ನು ಕೀಳುವಾಗ ಮರದ ಕೊಂಬೆಗಳನ್ನು ಮುರಿಯಬಾರದು; ಕೊಂಬೆ ಮುರಿಯುವುದು ಶಿವನಿಗೆ ಅಗೌರವ ತೋರಿದಂತೆ ಎಂದು ನಂಬಲಾಗುತ್ತದೆ.
ಇದನ್ನೂ ಓದಿ: ಚಿಕ್ಕ ಮಕ್ಕಳಿಗೆ ಕನ್ನಡಿ ತೋರಿಸಬಾರದು ಏಕೆ? ಆಧ್ಯಾತ್ಮಿಕ ಮತ್ತು ವೈಜ್ಞಾನಿಕ ಕಾರಣ ಇಲ್ಲಿದೆ
ಶಿವ ಪೂಜೆಯಲ್ಲಿ ಬಿಲ್ವಪತ್ರೆಗಳ ಸಂಖ್ಯೆಗೂ ವಿಶೇಷ ಮಹತ್ವವಿದೆ. ಶಿವ ಮಹಾಪುರಾಣದ ಪ್ರಕಾರ, ಶಿವಲಿಂಗಕ್ಕೆ ಯಾವಾಗಲೂ ಬೆಸ ಸಂಖ್ಯೆಯಲ್ಲಿ (Odd Numbers) ಬಿಲ್ವಪತ್ರೆಗಳನ್ನು ಅರ್ಪಿಸಬೇಕು. ಅಂದರೆ 3, 5, 7, 11, 21, 51 ಅಥವಾ 101 ರ ಸಂಖ್ಯೆಯಲ್ಲಿ ಬಿಲ್ವಪತ್ರೆಗಳನ್ನು ಅರ್ಪಿಸುವುದು ಅತ್ಯಂತ ಶುಭ. ಜೊತೆಗೆ, ಶಿವಲಿಂಗಕ್ಕೆ ಅರ್ಪಿಸುವ ಮುನ್ನ ಬಿಲ್ವಪತ್ರೆಯನ್ನು ಶುದ್ಧ ನೀರಿನಿಂದ ಚೆನ್ನಾಗಿ ತೊಳೆಯಬೇಕು. ಕೊಳಕಾಗಿರುವ ಅಥವಾ ತೊಳೆಯದ ಎಲೆಗಳನ್ನು ಎಂದಿಗೂ ಅರ್ಪಿಸಬಾರದು.
ಬಿಲ್ವಪತ್ರೆಯನ್ನು ಶಿವಲಿಂಗದ ಮೇಲೆ ಇಡುವ ವಿಧಾನವೂ ಅತ್ಯಂತ ಮುಖ್ಯವಾಗಿದೆ. ಬಿಲ್ವಪತ್ರೆಯನ್ನು ಅರ್ಪಿಸುವಾಗ ಅದರ ನಯವಾದ (ಮೃದುವಾದ) ಭಾಗವು ಶಿವಲಿಂಗಕ್ಕೆ ಸ್ಪರ್ಶಿಸುವಂತೆ ಅಂದರೆ ಕೆಳಮುಖವಾಗಿ ಇಡಬೇಕು. ಎಲೆಯ ಒರಟಾದ ಭಾಗವು ಮೇಲ್ಮುಖವಾಗಿರಬೇಕು. ಈ ರೀತಿ ಸರಿಯಾದ ಕ್ರಮದಲ್ಲಿ ಬಿಲ್ವಪತ್ರೆಯನ್ನು ಅರ್ಪಿಸುವುದರಿಂದ ಶಿವನ ವಿಶೇಷ ಅನುಗ್ರಹ ಲಭಿಸುತ್ತದೆ ಮತ್ತು ಮನೆಯಲ್ಲಿ ಶಾಂತಿ, ನೆಮ್ಮದಿ ನೆಲೆಸುತ್ತದೆ ಎಂದು ನಂಬಲಾಗಿದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ
Published On - 7:35 am, Fri, 31 July 26