ವಿರಾಟ್ ಕೊಹ್ಲಿ, ರೋಹಿತ್ ಶರ್ಮಾ ಬೇಕಾ, ಬೇಡ್ವಾ? ಈಗಲೇ ಸ್ಪಷ್ಟಪಡಿಸಿ: ಅಶ್ವಿನ್
ODI World Cup 2027: 2027ರ ಐಸಿಸಿ ಏಕದಿನ ವಿಶ್ವಕಪ್ ಆರಂಭವಾಗುವ ಮುನ್ನ ಭಾರತ ತಂಡವು ಏಷ್ಯಾಕಪ್ ಸೇರಿ 20 ರಿಂದ 25 ಏಕದಿನ ಪಂದ್ಯಗಳನ್ನು ಆಡಲಿದೆ. ಈ ಪಂದ್ಯಗಳಿಗಾಗಿ ಬಲಿಷ್ಠ ಟೀಮ್ ಇಂಡಿಯಾ ರೂಪಿಸಿಕೊಳ್ಳಬೇಕಾದ ಅಗತ್ಯತೆ ಇದೆ. ಇದಾಗ್ಯೂ ಬಿಸಿಸಿಐ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಷಯದಲ್ಲಿ ಮೌನವಹಿಸುತ್ತಿರುವ ಬಗ್ಗೆ ರವಿಚಂದ್ರನ್ ಅಶ್ವಿನ್ ಪ್ರಶ್ನೆಗಳೆನ್ನೆತ್ತಿದ್ದಾರೆ.

ಏಕದಿನ ವಿಶ್ವಕಪ್ಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಬೇಕಾ? ಬೇಡ್ವಾ? ಈಗಲೇ ಹೇಳಿ… ಇಂತಹದೊಂದು ಪ್ರಶ್ನೆ ಮುಂದಿಟ್ಟಿರುವುದು ಟೀಮ್ ಇಂಡಿಯಾದ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್. ಈ ಬಗ್ಗೆ ಬಿಸಿಸಿಐ ಆಯ್ಕೆ ಸಮಿತಿ ಮುಖ್ಯಸ್ಥ ಅಜಿತ್ ಅಗರ್ಕರ್ ಮತ್ತು ಮುಖ್ಯ ಕೋಚ್ ಗೌತಮ್ ಗಂಭೀರ್ ಸ್ಪಷ್ಟನೆ ನೀಡಬೇಕೆಂದು ಅಶ್ವಿನ್ ಆಗ್ರಹಿಸಿದ್ದಾರೆ.
ತಮ್ಮ ಯೂಟ್ಯೂಬ್ ಚಾನೆಲ್ನಲ್ಲಿ ಮಾತನಾಡಿರುವ ರವಿಚಂದರರನ್ ಅಶ್ವಿನ್, ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಏಕದಿನ ಕ್ರಿಕೆಟ್ ಭವಿಷ್ಯದ ಬಗ್ಗೆ ಕೆಲ ವದಂತಿಗಳು ಹರಿದಾಡುತ್ತಿದೆ. ದಿಗ್ಗಜ ಆಟಗಾರರ ಸುತ್ತ ಹರಿದಾಡುತ್ತಿರುವ ವದಂತಿಗಳಿಗೆ ಬ್ರೇಕ್ ಹಾಕಲು ಇದು ಸಕಾಲ. ಹೀಗಾಗಿ ಇಬ್ಬರನ್ನು ಏಕದಿನ ವಿಶ್ವಕಪ್ಗೆ ಪರಿಗಣಿಸುತ್ತೀರಾ? ಇಲ್ಲವಾ ಎಂಬುದನ್ನು ಬಿಸಿಸಿಐ ಸ್ಪಷ್ಟಪಡಿಸಲಿ ಎಂದು ಅಶ್ವಿನ್ ಹೇಳಿದ್ದಾರೆ.
ಭವಿಷ್ಯ ನಿರ್ಧರಿಸಿ:
ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರ ಸ್ಥಾನದ ಬಗ್ಗೆ ಪದೇ ಪದೇ ಪ್ರಶ್ನೆ ಎತ್ತುವುದರಿಂದ ಟೀಮ್ ಇಂಡಿಯಾಗೆ ಯಾವುದೇ ಲಾಭವಿಲ್ಲ. ಇಬ್ಬರು ಪ್ರಮುಖ ಆಟಗಾರರು. ಅವರ ಬಗ್ಗೆ ಈ ಊಹಾಪೋಹ ಒಳ್ಳೆಯದಲ್ಲ. ಪ್ರಾಮಾಣಿಕವಾಗಿ ಹೇಳಬೇಕೆಂದರೆ, ಈ ಊಹಾಪೋಹ ಎಲ್ಲಿಂದ ಬರುತ್ತದೆ? ಎಲ್ಲೋ, ಯಾರದೋ ಮನಸ್ಸಿನಲ್ಲಿ ಅವರು ವಿಶ್ವಕಪ್ಗೆ ಹೋಗಬಾರದು ಎಂಬ ಆಲೋಚನೆ ಇದೆ. ಇದೇ ಕಾರಣದಿಂದಾಗಿ ಯಾರೋ ಈ ಪ್ರಶ್ನೆಗಳನ್ನು ಹುಟ್ಟುಹಾಕುತ್ತಿದ್ದಾರೆ ಎಂದು ಅಶ್ವಿನ್ ಹೇಳಿದ್ದಾರೆ.
ಹೀಗೆ ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿಯ ಏಕದಿನ ವಿಶ್ವಕಪ್ ಭವಿಷ್ಯದ ಬಗ್ಗೆ ಚರ್ಚೆಯನ್ನು ಹುಟ್ಟುಹಾಕುತ್ತಿರುವುದು ಯಾರೆಂದು ನನಗೆ ತಿಳಿದಿಲ್ಲ. ಕೆಲವರಿಗೆ ಅವರ ಬಗ್ಗೆ ಅನುಮಾನವಿರುತ್ತದೆ. ಅಲ್ಲದೆ ಅವರು ಬೇರೆಯವರನ್ನು ತಂಡದಲ್ಲಿ ಸೇರಿಸಿಕೊಳ್ಳಬೇಕೆಂದು ಬಯಸುತ್ತಾರೆ. ಆದರೆ ಸೌತ್ ಆಫ್ರಿಕಾದಲ್ಲಿ ವಿಶ್ವಕಪ್ ಆಡಲು ಅನುಭವಿ ಬ್ಯಾಟ್ಸ್ಮನ್ಗಳು ಬೇಕು ಎಂದು ನಾನು ವೈಯಕ್ತಿಕವಾಗಿ ಭಾವಿಸುತ್ತೇನೆ ಎಂದು ಅಶ್ವಿನ್ ಹೇಳಿದ್ದಾರೆ.
ರೋಹಿತ್ ಶರ್ಮಾ ಹಾಗೂ ವಿರಾಟ್ ಕೊಹ್ಲಿ ಮುಂದಿನ 2027ರ ಏಕದಿನ ವಿಶ್ವಕಪ್ಗೆ ಬೇಕು ಎಂದಾದರೆ, ಈಗಲೇ ನಿರ್ಧಾರ ಮಾಡಿ. ಮುಂದಿನ ಒಂದು ವರ್ಷ ಅವರಲ್ಲಿ ಸಂಪೂರ್ಣ ಆತ್ಮವಿಶ್ವಾಸ ತುಂಬಿ, ಮುಕ್ತವಾಗಿ ಆಡಲು ಬಿಡಬೇಕು ಎಂದು ಅಶ್ವಿನ್ ಬಿಸಿಸಿಐ ಆಯ್ಕೆ ಸಮಿತಿಗೆ ಕಿವಿಮಾತು ಹೇಳಿದ್ದಾರೆ.
ಸ್ಪಷ್ಟನೆಗೆ ಇದು ಸಕಾಲ:
ವಿರಾಟ್ ಕೊಹ್ಲಿ ಹಾಗೂ ರೋಹಿತ್ ಶರ್ಮಾ ವಿಷಯದಲ್ಲಿ ಆಯ್ಕೆಗಾರರು ಈಗಲೇ ಸ್ಪಷ್ಟ ನಿಲುವು ತೆಗೆದುಕೊಳ್ಳದಿದ್ದರೆ, ಮುಂದಿನ ದಿನಗಳಲ್ಲಿ ಅವರು ಒಂದು ಪಂದ್ಯದಲ್ಲಿ ವಿಫಲರಾದರೂ ಅದು ದೊಡ್ಡ ಸುದ್ದಿಯಾಗಲಿದೆ. ಅಲ್ಲದೆ ಮಾಧ್ಯಮಗಳು ಮತ್ತು ಅಭಿಮಾನಿಗಳು ಅವರ ಸಾಮರ್ಥ್ಯವನ್ನು ಪ್ರಶ್ನಿಸಲು ಶುರು ಮಾಡುತ್ತಾರೆ. ಇದು ಆಟಗಾರರ ಮೇಲಿನ ಒತ್ತಡವನ್ನು ಹೆಚ್ಚಿಸುತ್ತದೆ. ಹೀಗಾಗಿ ಇಬ್ಬರು ಆಟಗಾರರ ಭವಿಷ್ಯದ ಬಗ್ಗೆ ಸ್ಪಷ್ಟನೆ ನೀಡಲು ಇದು ಸಕಾಲ ಎಂದು ಅಶ್ವಿನ್ ಅಭಿಪ್ರಾಯಪಟ್ಟಿದ್ದಾರೆ.
ಇದನ್ನೂ ಓದಿ: ಫಾಫ್ ಡುಪ್ಲೆಸಿಸ್ ಸೂಪರ್ಮ್ಯಾನ್ ಕ್ಯಾಚ್ಗೆ ಕ್ರಿಕೆಟ್ ಪ್ರಿಯರು ಫಿದಾ!
ಒಟ್ಟಾರೆಯಾಗಿ, 2027ರ ಏಕದಿನ ವಿಶ್ವಕಪ್ಗೆ ಇನ್ನು ಒಂದು ವರ್ಷ ಮಾತ್ರ ಬಾಕಿ ಇದೆ. ಇದಕ್ಕಾಗಿ ಟೀಮ್ ಇಂಡಿಯಾ ಈಗಿನಿಂದಲೇ ಒಂದು ಬಲಿಷ್ಠ ಪ್ಲ್ಯಾನ್ ಸಿದ್ಧಪಡಿಸಿಕೊಳ್ಳಬೇಕಿದೆ. ಇದಾಗ್ಯೂ ಆಯ್ಕೆ ಸಮಿತಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಂತಹ ದಿಗ್ಗಜ ಆಟಗಾರರ ಆಯ್ಕೆ ಬಗ್ಗೆ ಇನ್ನೂ ಕೂಡ ಗೊಂದಲ ಏರ್ಪಡಿಸುತ್ತಿರುವುದು ಮಾತ್ರ ವಿಪರ್ಯಾಸ.
Published On - 12:04 pm, Thu, 25 June 26




