Hindu Traditions: ಊಟ ಮಾಡಿದ ತಟ್ಟೆಯಲ್ಲೇ ಕೈ ತೊಳೆಯಬಾರದು ಅನ್ನೋದೇಕೆ? ಕಾರಣ ಇಲ್ಲಿದೆ
"ಊಟದ ತಟ್ಟೆಯಲ್ಲಿ ಕೈ ತೊಳೆಯಬೇಡಿ" ಎಂಬುದು ಕೇವಲ ಮೂಢನಂಬಿಕೆಯಲ್ಲ. ಇದರ ಹಿಂದೆ ಆಧ್ಯಾತ್ಮಿಕ, ಜ್ಯೋತಿಷ್ಯ, ವೈಜ್ಞಾನಿಕ ಕಾರಣಗಳಿವೆ. ಅನ್ನಪೂರ್ಣ ದೇವಿ, ಲಕ್ಷ್ಮಿಗೆ ಅಗೌರವ, ನವಗ್ರಹ ದೋಷಗಳು, ನಕಾರಾತ್ಮಕ ಶಕ್ತಿಗಳ ಪ್ರವೇಶ ಹಾಗೂ ಆರೋಗ್ಯ ಸಮಸ್ಯೆಗಳಿಗೆ ಇದು ಕಾರಣವಾಗುತ್ತದೆ. ನಮ್ಮ ಸಂಸ್ಕೃತಿಯಲ್ಲಿ ಅನ್ನಕ್ಕೆ ಗೌರವ ನೀಡುವ ಮಹತ್ವವನ್ನು ಅರಿತು, ಪ್ರತ್ಯೇಕ ಜಾಗದಲ್ಲಿ ಕೈ ತೊಳೆಯುವ ಅಭ್ಯಾಸ ರೂಢಿಸಿಕೊಳ್ಳಿ.

ನಮ್ಮ ಮನೆಗಳಲ್ಲಿ ಹಿರಿಯರು ಸಾಮಾನ್ಯವಾಗಿ ಹೇಳುವ ಒಂದು ನಿಯಮವಿದೆ, “ಊಟ ಮಾಡಿದ ನಂತರ ತಟ್ಟೆಯಲ್ಲಿ ಕೈ ತೊಳೆಯಬೇಡಿ” ಎಂಬುದು. ಹಲವರು ಇದನ್ನು ಕೇವಲ ಹಳೇಕಾಲದ ಮೂಢನಂಬಿಕೆ ಎಂದು ನಿರ್ಲಕ್ಷಿಸುವುದುಂಟು. ಆದರೆ, ಸೂಕ್ಷ್ಮವಾಗಿ ಗಮನಿಸಿದರೆ ಇದರ ಹಿಂದೆ ಆಧ್ಯಾತ್ಮಿಕ, ಜ್ಯೋತಿಷ್ಯ ಮತ್ತು ವೈಜ್ಞಾನಿಕ ಕಾರಣಗಳಿವೆ. ನಮ್ಮ ಸಂಸ್ಕೃತಿಯಲ್ಲಿ ಅನ್ನವನ್ನು ‘ಪರಬ್ರಹ್ಮ’ (ಅನ್ನದಾತ) ಎಂದು ಗೌರವಿಸಲಾಗುತ್ತದೆ. ಹಾಗಾದರೆ, ತಟ್ಟೆಯಲ್ಲೇ ಕೈ ತೊಳೆಯುವುದರಿಂದ ಆಗುವ ನಷ್ಟಗಳೇನು? ಇದರ ಹಿಂದಿನ ಅಸಲಿ ಕಾರಣಗಳೇನು? ಎಂಬುದನ್ನು ಇಲ್ಲಿ ತಿಳಿದುಕೊಳ್ಳಿ.
ಲಕ್ಷ್ಮಿ ಮತ್ತು ಅನ್ನಪೂರ್ಣ ದೇವಿಗೆ ಮಾಡುವ ಅವಮಾನ:
ಹಿಂದೂ ಧರ್ಮಗ್ರಂಥಗಳ ಪ್ರಕಾರ, ಆಹಾರದ ಪ್ರಧಾನ ದೇವತೆ ಅನ್ನಪೂರ್ಣ ದೇವಿ. ಹಾಗೆಯೇ, ಸಂಪತ್ತಿನ ದೇವತೆಯಾದ ಲಕ್ಷ್ಮಿಯು ಅನ್ನವಿರುವಲ್ಲಿ ವಾಸಿಸುತ್ತಾಳೆ ಎಂಬ ನಂಬಿಕೆಯಿದೆ. ನಾವು ಆಹಾರ ಸೇವಿಸಿದ ತಟ್ಟೆಯಲ್ಲೇ ಕೈ ತೊಳೆದರೆ, ಅದು ಅನ್ನಕ್ಕೆ ಹಾಗೂ ದೇವತೆಗೆ ಮಾಡುವ ಅಪಚಾರ ಎಂದು ಪರಿಗಣಿಸಲಾಗುತ್ತದೆ. ಇದರಿಂದ ಅನ್ನಪೂರ್ಣ ಮತ್ತು ಲಕ್ಷ್ಮಿ ದೇವಿಯರು ಅಸಮಾಧಾನಗೊಂಡು, ಆ ಮನೆಯಲ್ಲಿ ಆಹಾರ ಮತ್ತು ಸಂಪತ್ತಿನ ಸಮೃದ್ಧಿ ಕ್ರಮೇಣ ಕಡಿಮೆಯಾಗುತ್ತದೆ ಎಂಬ ಬಲವಾದ ನಂಬಿಕೆ ಇದೆ.
ದೇವತೆಗಳಿಗೆ ಮತ್ತು ನವಗ್ರಹಗಳಿಗೆ ಅಗೌರವ:
ಪೂಜೆ ಹಾಗೂ ಯಜ್ಞಗಳ ಸಂದರ್ಭದಲ್ಲಿ ದೇವತೆಗಳಿಗೆ ಅನ್ನವನ್ನೇ ನೈವೇದ್ಯವಾಗಿ ಅರ್ಪಿಸಲಾಗುತ್ತದೆ. ಆದ್ದರಿಂದ ಆಹಾರವನ್ನು ಅತ್ಯಂತ ಪವಿತ್ರವೆಂದು ಭಾವಿಸಲಾಗುತ್ತದೆ. ಅಂತಹ ಪವಿತ್ರ ತಟ್ಟೆಯಲ್ಲೇ ಎಂಜಲು ಕೈ ತೊಳೆಯುವುದು ದೇವತೆಗಳಿಗೆ ಮಾಡುವ ಅಗೌರವವಾಗಿದೆ.
ಇನ್ನು ಜ್ಯೋತಿಷ್ಯ ಶಾಸ್ತ್ರದ ಪ್ರಕಾರ, ಪ್ರತಿಯೊಂದು ಧಾನ್ಯ ಅಥವಾ ಆಹಾರ ಪದಾರ್ಥವು ಒಂದು ನಿರ್ದಿಷ್ಟ ಗ್ರಹವನ್ನು ಪ್ರತಿನಿಧಿಸುತ್ತದೆ (ಉದಾಹರಣೆಗೆ: ಅಕ್ಕಿ ಚಂದ್ರನನ್ನು ಪ್ರತಿನಿಧಿಸುತ್ತದೆ). ತಟ್ಟೆಯಲ್ಲಿ ಕೈ ತೊಳೆಯುವುದರಿಂದ ನವಗ್ರಹಗಳ ಕೆಟ್ಟ ದೃಷ್ಟಿ ಅಥವಾ ದೋಷಗಳು ನಮ್ಮನ್ನು ಕಾಡಬಹುದು ಎಂದು ಜ್ಯೋತಿಷಿಗಳು ಎಚ್ಚರಿಸುತ್ತಾರೆ.
ಇದನ್ನೂ ಓದಿ: ಫ್ಯಾಶನ್ಗಾಗಿ ವಜ್ರ ಧರಿಸುವ ಮುನ್ನ ಎಚ್ಚರ! ಈ ರಾಶಿಯವರು ವಜ್ರ ಧರಿಸಿದರೆ ಕಷ್ಟ ತಪ್ಪಿದ್ದಲ್ಲ!
ನಕಾರಾತ್ಮಕ ಶಕ್ತಿಗಳ ಪ್ರವೇಶ:
ಆಧ್ಯಾತ್ಮಿಕ ನಂಬಿಕೆಗಳ ಪ್ರಕಾರ, ಆಹಾರವಿದ್ದ ಪಾತ್ರೆಯಲ್ಲಿ ಕೈ ತೊಳೆಯುವುದರಿಂದ ಉಂಟಾಗುವ ಅಶುದ್ಧತೆಯು ಮನೆಯೊಳಗೆ ನಕಾರಾತ್ಮಕ ಶಕ್ತಿಗಳನ್ನು ಆಕರ್ಷಿಸುತ್ತದೆ. ಇದು ಮನೆಯ ಪ್ರಶಾಂತ ವಾತಾವರಣವನ್ನು ಕೆಡಿಸಿ, ಕುಟುಂಬದ ಸದಸ್ಯರ ಮಾನಸಿಕ ಶಾಂತಿಯ ಮೇಲೆ ಪರಿಣಾಮ ಬೀರಬಹುದು.
ಆರೋಗ್ಯದ ಹಿಂದಿರುವ ವೈಜ್ಞಾನಿಕ ಕಾರಣ:
ಕೇವಲ ಆಧ್ಯಾತ್ಮ ಮಾತ್ರವಲ್ಲ, ವಿಜ್ಞಾನ ಮತ್ತು ಆರೋಗ್ಯ ತಜ್ಞರು ಕೂಡ ತಟ್ಟೆಯಲ್ಲಿ ಕೈ ತೊಳೆಯುವುದನ್ನು ವಿರೋಧಿಸುತ್ತಾರೆ. ಊಟ ಮಾಡಿದ ನಂತರ ತಟ್ಟೆಯಲ್ಲೇ ಕೈ ತೊಳೆಯುವಾಗ, ಕೈಯಲ್ಲಿರುವ ಬ್ಯಾಕ್ಟೀರಿಯಾ ಮತ್ತು ಸೂಕ್ಷ್ಮಜೀವಿಗಳು ಕೊಳಕು ನೀರಿನೊಂದಿಗೆ ತಟ್ಟೆಯಲ್ಲೇ ಉಳಿಯುತ್ತವೆ. ಒಂದು ವೇಳೆ ಆ ಪಾತ್ರೆಯನ್ನು ಸರಿಯಾಗಿ ತೊಳೆದು ಸ್ವಚ್ಛಗೊಳಿಸದಿದ್ದರೆ, ಮುಂದಿನ ಬಾರಿ ಅದರಲ್ಲಿ ಊಟ ಮಾಡುವಾಗ ಆ ಜೀವಾಣುಗಳು ದೇಹವನ್ನು ಪ್ರವೇಶಿಸಿ ಅನಾರೋಗ್ಯಕ್ಕೆ ಕಾರಣವಾಗಬಹುದು. ಆದ್ದರಿಂದಲೇ, ನೈರ್ಮಲ್ಯದ ದೃಷ್ಟಿಯಿಂದ ವಾಶ್ ಬೇಸಿನ್ ಅಥವಾ ಪ್ರತ್ಯೇಕ ಜಾಗದಲ್ಲಿ ಕೈ ತೊಳೆಯುವುದು ಅತ್ಯಂತ ಸೂಕ್ತ.
ಮತ್ತಷ್ಟು ಆಧ್ಯಾತ್ಮಿಕ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ




