ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟ್: ಇದು ಮಣಿಕಟ್ಟಿನ ಮ್ಯಾಜಿಷೀಯನ್ ಜಿ. ವಿಶ್ವನಾಥ್ ಕಥೆ

| Updated By: ಝಾಹಿರ್ ಯೂಸುಫ್

Updated on: Feb 12, 2023 | 6:39 PM

Gundappa Viswanath: ಟೀಮ್ ಇಂಡಿಯಾ ಪರ 91 ಟೆಸ್ಟ್ ಪಂದ್ಯಗಳನ್ನಾಡಿರುವ ಗುಂಡಪ್ಪ ವಿಶ್ವನಾಥ್ ಅವರು 1 ದ್ವಿಶತಕ, 14 ಶತಕ ಹಾಗೂ 35 ಅರ್ಧಶತಕಗಳೊಂದಿಗೆ 6080 ರನ್​ ಕಲೆಹಾಕಿದ್ದಾರೆ.

ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟ್: ಇದು ಮಣಿಕಟ್ಟಿನ ಮ್ಯಾಜಿಷೀಯನ್ ಜಿ. ವಿಶ್ವನಾಥ್ ಕಥೆ
Gundappa Viswanath
Follow us on

ಅದು ನವೆಂಬರ್ 28, 1969…ಕಾನ್ಪುರದಲ್ಲಿ ನಡೆದ ಟೆಸ್ಟ್ ಪಂದ್ಯದಲ್ಲಿ ಭಾರತ-ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗಿತ್ತು. ಮನ್ಸೂರ್ ಅಲಿ ಖಾನ್ ಪಟೌಡಿ ಮುನ್ನಡೆಸಿದ್ದ ಟೀಮ್ ಇಂಡಿಯಾ ಪರ ಅಂದು 20ರ ಹರೆಯದ ಯುವ ತರುಣನೊಬ್ಬ ಪದಾರ್ಪಣೆ ಮಾಡಿದ್ದ. ಉತ್ತಮ ಆರಂಭ ಪಡೆದಿದ್ದ ಭಾರತ ತಂಡವು 171 ರನ್​ ಕಲೆಹಾಕಿತ್ತು. ಈ ಹಂತದಲ್ಲಿ 3ನೇ ವಿಕೆಟ್ ಕಳೆದುಕೊಂಡಾಗ ನಾಯಕ ಮನ್ಸೂರ್ ಅಲಿ ಖಾನ್ ಚೊಚ್ಚಲ ಬಾರಿ ತಂಡದಲ್ಲಿ ಅವಕಾಶ ಪಡೆದಿದ್ದ ಯುವ ಆಟಗಾರನನ್ನು ಕಣಕ್ಕಿಳಿಸಿದರು. ಆದರೆ ನಾಲ್ಕನೇ ಕ್ರಮಾಂಕದಲ್ಲಿ ಬ್ಯಾಟ್ ಬೀಸಿದ ಆ ಆಟಗಾರ ಶೂನ್ಯಕ್ಕೆ ಔಟಾಗಿದ್ದರು.
ಇತ್ತ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿ ಭಾರದ ಹೆಜ್ಜೆಯಾಗಿ ಪೆವಿಲಿಯನ್​ಗೆ ಮರಳಿದ್ದ ಯುವ ಆಟಗಾರನ ಬೆನ್ನು ತಟ್ಟಿ ಅಂದು ಟೀಮ್ ಇಂಡಿಯಾ ನಾಯಕ ಹೇಳಿದ್ದು ಒಂದೇ ಮಾತು, ನೀವು ಶತಕ ಹೊಡಿತೀರಿ ಬಿಡಿ ಎಂದು.

ಆತ ನಾಯಕನ ಈ ನಂಬಿಕೆಯನ್ನು ಹುಸಿಗೊಳಿಸಲಿಲ್ಲ. 2ನೇ ಇನಿಂಗ್ಸ್​ನಲ್ಲಿ ಭರ್ಜರಿ ಶತಕ ಸಿಡಿಸಿ ಬ್ಯಾಟ್ ಮೇಲೆತ್ತಿದರು. ಅಲ್ಲದೆ 25 ಬೌಂಡರಿಗಳೊಂದಿಗೆ 137 ರನ್​ಗಳ ಅಮೋಘ ಇನಿಂಗ್ಸ್ ಆಡಿ ಎದೆಯುಬ್ಬಿಸುತ್ತಾ ಪೆವಿಲಿಯನ್ ಕಡೆ ನಗುಮುಖದೊಂದಿಗೆ ಹೆಜ್ಜೆ ಹಾಕಿದ್ದರು. ಹೀಗೆ ಚೊಚ್ಚಲ ಇನಿಂಗ್ಸ್​ನಲ್ಲಿ ಶೂನ್ಯಕ್ಕೆ ಔಟಾಗಿ ಅದೇ ಪಂದ್ಯದಲ್ಲಿ ಶತಕ ಸಿಡಿಸಿದ ಆಟಗಾರನ ಹೆಸರು ಗುಂಡಪ್ಪ ರಂಗನಾಥ್ ವಿಶ್ವನಾಥ್…ಎಸ್, ಕನ್ನಡಿಗರ ಪಾಲಿನ ಹೆಮ್ಮೆಯ ಜಿ ವಿಶ್ವನಾಥ್.

ಜಿ ವಿಶ್ವನಾಥ್ ಎಂದಾಗ ಈಗಲೂ ಕ್ರಿಕೆಟ್ ಪ್ರಿಯರಿಗೆ ನೆನಪಿಗೆ ಬರುವುದು ಎರಡು ಶಾಟ್​ಗಳು…ಲೇಟ್ ಕಟ್ ಅ್ಯಂಡ್ ವೃಸ್ಟಿ ಶಾಟ್. ಕಲಾತ್ಮಕ ಹೊಡೆತಗಳ ಮೂಲಕ ಬೌಲರ್​ಗಳ ನಿದ್ದೆಗೆಡಿಸಿದ್ದ ವಿಶ್ವನಾಥ್ ಅವರನ್ನು ಇಂದಿಗೂ ಮಣಿಕಟ್ಟಿನ ಮ್ಯಾಜೀಷಿಯನ್ ಎಂದು ಬಣ್ಣಿಸಲಾಗುತ್ತದೆ. ಏಕೆಂದರೆ ಅವರಂತೆ ಮಣಿಕಟ್ಟನ್ನು ತಿರುಗಿಸಿ ವೇಗದ ಬೌಲರ್​ಗಳಿಗೆ ಬ್ಯಾಟ್ ಮೂಲಕ ಉತ್ತರ ನೀಡಿದ ಮತ್ತೊಬ್ಬ ಆಟಗಾರನಿಲ್ಲ ಎನ್ನಬಹುದು. ಅಷ್ಟೇ ಅಲ್ಲದೆ 70 ಮತ್ತು 80 ದಶಕದಲ್ಲಿ ಬ್ಯಾಟ್ಸ್​ಮನ್​ಗಳಿಗೆ ನಡುಕ ಹುಟ್ಟಿಸಿದ್ದ ವೆಸ್ಟ್ ಇಂಡೀಸ್​ನ ಘಾತಕ ವೇಗಿಗಳಿಗೂ ಲೇಟ್ ಕಟ್ ಶಾಟ್ ಮೂಲಕ ಉತ್ತರ ನೀಡುತ್ತಿದ್ದರು. ಅಂತಹದೊಂದು ತಾಳ್ಮೆ ಹಾಗೂ ಚಾಣಕ್ಯತೆ ಕನ್ನಡಿಗನಲ್ಲಿತ್ತು.

ಇದನ್ನೂ ಓದಿ
ICC Rankings: ಐಸಿಸಿ ರ‍್ಯಾಂಕಿಂಗ್​ನಲ್ಲಿ ನಂಬರ್ 1 ಸ್ಥಾನ ಅಲಂಕರಿಸಿದ ಭಾರತದ 6 ಬೌಲರ್​ಗಳು ಇವರೇ
ವಿದೇಶದಲ್ಲಿ ಪಂದ್ಯವಾಡುತ್ತಿದ್ದ ಆಟಗಾರನನ್ನು ಕ್ರೀಡಾ ಸಚಿವನಾಗಿ ಆಯ್ಕೆ ಮಾಡಿದ ಪಾಕ್ ಸರ್ಕಾರ
Shubman Gill: ಕಿಂಗ್ ಕೊಹ್ಲಿಯ ಮತ್ತೊಂದು ದಾಖಲೆ ಮುರಿದ ಶುಭ್​ಮನ್ ಗಿಲ್
WIPL 2023: ಮಹಿಳಾ ಐಪಿಎಲ್ 5 ತಂಡಗಳ ಘೋಷಣೆ

ಇನ್ನು ಮೊದಲ ಪಂದ್ಯದಲ್ಲಿ ಶೂನ್ಯಕ್ಕೆ ಔಟಾದಾಗ ಮನ್ಸೂರ್ ಅಲಿ ಖಾನ್ ಪಟೌಡಿ ನೀವು ಶತಕ ಬಾರಿಸುತ್ತೀರಿ ಎಂದು ಹೇಳಲೂ ಕೂಡ ಕಾರಣ ಅದೇ ಮಣಿಕಟ್ಟಿನ ಮ್ಯಾಜಿಕ್. ಏಕೆಂದರೆ 1967-68ರ ಸೀಸನ್​ನಲ್ಲಿ ಆಂಧ್ರಪ್ರದೇಶದ ವಿರುದ್ಧ ನಡೆದ ರಣಜಿ ಟ್ರೋಫಿಯಲ್ಲಿ ಮೈಸೂರು ತಂಡದ ಪರ ಕಣಕ್ಕಿಳಿದಿದ್ದ ಜಿ ವಿಶ್ವನಾಥ್ ಭರ್ಜರಿ ದ್ವಿಶತಕ ಸಿಡಿಸಿದ್ದರು. ಈ ಡಬಲ್ ಸೆಂಚುರಿಯನ್ನು ಹತ್ತಿರದಿಂದ ನೋಡಿದ ಆಟಗಾರರಲ್ಲಿ ಮನ್ಸೂರ್ ಅಲಿ ಖಾನ್ ಕೂಡ ಒಬ್ಬರು. ಹೀಗಾಗಿಯೇ ಪಟೌಡಿ ಅವರು ಗುಂಡಪ್ಪ ವಿಶ್ವನಾಥ್ ಅವರನ್ನು ಭಾರತ ತಂಡಕ್ಕೆ ಆಯ್ಕೆ ಮಾಡಿದ್ದರು. ಆ ಬಳಿಕ ನಡೆದಿದೆಲ್ಲವೂ ಇತಿಹಾಸ.

ಏಕೆಂದರೆ ಇಂದಿನ ಕಲಾತ್ಮಕತೆಯ ಬ್ಯಾಟಿಂಗ್, ರಕ್ಷಣಾತ್ಮಕ ಆಟ, ತಾಳ್ಮೆಯ ಪ್ರತಿರೂಪಗಳನ್ನು ಅಂದೇ ಗುಂಡಪ್ಪ ವಿಶ್ವನಾಥ್ ಕ್ರಿಕೆಟ್ ಅಂಗಳದಲ್ಲಿ ತೋರಿಸಿದ್ದರು. ಯಾವಾಗ ಅವರು ಭಾರತ ತಂಡದಲ್ಲಿ ಸ್ಥಾನ ಪಡೆದರೋ ಅವರ ಅತ್ಯಾಧ್ಭುತ ಬ್ಯಾಟಿಂಗ್​ ಶೈಲಿಯು ವಿಶ್ವಮಟ್ಟದಲ್ಲಿ ಚರ್ಚಾ ವಿಷಯವಾಯಿತು. ಅದರಲ್ಲೂ ವಿದೇಶಿ ಸರಣಿಗಳ ವೇಳೆ ಗುಂಡಪ್ಪ ವಿಶ್ವನಾಥ್ ಅವರ ಕಲಾತ್ಮಕ ಹೊಡೆತಗಳನ್ನು ವೀಕ್ಷಿಸಲೆಂದೇ ಕ್ರಿಕೆಟ್​ ಪ್ರೇಮಿಗಳು ಮೈದಾನಕ್ಕೆ ಆಗಮಿಸುತ್ತಿದ್ದರು. ಇದಕ್ಕೆ ತಾಜಾ ಉದಾಹರಣೆಯೇ ಈಗಿನ ಯಾರ್ಕ್‌ಷೈರ್ ಮತ್ತು ಮಿಡ್ಲ್‌ಸೆಕ್ಸ್ ಕ್ರಿಕೆಟ್ ಕ್ಲಬ್​ನ ಸದಸ್ಯರಾಗಿರುವ ಡಾನ್ ರೆಡ್‌ಫೋರ್ಡ್ ಮಾಡಿರುವ ಟ್ವೀಟ್​ಗಳು.

ಭದ್ರಾವತಿಯ ಮಣ್ಣಿನ ಮಗ ಗುಂಡಪ್ಪ ವಿಶ್ವನಾಥ್. ಅತ್ಯುತ್ತಮ ಕಲಾತ್ಮಕತೆ, ಸೊಬಗಿನ ಬ್ಯಾಟಿಂಗ್ ಶೈಲಿಯ ಹರಿಕಾರ. ನಾನು ವಿಶ್ವನಾಥ್ ಅವರಿಗಿಂತ ಅತ್ಯಾಕರ್ಷಕ ಮತ್ತು ಅತ್ಯುತ್ತಮ ಬ್ಯಾಟರ್ ಅನ್ನು ನೋಡಿಲ್ಲ. ನಿಜವಾಗಿಯೂ ಅವರ ಬ್ಯಾಟ್​ ನರ್ತಿಸುತ್ತಿತ್ತು. ನನ್ನ ಜೀವನದಲ್ಲಿ ಒಬ್ಬ ಆಟಗಾರನನ್ನು ನಾನು ಆರಿಸಬೇಕಾದರೆ, ನಾನು GRV (ಗುಂಡಪ್ಪ ರಂಗನಾಥ್ ವಿಶ್ವನಾಥ್) ಅನ್ನು ಆಯ್ಕೆ ಮಾಡುತ್ತೇನೆ ಎಂಬಾರ್ಥದಲ್ಲಿ ಡಾನ್ ರೆಡ್‌ಫೋರ್ಡ್ ಟ್ವೀಟ್ ಮಾಡಿದ್ದಾರೆ.

ವಿಶ್ವನಾಥ್ ಅವರ ಹುಟ್ಟುಹಬ್ಬದಂದು ಬ್ರಿಟನ್ ಮೂಲದ ರೆಡ್​ಫೋರ್ಡ್ ಮಾಡಿರುವ ಈ ಟ್ವೀಟ್​ಗಳೇ ಸಾಕು 70/80ರ ದಶಕದಲ್ಲಿ ಅವರು ಅದ್ಯಾವ ರೀತಿಯಲ್ಲಿ ಮೋಡಿ ಮಾಡಿದ್ದರು ಎಂದು ತಿಳಿಯಲು. ಇಂತಹದೊಂದು ಮೋಡಿಯ ಮೂಲಕವೇ ಅವರು 100ಕ್ಕೂ ಅಧಿಕ ಪಂದ್ಯಗಳಲ್ಲಿ ಭಾರತ ತಂಡವನ್ನು ಪ್ರತಿನಿಧಿಸಿದರು.

ಟೀಮ್ ಇಂಡಿಯಾ ಪರ 91 ಟೆಸ್ಟ್ ಪಂದ್ಯಗಳನ್ನಾಡಿರುವ ಗುಂಡಪ್ಪ ವಿಶ್ವನಾಥ್ ಅವರು 1 ದ್ವಿಶತಕ, 14 ಶತಕ ಹಾಗೂ 35 ಅರ್ಧಶತಕಗಳೊಂದಿಗೆ 6080 ರನ್​ ಕಲೆಹಾಕಿದ್ದಾರೆ. ವಿಶೇಷ ಎಂದರೆ ಈ 91 ಪಂದ್ಯಗಳಲ್ಲಿ ಮಣಿಕಟ್ಟಿನ ಮ್ಯಾಜಿಕ್ ಮೂಲಕ ಮೂಡಿಬಂದ ಫೋರ್​ಗಳ ಸಂಖ್ಯೆ 616 ಎಂದರೆ ನಂಬಲೇಬೇಕು. ಹಾಗೆಯೇ 25 ಏಕದಿನ ಪಂದ್ಯಗಳಲ್ಲೂ ಟೀಮ್ ಇಂಡಿಯಾ ಪ್ರತಿನಿಧಿಸಿದ್ದ ಜಿ ವಿಶ್ವನಾಥ್ ಅವರು 2 ಅರ್ಧಶತಕಗಳೊಂದಿಗೆ 830 ರನ್​ ಕಲೆಹಾಕಿದ್ದಾರೆ.

ಇಲ್ಲಿ ಇಂಟ್ರೆಸ್ಟಿಂಗ್ ವಿಷಯ ಎಂದರೆ ಗುಂಡಪ್ಪ ವಿಶ್ವನಾಥ್ ಅವರು ವಿವಾಹವಾಗಿರುವುದು ದಿ ಲೆಜೆಂಡ್ ಸುನಿಲ್ ಗವಾಸ್ಕರ್ ಅವರ ಸಹೋದರಿಯನ್ನು. ಹಲವು ಪಂದ್ಯಗಳನ್ನು ಜೊತೆಯಾಗಿ ಆಡಿದ್ದ ಈ ಗಾವಸ್ಕರ್ ಹಾಗೂ ವಿಶ್ವನಾಥ್ ಅವರ ನಡುವೆ ತುಂಬಾ ಆತ್ಮೀಯತೆ ಬೆಳೆದಿತ್ತು. 1978 ರಲ್ಲಿ ಗವಾಸ್ಕರ್ ಅವರ ಸಹೋದರಿ ಕವಿತಾ ಅವರನ್ನು ವಿವಾಹವಾಗುವ ಮೂಲಕ ಇಬ್ಬರು ದಿಗ್ಗಜರು ಸಂಬಂಧಿಕರಾದರು.

ದುರಂತ ಎಂದರೆ 80 ರ ದಶಕದಲ್ಲಿ ಟೀಮ್ ಇಂಡಿಯಾ ಪರ ಅತ್ಯುತ್ತಮ ಪ್ರದರ್ಶನ ನೀಡಿ ಮಿಂಚಿದ್ದರೂ ಗುಂಡಪ್ಪ ವಿಶ್ವನಾಥ್ ಅವರು ವಿಶ್ವಕಪ್ ತಂಡದಲ್ಲಿ ಸ್ಥಾನ ಪಡೆದಿರಲಿಲ್ಲ. 40 ವರ್ಷಗಳೇ ಕಳೆದರೂ ಈ ನೋವನ್ನು ಗುಂಡಪ್ಪ ಮರೆತಿಲ್ಲ ಎಂಬುದೇ ಸತ್ಯ. ಏಕೆಂದರೆ 1982-83 ರಲ್ಲಿ ಪಾಕಿಸ್ತಾನ್ ವಿರುದ್ಧದ ಸರಣಿಯಲ್ಲಿ ಗುಂಡಪ್ಪ ವಿಶ್ವನಾಥ್ ಅವರು ಕಳಪೆ ಪ್ರದರ್ಶನ ನೀಡಿದ್ದರು. ಹೀಗಾಗಿ ಅವರನ್ನು ತಂಡದಿಂದ ಕೈ ಬಿಡಲಾಯಿತು.

ದುರಾದೃಷ್ಟ ಅವರಿಗೆ ಆ ಬಳಿಕ ಟೀಮ್ ಇಂಡಿಯಾದಲ್ಲಿ ಅವಕಾಶ ಸಿಕ್ಕಿರಲಿಲ್ಲ. ಅದರಲ್ಲೂ 1983 ರ ವಿಶ್ವಕಪ್ ಆಡಬೇಕೆಂಬ ಕನಸು ಹೊಂದಿದ್ದ ಗುಂಡಪ್ಪ ವಿಶ್ವನಾಥ್ ಅವರ ಕ್ರಿಕೆಟ್​ ಕೆರಿಯರ್​ ಅದೇ ವರ್ಷ ಅಂತ್ಯಗೊಂಡಿದ್ದು ಮಾತ್ರ ವಿಪರ್ಯಾಸ ಎನ್ನಬಹುದು. ಅಂದಹಾಗೆ ಇಂದು ಗುಂಡಪ್ಪ ವಿಶ್ವನಾಥ್ ಅವರ 74ನೇ ಹುಟ್ಟುಹಬ್ಬ…ಎನಿವೇ ಹ್ಯಾಪಿ ಬರ್ತ್​ ಡೇ ಲೆಜೆಂಡ್.

 

 

Published On - 6:33 pm, Sun, 12 February 23