YSRCP ಗೆ ಕೈಕೊಟ್ಟು JSP ಕೈ ಹಿಡಿದ ಅಂಬಾಟಿ ರಾಯುಡು?

Ambati Rayudu: ಟೀಮ್ ಇಂಡಿಯಾ ಪರ 55 ಏಕದಿನ ಪಂದ್ಯಗಳನ್ನಾಡಿರುವ ಅಂಬಾಟಿ ರಾಯುಡು 3 ಶತಕ ಹಾಗೂ 10 ಅರ್ಧಶತಕಗಳೊಂದಿಗೆ ಒಟ್ಟು 1694 ರನ್ ಕಲೆಹಾಕಿದ್ದಾರೆ. ಹಾಗೆಯೇ 6 ಟಿ20 ಪಂದ್ಯಗಳಿಂದ 42 ರನ್ ಬಾರಿಸಿದ್ದಾರೆ.

YSRCP ಗೆ ಕೈಕೊಟ್ಟು JSP ಕೈ ಹಿಡಿದ ಅಂಬಾಟಿ ರಾಯುಡು?
Ambati Rayudu
Follow us
| Updated By: Digi Tech Desk

Updated on:Feb 14, 2024 | 3:16 PM

ಟೀಮ್ ಇಂಡಿಯಾದ ಮಾಜಿ ಆಟಗಾರ ಅಂಬಾಟಿ ರಾಯುಡು (Ambati Rayudu) ಜನಸೇನಾ ಪಕ್ಷವನ್ನು ಸೇರಲಿದ್ದಾರಾ? ಇಂತಹದೊಂದು ಪ್ರಶ್ನೆ ಹುಟ್ಟಿಕೊಳ್ಳಲು ಮುಖ್ಯ ಕಾರಣ ರಾಯುಡು ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿ ಮಾಡಿರುವುದು. ವಾರದ ಹಿಂದೆಯಷ್ಟೇ YSR ಕಾಂಗ್ರೆಸ್ ಪಕ್ಷಕ್ಕೆ ಸೇರ್ಪಡೆಯಾಗುವ ಮೂಲಕ ಅಂಬಾಟಿ ರಾಯುಡು ರಾಜಕೀಯದಲ್ಲಿ ಹೊಸ ಇನಿಂಗ್ಸ್ ಆರಂಭಿಸಿದ್ದರು. ಆದರೆ ಒಂದೇ ವಾರದೊಳಗೆ ವೈಎಸ್​ಆರ್​ ಪಕ್ಷವನ್ನು ತೊರೆದ ರಾಯುಡು ರಾಜಕೀಯದಿಂದ ದೂರ ಉಳಿಯುವುದಾಗಿ ತಿಳಿಸಿದ್ದರು.

ಅಷ್ಟೇ ಅಲ್ಲದೆ ಇಂಟರ್​ನ್ಯಾಷನಲ್ ಲೀಗ್​ ಟಿ20 ಟೂರ್ನಿ ಆಡುವ ಸಲುವಾಗಿ ವೈಎಸ್​ಆರ್​ ಪಕ್ಷವನ್ನು ತೊರೆದಿದ್ದೇನೆ. ರಾಜಕೀಯ ಹಾಗೂ ಕ್ರೀಡೆಯನ್ನು ಜೊತೆಯಾಗಿ ಕೊಂಡೊಯ್ಯಲು ಸಾಧ್ಯವಿಲ್ಲ ಎಂದು ಈ ನಿರ್ಧಾರ ತೆಗೆದುಕೊಂಡಿರುವುದಾಗಿ ತಿಳಿಸಿದ್ದರು. ಆದರೀಗ ಜನಸೇನಾ ಪಕ್ಷದ ಮುಖ್ಯಸ್ಥ ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ಮತ್ತೆ ರಾಜಕೀಯದಲ್ಲಿ ತೊಡಗಿಸಿಕೊಳ್ಳುವ ಇಚ್ಛೆಯನ್ನು ವ್ಯಕ್ತಪಡಿಸಿದ್ದಾರೆ.

ನಾನು ಉತ್ತಮ ಉದ್ದೇಶದೊಂದಿಗೆ ಆಂಧ್ರಪ್ರದೇಶದ ಜನರಿಗೆ ಸೇವೆ ಸಲ್ಲಿಸಲು ರಾಜಕೀಯಕ್ಕೆ ಬಂದಿದ್ದೇನೆ. ನಾನು ವೈಎಸ್‌ಆರ್‌ಸಿಪಿಗೆ ಸೇರಿದ್ದೆ. ಈ ವೇಳೆ ಅನೇಕ ಗ್ರಾಮಗಳಿಗೆ ಭೇಟಿ ನೀಡಿ ಹಲವಾರು ಜನರನ್ನು ಭೇಟಿ ಮಾಡಿ ಅವರ ಸಮಸ್ಯೆಗಳನ್ನು ಅರ್ಥಮಾಡಿಕೊಂಡಿದ್ದೇನೆ. ಅಲ್ಲದೆ ವೈಯಕ್ತಿಕವಾಗಿ ಅನೇಕ ಸಮಸ್ಯೆಗಳನ್ನು ಪರಿಹರಿಸಲು ನನ್ನ ಕೈಲಾದಷ್ಟು ಪ್ರಯತ್ನ ಮಾಡಿದ್ದೇನೆ. ಸಾಕಷ್ಟು ಸಾಮಾಜಿಕ ಕಾರ್ಯಗಳನ್ನು ಮಾಡಿದ್ದೇನೆ ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ.

ನನ್ನ ಸಿದ್ಧಾಂತ ಮತ್ತು ವೈಎಸ್‌ಆರ್‌ಸಿಪಿಯ ಸಿದ್ಧಾಂತಗಳು ಹೊಂದಾಣಿಕೆಯಾಗಿಲ್ಲ. ಹೀಗಾಗಿ ವೈಎಸ್‌ಆರ್‌ಸಿಪಿಯೊಂದಿಗೆ ಮುಂದುವರೆಯಲು ಸಾಧ್ಯವಾಗಿಲ್ಲ. ಇದಕ್ಕೂ ಚುನಾವಣೆಗೆ ಸ್ಪರ್ಧಿಸುವುದಕ್ಕೂ ಮತ್ತು x ಮತ್ತು y ಸ್ಥಾನಕ್ಕೂ ಖಂಡಿತವಾಗಿಯೂ ಯಾವುದೇ ಸಂಬಂಧವಿಲ್ಲ ಎಂದು ರಾಯುಡು ಸ್ಪಷ್ಟಪಡಿಸಿದ್ದಾರೆ.

ನಾನು ರಾಜಕೀಯದಿಂದ ಹಿಂದೆ ಸರಿಯಲು ನಿರ್ಧರಿಸಿದ್ದೆ. ಆದರೆ ನನ್ನ ಹಿತೈಷಿಗಳು ಮತ್ತು ಆಪ್ತರು ಮತ್ತು ಕುಟುಂಬದವರು ಪವನ್ (ಪವನ್ ಕಲ್ಯಾಣ್) ಅಣ್ಣನ ಸಿದ್ಧಾಂತಗಳನ್ನು ಅರ್ಥಮಾಡಿಕೊಳ್ಳಲು ಒಮ್ಮೆ ಭೇಟಿಯಾಗುವಂತೆ ನನಗೆ ಹೇಳಿದ್ದರು. ಅದರಂತೆ ನಾನು ಪವನ್ ಕಲ್ಯಾಣ್ ಅವರನ್ನು ಭೇಟಿಯಾಗಿ ಸಾಕಷ್ಟು ಸಮಯ ಕಳೆದಿದ್ದೇನೆ.

ರಾಜಕೀಯ ಮತ್ತು ಅವರನ್ನು ಅರ್ಥಮಾಡಿಕೊಳ್ಳುವುದು, ಅವರ ಸಿದ್ಧಾಂತ ಮತ್ತು ರಾಜಕೀಯ ದೃಷ್ಟಿಕೋನವು ನನ್ನಂತೆಯೇ ಇದೆ ಎಂಬುದು ಸಂತೋಷದ ವಿಷಯ. ಸದ್ಯ ನಾನು ಕ್ರಿಕೆಟ್ ಆಡಲು ದುಬೈಗೆ ಹೋಗುತ್ತಿದ್ದೇನೆ. ಅಲ್ಲದೆ ಸದಾ ಆಂಧ್ರಪ್ರದೇಶದ ಜನರ ಜೊತೆ ನಿಲ್ಲುತ್ತೇನೆ ಎಂದು ಅಂಬಾಟಿ ರಾಯುಡು ತಿಳಿಸಿದ್ದಾರೆ.

ಇದನ್ನೂ ಓದಿ: ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಲು ರೋಹಿತ್ ಶರ್ಮಾಗೆ ಉತ್ತಮ ಅವಕಾಶ

ಇದರ ಬೆನ್ನಲ್ಲೇ ಅಂಬಾಟಿ ರಾಯುಡು ಜನಸೇನಾ ಪಕ್ಷ ಸೇರಲಿದ್ದಾರೆ ಎಂಬ ಮಾತುಗಳು ಕೂಡ ಕೇಳಿ ಬರಲಾರಂಭಿಸಿದೆ. ಸದ್ಯ ಇಂಟರ್​ನ್ಯಾನಲ್ ಲೀಗ್ ಟಿ20 ಟೂರ್ನಿಗಾಗಿ ಯುಎಇ ತೆರಳಿರುವ ಅಂಬಾಟಿ ರಾಯುಡು ಭಾರತಕ್ಕೆ ಬಂದ ಬಳಿಕ ಜನಸೇನಾ ಪಕ್ಷಕ್ಕೆ ಸೇರ್ಪಡೆಯಾಗುವ ಸಾಧ್ಯತೆಯಿದೆ.

Published On - 8:13 am, Thu, 11 January 24