Daily Devotional: ಸಾಯುವ ಮುನ್ನ ಕೊನೇ ಗಳಿಗೆಯಲ್ಲಿ ಗಂಗಾಜಲವನ್ನು ಬಿಡುವುದು ಯಾಕೆ? ಶಾಸ್ತ್ರಗಳು ಹೇಳುವುದೇನು?
ಹಿಂದೂ ಸಂಪ್ರದಾಯದ ಪ್ರಕಾರ, ಮರಣದ ಅಂತಿಮ ಘಟ್ಟದಲ್ಲಿ ದೇಹಕ್ಕೆ ತುಳಸಿ ಮತ್ತು ಗಂಗಾಜಲವನ್ನು ಅರ್ಪಿಸುವುದು ಪ್ರಾಚೀನ ಪದ್ಧತಿಯಾಗಿದೆ. ಇದು ಪಾಪಕರ್ಮಗಳನ್ನು ನಾಶಪಡಿಸಿ, ಆತ್ಮಕ್ಕೆ ಮೋಕ್ಷವನ್ನು ಕರುಣಿಸಿ, ಮುಂದಿನ ಪಯಣಕ್ಕೆ ಸುಗಮ ಮಾರ್ಗವಾಗುತ್ತದೆ ಎಂಬುದು ನಂಬಿಕೆ. ಗರುಡ ಪುರಾಣದಲ್ಲಿ ಇದರ ಉಲ್ಲೇಖವಿದೆ. ಈ ಬಗ್ಗೆ ಡಾ. ಬಸವರಾಜ್ ಗುರೂಜಿ ನೀಡಿರುವ ಮಾಹಿತಿ ಇಲ್ಲಿದೆ.

ಹುಟ್ಟಿದ ಪ್ರತಿಯೊಬ್ಬ ವ್ಯಕ್ತಿಗೂ ಮರಣ ಅನಿವಾರ್ಯ. ಪ್ರತಿಯೊಬ್ಬರೂ ತಮ್ಮ ಜೀವನದ ಜವಾಬ್ದಾರಿಗಳು, ವೃತ್ತಿ ಮತ್ತು ಶ್ರೇಯಸ್ಸಿನಲ್ಲಿ ನಿರತರಾಗಿರುತ್ತಾರೆ. ಆದರೆ, ಮರಣದ ಅಂತಿಮ ಕಾಲವು ಎಲ್ಲರಿಗೂ ಒದಗಿ ಬರುತ್ತದೆ. ಇಂತಹ ಅಂತಿಮ ಘಟ್ಟದಲ್ಲಿ, ಹಿಂದೂ ಸನಾತನ ಸಂಪ್ರದಾಯದಲ್ಲಿ ಒಂದು ವಿಶಿಷ್ಟ ಪದ್ಧತಿಯಿದೆ. ದೇಹವು ಪ್ರಾಣವನ್ನು ತ್ಯಜಿಸುವ ಸಂದರ್ಭದಲ್ಲಿ, ತುಳಸಿ ಮತ್ತು ಗಂಗಾಜಲವನ್ನು ದೇಹಕ್ಕೆ ಅರ್ಪಿಸಲಾಗುತ್ತದೆ. ಈ ಪದ್ಧತಿಗೆ ಹಲವಾರು ಧಾರ್ಮಿಕ, ಆಧ್ಯಾತ್ಮಿಕ ಮತ್ತು ಕೆಲವು ವಿಜ್ಞಾನ ಆಧಾರಿತ ಕಾರಣಗಳಿವೆ. ಈ ಬಗ್ಗೆ ಖ್ಯಾತ ಜ್ಯೋತಿಷಿ ಮತ್ತು ವಾಸ್ತು ಶಾಸ್ತ್ರಜ್ಞರಾದ ಡಾ. ಬಸವರಾಜ್ ಗುರೂಜಿಯವರು ತಮ್ಮ ನಿತ್ಯಭಕ್ತಿ ಕಾರ್ಯಕ್ರಮದಲ್ಲಿ ನೀಡಿರುವ ಮಾಹಿತಿ ಇಲ್ಲಿದೆ.
ಗುರೂಜಿಯವರು ಹೇಳುವಂತೆ, ತುಳಸಿಯನ್ನು ವಿಷ್ಣುಪ್ರಿಯೆ ಎಂದು ಕರೆಯಲಾಗುತ್ತದೆ, ಅಂದರೆ ಅದು ವಿಷ್ಣುವಿಗೆ ಅತ್ಯಂತ ಪ್ರಿಯವಾದ ಮತ್ತು ಪವಿತ್ರವಾದ ಸಸ್ಯವಾಗಿದೆ. ಗಂಗಾಜಲವನ್ನು ಪಾಪನಾಶಕ ಮತ್ತು ಕರ್ಮನಾಶಕ ಎಂದು ಪರಿಗಣಿಸಲಾಗುತ್ತದೆ. ದೇಹದಲ್ಲಿ ಅಂಟಿಕೊಂಡಿರುವ ಪಾಪಗಳು ಮತ್ತು ಕರ್ಮಗಳು ಪ್ರಾಣವು ಸುಗಮವಾಗಿ ದೇಹದಿಂದ ಹೊರಹೋಗುವುದನ್ನು ತಡೆಯುತ್ತವೆ ಎಂಬ ನಂಬಿಕೆಯಿದೆ. ಈ ಸಮಯದಲ್ಲಿ ದೇಹವು ತೀವ್ರವಾಗಿ ರೋಧಿಸುತ್ತಿರುತ್ತದೆ. ಅಂತಹ ಸಂದರ್ಭದಲ್ಲಿ ತುಳಸಿ ಮತ್ತು ಗಂಗಾಜಲವನ್ನು ಅರ್ಪಿಸಲಾಗುತ್ತದೆ.
ಈ ಆಚರಣೆಯ ಉಲ್ಲೇಖವು ಗರುಡ ಪುರಾಣದಲ್ಲಿದೆ. ಈ ಪದ್ಧತಿಯನ್ನು ಡಾಕ್ಟರ್ಗಳು ಕೈಚೆಲ್ಲಿದಾಗ, ರೋಗಿಯು ಪ್ರಜ್ಞಾಹೀನನಾಗಿದ್ದು, ಯಾವುದೇ ಆಹಾರವನ್ನು ಸೇವಿಸಲು ಅಸಮರ್ಥನಾಗಿದ್ದು, ತೀವ್ರ ನೋವಿನಿಂದ ಬಳಲುತ್ತಿರುವಾಗ ಮಾತ್ರ ಆಚರಿಸಲಾಗುತ್ತದೆ. ಈ ಸಂಕಷ್ಟದ ಸಮಯದಲ್ಲಿ, ಗಂಗಾಜಲವನ್ನು ಅವರ ಬಾಯಿಯಲ್ಲಿ ಮೂರು ಬಾರಿ ಹಾಕುವುದರಿಂದ ಮತ್ತು ತುಳಸಿಯನ್ನು ಅರ್ಪಿಸುವುದರಿಂದ ದೇಹದಲ್ಲಿನ ಪಾಪಗಳು ಹಾಗೂ ಕರ್ಮಗಳು ಬಿಡುಗಡೆಯಾಗುತ್ತವೆ ಎಂದು ನಂಬಲಾಗಿದೆ. ಇದು ಆತ್ಮಕ್ಕೆ ಪುನರಪಿ ಜನನಂ, ಪುನರಪಿ ಮರಣಂ ಚಕ್ರದಿಂದ ವಿಮೋಚನೆ ನೀಡಿ, ಮೋಕ್ಷವನ್ನು ಪಡೆಯಲು ಸಹಾಯ ಮಾಡುತ್ತದೆ.
ಇದನ್ನೂ ಓದಿ: ಮದುವೆ ಆಮಂತ್ರಣ ಪತ್ರಿಕೆಯಲ್ಲಿ ವಧು-ವರರ ಫೋಟೋ ಹಾಕಬಾರದು ಯಾಕೆ?
ವಿಜ್ಞಾನದ ದೃಷ್ಟಿಯಿಂದ ನೋಡಿದಾಗ, ತುಳಸಿ ಮತ್ತು ಗಂಗಾಜಲವು ದೇಹವನ್ನು ಪ್ರವೇಶಿಸಿದಾಗ ಉಸಿರಾಟದ ತೊಂದರೆ ಇರುವವರಿಗೆ ಸ್ವಲ್ಪ ಮಟ್ಟಿಗೆ ನೆರವಾಗಬಹುದು. ಕೆಲವು ಬಾರಿ ಇದು ವ್ಯಕ್ತಿಯು ಚೇತರಿಸಿಕೊಳ್ಳಲು ಸಹ ಕಾರಣವಾಗಬಹುದು. ಆದರೆ ಮುಖ್ಯವಾಗಿ, ಪ್ರಾಣವು ನಿಲ್ಲುವ ಸಮಯದಲ್ಲಿ, ಈ ಪವಿತ್ರ ದ್ರವ್ಯಗಳು ಮತ್ತು ಸಸ್ಯಗಳು ದೇಹವನ್ನು ಮೋಕ್ಷಕ್ಕೆ ಕೊಂಡೊಯ್ಯಲು ಅಥವಾ ದೇಹವು ಬಿಡುಗಡೆ ಹೊಂದಲು ಸಹಾಯ ಮಾಡುತ್ತವೆ ಎಂಬುದು ಸನಾತನ ನಂಬಿಕೆ.
ತುಳಸಿಯನ್ನು ಹರಿಪ್ರಿಯೆ ಎಂದೂ ಕರೆಯಲಾಗುತ್ತದೆ. ಪ್ರತಿದಿನ ಒಂದು ತುಳಸಿ ಎಲೆಯನ್ನು ಸೇವಿಸುವ ಅಭ್ಯಾಸವು ಜೀವನ ನಿರ್ವಹಣೆಯ ಅನೇಕ ವಿಷಯಗಳಲ್ಲಿ ಅನುಕೂಲಕರವಾಗಿದೆ ಎಂದು ಹೇಳಲಾಗುತ್ತದೆ. ಮರಣ ಕಾಲದಲ್ಲಿ ತುಳಸಿ ಮತ್ತು ಗಂಗಾಜಲವನ್ನು ದೇಹಕ್ಕೆ ಅರ್ಪಿಸುವುದರಿಂದ ವಿಷ್ಣುವಿನ ಕೃಪೆಗೆ ಪಾತ್ರರಾಗುತ್ತಾರೆ ಮತ್ತು ವೈಕುಂಠ ಪ್ರಾಪ್ತಿಯಾಗುತ್ತದೆ ಎಂದು ನಂಬಲಾಗಿದೆ.
ಅಂತಿಮ ಘಟ್ಟದಲ್ಲಿರುವವರಿಗೆ ಯಮದೂತರು ಕಾಣಿಸಿಕೊಳ್ಳಬಹುದು, ಆದರೆ ಅವರ ಕೈಯಲ್ಲಿ ದೇಹವನ್ನು ಕೊಂಡೊಯ್ಯಲು ಸಾಧ್ಯವಾಗುವುದಿಲ್ಲ. ಯಮದೂತರಿಗೆ ತುಳಸಿಯೆಂದರೆ ಭಯ ಎಂಬ ನಂಬಿಕೆಯಿದೆ. ತುಳಸಿಯನ್ನು ಅರ್ಪಿಸಿದಾಗ ಯಮದೂತರಿಲ್ಲದೆ ಆತ್ಮವು ತನ್ನ ಮುಂದಿನ ಪಯಣವನ್ನು ಸುಗಮವಾಗಿ ಸಾಗಿಸಬಲ್ಲದು. ಮರಣ ಕಾಲದಲ್ಲಿ ಗಂಗಾಜಲವು ದೇಹವನ್ನು ಪ್ರವೇಶಿಸಿದಾಗ, ದೇಹದ ಸರ್ವ ಭಾಗವೂ ಮೋಕ್ಷವನ್ನು ಪಡೆಯುತ್ತದೆ, ದೇಹವು ಶುದ್ಧವಾಗುತ್ತದೆ ಮತ್ತು ದೈವತ್ವವನ್ನು ಪಡೆಯುತ್ತದೆ. ಆತ್ಮವು ಸುಭಿಕ್ಷವಾಗಿ ತನ್ನ ಸ್ಥಾನವನ್ನು ಸೇರಿ, ಇನ್ನೊಂದು ಆತ್ಮಕ್ಕೆ ಪ್ರವೇಶಿಸಲು ಉತ್ತಮ ದಾರಿಯಾಗುತ್ತದೆ ಎಂದು ಗುರೂಜಿ ಸಲಹೆ ನೀಡಿದ್ದಾರೆ.
ಡಾ.ಬಸವರಾಜ್ ಗುರೂಜಿ, ವೈದಿಕ ಜ್ಯೋತಿಷಿ (9972848937)
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




