
ಪಂಚಾಂಗದ ಪ್ರಕಾರ, ಸ್ಕಂದ ಷಷ್ಠಿಯನ್ನು ಪ್ರತಿ ತಿಂಗಳ ಶುಕ್ಲ ಪಕ್ಷದ ಷಷ್ಠಿ ತಿಥಿಯಂದು ಆಚರಿಸಲಾಗುತ್ತದೆ. ಈ ಬಾರಿಯ ಅಂದರೆ ಫಾಲ್ಗುಣ ಮಾಸದ ಶುಕ್ಲ ಪಕ್ಷದ ಸ್ಕಂದ ಷಷ್ಠಿಯನ್ನು ಇಂದು (ಮಾ. 15) ಆಚರಣೆ ಮಾಡಲಾಗುತ್ತದೆ. ಹಿಂದೂ ಧರ್ಮದಲ್ಲಿ ಸ್ಕಂದ ಷಷ್ಠಿಗೆ ವಿಶೇಷ ಮಹತ್ವವಿದೆ. ಈ ದಿನ ಭಗವಾನ್ ಕಾರ್ತಿಕೇಯನನ್ನು ಅಂದರೆ ಸುಬ್ರಹ್ಮಣ್ಯನನ್ನು ಪೂಜಿಸುವುದರಿಂದ ಶಿವ ಮತ್ತು ಪಾರ್ವತಿ ದೇವಿಯ ಕೃಪೆಯೂ ಪ್ರಾಪ್ತವಾಗುತ್ತದೆ. ಮತ್ತು ವ್ಯಕ್ತಿಯ ಎಲ್ಲಾ ಇಷ್ಟಾರ್ಥಗಳು ಈಡೇರುತ್ತದೆ ಎನ್ನುವ ನಂಬಿಕೆಯಿದೆ. ಅಲ್ಲದೆ ಈ ದಿನವನ್ನು ಸಂತಾನ ಷಷ್ಠಿ, ಕಂದ ಷಷ್ಠಿ ಎಂದೂ ಕರೆಯುತ್ತಾರೆ. ಈ ದಿನ, ಕಾರ್ತಿಕೇಯನ ಭಕ್ತರು ಉಪವಾಸ ಮಾಡಿ ಭಕ್ತಿಯಿಂದ ಆತನನ್ನು ಪೂಜಿಸುತ್ತಾರೆ.
ಪುರಾಣಗಳ ಪ್ರಕಾರ, ಶುಕ್ಲ ಪಕ್ಷದ ಷಷ್ಠಿ ತಿಥಿಯಂದು, ಶಿವ ಮತ್ತು ಪಾರ್ವತಿ ತಾಯಿಯ ಮಗನಾದ ಕಾರ್ತಿಕೇಯನು ತಾರಕಾಸುರ ಎಂಬ ರಾಕ್ಷಸನನ್ನು ಕೊಂದನು. ಆದ್ದರಿಂದ, ಕಾರ್ತಿಕೇಯನ ವಿಜಯದ ನೆನಪಿಗಾಗಿ ಈ ದಿನ ಸ್ಕಂದ ಷಷ್ಠಿ ಉಪವಾಸವನ್ನು ಆಚರಿಸಲಾಗುತ್ತದೆ ಎನ್ನುವ ನಂಬಿಕೆ ಇದೆ. ಈ ದಿನದಂದು ಅಂದರೆ ಸ್ಕಂದ ಷಷ್ಠಿಯ ಆಚರಣೆಗಳ ಪ್ರಕಾರ ಉಪವಾಸ ಮತ್ತು ಕಾರ್ತಿಕೇಯನನ್ನು ಪೂಜಿಸುವ ಮೂಲಕ ನಾವು ಮಾಡುವ ಪ್ರತಿ ಕೆಲಸದಲ್ಲಿಯೂ ವಿಜಯ ಸಾಧಿಸಬಹುದು ಎಂದು ನಂಬಲಾಗಿದೆ. ಜೊತೆಗೆ ಈ ಉಪವಾಸ ಮಾಡುವುದರಿಂದ ಜೀವನದಲ್ಲಿನ ಸಮಸ್ಯೆಗಳಿಂದ ಪರಿಹಾರ ಪಡೆದುಕೊಳ್ಳಬಹುದಾಗಿದೆ.
ಇಂದಿನ ಉಪವಾಸ ಮಹಿಳೆಯರಿಗೂ ಬಹಳ ಮುಖ್ಯವೆಂದು ಪರಿಗಣಿಸಲಾಗಿದೆ. ಧಾರ್ಮಿಕ ನಂಬಿಕೆಗಳ ಪ್ರಕಾರ, ಮಹಿಳೆಯರು ಸಂತಾನಭಾಗ್ಯ ಪಡೆಯಲು ಉಪವಾಸ ಆಚರಿಸುವುದು ಬಹಳ ಶುಭ ಮತ್ತು ಫಲಪ್ರದವೆಂದು ಪರಿಗಣಿಸಲಾಗಿದೆ. ಇದರ ಜೊತೆಗೆ ತಮ್ಮ ಮಕ್ಕಳ ದೀರ್ಘಾಯುಷ್ಯ, ಸಂತೋಷ, ಸಮೃದ್ಧಿ ಮತ್ತು ಯೋಗಕ್ಷೇಮಕ್ಕಾಗಿ ಮಹಿಳೆಯರು ಉಪವಾಸವನ್ನು ಆಚರಿಸುತ್ತಾರೆ. ದಿನ ಪೂರ್ತಿ ಉಪವಾಸ ಮಾಡಲು ಸಾಧ್ಯವಾಗದಿದ್ದವರು ಹಣ್ಣು, ನೀರು ಸೇವನೆ ಮಾಡಬಹುದು. ಆದರೆ ಇಂದು ಅಕ್ಕಿಯಿಂದ ಮಾಡಿದ ಪದಾರ್ಥಗಳನ್ನು ಮಾತ್ರ ಸೇವನೆ ಮಾಡಬಾರದು.
ಇದನ್ನೂ ಓದಿ:ಕಿವಿ ಚುಚ್ಚುವುದರ ಹಿಂದಿರುವ ಧಾರ್ಮಿಕ ಮಹತ್ವ ಏನು? ಇದರ ಹಿಂದಿದೆ ಅನೇಕ ಕಾರಣ
ಸ್ಕಂದ ಷಷ್ಠಿಯ ದಿನದಂದು, ಕಾರ್ತಿಕೇಯನನ್ನು ಅವನ ಹೆತ್ತವರಾದ ಶಿವ ಮತ್ತು ತಾಯಿ ಪಾರ್ವತಿಯೊಂದಿಗೆ ಪೂಜಿಸುವ ಸಂಪ್ರದಾಯವಿದೆ. ಆದ್ದರಿಂದ, ಈ ದಿನ ಶಿವನ ಕುಟುಂಬವನ್ನು ಪೂಜಿಸಬೇಕು. ದೇವರ ಮನೆಯಲ್ಲಿ ದೀಪ ಮತ್ತು ಧೂಪವನ್ನು ಬೆಳಗಿಸುವ ಮೂಲಕ ಪೂಜೆಯನ್ನು ಪ್ರಾರಂಭಿಸಬೇಕು. ಇದರ ನಂತರ, ಮನೆಗೆ ಮುತ್ತೈದೆಯರನ್ನು ಕರೆದು ಅವರೆಲ್ಲರಿಗೂ ಹಣ್ಣು, ಹೂವು, ಕುಂಕುಮ ಕೊಟ್ಟು ನಮಸ್ಕರಿಸಿ. ನಂತರ ದೇವರಿಗೆ ನೈವೇದ್ಯ ಇಟ್ಟು ಆರತಿ ಮಾಡಿ ಬಳಿಕ ಪ್ರಸಾದವನ್ನು ಮನೆಯ ಎಲ್ಲಾ ಸದಸ್ಯರಿಗೆ ವಿತರಿಸಿ. ಪ್ರತಿ ಸ್ಕಂದ ಷಷ್ಠಿಯಂದು ಈ ರೀತಿ ಮಾಡುವುದರಿಂದ ಇಷ್ಟಾರ್ಥ ಸಿದ್ಧಿಸುತ್ತದೆ ಮತ್ತು ಜೀವನದಲ್ಲಿ ಯಶಸ್ಸು ಸಿಗುತ್ತದೆ.
ಅಧ್ಯಾತ್ಮಕ್ಕೆ ಸಂಬಂಧಿಸಿದ ಮತ್ತಷ್ಟು ಸುದ್ದಿಗಳನ್ನು ಓದಲು ಇದರ ಮೇಲೆ ಕ್ಲಿಕ್ ಮಾಡಿ