ಸ್ನಾನವನ್ನು ಯಾವಾಗ ಮಾಡಬೇಕು? ಏಕೆ ಮಾಡಬೇಕು? ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು?

| Updated By: ಅಕ್ಷಯ್​ ಪಲ್ಲಮಜಲು​​

Updated on: Jul 17, 2023 | 9:52 AM

ಸಾಮನ್ಯವಾಗಿ ಸ್ನಾನವನ್ನು ಮಾಡುವುದು ದೇಹಶುದ್ಧಿಗೆ ಮಾತ್ರ ಎಂಬ ಕಲ್ಪನೆ ಇದೆ. ಆದರೆ ಅಷ್ಟೇ ಆಗಿದ್ದರೆ ಭಾರತೀಯರು ಪ್ರಧಾನಾಂಶವಾಗಿ ಹೇಳುತ್ತಿರಲಿಲ್ಲ. ಅದು ಪಾಪವನ್ನು ಕಳೆಯುವ, ಮನಸ್ಸನ್ನು ಶುದ್ಧ ಮಾಡುವ ಸಾಮರ್ಥ್ಯವನ್ನೂ ಇದು ಇಟ್ಟಕೊಂಡಿದೆ.

ಸ್ನಾನವನ್ನು ಯಾವಾಗ ಮಾಡಬೇಕು? ಏಕೆ ಮಾಡಬೇಕು? ಹೇಗೆ ಮಾಡಬೇಕು? ಎಲ್ಲಿ ಮಾಡಬೇಕು?
ಸಾಂದರ್ಭಿಕ ಚಿತ್ರ
Follow us on

ಸ್ನಾನವು ಅಶುಚಿಯನ್ನು ಶುಚಿಗೊಳಿಸುವ ಒಂದು ಕ್ರಿಯೆ. ಇದು ದೇಹವನ್ನು ಮಾತ್ರ ಶುದ್ಧ ಮಾಡದು, ಅದರ ಜೊತೆ ಮನಸ್ಸನ್ನು ನಿರ್ಮಲವಾಗಿಸುವ ಸಾಮರ್ಥವುಳ್ಳದ್ದಾಗಿದೆ. ಸ್ನಾನವೆನ್ನುವುದು ಪವಿತ್ರ ಕೆಲಸ. ಇದನ್ನು ಯಾವಾಗಲಾದರೂ ಮಾಡಬಾರದು. ಕಾಲ ಮತ್ತು ದೇಶದ ಅನುಸಾರವಾಗಿ ಮಾಡಬೇಕು.

ಸ್ನಾನದ ವಿಧಗಳು

ಮಂತ್ರಸ್ನಾನ – ವೇದಗಳಲ್ಲಿ ಸ್ನಾನಕ್ಕೆ ಯೋಗ್ಯವಾದ ಮಂತ್ರ ಉಚ್ಚರಿಸುವದು.

ಭೌಮಸ್ನಾನ – ಭೂಮಿಯ ಪವಿತ್ರ ಧೂಳನ್ನು ಮೈಗೆ ಲೇಪಿಸಿಕೊಳ್ಳುವುದು.

ಅಗ್ನಿಸ್ನಾನ – ಶಾಖಸ್ಪರ್ಶದಿಂದ ಸ್ನಾನ.

ವಾಯುಸ್ನಾನ – ಶುದ್ಧವೂ ಪವಿತ್ರವೂ ಆದ ಗಾಳಿಯಲ್ಲಿ ಸ್ನಾನ.

ದಿವ್ಯಸ್ನಾನ – ಮಳೆಯ ನೀರನ್ನು ಮೈಮೇಲೆ ನೇರ ಬೀಳಿಸಿಕೊಳ್ಳುವುದು.

ವಾರುಣಸ್ನಾನ – ನೀರಿನಿಂದ ಸ್ನಾನ.

ಮಾನಸಸ್ನಾನ – ಮನಸ್ಸಿನಲ್ಲಿ ಸ್ನಾನವನ್ನು ಮಾಡಿದಂತೆ ಅಂದುಕೊಳ್ಳುವುದು.

ಏಳು ಸ್ನಾನಗಳನ್ನು ಹೇಳಿದ್ದಾರೆ. ಇದಲ್ಲದೇ ಇನ್ನೂ ಅನೇಕವಿರಬಹುದು. ಇವೆಲ್ಲದರಿಂದ ಶುದ್ಧಿಯು ಆಗುತ್ತದೆ. ಇಷ್ಟೆಲ್ಲ ಯಾಕೆ ಬೇಕು ಎಂದರೆ ಅನಿವಾರ್ಯ ಕಾರಣದಿಂದ ಬೇರೆ ಸ್ನಾನವನ್ನು ಮಾಡಬೇಕಾಗಬಹುದು.‌ ಆಗ ನೀರಿಲ್ಲ ಆದ್ದರಿಂದ‌ ಸ್ನಾನವನ್ನು ಮಾಡುವುದಿಲ್ಲ ಎನ್ನಲಾಗದು. ಈ ಎಲ್ಲ ಸ್ನಾನದಲ್ಲಿಯೂ ಸಂಕಲ್ಪವು ಮುಖ್ಯವಾಗಿರುವುದು. ಅದನ್ನು ಮಾಡಿ ಸ್ನಾನ‌ ಮಾಡಿದರೆ ಸ್ನಾನದ ಫಲವು ಸಿಗುವುದು.

ಯಾವ ನೀರಿನಲ್ಲಿ ಸ್ನಾನ ಶ್ರೇಷ್ಠ?

ಸಂಗ್ರಹಿಸಿದ ನೀರಿನಿಂದ ಸ್ನಾನವು ಅಧಮಸ್ನಾನ ಎನಿಸಿಕೊಳ್ಳುವುದು. ಕೆರೆ, ಬಾಯಿ ಸ್ನಾನವು ಮಧ್ಯಮ. ನದೀ ಸ್ನಾನವು ಉತ್ತಮ ಎಂಬುದಾಗಿ ಹೇಳುತ್ತಾರೆ.

ಸ್ನಾನದಿಂದ ಆಗುವುದೇನು?

ಸಾಮನ್ಯವಾಗಿ ಸ್ನಾನವನ್ನು ಮಾಡುವುದು ದೇಹಶುದ್ಧಿಗೆ ಮಾತ್ರ ಎಂಬ ಕಲ್ಪನೆ ಇದೆ. ಆದರೆ ಅಷ್ಟೇ ಆಗಿದ್ದರೆ ಭಾರತೀಯರು ಪ್ರಧಾನಾಂಶವಾಗಿ ಹೇಳುತ್ತಿರಲಿಲ್ಲ. ಅದು ಪಾಪವನ್ನು ಕಳೆಯುವ, ಮನಸ್ಸನ್ನು ಶುದ್ಧ ಮಾಡುವ ಸಾಮರ್ಥ್ಯವನ್ನೂ ಇದು ಇಟ್ಟಕೊಂಡಿದೆ.

ಯನ್ಮಯಾ ಭುಕ್ತಮಸಾಧೂನಾಂ ಪಾಪೇಭ್ಯಶ್ಚ ಪ್ರತಿಗ್ರಹಃ |

ಯನ್ಮೇ ಮನಸಾ ವಾಚಾ ಕರ್ಮಣಾ ವಾ ದುಷ್ಕೃತಂ ಕೃತಮ್ ||

ತನ್ನ ಇಂದ್ರೋ ವರುಣೋ ಬೃಹಸ್ಪತಿಃ ಸವಿತಾ ಚ ಪುನಂತು ಪುನಃ ಪುನಃ |

ನಾನು ಉತ್ತಮವಲ್ಲದ್ದನ್ನು ತಿಂದಿದ್ದೇನೆ, ಪಾಪಿಗಳಿಂದ ಏನನ್ನಾದರೂ ಸ್ವೀಕರಿಸಿದ್ದೇನೆ. ಮನಸ್ಸು, ಮಾತು ಮತ್ತು ದೇಹದಿಂದ ದುಷ್ಕೃತ್ಯವನ್ನು ಮಾಡಿದ್ದೇನೆ. ಇದನ್ನೆಲ್ಲ ಇಂದ್ರ, ವರುಣ, ಬೃಹಸ್ಪತಿ, ಸವಿತೃ ದೇವತೆಗಳು ಮತ್ತೆ ಮತ್ತೆ ಶುದ್ಧಿ ಮಾಡಲಿ ಎನ್ನುತ್ತದೆ.

ಅತಿಯಾಗಿ ತಿಂದ ಹಾಗೂ ಮಿತಿ ಮೀರಿ ಏನನ್ನಾದರೂ ಕುಡಿದಿದ್ದರೆ ಅದನ್ನೆಲ್ಲವನ್ನೂ ಸರಿ ಮಾಡು ಎಂಬ ಪ್ರಾರ್ಥನೆ ಇದೆ. ಸ್ನಾನವನ್ನು ಮಾಡುವ ಇದನ್ನು ಹೇಳುತ್ತ ಮಾಡಬೇಕು ಮತ್ತು ಭಾರತದ ಪವಿತ್ರ ನದಿಗಳ ಸ್ಮರಣೆಯನ್ನು ಈ ಸಮಯದಲ್ಲಿ ಮಾಡಿಕೊಂಡಾಗ ಅವರ ಸಾನ್ನಿಧ್ಯವು ನಾವು ಮಾಡುವ ನೀರಿನಲ್ಲಿ ಇರಲಿದೆ.

ಇದನ್ನೂ ಓದಿ: ರಾತ್ರಿ ಮಲಗುವ ಮುನ್ನ ಈ ಅಭ್ಯಾಸಗಳನ್ನು ರೂಢಿಸಿಕೊಂಡರೆ ಜೀವನದಲ್ಲೂ ಸಫಲತೆ ಕಾಣುವಿರಿ

ಗಂಗೇ ಚ ಯಮುನೇ ಚೈವ, ಗೋದಾವರಿ ಸರಸ್ವತಿ |

ನರ್ಮದೇ ಸಿಂಧುಕಾವೇರಿ, ಜಲೇಸ್ಮಿನ್ ಸನ್ನಿಧಿಂ ಕುರು ||

ಭಾರತದ ಪುಣ್ಯನದಿಗಳನ್ನು ಸ್ಮರಿಸಿ, ಸ್ನಾನದ ಸಂಕಲ್ಪವನ್ನು ಮಾಡಿ ಸ್ನಾನವನ್ನು ಮಾಡಿದಾಗ ಸ್ನಾನದ ಫಲವು ಲಭಿಸುವುದು. ಸ್ನಾನವನ್ನು ಮಾಡುವಾಗ ಇರುವ ಮಾನಸಿಕ ಸ್ಥಿತಿಯು, ಅನಂತರ ಸ್ಥಿತಿಯೂ ಪ್ರತಿಯೊಬ್ಬರ ಅನುಭವಕ್ಕೆ ಬರಲಿದೆ.

ಲೋಹಿತ ಶರ್ಮಾ

ಅಧ್ಯಾತ್ಮಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ