Sarvartha Siddhi Yoga: ಕಾಶಿ ವಿಶ್ವನಾಥನ ಸನ್ನಿಧಿಯಲ್ಲಿ ಮೋದಿ ವಿಶೇಷ ಪೂಜೆ; ಸರ್ವಾರ್ಥ ಸಿದ್ಧಿ ಯೋಗದ ಮಹತ್ವವೇನು ಗೊತ್ತಾ?
PM Modi Puja in Kashi Vishwanath Temple: ಪ್ರಧಾನಿ ಮೋದಿ ಇಂದು ಕಾಶಿ ವಿಶ್ವನಾಥನಿಗೆ ಶೋಡಶೋಪಚಾರ ಪೂಜೆ ಸಲ್ಲಿಸಿದರು. ಸರ್ವಾರ್ಥ ಸಿದ್ಧಿ ಯೋಗ ಮತ್ತು ತ್ರಯೋದಶಿ ತಿಥಿಯ ಶುಭ ಸಂದರ್ಭದಲ್ಲಿ ಈ ಪೂಜೆ ನೆರವೇರಿರುವುದರಿಂದ ಇದು ವಿಶೇಷ ಮಹತ್ವವನ್ನು ಹೊಂದಿದೆ. ಆದ್ದರಿಂದ ಸರ್ವಾರ್ಥ ಸಿದ್ಧಿ ಯೋಗ ಎಂದರೇನು? ಇದರ ಮಹತ್ವವೇನು ಎಂಬುದರ ಸಂಪೂರ್ಣ ಮಾಹಿತಿಯನ್ನು ಇಲ್ಲಿ ತಿಳಿದುಕೊಳ್ಳಿ.

ಪ್ರಧಾನಿ ನರೇಂದ್ರ ಮೋದಿ ಕಾಶಿಗೆ ಭೇಟಿ ನೀಡಿ ವಿಶ್ವನಾಥನ ಆಶೀರ್ವಾದ ಪಡೆದಿದ್ದಾರೆ. ಇಂದು (ಏಪ್ರಿಲ್ 29) ರೂಪುಗೊಂಡ ಸರ್ವಾರ್ಥ ಸಿದ್ಧಿ ಯೋಗ ಮತ್ತು ತ್ರಯೋದಶಿ ತಿಥಿಯ ಅತ್ಯಂತ ಶುಭ ಸಂದರ್ಭದಲ್ಲಿ ಅವರು ವಿಶ್ವನಾಥನಿಗೆ ವಿಶೇಷ ಪೂಜೆಗಳನ್ನು ಸಲ್ಲಿಸಿದ್ದಾರೆ. ಈ ದಿನದ ಜ್ಯೋತಿಷ್ಯ ಶಾಸ್ತ್ರದ ಮಹತ್ವವನ್ನು ಗಮನದಲ್ಲಿಟ್ಟುಕೊಂಡು, ಸುಮಾರು 30 ನಿಮಿಷಗಳ ಕಾಲ ಶಾಸ್ತ್ರೋಕ್ತವಾಗಿ ಶೋಡಶೋಪಚಾರ ವಿಧಾನದ ಮೂಲಕ ಪ್ರಧಾನಿಯವರು ಪ್ರಾರ್ಥನೆ ಸಲ್ಲಿಸಿದ್ದಾರೆ.
ಜ್ಯೋತಿಷ್ಯ ಶಾಸ್ತ್ರ ಹೇಳುವುದೇನು?
ಜ್ಯೋತಿಷ್ಯ ಶಾಸ್ತ್ರದ ಪ್ರಕಾರ ಸರ್ವಾರ್ಥ ಸಿದ್ಧಿ ಯೋಗವು ಅತ್ಯಂತ ಶಕ್ತಿಶಾಲಿ ಮತ್ತು ಶುಭದಾಯಕ ಸಮಯವೆಂದು ಪರಿಗಣಿಸಲ್ಪಟ್ಟಿದೆ. ‘ಸರ್ವಾರ್ಥ’ ಎಂದರೆ ಎಲ್ಲಾ ಉದ್ದೇಶಗಳು ಹಾಗೂ ‘ಸಿದ್ಧಿ’ ಎಂದರೆ ಯಶಸ್ಸು ಎಂದರ್ಥ. ಈ ಯೋಗದಲ್ಲಿ ಕೈಗೊಳ್ಳುವ ಯಾವುದೇ ಕೆಲಸವು ಪೂರ್ಣ ಫಲ ನೀಡುತ್ತದೆ ಎಂಬ ನಂಬಿಕೆಯಿದೆ. ವಾರದ ದಿನ ಮತ್ತು ನಕ್ಷತ್ರಗಳ ವಿಶೇಷ ಸಮನ್ವಯದಿಂದ ಉಂಟಾಗುವ ಈ ಯೋಗವು, ಹೊಸ ವ್ಯವಹಾರ ಆರಂಭಿಸಲು, ಪ್ರಮುಖ ನಿರ್ಧಾರಗಳನ್ನು ತೆಗೆದುಕೊಳ್ಳಲು ಅಥವಾ ದೈವಿಕ ಕಾರ್ಯಗಳನ್ನು ನಡೆಸಲು ಅತ್ಯಂತ ಪ್ರಶಸ್ತವಾದ ಕಾಲವಾಗಿದೆ. ಇದು ಗ್ರಹಗತಿಗಳ ವಿಶೇಷ ಸ್ಥಾನದಿಂದಾಗಿ ಕೆಲವೇ ಗಂಟೆಗಳ ಕಾಲ ಮಾತ್ರ ಲಭ್ಯವಿರುತ್ತದೆ.
ತ್ರಯೋದಶಿ ತಿಥಿ ಮತ್ತೊಂದು ವಿಶೇಷ:
ಈ ದಿನದ ಮತ್ತೊಂದು ವಿಶೇಷವೆಂದರೆ ತ್ರಯೋದಶಿ ತಿಥಿ. ಶಿವನ ಆರಾಧನೆಗೆ ಈ ತಿಥಿಯು ಅತ್ಯಂತ ಪ್ರಿಯವಾದುದು. ತ್ರಯೋದಶಿಯಂದು ಶಿವನನ್ನು ಸ್ಮರಿಸುವುದರಿಂದ ಜೀವನದಲ್ಲಿ ಸುಖ, ಸಮೃದ್ಧಿ ಮತ್ತು ಶಾಂತಿ ಲಭಿಸುತ್ತದೆ ಎಂಬುದು ಭಕ್ತರ ದೃಢ ವಿಶ್ವಾಸ. ಅದರಲ್ಲೂ ಸರ್ವಾರ್ಥ ಸಿದ್ಧಿ ಯೋಗದೊಂದಿಗೆ ಈ ತಿಥಿಯು ಸಂಗಮವಾಗಿರುವುದು ಈ ದಿನದ ಆಧ್ಯಾತ್ಮಿಕ ಶಕ್ತಿಯನ್ನು ಇಮ್ಮಡಿಗೊಳಿಸಿದೆ. ಈ ಪುಣ್ಯಕಾಲದಂದೇ ಪ್ರಧಾನಿಯವರು ಕಾಶಿಯಲ್ಲಿ ಪೂಜೆ ಸಲ್ಲಿಸಿರುವುದು ವಿಶೇಷ ಮಹತ್ವ ಪಡೆದುಕೊಂಡಿದೆ.
ಇದನ್ನೂ ಓದಿ: ದೇವರಿಗೆ ದೀಪ ಹಚ್ಚುವಾಗ ಈ ವಿಷ್ಯ ತಿಳಿದಿರಲಿ; ಇದು ನಿಮ್ಮ ಅದೃಷ್ಟವನ್ನೇ ಬದಲಿಸಲಿದೆ
ಮೋದಿ ನೆರವೇರಿಸಿದ ಶೋಡಶೋಪಚಾರ ಪೂಜೆ:
ಪ್ರಧಾನಿ ಮೋದಿ ಅವರು ನೆರವೇರಿಸಿದ ಶೋಡಶೋಪಚಾರ ಪೂಜೆಯು 16 ಹಂತದ ವೈವಿಧ್ಯಮಯ ಸೇವೆಗಳನ್ನು ಒಳಗೊಂಡ ಸಾಂಪ್ರದಾಯಿಕ ವಿಧಾನವಾಗಿದೆ. ಈ ಪೂಜೆಯು ದೇವರನ್ನು ಆಹ್ವಾನಿಸಿ ಆಸನ ನೀಡುವುದರೊಂದಿಗೆ ಪ್ರಾರಂಭವಾಗಿ, ನಂತರ ಮುಖ್ಯ ಅಭಿಷೇಕದತ್ತ ಸಾಗುತ್ತದೆ. ಹಾಲು, ಮೊಸರು, ತುಪ್ಪ, ಜೇನುತುಪ್ಪ ಮತ್ತು ಪಂಚಾಮೃತದೊಂದಿಗೆ ಶಿವಲಿಂಗಕ್ಕೆ ಅಭಿಷೇಕ ಮಾಡಿ, ಕೊನೆಯದಾಗಿ ಶುದ್ಧ ನೀರಿನಿಂದಲೂ ಅಭಿಷೇಕ ಮಾಡಿಸಲಾಗುತ್ತದೆ. ಬಳಿಕ ವಸ್ತ್ರ, ಯಜ್ಞೋಪವೀತ ಮತ್ತು ಶ್ರೀಗಂಧವನ್ನು ಅರ್ಪಿಸಿ, ಶಿವನಿಗೆ ಅತ್ಯಂತ ಪ್ರಿಯವಾದ ಬಿಲ್ವಪತ್ರೆ ಹಾಗೂ ಪುಷ್ಪಗಳಿಂದ ಅರ್ಚನೆ ಮಾಡಲಾಗುತ್ತದೆ. ಅಂತಿಮವಾಗಿ ನೈವೇದ್ಯ, ತಾಂಬೂಲ ಅರ್ಪಿಸಿ, ಮಂತ್ರಘೋಷಗಳೊಂದಿಗೆ ಮಂಗಳಾರತಿ ಮಾಡುವ ಮೂಲಕ ಪೂಜಾ ವಿಧಿವಿಧಾನಗಳನ್ನು ಶಾಸ್ತ್ರೋಕ್ತವಾಗಿ ಮುಕ್ತಾಯಗೊಳಿಸಲಾಗುತ್ತದೆ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 11:26 am, Wed, 29 April 26




